Advertisement

“ಮಾದಕವಸ್ತುಗಳ ಮಾರಾಟ ವಿರುದ್ಧ ಕಠಿನ ಕಾನೂನು ಜಾರಿ ಅಗತ್ಯ’

10:27 PM Mar 17, 2021 | Team Udayavani |

ದೇರಳಕಟ್ಟೆ: ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸುತ್ತಿರುವ ಮಾದಕ ಪದಾರ್ಥಗಳ ದಂಧೆಕೋರರು ಡಾರ್ಕ್‌ನೆಟ್‌ ಅನ್ನುವ ವೆಬ್‌ಸೈಟ್‌ ಮೂಲಕ ದಂಧೆ ಆರಂಭಿಸಿದ್ದಾರೆ. ಕೊರಿಯರ್‌ ಮೂಲಕ ಪಾರ್ಸೆಲ್‌ ತರಿಸಿ ವ್ಯವಹಾರಗಳು ನಡೆಯುತ್ತಿವೆ.

Advertisement

ಇದಕ್ಕೆ ಇತ್ತೀಚೆಗೆ ನೆದರ್‌ಲ್ಯಾಂಡ್‌ನಿಂದ ಉಡುಪಿಗೆ ಕೊರಿಯರ್‌ ಮುಖೇನ ಮಾದಕ ಪದಾರ್ಥ ಪಾರ್ಸೆಲ್‌ ಮಾಡಿರುವುದು ಉದಾಹರಣೆಯಾಗಿದೆ ಎಂದು ಮಂಗಳೂರು ದಕ್ಷಿಣ ಪೊಲೀಸ್‌ ಸಹಾಯಕ ಆಯುಕ್ತ ರಂಜಿತ್‌ ಬಂಡಾರು ಹೇಳಿದರು.
ನಿಟ್ಟೆ ವಿವಿ ಕೆ.ಎಸ್‌. ಹೆಗ್ಡೆ ವೈದ್ಯಕೀಯ ಅಕಾಡೆಮಿಯ ಮನೋವೈದ್ಯಕೀಯ ಶಾಸ್ತ್ರ ವಿಭಾಗದ ಆಶ್ರಯದಲ್ಲಿ ದೇರಳಕಟ್ಟೆ ಆವಿಷ್ಕಾರ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾದ “ಹೋಲಿಸ್ಟಿಕ್‌ ಮ್ಯಾನೇಜ್‌ಮೆಂಟ್‌ ಆಫ್‌ ಸಬ್‌ಸ್ಟೆನ್ಸ್‌ ಯೂಸ್‌ ಡಿಸಾರ್ಡರ್ಸ್‌ ‘ ಅನ್ನುವ ವಿಚಾರದ ಕುರಿತು ಆಯೋಜಿಸಲಾದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ನಿರಂತರ ಕಾರ್ಯಾಚರಣೆ
ಮಾದಕ ವಸ್ತುಗಳು ಪೊಲೀಸ್‌ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರಕರಣಗಳಿಗೆ ಇಲಾಖೆ ಹೆಚ್ಚಿನ ಗಮನ ನೀಡುತಿದ್ದರೂ ಪ್ರಕರಣಗಳು ಹೆಚ್ಚುತ್ತಿವೆ. ಮಂಗಳೂರು ಕಮೀಷನರೆಟ್‌ ವ್ಯಾಪ್ತಿಯಲ್ಲಿ ಮಾದಕ ವ್ಯಸನಗಳ ಕುರಿತ ಪರಿಣಾಮಕಾರಿ ಕಾರ್ಯಾಚರಣೆಗಳು ನಡೆಯುತ್ತಿವೆ. ಡ್ರಗ್‌ ಪೆಡ್ಲರ್ಸ್‌ ಮತ್ತು ಖರೀದಿದಾರರ ವಿರುದ್ಧ ಇಲಾಖೆ ನಿರಂತರ ಕಾರ್ಯಾಚರಣೆ ಕೈಗೊಳ್ಳುತ್ತಲೇ ಇದೆ. ಮಾದಕ ವಸ್ತುಗಳ ಸೇವನೆ ನಡೆಸುವವರೇ ಹೆಚ್ಚಾಗಿ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಪ್ರತಿಯೊಂದು ಅಪರಾಧಿಯನ್ನು ಪರೀಕ್ಷಿಸುವಾಗ ಮಾದಕ ವ್ಯಸನ ಸೇವನೆ ಪಾಸಿಟಿವ್‌ ವರದಿ ಬರುತ್ತಿದೆ. ಹೆಚ್ಚಾಗಿ 16-30ರ ಹರೆಯದವರೆ ಇಂತಹ ಕೃತ್ಯಗಳಲ್ಲಿ ತೊಡಗಿಸುತ್ತಿರುವುದರಿಂದ ಅಮೂಲ್ಯವಾದ ಮಾನವ ಸಂಪನ್ಮೂಲ ಗಳನ್ನೇ ಕಳೆದುಕೊಳ್ಳುತ್ತಿದ್ದೇವೆ ಎಂದರು.

