Advertisement

ಬಿಜೆಪಿಯಿಂದ ಜಿಲ್ಲಾವಾರು ವರದಿ ಸಲ್ಲಿಕೆ

11:14 PM Apr 26, 2019 | Team Udayavani |

ಬೆಂಗಳೂರು: ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಮುಗಿದ ಬೆನ್ನಲ್ಲೇ ಎಲ್ಲ ಜಿಲ್ಲಾ ಘಟಕಗಳಿಂದ ಬಿಜೆಪಿಯು ವಿಸ್ತೃತ ವರದಿ ಪಡೆದಿದೆ. ಸಭೆಯಲ್ಲಿ ನಡೆದ ಚರ್ಚೆ, ಮಾಹಿತಿ ಆಧರಿಸಿ 22 ಸ್ಥಾನ ಗೆಲ್ಲುವ ವಿಶ್ವಾಸವನ್ನು ಹಿರಿಯ ನಾಯಕರು ವ್ಯಕ್ತಪಡಿಸಿದ್ದರೂ 17-18 ಸ್ಥಾನಗಳನ್ನು ಗೆಲ್ಲುವುದು ಖಾತರಿಯಾಗಿರುವ ತೃಪ್ತಿ ಇದ್ದಂತಿದೆ.

Advertisement

ರಾಜ್ಯ ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಜಿಲ್ಲಾವಾರು ವರದಿ ಸಲ್ಲಿಕೆಯಾಗಿದ್ದು, ಸುಮಾರು ನಾಲ್ಕು ಗಂಟೆಗೂ ಹೆಚ್ಚು ಹೊತ್ತು ಸುದೀರ್ಘ‌ ಚರ್ಚೆ ನಡೆಯಿತು. ಮುನ್ನಡೆ, ಯಶಸ್ವಿ ಪ್ರಯತ್ನ, ಕೈಹಿಡಿದ ಅಂಶಗಳು, ಹಿನ್ನಡೆ, ಕೊನೆಯ ಕ್ಷಣದ ಲೋಪಗಳು ಇತರೆ ವಿಚಾರಗಳ ಬಗ್ಗೆ ವಿವರವಾಗಿ ಚರ್ಚೆ ನಡೆಯಿತು ಎಂದು ಮೂಲಗಳು ತಿಳಿಸಿವೆ.

ಪ್ರಮುಖವಾಗಿ ಶಿವಮೊಗ್ಗ ಕ್ಷೇತ್ರ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಿದ್ದು, ಉಪಚುನಾವಣೆಯಲ್ಲಿ ಪಡೆದ ಬಹುಮತದ ಕನಿಷ್ಠ ಮೂರು ಪಟ್ಟು ಅಂದರೆ 1.50 ಲಕ್ಷ ಮತಗಳ ಅಂತರದಲ್ಲಿ ಗೆಲ್ಲುವುದಾಗಿ ವರದಿ ಸಲ್ಲಿಕೆಯಾಗಿದೆ. ಸೊರಬ ಹಾಗೂ ಸಾಗರದಲ್ಲಿ ಅಲ್ಪ ಹಿನ್ನಡೆಯಾಗಬಹುದೆಂಬ ವರದಿ ಜತೆಗೆ ಸಮಬಲ ಇಲ್ಲವೇ ಅಲ್ಪ ಮುನ್ನಡೆ ಸಿಗುವುದಾಗಿ ಶಾಸಕರಾದ ಹರತಾಳು ಹಾಲಪ್ಪ, ಕುಮಾರ್‌ ಬಂಗಾರಪ್ಪ ವರದಿ ಸಲ್ಲಿಸಿದ್ದಾರೆ. ನಾನಾ ಕಡೆ ಉತ್ತಮ ಮುನ್ನಡೆ ಸಿಗುವ ಬಗ್ಗೆಯೂ ವರದಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.

ಮೈಸೂರು- ಕೊಡಗು ಕ್ಷೇತ್ರದಲ್ಲಿ ಬಿಜೆಪಿಗೆ ಪೂರಕ ವಾತಾವರಣ ಕಂಡುಬಂದಿದ್ದು, ಒಕ್ಕಲಿಗ ಸಮುದಾಯದ ಮತಗಳು ಯಾವ ಪ್ರಮಾಣದಲ್ಲಿ ಪಕ್ಷಕ್ಕೆ ದಕ್ಕಿವೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ ಎಂಬುದಾಗಿ ಜಿಲ್ಲಾ ಮುಖಂಡರು ವರದಿ ನೀಡಿದ್ದಾರೆ. ಹಾಸನ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಚನ್ನರಾಯಪಟ್ಟಣ, ಹೊಳೆನರಸೀಪುರ ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿ ಪಕ್ಷಕ್ಕೆ ಮುನ್ನಡೆ ಸಿಗುವ ನಿರೀಕ್ಷೆಯಿದ್ದು, ಗೆಲ್ಲುವ ವಿಶ್ವಾಸವಿದೆ ಎಂದು ಅಭ್ಯರ್ಥಿ ಎ. ಮಂಜು ಹೇಳಿದರು ಎಂದು ಗೊತ್ತಾಗಿದೆ.

