Advertisement

ಮಳೆಕೊಯ್ಲು ಅಳವಡಿಸಿ ಜನರಿಗೆ ಮಾದರಿಯಾದ ಜನ ಪ್ರತಿನಿಧಿಗಳು

08:58 PM Jul 16, 2019 | mahesh |

ಮಹಾನಗರ: “ಉದಯವಾಣಿ’ಯು ಹಮ್ಮಿಕೊಂಡಿರುವ “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನವು ತಮ್ಮ ಮನೆಗಳಲ್ಲಿ ಅದನ್ನು ಅಳವಡಿಸಿಕೊಂಡು ಮಾದರಿಯಾಗುವುದಕ್ಕೆ ಒಬ್ಬರಿಂದ ಇನ್ನೊಬ್ಬರಿಗೆ ಪ್ರೇರಣೆಯಾಗುತ್ತಿದೆ. ಆ ಮೂಲಕ, ದಕ್ಷಿಣ ಕನ್ನಡ ಜಿಲ್ಲೆಯ ಮೂಲೆ- ಮೂಲೆಯಲ್ಲಿಯೂ ಮಳೆಕೊಯ್ಲು ಬಗ್ಗೆ ಜನರು ಜಾಗೃತರಾಗುತ್ತಿದ್ದಾರೆ.

Advertisement

ವಿಶೇಷ ಅಂದರೆ ನಗರ ಪ್ರದೇಶದಿಂದ ಹಿಡಿದು ಗ್ರಾಮ ಪಂಚಾಯತ್‌ವರೆಗೆ ಇದೀಗ ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಜನಪ್ರತಿನಿಧಿಗಳು ಕೂಡ ಒಬ್ಬೊಬ್ಬರಾಗಿ ತಮ್ಮ ಮನೆಗಳಲ್ಲಿ ಮಳೆಕೊಯ್ಲು ವ್ಯವಸ್ಥೆಯನ್ನು ಅಳವಡಿಸಿಕೊಂಡು ಸಮಾಜಕ್ಕೆ ಮಾದರಿಯಾ ಗುತ್ತಿರುವುದು ಉತ್ತಮ ಬೆಳವಣಿಗೆ. ಆ ಮೂಲಕ, ತಮ್ಮ ಕ್ಷೇತ್ರ ವ್ಯಾಪ್ತಿಯ ಜನರಿಗೂ ತಮ್ಮ ಮನೆಗಳಲ್ಲಿ ಮಳೆಕೊಯ್ಲು ಅಳವಡಿಸಿಕೊಂಡು ಜಲ ಸಂರಕ್ಷಣೆಯತ್ತ ಕೈಜೋಡಿಸಿ ಎನ್ನುವ ಸಂದೇಶವನ್ನು ಕೂಡ ರವಾನಿಸುತ್ತಿದ್ದಾರೆ.

ಅದರಂತೆ, “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಣೆ ಪಡೆದು, ಇದೀಗ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್‌, ಬಜಪೆ ಗ್ರಾಮ ಪಂಚಾಯತ್‌ ಅಧ್ಯಕ್ಷೆ ರೋಸಿ ಮಥಾಯಸ್‌ ಅವರು ತಮ್ಮ ಮನೆಗಳಲ್ಲಿ ಮಳೆಕೊಯ್ಲು ಅಳವಡಿಸಿ ಗಮನಸೆಳೆದಿದ್ದಾರೆ. ಅಷ್ಟೇಅಲ್ಲ, ಈ ಇಬ್ಬರು ಜನಪ್ರತಿನಿಧಿಗಳು ಅವಕಾಶವಿದ್ದರು ಕೂಡ ಇನ್ನು ಮಳೆಕೊಯ್ಲು ಅಳವಡಿಸಿಕೊಳ್ಳುವುದಕ್ಕೆ ಮುಂದಾಗದ ಅಥವಾ ಆಸಕ್ತಿ ತೋರದ ಜಿಲ್ಲೆಯ ಇತರೆ ಜನಪ್ರತಿನಿಧಿಗಳಿಗೂ ಸ್ಫೂರ್ತಿ ಎನಿಸಿಕೊಂಡಿದ್ದಾರೆ. ಯಾವುದೇ ಭಾಗದಲ್ಲಿ ಅಲ್ಲಿನ ಜನಪ್ರತಿನಿಧಿಗಳು ಜಲ ಸಂರಕ್ಷಣೆ ಬಗ್ಗೆ ಹೆಚ್ಚಿನ ಮುತುವರ್ಜಿ ತೋರಿಸಿದರೆ, ಅದು ಮುಂದಿನ ದಿನಗಳಲ್ಲಿ ಆ ಕ್ಷೇತ್ರ ವ್ಯಾಪ್ತಿಯ ಜನರನ್ನು ಕೂಡ ಆ ದಿಕ್ಕಿನಲ್ಲಿ ಪ್ರೇರೇಪಿಸುವಲ್ಲಿ ಹೆಚ್ಚಿನ ಪ್ರಭಾವ ಬೀರಬಹುದು.

