Advertisement

ಅನಧಿಕೃತ ಪತ್ರಕರ್ತರ ವಿರುದ್ಧ ಕಠಿಣ ಕ್ರಮ

03:28 PM Aug 05, 2022 | Team Udayavani |

ಬೆಳಗಾವಿ: ಯೂಟ್ಯೂಬ್‌ ಚಾನೆಲ್‌ ಮತ್ತು ಅನ ಧಿಕೃತ ಪತ್ರಕರ್ತರ ಹಾವಳಿ ಹೆಚ್ಚಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ವಾರ್ತಾ ಇಲಾಖೆಯ ಪಟ್ಟಿಯಲ್ಲಿರುವ ಮಾಧ್ಯಮ ಸಂಸ್ಥೆಗಳಿಂದ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೆ ಮಾತ್ರ ಜಿಲ್ಲಾಡಳಿತದಿಂದ ಗುರುತಿನ ಚೀಟಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ತಿಳಿಸಿದರು. ‌

Advertisement

ಅನಧಿಕೃತ ಪತ್ರಕರ್ತರ ಹಾವಳಿ ಹಾಗೂ ಪ್ರೆಸ್ ಹೆಸರು ದುರ್ಬಳಕೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಾಧ್ಯಮ ಪ್ರತಿನಿಧಿಗಳ ಜತೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಾಧ್ಯಮ ಸಂಸ್ಥೆಗಳು ನೀಡುವ ಶಿಫಾರಸು ಪತ್ರ ಆಧರಿಸಿ ಆ ಸಂಸ್ಥೆಯ ವರದಿಗಾರರಿಗೆ ಜಿಲ್ಲಾಡಳಿತ ವತಿಯಿಂದ ಗುರುತಿನ ಚೀಟಿ ನೀಡಲಾಗುವುದು. ಸರ್ಕಾರಿ ಕಾರ್ಯಕ್ರಮಗಳಿಗೆ ಹಾಗೂ ಸಭೆ-ಸಮಾರಂಭಗಳಿಗೆ ಅಂಥವರಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು. ಈ ಬಗ್ಗೆ ಎಲ್ಲ ಇಲಾಖೆಗಳಿಗೂ ಮಾಹಿತಿ ನೀಡಲಾಗುವುದು. ಮಾಧ್ಯಮ ಸಂಸ್ಥೆಗಳೂ ಈ ಕುರಿತು ಜಾಗೃತಿ ಮೂಡಿಸಬೇಕು ಎಂದರು.

ಜಿಲ್ಲೆಯಲ್ಲಿರುವ ಮಾಧ್ಯಮ ಸಂಸ್ಥೆಗಳು ತಮ್ಮ ಸಂಸ್ಥೆಯ ವರದಿಗಾರರ ಹೆಸರು, ಗುರುತಿನ ಚೀಟಿ ಮತ್ತಿತರ ವಿವರವನ್ನು ಒಂದು ವಾರದೊಳಗೆ ವಾರ್ತಾ ಇಲಾಖೆಗೆ ಕಳುಹಿಸಿಕೊಟ್ಟರೆ ಅಂತಹವರಿಗೆ ಗುರುತಿನ ಚೀಟಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಅಧಿಕೃತ ಮಾಧ್ಯಮಗಳ ಪ್ರತಿನಿ ಧಿಗಳಿಗೆ ಗುರುತಿನ ಚೀಟಿ ನೀಡಲಾಗುವುದು. ಮಾಧ್ಯಮ ಪ್ರತಿನಿಧಿಗಳೂ ಎಲ್ಲರಿಗೆ ಕಾಣಿಸುವಂತೆ ಇವುಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ಈಗಾಗಲೇ ವಾರ್ತಾ ಇಲಾಖೆಯ ಮಾನ್ಯತಾ ಕಾರ್ಡು ಹೊಂದಿದವರಿಗೆ ಜಿಲ್ಲಾಡಳಿತದಿಂದ ಗುರುತಿನ ಚೀಟಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

Advertisement

ಅನಧಿಕೃತ ಪತ್ರಕರ್ತರು ಸರ್ಕಾರಿ ಕಚೇರಿಗಳಿಗೆ ತೆರಳಿ ಅಧಿಕಾರಿಗಳಿಗೆ ಕಿರುಕುಳ ನೀಡುವ ಪ್ರಕರಣ ಕಂಡುಬಂದರೆ ತಕ್ಷಣವೇ ತಮಗೆ ಅಥವಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ನೇರವಾಗಿ ಮಾಹಿತಿ ನೀಡಬಹುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವರಿಗೆ ಮಾತ್ರ ಗುರುತಿನಚೀಟಿ: ಬೆಳಗಾವಿ ನಗರ ಪೊಲೀಸ್‌ ಆಯುಕ್ತ ಡಾ| ಎಂ.ಬಿ. ಬೋರಲಿಂಗಯ್ಯ ಮಾತನಾಡಿ, ಸುದ್ದಿ ಸಂಗ್ರಹಕ್ಕಾಗಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಮಾತ್ರ ಜಿಲ್ಲಾಡಳಿತದಿಂದ ಗುರುತಿನ ಚೀಟಿ ನೀಡಲಾಗುವುದು. ಆಯಾ ಸಂಸ್ಥೆಯ ಒಳಗಡೆ ಕೆಲಸ ಮಾಡುವವರಿಗೆ ಇದರ ಅಗತ್ಯವಿರುವುದಿಲ್ಲ ಎಂದು ತಿಳಿಸಿದರು.

