Advertisement

ಬಿ.ಸಿ.ರೋಡ್‌-ಪಾಣೆಮಂಗಳೂರು ಹೆದ್ದಾರಿ : ಬೀದಿ ದೀಪಗಳಿದ್ದರೂ ಕತ್ತಲೆಯಲ್ಲೇ ಸಾಗಬೇಕಾದ ಸ್ಥಿತಿ

10:36 PM Jan 23, 2021 | Team Udayavani |

ಬಂಟ್ವಾಳ: ಸಾಮಾನ್ಯ ಹೆದ್ದಾರಿ, ಸೇತುವೆಗಳಲ್ಲಿ ಅಪಘಾತವನ್ನು ತಪ್ಪಿಸುವ ಉದ್ದೇಶ ಹಾಗೂ ಪಾದಚಾರಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಬೀದಿದೀಪಗಳನ್ನು ಅಳವಡಿ ಸಲಾಗುತ್ತದೆ. ಆದರೆ ಬಿ.ಸಿ.ರೋಡ್‌ನಿಂದ ಪಾಣೆ ಮಂಗಳೂರುವರೆಗೆ ಅಳವಡಿಸಲಾದ 61 ಬೃಹತ್‌ ಬೀದಿದೀಪಗಳಲ್ಲಿ ಯಾವುದೂ ಕೂಡ ಉರಿಯುತ್ತಿಲ್ಲ.!

Advertisement

ಬಿ.ಸಿ.ರೋಡ್‌-ಮಾಣಿ-ಉಪ್ಪಿನಂಗಡಿ ಹೆದ್ದಾರಿ ಯಲ್ಲಿ ನಿತ್ಯ ಸಾವಿರಾರು ವಾಹನಗಳು ತೆರಳುತ್ತಿದ್ದು, ರಾತ್ರಿ ಹೊತ್ತು ಕೂಡ ಹೆಚ್ಚಿನ ವಾಹನಗಳು ಎರಡೂ ದಿಕ್ಕಿನಿಂದಲೂ ಸಾಗುತ್ತವೆ. ವಾಹನ ಚಾಲಕರು/ಸವಾರರ ದುಡುಕು, ಬೆಳಕಿನ ಕೊರತೆಯ ಪರಿಣಾಮ ಸಾಕಷ್ಟು ಅಪಘಾತಗಳು ಸಂಭವಿಸಿವೆ. ಹೀಗಾಗಿ ಇಲ್ಲಿ ಬೆಳಕು ಅಗತ್ಯವಾಗಿದೆ.ಆದರೆ ಅದಕ್ಕಾಗಿ ಅಳವಡಿಸಿದ ಬೀದಿದೀಪ ಉರಿಯದೇ ಇರುವುದು ವಿಪರ್ಯಾಸ.

ಬಿ.ಸಿ.ರೋಡ್‌ನ‌ ನಾರಾಯಣ ಗುರು ವೃತ್ತದಿಂದ ಪಾಣೆಮಂಗಳೂರಿನ ಶ್ರೀ ಕಲ್ಲುರ್ಟಿ ಗುಡಿಯವರೆಗೆ ಹೆದ್ದಾರಿಗೆ ಸೂಕ್ತವೆನಿಸಿದ 61 ಬೀದಿದೀಪಗಳನ್ನು ಅಳವಡಿಸಲಾಗಿದೆ. ಆದರೆ ಪ್ರಸ್ತುತ ಅದರಲ್ಲಿ ಬೆರಳೆಣಿಕೆಯ ಬೀದಿದೀಪಗಳು ಉರಿಯುತ್ತಿದೆ. ಕೆಲವೊಂದು ಕೆಲವೊಮ್ಮೆ ಚಿಮಿಣಿ ದೀಪದಂತೆ ಉರಿಯುವುದು ಕಂಡುಬರುತ್ತದೆ.

ಬೀದಿದೀಪಗಳನ್ನು ಅಳವಡಿಸಿರುವ ಪ್ರದೇಶ ಬಂಟ್ವಾಳ ಪುರಸಭೆ ಹಾಗೂ ನರಿಕೊಂಬು ಗ್ರಾ.ಪಂ.ವ್ಯಾಪ್ತಿಗೆ ಬರುತ್ತಿದೆ. ಹೀಗಾಗಿ ಈ ಕುರಿತು ಹೊಂದಾಣಿಕೆಯಿಂದ ದೀಪಗಳ ದುರಸ್ತಿ ಕಾರ್ಯ ನಡೆಯಬೇಕಿದೆ.

2014ರಲ್ಲಿ ಬೀದಿದೀಪಗಳನ್ನು ಪುರಸಭೆಯ 10 ಲಕ್ಷ ರೂ.ಅನುದಾನದಲ್ಲಿ ದುರಸ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ಆ ಬಳಿಕ ನಿರ್ವಹಣೆಯೂ ನಡೆದಿಲ್ಲ. ದೀಪಗಳು ದುರಸ್ತಿಯಾಗದೇ ಇದ್ದರೆ ಮುಂದೊಂದು ದಿನ ಅದರ ಕಂಬಗಳು ಕೂಡ ಯಾರ್ಯಾರ ಪಾಲಾಗುವ ಸಾಧ್ಯತೆಯೂ ಇದೆ. ಹೀಗಾಗಿ ಅದಕ್ಕಿಂತ ಮುಂಚೆ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ದೀಪಗಳ ದುರಸ್ತಿಗೆ ಮುಂದಾಗಬೇಕಿದೆ.