ಶಾಸಕ ಡಿ. ವೇದವ್ಯಾಸ ಕಾಮತ್‌ ಅವರದ್ದು ಅವಿಭಕ್ತ ಕುಟುಂಬ. ನಗರದ ಮಣ್ಣಗುಡ್ಡ ಗಾಂಧಿನಗರದ 7ನೇ ಅಡ್ಡರಸ್ತೆಯಲ್ಲಿ ಸುಮಾರು 75 ವರ್ಷ ಹಳೆಯದಾದ ದೊಡ್ಡ ಮನೆಯಲ್ಲಿ ತಂದೆ-ತಾಯಿ, ಅಣ್ಣ ವಾಸುದೇವ ಕಾಮತ್‌ ಕುಟುಂಬ ಮತ್ತು ಶಾಸಕ ವೇದವ್ಯಾಸ ಕಾಮತ್‌ ಅವರ ಕುಟುಂಬದವರು ಜತೆಯಾಗಿ ವಾಸವಿದ್ದಾರೆ. ಕೆಲವು ವರ್ಷಗಳ ಹಿಂದೆ ಮನೆಯ ಒಂದು ಭಾಗದಲ್ಲಿ ಸಣ್ಣ ಮಟ್ಟದಲ್ಲಿ ಮಳೆಕೊಯ್ಲು ವ್ಯವಸ್ಥೆ ಮಾಡಿಕೊಂಡಿದ್ದರು. ಆದರೆ, “ಉದಯವಾಣಿ’ ಅಭಿಯಾನದಿಂದ ಸ್ಫೂರ್ತಿಗೊಂಡು, ಇದೀಗ ಮನೆಯ ಸುತ್ತ-ಮುತ್ತ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಹಿಡಿದಿಟ್ಟು ಮಳೆಕೊಯ್ಲು ವ್ಯವಸ್ಥೆಯನ್ನು ಪೂರ್ಣ ಪ್ರಮಾಣದಲ್ಲಿ ಅಳವಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಮನೆಯ ಮಹಡಿಯ ಸಂಪೂರ್ಣ ನೀರನ್ನು ಪೈಪ್‌ ಮುಖಾಂತರ 2 ಸಾವಿರ ಲೀ. ಸಾಮರ್ಥ್ಯದ ಟ್ಯಾಂಕ್‌ಗೆ ಫಿಲ್ಟರಿಂಗ್‌ ಮಾಡಿ ಬಿಡಲಾಗುತ್ತಿದೆ. ಅಲ್ಲಿಂದ ಬಾವಿಗೆ ಪೈಪ್‌ ಸಂಪರ್ಕ ಕಲ್ಪಿಸಲಾಗಿದೆ. ಟ್ಯಾಂಕ್‌ನ ಕೆಳಭಾಗದಲ್ಲಿ ಹಂಚು, ಜಲ್ಲಿ, ಮರಳು ಹಾಕಲಾಗಿದೆ. ಇದರಿಂದ ಶುದ್ಧೀಕೃತ ನೀರು ಬಾವಿಗೆ ಬೀಳುತ್ತದೆ. ಬಾವಿಯಲ್ಲಿ ನೀರು ತುಂಬಿದರೆ ಗೇಟ್ವಾಲ್‌ ಮುಖಾಂತರ ಬಾವಿಗೆ ಹೋಗುವ ನೀರನ್ನು ನಿಲ್ಲಿಸಿ ಪಕ್ಕದಲ್ಲಿ ಇರುವ ಸಂಪ್‌ಗೆ ಬೀಳುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ವಾಸುದೇವ ಕಾಮತ್‌ ಅವರು “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