ಎಸ್‌ಪಿ ಡಾ| ಸಂಜೀವ ಪಾಟೀಲ ಮಾತನಾಡಿ, ಅಧಿಕೃತ ಪತ್ರಕರ್ತರ ಪಟ್ಟಿಯನ್ನು ಆಧಾರವಾಗಿಟ್ಟುಕೊಂಡು ಗುರುತಿನ ಚೀಟಿ ನೀಡಲು ಕ್ರಮ ಕೈಗೊಳ್ಳಲಾಗುವುದು. ಯಾವುದೇ ಮಾಧ್ಯಮ ಸಂಸ್ಥೆಯ ಶಿಫಾರಸ್ಸು ಪತ್ರ ಬಳಸಿಕೊಂಡು ಗುರುತಿನ ಚೀಟಿ ಪಡೆಯುವ ವರದಿಗಾರರು ತಮ್ಮ ಖಾಸಗಿ ಯೂಟ್ಯೂಬ್‌ ಚಾನೆಲ್‌ಗ‌ಳಿಗೆ ಕೆಲಸ ಮಾಡಿದರೆ ಅದಕ್ಕೆ ಆಯಾ ಸಂಸ್ಥೆಯ ಹೊಣೆಗಾರಿಕೆ ಇರುತ್ತದೆ. ವರದಿಗಾರರು ಕೆಲಸ ಬಿಟ್ಟಾಗ ಅದನ್ನು ತಕ್ಷಣವೇ ವಾರ್ತಾ ಇಲಾಖೆಗೆ ತಿಳಿಸಬೇಕು ಎಂದು ಹೇಳಿದರು.

ಸಲಹೆಗಳನ್ನು ನೀಡಿದ ಮಾಧ್ಯಮ ಪ್ರತಿನಿಗಳು, ಸ್ವಯಂಘೋಷಿತ ಮಾಧ್ಯಮವಾಗಿರುವ ಯೂಟ್ಯೂಬ್‌ ಚಾನೆಲ್‌ಗ‌ಳು ಮತ್ತು ನಕಲಿ ಪತ್ರಕರ್ತರ ಹಾವಳಿ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒಕ್ಕೊರಲಿನಿಂದ ಒತ್ತಾಯಿಸಿದರು.

ಪತ್ರಕರ್ತರಾದ ರಾಜು ಗವಳಿ, ರಾಜಶೇಖರ ಪಾಟೀಲ, ಚಂದ್ರು ಶ್ರೀರಾಮುಡು, ಸಹದೇವ್‌ ಮಾನೆ, ಮಹಾಂತೇಶ ಕುರಬೇಟ, ಮೆಹಬೂಬ್‌ ಮಕಾನದಾರ, ಶ್ರೀಶೈಲ ಮಠದ, ಸಂತೋಷ ಶ್ರೀರಾಮುಡು, ರಾಜಶೇಖರ ಹಿರೇಮಠ, ಜಗದೀಶ ವಿರಕ್ತಮಠ, ಮಂಜುನಾಥ ಪಾಟೀಲ, ಶ್ರೀಧರ ಕೋಟಾರಗಸ್ತಿ ಮಾತನಾಡಿ, ಯೂಟ್ಯೂಬ್‌ ಚಾನೆಲ್‌ ಮಾಡಿಕೊಂಡು ಎಲ್ಲರೂ ಸ್ವಯಂಘೋಷಿತ ಪತ್ರಕರ್ತರಾಗುತ್ತಿದ್ದಾರೆ. ಇದರಿಂದ ಮಾಧ್ಯಮಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಬ್ಲ್ಯಾಕ್ ಮೇಲ್‌ ಮಾಡಿದರೆ ಪ್ರಕರಣ ದಾಖಲಿಸಿ: ಅಸಲಿ-ನಕಲಿ ಯಾರೇ ಇದ್ದರೂ ಎಲ್ಲರ ವಿರುದ್ಧ ಮುಲಾಜಿಲ್ಲದೇ ಪ್ರಕರಣ ದಾಖಲಿಸಬೇಕು. ಪಿಡಿಒ ಸೇರಿದಂತೆ ಯಾವುದೇ ಸರ್ಕಾರಿ ಅಧಿಕಾರಿಗಳಿಗೆ ಬ್ಲ್ಯಾಕ್ ಮೇಲ್‌ ಮಾಡಿದರೆ ತಕ್ಷಣವೇ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು. ಎಲ್ಲ ಇಲಾಖೆಯ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಬೇಕು. ಅಧಿಕೃತ ಮಾಧ್ಯಮ ಸಂಸ್ಥೆಗಳ ಪಟ್ಟಿಯನ್ನು ಎಲ್ಲ ಕಚೇರಿಗೆ ಕಳುಹಿಸಬೇಕು. ಇದರಿಂದ ನಕಲಿ ಪತ್ರಕರ್ತರ ಹಾವಳಿ ತಡೆಗಟ್ಟಬಹುದು ಎಂದು ಸಲಹೆ ನೀಡಿದರು.‌