ವಿಳಂಬ ಆಯ್ಕೆಯಿಂದ ಗೊಂದಲ: ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ವಿಳಂಬವಾದ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪವಾಯಿತು. ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಕೊನೆಯ ಕ್ಷಣದಲ್ಲಿ ಅಚ್ಚರಿಯ ಅಭ್ಯರ್ಥಿಯನ್ನು ಪ್ರಕಟಿಸಲಾಯಿತು. ಇದು ಕೆಲ ಗೊಂದಲಗಳಿಗೆ ಕಾರಣವಾಯಿತು.

Advertisement

ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಎಚ್ಚರ ವಹಿಸುವುದು ಒಳಿತು ಎಂಬುದಾಗಿಯೂ ವರದಿ ಸಲ್ಲಿಕೆಯಾಗಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೂ ಕೊನೆಯ ಕ್ಷಣದಲ್ಲಿ ಅಭ್ಯರ್ಥಿಯನ್ನು ಅಂತಿಮಗೊಳಿಸಲಾಯಿತು. ಜತೆಗೆ ಹಲವು ಪ್ರಮುಖ ನಾಯಕರು ಕ್ಷೇತ್ರದಲ್ಲಿ ಪ್ರಚಾರಕ್ಕೆ ಆಗಮಿಸದಿದ್ದುದು ಸಹ ತುಸು ಹಿನ್ನಡೆಗೆ ಕಾರಣವಾಯಿತು ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ ಎಂದು ಮೂಲಗಳು ಹೇಳಿವೆ.

ಮಂಡ್ಯದಲ್ಲಿ ಗೆಲುವು: ಮಂಡ್ಯ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಲತಾ ಅವರು 45,000ಕ್ಕೂ ಹೆಚ್ಚು ಮತಗಳ ಅಂತರದಿಂದ ಜಯ ಗಳಿಸುತ್ತಾರೆ ಎಂಬುದಾಗಿ ಜಿಲ್ಲಾಧ್ಯಕ್ಷ ನಾಗನಗೌಡ ವರದಿ ಸಲ್ಲಿಸಿದ್ದಾರೆ. ಮೇಲುಕೋಟೆ ಕ್ಷೇತ್ರದಲ್ಲಷ್ಟೇ ಜೆಡಿಎಸ್‌ ಮುನ್ನಡೆ ಪಡೆಯಲಿದ್ದು, ಉಳಿದೆಡೆ ಅಭ್ಯರ್ಥಿಯು ಸಮಬಲದ ಪೈಪೋಟಿ ನೀಡುವ ವಿಶ್ವಾಸವಿದೆ ಎಂದು ವರದಿಯಲ್ಲಿದೆ ಎನ್ನಲಾಗಿದೆ.

ಗೆಲ್ಲುವ ಸಾಧ್ಯತೆ 50: 50: ರಾಜ್ಯದ 28 ಕ್ಷೇತ್ರಗಳಲ್ಲಿ ಬೆಂಗಳೂರು ಗ್ರಾಮಾಂತರ ಹೊರತುಪಡಿಸಿದರೆ ಬಹುತೇಕ ಎಲ್ಲ ಕ್ಷೇತ್ರಗಳ ವರದಿಯಲ್ಲೂ ಧನಾತ್ಮಕ ವಿವರಗಳನ್ನೇ ಪ್ರಸ್ತಾಪಿಸಿದ್ದು, ಎಲ್ಲ ವರದಿಗಳಲ್ಲೂ ಗೆಲ್ಲುವ ವಿಶ್ವಾಸವನ್ನು ಸ್ಥಳೀಯ ಮುಖಂಡರು ವ್ಯಕ್ತಪಡಿಸಿದ್ದಾರೆ. ಸಭೆಯಲ್ಲಿ ಪ್ರಸ್ತಾಪವಾದ ವಿಚಾರ, ಅಂಕಿಸಂಖ್ಯೆ, ಮತದಾನ ಪ್ರಮಾಣ ಇತರೆ ಅಂಶಗಳ ಆಧಾರದಲ್ಲಿ 17ರಿಂದ 18 ಸ್ಥಾನ ಗೆಲ್ಲುವುದು ಖಚಿತವಾಗಿದೆ.

ಏಳೆಂಟು ಕ್ಷೇತ್ರಗಳಲ್ಲಿ ಗೆಲುವು ಸಾಧ್ಯತೆ 50: 50ರಷ್ಟಿದೆ. ಮೈಸೂರು- ಕೊಡಗು, ಕಲಬುರಗಿ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೀದರ್‌, ಕೊಪ್ಪಳ, ಚಿಕ್ಕೋಡಿ ಕ್ಷೇತ್ರಗಳಲ್ಲಿ ಪ್ರಬಲ ಸ್ಪರ್ಧೆಯಿದ್ದು, ಗೆಲುವಿನ ಅಂತರ ಬಹಳ ಕಡಿಮೆ ಇರುವಂತಿದೆ ಎಂದು ಬಿಜೆಪಿ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next