Advertisement

ವಿಧವಾ-ವೃದ್ಧಾಪ್ಯ ಪಿಂಚಣಿಗೆ ಪರದಾಡುತ್ತಿರುವ ವೃದ್ಧೆ

11:14 AM May 19, 2018 | |

ವಾಡಿ: ಗಂಡನ ಮರಣ ಪ್ರಮಾಣಪತ್ರ ಹಿಡಿದು ಕಳೆದ ಒಂದು ವರ್ಷದಿಂದ ವಿಧವಾ ಮತ್ತು ವೃದ್ಧಾಪ್ಯ ಪಿಂಚಣಿಗಾಗಿ ತಹಶೀಲ್ದಾರ ಕಚೇರಿಗೆ ಅಲೆದರೂ ಈ ವೃದ್ಧೆಯ ಮಾಸಾಶನ ಅರ್ಜಿ ಸ್ವೀಕಾರಗೊಳ್ಳುತ್ತಿಲ್ಲ. ಸಂಬಂಧಿಕರ ಆಸರೆಯಿಲ್ಲದ ಈ ಹಿರಿಯ ಜೀವ, ಕಾಗದಗಳನ್ನು ಹಿಡಿದು ಸರಕಾರಿ ಕಚೇರಿಗಳಿಗೆ ಅಲೆದು ಹೈರಾಣಾಗುತ್ತಿದೆ.

Advertisement

ನಾಲವಾರ ನಾಡಕಚೇರಿ ವ್ಯಾಪ್ತಿಯ ರಾಜೋಳಾ ಗ್ರಾಮದ ಪಾರಮ್ಮಾ ದ್ಯಾವಣ್ಣ ಎನ್ನುವ ವಿಧವೆ ಪಿಂಚಿಣಿಗಾಗಿ ನಾಲವಾರ ಉಪ ತಹಶೀಲ್ದಾರ ಕಚೇರಿಗೆ ಹೋಗಿ ಐದಾರು ಸಲ ಅಗತ್ಯ ದಾಖಲಾತಿ ಸಲ್ಲಿಸಿದರೂ ಈಕೆಯ ಅರ್ಜಿತಿರಸ್ಕಾರಗೊಳ್ಳುತ್ತಿದೆ. ಇದು ವೃದ್ಧೆಯ ಗೋಳಾಟಕ್ಕೆ ಕಾರಣವಾಗಿದೆ. 

ಪತಿಯ ಮರಣ ಪ್ರಮಾಣಪತ್ರ, ಪಡಿತರ ಚೀಟಿ, ವಾಸಸ್ಥಳ ಪತ್ರ, ಆಧಾರ್‌ ಕಾರ್ಡ್‌, ನೋಟರಿ ಮಾಡಿಸಿದ ಸ್ಟ್ಯಾಂಪ್‌ ಪತ್ರ ಹೀಗೆ ಅಗತ್ಯವಿರುವ ಎಲ್ಲ ದಾಖಲಾತಿಗಳನ್ನು ಹೊತ್ತು ತಿಂಗಳಿಗೊಮ್ಮೆ ನಾಡಕಚೇರಿಗೆ ಬರುತ್ತಿರುವ ಈ ವೃದ್ಧ ವಿಧವೆ ಮಹಿಳೆ ಅರ್ಜಿ ಸಲ್ಲಿಸಲಾಗದೆ ಪರದಾಡುತ್ತಿದ್ದಾಳೆ.
 
ಮಕ್ಕಳಿಲ್ಲದ ನನಗೆ ನನ್ನ ಪತಿ ದ್ಯಾವಣ್ಣನೇ ಗತಿಯಾಗಿದ್ದರು. 18 ತಿಂಗಳ ಹಿಂದೆ ಪತಿ ತೀರಿಕೊಂಡರು. ಸಂಬಂಧಿಕರು
ಇದ್ದೂ ಇಲ್ಲದಂತಿದ್ದಾರೆ. ನಾನೀಗ ಒಬ್ಬಂಟಿಯಾಗಿದ್ದೇನೆ. ರಾಜೋಳಾ ಗ್ರಾಮದ ಚಪ್ಪರದ ಮನೆಯಲ್ಲಿ ವಾಸವಿದ್ದೇನೆ. ಕೃಷಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದೇನೆ.
 