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಗುರುನಾಥ ಕಡಬೂರ ಪ್ರಾಸ್ತಾವಿಕವಾಗಿ ಮಾತನಾಡಿ, ವಾರ್ತಾ ಇಲಾಖೆಯಿಂದ ಈಗಾಗಲೇ ನೀಡಲಾಗುತ್ತಿರುವ ಮಾನ್ಯತಾ ಕಾರ್ಡುಗಳ ಕುರಿತು ಮಾಹಿತಿ ನೀಡಿದರು. ಎಲ್ಲ ಮುದ್ರಣ, ಎಲೆಕ್ಟಾÅನಿಕ್‌ ಮಾಧ್ಯಮಗಳ ವರದಿಗಾರರು, ಛಾಯಾಗ್ರಾಹಕರು ಇದ್ದರು.

ತಾಲೂಕು ವರದಿಗಾರರಿಗೂ ಗುರುತಿನ ಚೀಟಿ

ವಾರ್ತಾ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಮಾಧ್ಯಮ ಸಂಸ್ಥೆಗಳ ತಾಲೂಕು ಮಟ್ಟದ ವರದಿಗಾರರಿಗೆ ಅವರು ಪ್ರತಿನಿ ಧಿಸುವ ಮಾಧ್ಯಮ ಸಂಸ್ಥೆಯ ಶಿಫಾರಸು ಆಧರಿಸಿ ತಹಶೀಲ್ದಾರರು ಮತ್ತು ವಾರ್ತಾ ಇಲಾಖೆಯ ಮೂಲಕವೇ ಗುರುತಿನ ಚೀಟಿ ವಿತರಿಸಲಾಗುವುದು. ಆಯಾ ತಾಲೂಕುಗಳ ವರದಿಗಾರರಿಗೆ ನೀಡಲಾದ ಗುರುತಿನ ಚೀಟಿ ಆಯಾ ತಾಲೂಕಿನ ವ್ಯಾಪ್ತಿಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಸ್ಪಷ್ಟಪಡಿಸಿದರು.

ಜಿಲ್ಲೆಯಲ್ಲಿ ಸಾವಿರಾರು ಯೂಟ್ಯೂಬ್‌ ಚಾನೆಲ್‌

ಜಿಮೇಲ್‌ ಐಡಿ ಇರುವವರು ಯೂಟ್ಯೂಬ್‌ ಚಾನೆಲ್‌ ಮಾಡಬಹುದು. ಇದನ್ನು ಬಳಸಿಕೊಂಡು ಜಿಲ್ಲೆಯಲ್ಲಿ ಸಾವಿರಾರು ಇಂತಹ ಚಾನೆಲ್‌ಗ‌ಳು ಕಾರ್ಯನಿರ್ವಹಿಸುತ್ತಿವೆ. ಇಂಥವುಗಳಿಗೆ ಕಡಿವಾಣ ಹಾಕಬೇಕಿದೆ. ಅನಧಿಕೃತವಾಗಿ ವಾಹನಗಳ ಮೇಲೆ ಬಳಸುತ್ತಿರುವ ಪ್ರಸ್‌ ಸ್ಟಿಕ್ಕರ್‌ ತೆರವು ಹಾಗೂ ನಕಲಿ ಪತ್ರಕರ್ತರ ಹಾವಳಿ ತಡೆಗೆ ಜಿಲ್ಲಾಡಳಿತ, ಪೊಲೀಸ್‌ ಇಲಾಖೆ ತೆಗೆದುಕೊಳ್ಳುವ ಎಲ್ಲ ಕ್ರಮಗಳಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಮಾಧ್ಯಮ ಪ್ರತಿನಿಧಿಗಳು ಭರವಸೆ ನೀಡಿದರು.

ಯೂಟ್ಯೂಬ್‌ ಚಾನೆಲ್‌ಗ‌ಳಿಗೆ ಅವಕಾಶವಿಲ್ಲ

ಯೂಟ್ಯೂಬ್‌ ಚಾನೆಲ್‌ಗ‌ಳಿಗೆ ಹಾಗೂ ಸಾಮಾಜಿಕ ಜಾಲತಾಣಗಳಿಗೆ ಯಾವುದೇ ಕಾರಣಕ್ಕೂ ಗುರುತಿನ ಚೀಟಿ ನೀಡುವುದಿಲ್ಲ. ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಯಾವುದೇ ಸರ್ಕಾರಿ ಕಾರ್ಯಕ್ರಮಗಳಿಗೆ ಅಧಿಕೃತ ಮಾಧ್ಯಮ ಸಂಸ್ಥೆಗಳ ವರದಿಗಾರರಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next