ಹೇಳಿದಂತೆ ಮಾಡಿ ತೋರಿಸಿದ ಶಾಸಕರು
ಉದಯವಾಣಿಯಲ್ಲಿ “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನ ಪ್ರಾರಂಭವಾದ ಸಂದರ್ಭ ತಾವು ಕೂಡ ಮನೆಯಲ್ಲಿ ಅಳವಡಿಸಿಕೊಂಡು ಕ್ಷೇತ್ರದ ಜನರನ್ನು ಅದರತ್ತ ಪ್ರೇರೇಪಿಸುವುದಾಗಿ ಶಾಸಕ ವೇದವ್ಯಾಸ ಕಾಮತ್‌ ಭರವಸೆ ನೀಡಿದ್ದರು. ಅಲ್ಲದೆ, “ಉದಯವಾಣಿ’ಯು ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಜೂ. 19ರಂದು ಹಮ್ಮಿಕೊಂಡಿದ್ದ ಮಳೆಕೊಯ್ಲು ಮಾಹಿತಿ ಕಾರ್ಯಾಗಾರದಲ್ಲಿಯೂ ಇದನ್ನೆಲ್ಲ ಉಲ್ಲೇಖೀಸಿ, ಮೊದಲು ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರು ತಮ್ಮ ಮನೆಗಳಲ್ಲಿ ಮಳೆಕೊಯ್ಲು ಸೇರಿದಂತೆ ಜಲ ಸಂರಕ್ಷಣೆಗೆ ಪೂರಕ ಕ್ರಮ ಅಳವಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕೆಂದು ಹೇಳಿದ್ದರು. ಅದರಂತೆ ಇದೀಗ ಅವರು ತಮ್ಮ ಮನೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಮಳೆಕೊಯ್ಲು ಅಳವಡಿಸಿಕೊಂಡಿದ್ದಾರೆ.

ಪಂಚಾಯತ್‌ ಅಧ್ಯಕ್ಷರ ಮನೆಗೂ ಮಳೆಕೊಯ್ಲು
ಮನೆಯಲ್ಲಿ ನೀರಿನ ಸಮಸ್ಯೆ ಇಲ್ಲದಿದ್ದರೂ ಬಜಪೆ ಗ್ರಾ.ಪಂ. ಅಧ್ಯಕ್ಷೆ ರೋಸಿ ಮಥಾಯಸ್‌ ಅವರು ತಮ್ಮ ಮನೆಯಲ್ಲಿ ಮಳೆಕೊಯ್ಲು ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆ ಮೂಲಕ, ಇಡೀ ಗ್ರಾಮಸ್ಥರನ್ನು ಮಳೆಕೊಯ್ಲು ಅಳವಡಿಕೆಯತ್ತ ಪ್ರೇರೇಪಿಸಲು ಮುಂದಾಗಿದ್ದಾರೆ.

ಬಜಪೆಯ ಓಲ್ಡ್‌ ಕಾನ್ವೆಂಟ್‌ ರಸ್ತೆಯಲ್ಲಿ ನೆಲೆಸಿರುವ ರೋಸಿ ಮಥಾಯಸ್‌ ಮನೆಯಲ್ಲಿ ಈವರೆಗೆ ನೀರಿನ ಸಮಸ್ಯೆ ಇಲ್ಲ. ಆದರೆ, ಬೇಸಗೆಯಲ್ಲಿ ಪಂಚಾಯತ್‌ ವ್ಯಾಪ್ತಿಯ ಬಹುತೇಕ ಮನೆಗಳಲ್ಲಿ ನೀರಿನ ಅಭಾವ ಹೆಚ್ಚಿತ್ತು. ನೀರಿನ ಉಳಿತಾಯಕ್ಕೆ ಜನರಿಗೆ ಹೇಳುವ ಮೊದಲು ತಾವೇ ನೀರುಳಿತಾಯ ಮಾಡಿ, ಸಾರ್ವಜನಿಕರನ್ನು ಪ್ರೇರೇಪಿಸಬೇಕು ಎಂಬ ನಿಟ್ಟಿನಲ್ಲಿ ಯೋಜಿಸಿದ್ದರು. “ಉದಯವಾಣಿ’ಯ ಮಳೆಕೊಯ್ಲು ಅಭಿಯಾನದಿಂದ ಈ ಯೋಚನೆಗೆ ಮೂರ್ತರೂಪ ಬಂತು. ನಿರ್ಮಿತಿ ಕೇಂದ್ರದ ರಾಜೇಂದ್ರ ಕಲಾºವಿ ಅವರನ್ನು ಸಂಪರ್ಕಿಸಿ ಅವರ ಮಾರ್ಗದರ್ಶನ ಪಡೆದುಕೊಂಡು ಮನೆಗೆ ಈಗ ಮಳೆಕೊಯ್ಲು ಅಳವಡಿಸಿದ್ದೇನೆ’ ಎನ್ನುತ್ತಾರೆ ರೋಸಿ ಮಥಾಯಸ್‌.