Advertisement

ಸೇತುವೆಗೆ ದೀಪ ಅತೀ ಅಗತ್ಯ :

ಬಿ.ಸಿ.ರೋಡ್‌-ಪಾಣೆಮಂಗಳೂರು ಮಧ್ಯೆ ನೇತ್ರಾವತಿ ಸೇತುವೆಯೂ ಇದ್ದು, ಅದಕ್ಕೂ ಬೀದಿದೀಪಗಳು ಅಗತ್ಯವಾಗಿದೆ. ಸಾಮಾನ್ಯವಾಗಿ ಸೇತುವೆಗಳಲ್ಲಿ ವಾಹನಗಳು ನಿಕಟವಾಗಿ ಆಗುವುದು, ಪಾದಚಾರಿಗಳು ಸೀಮಿತ ಸ್ಥಳದಲ್ಲಿ ಸಾಗುವುದರಿಂದ ಬೆಳಕು ಬೇಕಾಗುತ್ತದೆ. ಈಗಾಗಲೇ ಹಲವು ಮಂದಿ ಇದೇ ಸೇತುವೆಯ ಮೂಲಕ ರಾತ್ರಿ ಹೊತ್ತು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸೂಕ್ತ ಬೆಳಕಿದ್ದಾಗ ಆತ್ಮಹತ್ಯೆಯ ಸಂಖ್ಯೆಗೂ ಕಡಿವಾಣ ಬೀಳುವ ಸಾಧ್ಯತೆ ಇರುತ್ತದೆ.

ಜತೆಗೆ ರಾತ್ರಿ ಹೊತ್ತು ಹೆದ್ದಾರಿ, ನದಿಗೆ ಕಸ ಹಾಕುವ ಘಟನೆಗಳು ಕೂಡ ನಡೆಯುತ್ತಿದ್ದು, ಇದರ ಮಧ್ಯೆ ಒಂದು ಕಡೆ ಕಸ ಕೂಡ ರಾಶಿ ಬಿದ್ದುಕೊಂಡಿದೆ. ಹೀಗಾಗಿ ಅದರ ನಿಯಂತ್ರಣಕ್ಕೂ ಇದು ಪೂರಕವಾಗಲಿದೆ.

ಸಂಪೂರ್ಣ ಶಿಥಿಲಗೊಂಡಿದೆ :

ಬೀದಿದೀಪಗಳನ್ನು ಅಳವಡಿಸಿದ ಬೃಹತ್‌ ಕಂಬಗಳು ಸರಿಯಾಗಿದೆ. ಆದರೆ ಬಹುತೇಕ ಕಂಬಗಳಲ್ಲಿ ಮೇಲಿರುವ ದೀಪಗಳು ಸಂಪೂರ್ಣ ಶಿಥಿಲಗೊಂಡಿವೆ. ಬಹುತೇಕ ದೀಪಗಳಲ್ಲಿ ಕೇವಲ ಅದರ ಪೆಟ್ಟಿಗೆಗಳು ಕಂಡುಬಂದರೆ ಇನ್ನು ಕೆಲವು ದೀಪಗಳಲ್ಲಿ ಬಲ್ಬ್ ಕೂಡ ಇಲ್ಲದಾಗಿದೆ. ಒಂದಷ್ಟು ಕಂಬಗಳಲ್ಲಿ ಪೆಟ್ಟಿಗೆ ಹಾಗೂ ದೀಪಗಳಲ್ಲದೆ ಬರೀ ಕಂಬ ಕಾಣುತ್ತಿದೆ.

ಮರಗಳ ರೆಂಬೆಗಳು ತುಂಬಿವೆ :

ಹಲವು ಬೀದಿದೀಪಗಳು ಹೆದ್ದಾರಿ ಬದಿಯ ಮರದ ರೆಂಬೆಗಳ ಮಧ್ಯದಲ್ಲಿದ್ದು, ಅವುಗಳು ಉರಿದರೂ ಬೆಳಕು ಕಾಣುವುದಿಲ್ಲ.  ಬಿ.ಸಿ.ರೋಡ್‌ ವೃತ್ತದ ಬಳಿ ಹಾಗೂ ಹಳೆ ಟೋಲ್‌ ಫ್ಲಾಝಾದ ಬಳಿ  ಇಂತಹ ಸಮಸ್ಯೆಗಳಿವೆ. ಬೆಳಕು ಸರಿಯಾಗಿ ಪಸರಿಸಲು ಬೇಕಾದ ಅಗತ್ಯ ಕೆಲಸಗಳನ್ನು ಮಾಡಬೇಕಾಗಿದೆ.

ಹೆದ್ದಾರಿಯಲ್ಲಿ ಅಪಘಾತಗಳನ್ನು ತಪ್ಪಿಸಲು ಬೀದಿದೀಪಗಳು ಅತಿ ಅಗತ್ಯವಾಗಿದೆ. ಇಲ್ಲಿ ಬೀದಿದೀಪ ಉರಿಯದೇ ಇರುವ ಕುರಿತು ಗಮನಕ್ಕೆ ಬಂದಿದೆ. 2014ರಲ್ಲಿ 10 ಲಕ್ಷ ರೂ.ಅನುದಾನದಲ್ಲಿ ಅವುಗಳನ್ನು ದುರಸ್ತಿ ಮಾಡಲಾಗಿತ್ತು. ಮುಂದೆ ಸಂಬಂಧಪಟ್ಟವರ ಗಮನಕ್ಕೆ ತಂದು ಬೀದಿದೀಪಗಳ ದುರಸ್ತಿಗೆ ಅನುದಾನವಿರಿಸುವ ಕಾರ್ಯ ಮಾಡಲಾಗುವುದು. -ಲೀನಾ ಬ್ರಿಟ್ಟೊ, ಮುಖ್ಯಾಧಿಕಾರಿ, ಬಂಟ್ವಾಳ ಪುರಸಭೆ.

Advertisement

Udayavani is now on Telegram. Click here to join our channel and stay updated with the latest news.

Next