ಚಳ್ಳಕೆರೆ: ಪದವಿ ಪಡೆಯುವ ವಿದ್ಯಾರ್ಥಿಗಳು ಸಮಯ ವ್ಯರ್ಥ್ಯ ಮಾಡದೆ ನಿರಂತರವಾಗಿ ಅಧ್ಯಯನ ನಡೆಸಿ ಜೀವನ ರೂಪಿಸಿಕೊಳ್ಳಬೇಕು. ಪದವಿ ವಿದ್ಯಾರ್ಥಿಗಳು ಗುಣಾತ್ಮಕ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ಹೆಚ್ಚಿನ ಒಲವು ತೋರಬೇಕು ಎಂದು ಬಾಪೂಜಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಿ.ಕರಿಯಣ್ಣ ಹೇಳಿದರು. ಗುರುವಾರ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಪಾಲಿಗೆ ಕಾಲೇಜುಗಳಲ್ಲಿ ಕಲಿಯುವ ಪ್ರತಿಯೊಂದು ದಿನವೂ ಅರ್ಥಗರ್ಭಿತವಾಗಿರುತ್ತದೆ. ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಅವಶ್ಯವಿರುವ ಶಿಕ್ಷಣ ಕಲಿಯಲು ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಾರೆ, ಇದು ವಿದ್ಯಾರ್ಥಿಗಳ ಭವಿಷ್ಯದ ಬದುಕಿನ ಪರ್ವ ದಿನಗಳಾಗಿರುತ್ತದೆ ಎಂದರು. ಪದವಿ ವ್ಯಾಸಂಗಕ್ಕಾಗಿ ವಿದ್ಯಾರ್ಥಿಗಳು ಇಲ್ಲಿನ ದಾಖಲೆ ಪಡೆದಿರುತ್ತೀರಿ. ನಿಮಗೆ ಕಾಲೇಜಿನ ಪ್ರತಿಯೊಬ್ಬ ಪ್ರಾಧ್ಯಾಪಕರು,ಉಪನ್ಯಾಸಕರು ಶಿಕ್ಷಣ ನೀಡುವಲ್ಲಿ ವಿಶೇಷ ಗಮನ ನೀಡಿದ್ದಾರೆ. ನೀವು ಕಲಿತ ಶಿಕ್ಷಣ ಸಮಾಜದ ಅಭಿವೃದ್ಧಿಗೆ ಸುದಪಯೋಗವಾಗಬೇಕು ಎಂದು ಹೇಳಿದರು.
ಬಹುತೇಕ ವಿದ್ಯಾರ್ಥಿಗಳು ಶಿಕ್ಷಣದ ಬಗ್ಗೆ ಹೆಚ್ಚು ಜಾಗೃತರಾಗಿರುತ್ತಾರೆ. ಇನ್ನೂ ಕೆಲವರು ನಿರ್ಲಕ್ಷ್ಯ ಮಾಡುತ್ತಾರೆ. ಶಿಕ್ಷಣ ಕಲಿಯುವ ಸಂದರ್ಭದಲ್ಲಿ ನಿರ್ಲಕ್ಷéವಹಿಸಿದರೆ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಅಲಕ್ಷ್ಯ ಮಾಡದೇ ಮನಸ್ಸು ನಿಗ್ರಹಿಸಿ ಅಭ್ಯಾಸ ಮಾಡಿ ಯಶಸ್ಸು ಪಡೆಯಬೇಕು ಎಂದರು.
ಕನ್ನಡ ಪ್ರಾಧ್ಯಾಪಕ ಡಾ| ಜಿ.ವಿ. ರಾಜಣ್ಣ ಮಾತನಾಡಿ, ಅಂತಿಮ ಪದವಿ ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಒಂದು ಹಂತಕ್ಕೆ ಬಂದು ತಲುಪಿದ್ದೀರಿ. ಫಲಿತಾಂಶದ ನಂತರ ಮತ್ತಷ್ಟು ವಿದ್ಯಾರ್ಥಿಗಳು ಉನ್ನತ್ತ ವ್ಯಾಸಂಗಕ್ಕೆ ಹೋದರೆ, ಮತ್ತೆ ಕೆಲವರು ಉದ್ಯೋಗ ಪಡೆಯಲು ಅಣಿಯಾಗುತ್ತಾರೆ. ಉದ್ಯೋಗ ಪಡೆದು ಜೀವನ ರೂಪಿಸಿಕೊಂಡಾಗ ಉಪನ್ಯಾಸಕರ ಶ್ರಮ ಸಾರ್ಥಕವಾಗುತ್ತದೆ ಎಂದು ಹೇಳಿದರು. ಇತಿಹಾಸ ಉಪನ್ಯಾಸಕ ಉಮೇಶ್ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆ ಎದರಿಸಲು ಪದವಿ ಸೇರ್ಪಡೆಯಾದ ದಿನದಿಂದಲೇ ಅಭ್ಯಾಸ ಮಾಡಬೇಕು. ಉದ್ಯೋಗ ಪಡೆಯಲು ಇಂದಿನ ದಿನಮಾನದಲ್ಲಿ ಸಾಕಷ್ಟು ಪೈಪೋಟಿಯಿದ್ದು, ಜಾಗೃತಿಯಿಂದ ಅಭ್ಯಾಸ ಮಾಡಿ ಯಶಸ್ಸು ಪಡೆಯಬೇಕು ಎಂದರು. ಉಪನ್ಯಾಸಕರಾದ ಚಂದ್ರಶೇಖರ್, ಗ್ರಂಥಪಾಲಕ ಜೆ. ತಿಪ್ಪೇಸ್ವಾಮಿ, ಬಾಬುಕುಮಾರ್, ನಂದಿನಿ, ಲೋಕೇಶ್, ಎ. ತಿಪ್ಪೇಸ್ವಾಮಿ ಇತರರು ಇದ್ದರು.