Advertisement

ಸ್ನೇಹಿತರು ಹೆದರಿಸಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ

12:11 PM Apr 13, 2019 | pallavi |
ಹುಬ್ಬಳ್ಳಿ: ಬೈಲಹೊಂಗಲ ತಾಲೂಕು ಮದನಭಾವಿ ಗ್ರಾಮದ ವಿದ್ಯಾರ್ಥಿಯೊಬ್ಬ ನಗರದ ಲಾಡ್ಜ್ವೊಂದರಲ್ಲಿ ನೇಣಿಗೆ ಶರಣಾದ ಘಟನೆ ಶುಕ್ರವಾರ ಬೆಳಗ್ಗೆ ಇಲ್ಲಿನ ಕೋರ್ಟ್‌ ವೃತ್ತ ಬಳಿಯ ತೃಪ್ತಿ ಇಂಟರ್‌ ನ್ಯಾಷನಲ್‌ ಹೋಟೆಲ್‌ನಲ್ಲಿ ನಡೆದಿದೆ.
ಮದನಭಾವಿಯ ವಿಶಾಲ ಚನಗೌಡ ಹಟ್ಟಿಹೊಳಿ (20) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಳಗಾವಿಯ ಶೇಷಗಿರಿ ಕೆಎಲ್‌ಇ ಇಂಜನಿಯರಿಂಗ್‌ ಕಾಲೇಜ್‌ನಲ್ಲಿ ಕಲಿಯುತ್ತಿದ್ದ ಈತನಿಗೆ ಸ್ನೇಹಿತರು ಹೆದರಿಸುತ್ತಿದ್ದರು. ಇದರಿಂದ ಭಯಗೊಂಡು ನಗರಕ್ಕೆ ಆಗಮಿಸಿ ಲಾಡ್ಜ್ನಲ್ಲಿ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಲಾಡ್ಜ್ನಲ್ಲಿ ರೂಮ್‌ ತೆಗೆದುಕೊಳ್ಳುವಾಗ ಪರೀಕ್ಷೆ ಇದೆ ಎಂದು ಪಡೆದುಕೊಂಡಿದ್ದನೆಂದು ತಿಳಿದು ಬಂದಿದೆ. ಉಪನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.
ಕಾರು-ಬೈಕ್‌ ಡಿಕ್ಕಿ: ಸವಾರ ಸಾವು: ತಾಲೂಕಿನ ಶೆರೇವಾಡ ಕ್ರಾಸ್‌ ಬಳಿ ಕಾರು ಹಾಗೂ ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಘಟನೆಯಲ್ಲಿ ಮೃತಪಟ್ಟವನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಟಾ ಏಸ್‌ ಪಲ್ಟಿ: ವೇಗವಾಗಿ ಬರುತ್ತಿದ್ದ ಟಾಟಾ ಏಸ್‌ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಮಾರ್ಗ ಮಧ್ಯೆ ಪಲ್ಟಿಯಾಗಿ ತಲೆಕೆಳಗಾಗಿ ಬಿದ್ದ ಘಟನೆ ಶುಕ್ರವಾರ ಮಧ್ಯಾಹ್ನ ಇಲ್ಲಿನ ಭೈರಿದೇವರಕೊಪ್ಪದಲ್ಲಿ ನಡೆದಿದೆ. ಈ ವೇಳೆ ವಾಹನಕ್ಕೆ ಹಾನಿಯಾಗಿದ್ದು, ಯಾರಿಗೂ ಗಾಯವಾಗಿಲ್ಲ. ಸ್ಥಳಕ್ಕೆ ಉತ್ತರ ಸಂಚಾರ ಪೊಲೀಸರು ತೆರಳಿ ಪರಿಶೀಲಿಸಿದರು.
ಬಾಲಕಿ ಕಾಣೆ: ದೂರು ದಾಖಲು 
ಧಾರವಾಡ: ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದ ವಿದ್ಯಾ ನೀಲಪ್ಪ ಹಳಕಟ್ಟಿ (16) ಏ.6ರಂದು ಮನೆಯಿಂದ ಹೊರ ಹೋಗಿದ್ದು, ಮರಳಿ ಬಾರದೇ ಕಾಣೆ ಆಗಿದ್ದಾಳೆ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯಿಂದ ಹೊರಗಡೆ ಹೋಗಿದ್ದು, ಈ ವೇಳೆ ಯಾರೋ ಅವಳನ್ನು ಅಪಹರಿಸಿಕೊಂಡು ಹೋಗಿರುವ ಸಂಶಯವಿದೆ. ಹೀಗಾಗಿ ಮಗಳನ್ನು ಹುಡುಕಿ ಕೊಡುವಂತೆ ತಂದೆ ನೀಲಪ್ಪ ಹಳಕಟ್ಟಿ ಅವರು ಧಾರವಾಡ ಮಹಿಳಾ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮನೆಯಲ್ಲಿದ್ದ ಚಿನ್ನಾಭರಣ ಕಳ್ಳತನ