ಬೇರೆ ರಾಜ್ಯದಿಂದ ಮಾದಕ ಪದಾರ್ಥ ಸಾಗಾಟ
ಕಾಶ್ಮೀರಕ್ಕೆ ಹೆರೋಯಿನ್‌, ಕೊಕೈನ್‌ನಂತಹ ಮಾದಕ ಪದಾರ್ಥಗಳು ಪಾಕಿ ಸ್ಥಾನದಿಂದ ಬಂದರೆ, ಮಂಗಳೂರು ಮತ್ತು ಕೇರಳ ಭಾಗಕ್ಕೆ ಆಂಧ್ರಪ್ರದೇಶದಿಂದ ಮಾದಕ ಪದಾರ್ಥಗಳ ಸಾಗಾಟ ನಡೆಯು ತ್ತಿವೆ. ಈ ಬಗ್ಗೆ ಖಚಿತ ಮಾಹಿತಿಯಂತೆ ಮಂಗಳೂರು ಪೊಲೀಸರು ಇತ್ತೀಚೆಗೆ ಗುಂಡ್ಯ ಭಾಗದಲ್ಲಿ ಕಾರ್ಯಾಚರಣೆಗೆ ಇಳಿದರೂ, ಅದು ಯಶಸ್ವಿಯಾಗಲಿಲ್ಲ. ಆದರೂ ಕಾರ್ಯಚರಣೆ ನಿರಂತರವಾಗಿದೆ. ಕಾನೂನುಗಳ ತೊಡಕಿನಿಂದ ಅಪರಾ ಧಗಳು ಶಿಕ್ಷೆಯಿಂದ ಹೊರಬರುತ್ತಿದ್ದಾರೆ. ಆರೋಪಿತನ ಬಂಧನದ ವೇಳೆ ಹಲವು ನಿಯಮಾವಳಿಗಳನ್ನು ಪಾಲಿಸಲು ಪೊಲೀಸರಿಗೆ ಸಾಧ್ಯವಾಗದ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ಬಿಡುಗಡೆಗೊಂಡು ಮತ್ತೆ ಅಂತಹ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಆಘಾತಕಾರಿ. ಜಿಲ್ಲೆಯ ಕೆಲವು ಮೆಡಿಕಲ್‌ ಸ್ಟೋರ್‌ಗಳಲ್ಲಿಯೂ ಕೋಡ್‌ವರ್ಡ್‌ ಮೂಲಕ ಮಾದಕ ಪದಾರ್ಥಗಳ ಮಾರಾಟ ನಡೆಯುತ್ತಿದೆ ಎಂದರು.
ಇತ್ತೀಚೆಗೆ ಮಂಗಳೂರಿನಲ್ಲಿ 16ರ ಹರೆಯದ ಯುವಕನಿಗೆ ಮೆಡಿಕಲ್‌ನಿಂದ ನೈಟ್ರೋವಿಟ್‌ ಗುಳಿಗೆಯನ್ನು ನೀಡಿ ಪೊಲೀಸ್‌ ಪೇದೆಯೊಬ್ಬರ ಕೊಲೆಗೆ ಯತ್ನಿಸಲಾಗಿತ್ತು ಎಂದರು.

ಈ ಸಂದರ್ಭ ಮನೋವೈದ್ಯಕೀಯ ಶಾಸ್ತ್ರ ವಿಭಾಗ ಮುಖ್ಯಸ್ಥ ಡಾ| ಶ್ರೀನಿವಾಸ್‌ ಭಟ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

ಮಾದಕ ವ್ಯಸನಿಗಳಿಗೆ ಕೌನ್ಸೆಲಿಂಗ್‌ ಅಗತ್ಯ
ನಿಟ್ಟೆ ಫೋರಾನ್ಸಿಕ್‌ ವಿಭಾಗದ ಮುಖ್ಯಸ್ಥ ಡಾ| ಮಹಾಬಲೇಶ್‌ ಹೆಗ್ಡೆ ಮಾತನಾಡಿ, ದೇಶದಲ್ಲಿ ನಾರ್ಕೊ ಟೆರರಿಸಂ ಅಪಾಯಕಾರಿಯಾದ ಬೆಳವಣಿಗೆಯಾಗಿದೆ. ಜಾಗತಿಕವಾಗಿ ಇದು ಬಹಳಷ್ಟು ಪರಿಣಾಮವನ್ನು ಬೀರುತ್ತಿದೆ. ಶೇ.80 ಕಾನೂನುಬಾಹಿರ ಮಾದಕ ಪದಾರ್ಥಗಳಿದ್ದರೆ, ಶೇ.20 ಕಾನೂನುಬದ್ಧ ಪದಾರ್ಥಗಳು ಇವೆ. ಇದರಿಂದಾಗಿ ಮಾದಕ ವ್ಯಸನಗಳ ವಿರುದ್ಧ ಕಠಿನ ಕಾನೂನು ಜಾರಿಯಾಗುತ್ತಿಲ್ಲ. ಪೊಲೀಸರಿಗೂ ಕ್ರಮ ಕಷ್ಟಸಾಧ್ಯವಾಗುತ್ತಿದೆ ಎಂದರು. ವಿದ್ಯಾರ್ಥಿಗಳು ಅಮಲು ಪದಾರ್ಥಗಳ ಚಟಕ್ಕೆ ಒಳಗಾಗುವವರನ್ನು ಅಪರಾಧಿ ಎಂದು ಬಿಂಬಿಸುವುದರ ಬದಲು ಅವರಿಗೆ ಮನಪರಿವರ್ತನೆಗೆ ಕೌನ್ಸೆಲಿಂಗ್‌ ಒಳಪಡಿಸುವ ಅನಿವಾರ್ಯವಿದೆ. ಈ ಕುರಿತು ಯುಜಿಸಿಗೂ ಪತ್ರವನ್ನು ಬರೆದಿರುವೆ ಎಂದ ಅವರು ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟು, ಬೀದಿ ಸೇದುವವರಿಗಾಗಿ ಜಾರಿಯಾಗಿರುವ ಕೋಟಾ³ ಕಾಯ್ದೆ ಮಂಗಳೂರಿನಲ್ಲಿ ಉತ್ತಮವಾಗಿ ಜಾರಿಯಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next