ಅನ್ನಭಾಗ್ಯ ಯೋಜನೆಯಿಂದ ಉಚಿತವಾಗಿ ಬರುವ 5 ಕೆ.ಜಿ ಅಕ್ಕಿ, 2 ಕೆ.ಜಿ ಗೋಧಿ ತಿಂಗಳ ಗಂಜಿಯಾಗಿದೆ. ವಿಧವಾ ವೇತನಕ್ಕೆ ಅರ್ಜಿ ಸಲ್ಲಿಸಿದರೆ ಪ್ರತಿ ತಿಂಗಳು ಪಿಂಚಣಿ ಬರುತ್ತದೆ ಎಂದು ಗೆಳತಿ ಶರಣಮ್ಮ ಪೂಜಾರಿ ಹೇಳಿದ್ದರಿಂದ ಆಕೆಯೊಂದಿಗೆ ವರ್ಷದಿಂದ ತಹಶೀಲ್ದಾರ ಕಚೇರಿಗೆ ಅಲೆಯುತ್ತಿದ್ದೇನೆ. 

ಎರಡು ಸಲ ಅರ್ಜಿ ಸಲ್ಲಿಸಿದ್ದೇನೆ. ಅವು ತಿರಸ್ಕಾರಗೊಂಡಿವೆ. ಈಗ ಮತ್ತೆ ಅರ್ಜಿ ಸಲ್ಲಿಸಲು ಹೇಳುತ್ತಿದ್ದಾರೆ. ಅರ್ಜಿ ಕೊಡಲು ಬಂದಿದ್ದೇನೆ. ಚುನಾವಣೆ ನೀತಿಸಂಹಿತೆ ಜಾರಿಯಲ್ಲಿದೆ. ಜೂ.1ಕ್ಕೆ ಬನ್ನಿ ಎಂದು ಇಲ್ಲಿನ ಸಿಬ್ಬಂದಿ ಹೇಳುತ್ತಿದ್ದಾರೆ. ರಾಜೋಳಾದಿಂದ ನಾಲವಾರ ನಾಡಕಚೇರಿ ಮತ್ತು ರಾಜೋಳಾದಿಂದ ಚಿತ್ತಾಪುರಕ್ಕೆ ತಿರುಗಾಡಿ ಬೇಸತ್ತಿದ್ದೇನೆ. ನನ್ನ ಸಮಸ್ಯೆ ಯಾರೂ ಕೇಳುತ್ತಿಲ್ಲ ಎಂದು ವಿಧವೆ ಪಾರಮ್ಮಾ ತನ್ನ ಗೋಳು ಹೇಳಿಕೊಂಡರು. 

ಸಂಧ್ಯಾ ಸುರಕ್ಷಾ ಯೋಜನೆ ಜಾರಿಗೆ ಬಂದಿದ್ದೇ ಅರ್ಹ ಫಲಾನುಭವಿಗಳಿಗೆ ಪಿಂಚಣಿ ಸೌಲಭ್ಯ ಒದಗಿಸಲೆಂದು. ಬಡ
ವೃದ್ಧ ಮಹಿಳೆಯರು ಅರ್ಜಿ ಸಲ್ಲಿಸಲು ವರ್ಷಾನುಗಟ್ಟಲೇ ಕಚೇರಿಗೆ ಅಲೆದರೂ ಒಂದು ಅರ್ಜಿ ಸ್ವೀಕೃತಿ ಆಗದಿರುವುದು
ತಾಲೂಕಿನ ಬೇಜವಾಬ್ದಾರಿ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ.

Advertisement

ಮಡಿವಾಳಪ್ಪ ಹೇರೂರ

Advertisement

Udayavani is now on Telegram. Click here to join our channel and stay updated with the latest news.

Next