ಧಾರವಾಡ: ಇಲ್ಲಿಯ ಟೈವಾಕ್‌ ಹಿಂದುಗಡೆಯ ನಿಸರ್ಗ ಲೇಔಟ್‌ ನಿವಾಸಿ ಮಹಾದೇವ ಅಂಗಡಿ ಅವರ ಮನೆಯಲ್ಲಿ ಗುರುವಾರ ಬೆಳಗಿನ ಜಾವ ಕಳ್ಳತನ ಮಾಡಲಾಗಿದೆ. ಮನೆಯಲ್ಲಿದ್ದ 71 ಗ್ರಾಂ ತೂಕದ ಚಿನ್ನಾಭರಣ, 205 ಗ್ರಾಂ ತೂಕದ ಬೆಳ್ಳಿ ಆಭರಣ, 15 ಸಾವಿರ ನಗದು ಸೇರಿ ಒಟ್ಟು 2,38,500 ರೂ. ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ. ವಿದ್ಯಾಗಿರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.
ಮನೆ ಕೀ ಮುರಿದು ಚಿನ್ನಾಭರಣ, ನಗದು ದರೋಡೆ ಇಲ್ಲಿಯ ಶೀಲವಂತರ ಓಣಿಯ ನಿವಾಸಿ ಮಹ್ಮದಲಿ ಬಾಬುಸಾಬ ನದಾಫ್‌ ಅವರ ಮನೆಗೆ ಹಾಕಿದ್ದ ಕೀಲಿ ಮುರಿದು ಕಳ್ಳತನ ಮಾಡಲಾಗಿದೆ. ಮನೆಯಲ್ಲಿದ್ದ 19 ಗ್ರಾಂ ತೂಕದ ಚಿನ್ನದ ಆಭರಣ, 42 ಸಾವಿರ ನಗದು ಕಳ್ಳತನ ಮಾಡಲಾಗಿದ್ದು, ಉಪನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.
ವ್ಯಾನಿಟಿ ಬ್ಯಾಗ್‌ ಸಮೇತ ನಗ-ನಾಣ್ಯ ಕಳವು
 ಹುಬ್ಬಳ್ಳಿ: ಇಲ್ಲಿನ ವಿದ್ಯಾನಗರದ ನಿಸರ್ಗ ಲೇಔಟ್‌ನ ಟೈವಾಕ್‌ ಕ್ವಾರ್ಟರ್ಸ್‌ ಹಿಂದುಗಡೆಯ ಮನೆಯೊಂದರಲ್ಲಿ ಅಂದಾಜು 2.38 ಲಕ್ಷ ರೂ. ಮೌಲ್ಯದ ನಗ-ನಾಣ್ಯವನ್ನು ವ್ಯಾನಿಟಿ ಬ್ಯಾಗ್‌ ಸಮೇತ ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಮಹದೇವ ಎಫ್‌. ಅಂಗಡಿ ಎಂಬುವರ ಮನೆಯಲ್ಲಿ ನಗ-ನಾಣ್ಯವಿದ್ದ ಬ್ಯಾಗ್‌ ಕಳ್ಳತನವಾಗಿದೆ. ಗುರುವಾರ ಬೆಳಗಿನ ಜಾವ ಇವರ ಮನೆಯಲ್ಲಿದ್ದ ಸುಮಾರು 2.13 ಲಕ್ಷ ರೂ. ಮೌಲ್ಯದ 71 ಗ್ರಾಂ ಚಿನ್ನಾಭರಣ, 15,500 ರೂ. ಕಿಮ್ಮತ್ತಿನ 205 ಗ್ರಾಂ ಬೆಳ್ಳಿ ಸಾಮಗ್ರಿ ಹಾಗೂ 10 ಸಾವಿರ ರೂ. ನಗದು ಕಳುವು ಆಗಿದೆ. ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement

Udayavani is now on Telegram. Click here to join our channel and stay updated with the latest news.

Next