Advertisement
ಹಬ್ಬದ ಹಿನ್ನೆಲೆಯಲ್ಲಿ ಮೈಸೂರು-ಬೆಂಗಳೂರು ಹೆದ್ದಾರಿಯ ಸಿದ್ಧಲಿಂಗಪುರದ ಸುಬ್ರಹ್ಮಣೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಷಷ್ಠಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಹಬ್ಬದ ಪ್ರಯುಕ್ತ ಮುಂಜಾನೆ 2 ಗಂಟೆಯಿಂದಲೇ ದೇವಾಲಯಕ್ಕೆ ಆಗಮಿಸಿದ ಭಕ್ತರಿಗೆ ದೇವರ ದರ್ಶನ ಪಡೆಯುವ ಜತೆಗೆ ಪೂಜೆಗೆ ಅವಕಾಶ ಮಾಡಿಕೊಡಲಾಗಿತ್ತು.
Related Articles
Advertisement
ಹುತ್ತಗಳಿಗೆ ಪೂಜೆ: ಷಷ್ಠಿ ಪ್ರಯುಕ್ತ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆದರೆ. ಮತ್ತೂಂದೆಡೆ ಭಕ್ತರು ನಾಗರ ಹುತ್ತಕ್ಕೆ ಹಾಲು-ಬೆಣ್ಣೆ ತನಿ ಎರೆಯುವ ಮೂಲಕ ಹರಕೆ ತೀರಿಸಿದರು. ಈ ನಡುವೆ ಕೆಲವು ಭಕ್ತಾಧಿಗಳು ಬೆಳ್ಳಿಯ ನಾಗರ ವಿಗ್ರಹಳನ್ನು ಹುತ್ತಕ್ಕೆ ಹಾಕುವ ಮೂಲಕ ಭಕ್ತಿಭಾವ ಮೆರೆದರು.
ಪೊಲೀಸ್ ಭದ್ರತೆ: ದೇವರದರ್ಶನ ಸೇರಿ ಇನ್ನಿತರ ಸಂದರ್ಭದಲ್ಲಿ ಯಾವುದೇ ಗೊಂದಲ, ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ದೇವಸ್ಥಾನದ ಪ್ರವೇಶಸ್ಥಳ, ಭಕ್ತರು ಸಾಲಾಗಿ ನಿಂತಿದ್ದ ಕಡೆಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಸರಗಳ್ಳರ ಮೇಲೆ ನಿಗಾ ಇಡಲು ಮಫ್ತಿ ಪೊಲೀಸರು, ಮಹಿಳಾ ಪೊಲೀಸರನ್ನು ನಿಯೋಜಿಸಲಾಗಿತ್ತು.
ಷಷ್ಠಿ ಹಿನ್ನೆಲೆಯಲ್ಲಿ ಮೈಸೂರು-ಬೆಂಗಳೂರು ಮಾರ್ಗದಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಿ, ಬದಲಿ ಮಾರ್ಗವನ್ನು ಕಲ್ಪಿಸಲಾಗಿತ್ತು. ಹೀಗಾಗಿ ಮೈಸೂರು-ಬೆಂಗಳೂರು ಮಾರ್ಗವಾಗಿ ಸಂಚರಿಸುವ ವಾಹನಗಳು ಕೊಲಂಬಿಯಾ ಏಷಿಯಾ ಆಸ್ಪತ್ರೆ ಬಳಿಯ ರಿಂಗ್ರಸ್ತೆಯಲ್ಲಿ ಎಡಕ್ಕೆ ತಿರುಗಿ ರಾಯಲ್ ಇನ್ ಜಂಕ್ಷನ್, ಕೆಆರ್ಎಸ್ ರಸ್ತೆ,ಪಂಪ್ಹೌಸ್, ಪಾಲಹಳ್ಳಿ ಮಾರ್ಗವಾಗಿ ಪಶ್ಚಿಮವಾನಿಗೆ ತಲುಪಲು ಸೂಚಿಸಲಾಗಿತ್ತು.
ವಿವಿಧೆಡೆಗಳಲ್ಲಿ ಆಚರಣೆ: ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ಮೈಸೂರಿನಲ್ಲಿ ಹಲವು ದೇವಸ್ಥಾನಗಳು ಹಾಗೂ ಬಡಾವಣೆಗಳಲ್ಲಿ ಆಚರಿಸಲಾಯಿತು. ಪ್ರಮುಖವಾಗಿ ದೇವರಾಜ ಮೊಹಲ್ಲಾದ ಅಮೃತೇಶ್ವರ ದೇವಸ್ಥಾನ, ವಿಶ್ವೇಶ್ವರನಗರದ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ, ಮಾನಂದವಾಡಿ ರಸ್ತೆಯ ಸುಬ್ರಹ್ಮಣ್ಯ ದೇವಸ್ಥಾನ ಸೇರಿದಂತೆ ಇನ್ನಿತರ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು.
ಇನ್ನೂ ನಗರದ ವಿವಿಧ ಬಡಾವಣೆಗಳಲ್ಲಿಯೂ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಭಕ್ತಾಧಿಗಳು ತಮ್ಮ ಬಡಾವಣೆಯಲ್ಲಿರುವ ಹುತ್ತಕ್ಕೆ ವಿಶೇಷ ಪೂಜೆ ಸಲ್ಲಿಸಿ, ಹುತ್ತಕ್ಕೆ ಹಾಲು, ಮೊಸರಿನಿಂದ ಪೂಜೆ ಸಲ್ಲಿಸಿ, ತನಿ ಎರೆಯುವ ಮೂಲಕ ಹಬ್ಬದ ಆಚರಣೆ ಮಾಡಿದರು.