ರಾಮನಗರ: ರಾಷ್ಟ್ರದ ಒಟ್ಟಾರೆ ಪ್ರಗತಿಗೆ ಪೂರಕವಾಗಿ ವಿದ್ಯಾರ್ಥಿಗಳು ಸಾಮಾಜಿಕ ಜವಾಬ್ದಾರಿ ನಿರ್ವಹಿಸಬೇಕಾಗಿದೆ ಎಂದು ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಎನ್ಎಸ್ಎಸ್ ಸಂಯೋಜಕ ಎಲ್.ವಿ ಅಪ್ಪಸಾಬ್ ಹೇಳಿದರು.
ತಾಲೂಕಿನ ಕೃಷ್ಣಾಪುರದೊಡ್ಡಿ ತಾನಿನ ರಂಗದಂಗಳದಲ್ಲಿ ಬೆಂಗಳೂರಿನ ಕೆಎಸ್ ತಾಂತ್ರಿಕ ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕ ಹಮ್ಮಿಕೊಂಡಿದ್ದ ಪರಿವರ್ತನ, ವಿಶೇಷ ಎನ್ಎಸ್ಎಸ್ ಶಿಬಿರದ ಸಮಾರೋಪದಲ್ಲಿ ಅವರು ಮಾತನಾಡಿದರು.
ರಾಷ್ಟ್ರಪಿತ ಮಹಾತ್ಮಗಾಂಧಿಯವರ ಆಶಯದಂತೆ ರಾಷ್ಟ್ರೀಯ ಸೇವಾ ಯೋಜನೆ ಶಿಬಿರಗಳಲ್ಲಿ ಅನುಭವ ಮತ್ತು ಪರಿಶ್ರಮಕ್ಕೆ ಹೆಚ್ಚು ಗಮನ ಹರಿಸಲಾಗಿದೆ ಎಂದು ಹೇಳಿದರು. ಸೇವೆ ಕಡೆಗೆ ವಿದ್ಯಾರ್ಥಿಗಳ ಚಿತ್ತ ಹರಿಸುವುದೇ ಎನ್ಎಸ್ಎಸ್ ಶಿಬಿರಗಳ ಮೂಲ ತತ್ವಗಳ ಪೈಕಿ ಒಂದು. ಸೇವೆ ಎನ್ನುವುದು ಜೀವನದ ಪ್ರಮುಖ ಉದ್ದೇಶವಾಗಬೇಕಾಗಿದೆ ಎಂದು ಹೇಳಿದರು.
ಶಿಬಿರಾಧಿಕಾರಿ ಕೆ.ಎಸ್.ಮುರಳೀಧರ್ ಮಾತನಾಡಿ, ಕೃಷ್ಣಾಪುರದೊಡ್ಡಿಯಲ್ಲಿ ನಡೆದ ಎನ್ಎಸ್ಎಸ್ ವಿಶೇಷ ಶಿಬಿರದ ಮೂಲಕ ಶಿಬಿರಾರ್ಥಿಗಳು ಗ್ರಾಮೀಣ ಜನರ ಬದುಕನ್ನು ತೀರಾ ಹತ್ತಿರದಿಂದ ನೋಡಿದಂತಾಗಿದೆ. ಸೇವಾ ಮನೋಭಾವ ಶಿಬಿರಾರ್ಥಿಗಳಲ್ಲಿ ಮೊಳಕೆಯೊಡೆದಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಂತಲಾ ಚಾರಿಟಬಲ್ ಟ್ರಸ್ಟ್ನ ಸಂಸ್ಥಾಪಕ ಕಾರ್ಯದರ್ಶಿ ಕವಿತಾರಾವ್, ಎನ್ಎನ್ಎಸ್ ಶಿಬಿರಗಳ ಮೂಲಕ ಬಡವ, ಶ್ರೀಮಂತ ಎಂಬ ಭೇದಭಾವ ತೊಲಗಿ ವಿದ್ಯಾರ್ಥಿಗಳಲ್ಲಿ ಸಮಾನತೆ ಎಂಬ ಮನೋಭಾವ ಮೂಡಲು ಸಾಧ್ಯವಾಗುತ್ತಿದೆ. ಶಿಬಿರಾರ್ಥಿಗಳು ತಮ್ಮ ಜೀವನದಲ್ಲಿ ಒಬ್ಬ ಉತ್ತಮ ಪ್ರಜೆಯಾಗಿ ರೂಪುಗೊಳ್ಳುವುದು ಸಾಧ್ಯ ಎಂದರು.
ಸಮಾಜದಲ್ಲಿ ಮನೆಮಾಡಿರುವ ಮೌಡ್ಯ ಮುಂತಾದ ಕಂದಾಚಾರಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಎನ್ಎಸ್ಎಸ್ ಶಿಬಿರಕ್ಕೆ ಸಹಕಾರ ನೀಡಿದ ಪರಿವಾರ್ ಫೌಂಡೇಷನ್ ಸಂಸ್ಥಾಪಕ ಹರೀಶ್, ಅರ್ಪಿತಾ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷ ಎನ್.ವಿ.ಲೋಕೇಶ್, ಅಕ್ರಸೆಟ್ ಸಂಸ್ಥೆ ಸಂಸ್ಥಾಪಕ ಟಿ.ಎನ್.ಸಿದ್ದೇಗೌಡ ಮುಂತಾದವರಿದ್ದರು. ಇದೇ ವೇಳೆ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ಗಣ್ಯರು ವಿತರಿಸಿದರು.