ಜುಲೈ ತಿಂಗಳಲ್ಲಿ ಪಂಚಾಯತ್‌ನ ಸಾಮಾನ್ಯ ಸಭೆ ನಡೆಯಲಿದೆ. ಅಲ್ಲಿ ಎಲ್ಲ ಸದಸ್ಯರೂ ಮನೆಗಳಲ್ಲಿ ಮಳೆಕೊಯ್ಲು ವ್ಯವಸ್ಥೆ ಮಾಡಿಕೊಳ್ಳುವಂತೆ ಹೇಳುತ್ತೇನೆ. ಅವರ ಮೂಲಕ ಗ್ರಾಮದ ಎಲ್ಲ ಜನರಿಗೂ ಈ ವಿಚಾರವನ್ನು ತಲುಪಿಸುತ್ತೇನೆ ಎಂದು ವಿಶ್ವಾಸದಿಂದ ಹೇಳುತ್ತಾರೆ ರೋಸಿ ಮಥಾಯಸ್‌.

ಎಲ್ಲರೂ ಮಳೆಕೊಯ್ಲು ಅಳವಡಿಸಿ
ಉದಯವಾಣಿಯ “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತನಾಗಿ ಸಹೋದರನೊಂದಿಗೆ ಸೇರಿಕೊಂಡು ನಮ್ಮ ಮನೆಯಲ್ಲಿ ಮಳೆಕೊಯ್ಲು ಅಳವಡಿಸಿಕೊಂಡಿದ್ದೇವೆ. ಜನಪ್ರತಿನಿಧಿಯಾಗಿ ನಾನು ನೀರುಳಿತಾಯಕ್ಕೆ ಮುಂದಾದರೆ ಜನರೂ ಅದನ್ನು ಅನುಕರಣೆ ಮಾಡುತ್ತಾರೆ ಎನ್ನುವ ವಿಶ್ವಾಸ ನನಗಿದೆ. ಬೇಸಗೆಯಲ್ಲಿ ಮನೆಗೆ ನೀರು ಬಂದಿಲ್ಲ ಎಂದು ಆತಂಕಗೊಳ್ಳುವ ಬದಲು ನಗರದ ಜನರು ಈ ಮಳೆಗಾಲದಲ್ಲಿ ಮಳೆಕೊಯ್ಲು ವ್ಯವಸ್ಥೆ ಮನೆಗಳಲ್ಲಿ ಅಳವಡಿಸಬೇಕೆಂಬುದು ನನ್ನ ಮನವಿ.
– ಡಿ. ವೇದವ್ಯಾಸ ಕಾಮತ್‌,ಶಾಸಕರು

 ಉದಯವಾಣಿ’ಯೇ ನನಗೆ ಪ್ರೇರಣೆ
ನೀರಿಗಾಗಿ ಜನ ಸಂಕಷ್ಟ ಪಡುವುದನ್ನು ನಾಲ್ಕು ವರ್ಷಗಳಿಂದ ಹತ್ತಿರದಿಂದ ಗಮನಿಸುತ್ತಿದ್ದೇನೆ. “ಉದಯವಾಣಿ’ಯಲ್ಲಿ ಪ್ರಕಟವಾಗುತ್ತಿರುವ ಮಳೆಕೊಯ್ಲು ಅಭಿಯಾನ ನೋಡಿದ ಬಳಿಕ ನಾನೂ ಅದನ್ನು ಅಳವಡಿಸಿಕೊಳ್ಳಬೇಕು; ಆ ಮೂಲಕ ಗ್ರಾಮದ ಜನರನ್ನೂ ಪ್ರೇರೇಪಿಸಬೇಕೆಂದು ಅನ್ನಿಸಿತ್ತು. ಅದರಂತೆ ಈಗ ನಮ್ಮ ಮನೆಯಲ್ಲಿ ಮಳೆಕೊಯ್ಲು ಅಳವಡಿಸಿಕೊಂಡಿದ್ದೇನೆ. ಹೀಗಾಗಿ, ಬಜಪೆ ಗ್ರಾಮದ ಎಲ್ಲ ನಿವಾಸಿಗಳು ತಮ್ಮ ಮನೆಗಳಲ್ಲಿ ಮಳೆಕೊಯ್ಲು ಅಳವಡಿಸಿಕೊಂಡು ಮಾದರಿಯಾಗಬೇಕೆಂದು ನನ್ನ ನಿರೀಕ್ಷೆ.
 - ರೋಸಿ ಮಥಾಯಸ್‌, ಬಜಪೆ ಗ್ರಾ.ಪಂ. ಅಧ್ಯಕ್ಷೆ

