Advertisement

ಸಿಂಗರಿಸಿದ ಎತ್ತಿನಗಾಡಿಯಲ್ಲಿ ಬಂದ ವಿದ್ಯಾರ್ಥಿಗಳು!

10:10 PM May 31, 2019 | Sriram |

ವಿಶೇಷ ವರದಿ-ಬೆಳ್ಮಣ್‌: ವಿವಿಧ ಶಾಲೆಗಳಲ್ಲಿ ವಿವಿಧ ರೀತಿಯಲ್ಲಿ ಶಾಲಾರಂಭೋತ್ಸವಗಳನ್ನು ಮಾಡುತ್ತಾರೆ. ಆದರೆ ಮುಂಡ್ಕೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇವೆಲ್ಲವುಗಳಿಗೆ ವಿಭಿನ್ನವಾಗಿ ಆಚರಿಸಿದೆ.

Advertisement

ಶುಕ್ರವಾರ ಶಿಕ್ಷಕರು ಹಾಗೂ ಪೋಷಕರು ವಿದ್ಯಾರ್ಥಿ ಗಳನ್ನು ಸಿಂಗರಿಸಿದ ಎತ್ತಿನ ಗಾಡಿಯಲ್ಲಿ ಹೊತ್ತು ತಂದು ಸಂಭ್ರಮಿಸಿದರು. ಶಾಲಾರಂಭ ಮೇ 29ರಂದೇ ಆಗಿದ್ದರೂ ಪ್ರಾರಂಭೋತ್ಸವದ ಸಂಭ್ರಮ ವಿಶಿಷ್ಟವಾಗಿ ನಡೆಯಿತು. ಎತ್ತಿನ ಗಾಡಿಯೊಂದನ್ನು ಸಿಂಗರಿಸಿ ಸಜ್ಜುಗೊಳಿಸಿ ಚಿಣ್ಣರನ್ನು ಆ ಗಾಡಿಯಲ್ಲಿ ಕುಳ್ಳಿರಿಸಿ ಶಿಕ್ಷಕರು, ಹೆತ್ತವರು ಹೆಗಲು ಕೊಟ್ಟರು. ವಿದ್ಯಾರ್ಥಿಗಳು ಗಾಡಿಯೇರಿ ಕೇಕೆ ಹಾಕುತ್ತಾ ಶಾಲೆಯ ಕಡೆ ತೆರಳಿ ಸಂಭ್ರಮಿಸಿದರು.

ಇದೇ ಸಂದರ್ಭ ಶಾಲೆಗೆ ವಿದ್ಯಾರ್ಥಿಗಳ ದಾಖಲಾತಿ ಆಂದೋಲನ, ದಾನಿಗಳ ಹಾಗೂ ಇಲಾಖೆಯ ಕೊಡುಗೆಯ ಪುಸ್ತಕ ವಿತರಣೆಯೂ ನಡೆಯಿತು.

ಮುಂಡ್ಕೂರು ಗ್ರಾಮ ಪಂಚಾಯತ್‌ ಸದಸ್ಯರಾದ ರಘುವೀರ ಶೆಣೈ, ಕರಿಯ ಪೂಜಾರಿ,ಮುಂಡ್ಕೂರು ಕ್ಲಸ್ಟರ್‌ ಮುಖ್ಯಸ್ಥ ಚಂದ್ರಕಾಂತ ಡೇಸಾ, ಮುಂಡ್ಕೂರು ವಿದ್ಯಾವರ್ಧಕ ಪ್ರೌಢಶಾಲೆಯ ಶಿಕ್ಷಕ ಪ್ರಭಾಕರ ಶೆಟ್ಟಿ, ಎಸ್‌ಡಿಎಂಸಿ ಆಧ್ಯಕ್ಷ ದಿನೇಶ್‌ ಆಚಾರ್‌, ಉಪಾಧ್ಯಕ್ಷೆ ಗಾಯತ್ರಿ, ಹಳೆ ವಿದ್ಯಾರ್ಥಿಗಳಾದ ಅರುಣ್‌ ರಾವ್‌, ದೇವಪ್ಪ ಸಪಳಿಗ, ಶಿಕ್ಷಣ ಪ್ರೇಮಿ ಅವಿಲ್ ಡಿಸೋಜಾ, ಪುಸ್ತಕ ದಾನಿ ದೇವದಾಸ ಕಾಮತ್‌, ಮುಖ್ಯ ಶಿಕ್ಷಕಿ ಪೂರ್ಣಿಮಾ ಭಟ್, ಸಹ ಶಿಕ್ಷಕರಾದ ಹಿಲ್ಡಾ ಸಿಕ್ವೇರಾ, ಅಶ್ವಿ‌ನಿ, ಶ್ಯಾಮಲಾ,ದೈಹಿಕ ಶಿಕ್ಷಣ ಶಿಕ್ಷಕಿ ಮಮತಾ ಶೆಟ್ಟಿ, ಗೌರವ ಶಿಕ್ಷಕಿ ಬಿಂದಿಯಾ ಮತ್ತಿತರರಿದ್ದರು.

ಮನೋರಂಜನೆ ಉದ್ದೇಶ

ಎತ್ತಿನ ಗಾಡಿ ಮೂಲಕ ಪ್ರಾರಂಭೋತ್ಸವ ವಿಶೇಷ ಪರಿಕಲ್ಪನೆಯಾಗಿದ್ದು ಈ ಮೂಲಕ ವಿದ್ಯಾರ್ಥಿಗಳಿಗೆ ಮನೋರಂಜನೆ ನೀಡುವುದು ನಮ್ಮ ಮುಖ್ಯ ಉದ್ದೇಶ. ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳ ಕೊರತೆ ಇದ್ದರೂ ಈ ಬಾರಿ 25 ವಿದ್ಯಾರ್ಥಿಗಳ ನೋಂದಣಿ ಆಗಿದೆ. ಶಿಕ್ಷಣ ಪ್ರೇಮಿಗಳು, ಹಳೆ ವಿದ್ಯಾರ್ಥಿಗಳು ಹಾಗೂ ದಾನಿಗಳ ನೆರವಿನಿಂದ ಈ ಶಾಲೆ ಮುನ್ನಡೆಯುತ್ತಿದೆ.
-ಪೂರ್ಣಿಮಾ ಭಟ್, ಮುಖ್ಯ ಶಿಕ್ಷಕಿ

ಗಮನಾರ್ಹ ಸಾಧನೆ

ಮುಂಡ್ಕೂರು ಶಾಲೆ ತಾಲೂಕಿನಲ್ಲಿಯೇ ವಿವಿಧ ಶೈಕ್ಷಣಿಕ ಆಂದೋಲನಗಳ ಮೂಲಕ ಗಮನ ಸೆಳೆಯುತ್ತಿದೆ. ಸರಕಾರಿ ಕನ್ನಡ ಮಾಧ್ಯಮ ಶಾಲೆಯೊಂದು ಇಂತಹ ಗಮನಾರ್ಹ ಸಾಧನೆ ತೋರುತ್ತಿರುವುದು ಉಲ್ಲೇಖನೀಯ. ಇಲ್ಲಿ ವಿದ್ಯಾರ್ಥಿಗಳ ನೋಂದಣಿ ಉತ್ತಮವಾಗಿದೆ.
-ಅರುಣ್‌ ರಾವ್‌, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ
Advertisement

Udayavani is now on Telegram. Click here to join our channel and stay updated with the latest news.

Next