ಅಭಿಯಾನಕ್ಕೆ ಒಂದು ತಿಂಗಳು: ಜನಾಭಿಪ್ರಾಯ

ಪತ್ರಿಕೆ ಕಾರ್ಯ ಶ್ಲಾಘನೀಯ
ಈ ಸಲ ನೀರಿನ ಅಭಾವದಿಂದ ಜನರು ಎಚ್ಚೆತ್ತುಕೊಂಡಿದ್ದಾರೆ. ಈ ಮಳೆ ಕೊಯ್ಲು ಅಭಿಯಾನ ಮರಳುಗಾಡಿನಲ್ಲಿ ಓಯಸಿಸ್‌ ಕಂಡಂತಾಗಿದೆ. ಉದಯವಾಣಿಯ ಈ ಕಾರ್ಯ ಶ್ಲಾಘನೀಯ.
 - ಅನುರಾಧಾ ರಾಜೀವ್‌, ಸುರತ್ಕಲ್‌

ಉದಯವಾಣಿಯಿಂದ ಉತ್ತಮ ಅಭಿಯಾನ
ನೀರನ್ನು ಜೋಪಾನವಾಗಿ ಬಳಸಬೇಕಾದುದು ನಮ್ಮೆಲ್ಲರ ಕರ್ತವ್ಯ. ಅದನ್ನು ನೆನಪಿಸುತ್ತಿರುವ ಉದಯವಾಣಿಯ ಕಾರ್ಯ ಶ್ಲಾಘನೀಯ.
 - ಶಾಹಿಲ್‌, ಸಂತ ಅಲೋಶಿಯಸ್‌ ಕಾಲೇಜು

ಪತ್ರಿಕೆಯ ಕಾರ್ಯ ಶ್ಲಾಘನೀಯ
ಸದ್ಯ ಮಳೆ ಕಣ್ಣಾಮುಚ್ಚಾಲೆ ಆಡುತ್ತಿದೆ. ಮುಂದಿನ ದಿನಗಳಲ್ಲಿ ನೀರಿನ ಕೊರತೆ ಎದುರಾಗುವುದರಲ್ಲಿ ಸಂಶಯವಿಲ್ಲ. ಹಾಗಾಗಿ ನೀರನ್ನು ಮಳೆ ನೀರಿನಂತೆ ಖರ್ಚು ಮಾಡಬೇಕಾದ ಆವಶ್ಯಕತೆ ಇದೆ. ಇದನ್ನು ಜನರಿಗೆ ಮನವರಿಕೆ ಮಾಡುತ್ತಿರುವ ಉದಯವಾಣಿ ಪತ್ರಿಕೆಯ ಕಾರ್ಯ ಶ್ಲಾಘನೀಯ.
 - ಹರ್ಷಿತ್‌ ಗೌಡ, ಮಂಗಳೂರು

ಜನಸ್ನೇಹಿ ಕಾರ್ಯಕ್ರಮ
ಮನೆ ಮನೆಗೆ ಮಳೆಕೊಯ್ಲು ಅಭಿಯಾನ ಉದಯವಾಣಿಯ ಜನಸ್ನೇಹಿ ಕಾರ್ಯಕ್ರಮಗಳಲ್ಲಿ ಒಂದು. ಬೇಸಗೆ ಕಾಲದಲ್ಲಿ ಟ್ಯಾಂಕರ್‌ಗಳ ಓಡಾಟ ಹೆಚ್ಚಾಗುತ್ತಿದೆ. ನೀರಿನ ಅಭಾವ ಹೆಚ್ಚಾಗುತ್ತಿದೆ. ಇಂತಹ ಸಮಯದಲ್ಲಿ ಮಳೆಕೊಯ್ಲು, ಇಂಗು ಗುಂಡಿ, ಜಲಮರುಪೂರಣಗಳ ಬಗ್ಗೆ ಪತ್ರಿಕೆ ಜನರಿಗೆ ಅರಿವು ಮೂಡಿಸುತ್ತಿರುವುದು ಉತ್ತಮ ವಿಚಾರ.
– ಪಿ. ಕೃಷ್ಣಪ್ಪ, ಪರಿಸರವಾದಿ, ಕೆ.ಎಚ್‌.ಬಿ. ಕಾಲನಿ

Advertisement

Udayavani is now on Telegram. Click here to join our channel and stay updated with the latest news.

Next