ಚಿಕ್ಕೋಡಿ: ಮೈಮರೆತು ತಿರುಗಾಡುವುದು ಕೊರೊನಾಗೆ ಆಹ್ವಾನ ನೀಡಿದಂತೆ. ಕೊರೊನಾ ತಡೆಗಟ್ಟಲು ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ವಹಿಸಬೇಕು ಎಂದು ಚಿಕ್ಕೋಡಿ ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ ಕರೆ ನೀಡಿದರು.
ಚಿಕ್ಕೋಡಿ ಪುರಸಭೆ ಆವರಣದಲ್ಲಿ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಪರಿಷತ್ತು, ಬೆಳಗಾವಿಯ ವಿಕಾಸನ ಕೇಂದ್ರ ಹಾಗೂ ಪುರಸಭೆ ಚಿಕ್ಕೋಡಿ ಸಹಯೋಗದಲ್ಲಿ ಜರುಗಿದ ಕೋವಿಡ್ ಜಾಗೃತಿ ಬೀದಿನಾಟಕ ಅಭಿಯಾನಕ್ಕೆ ತಮಟೆ ಬಾರಿಸಿ ಚಾಲನೆ ನೀಡಿ, ಮಾತನಾಡಿದರು.
ಪುರಸಭೆ ಉಪಾಧ್ಯಕ್ಷ ಸಂಜಯ ಕವಟಗಿಮಠ ಮಾತನಾಡಿ, ಕೊರೊನಾ ಬಗ್ಗೆ ಭಯ ಬೇಡ. ಸಾಮಾಜಿಕ ಅಂತರ ಕಾಯ್ದುಕೊಂಡು ನಮ್ಮ ಜೀವ ರಕ್ಷಣೆ ಮಾಡಿಕೊಳ್ಳಲು ನಾವೇ ಎಚ್ಚರ ವಹಿಸುವುದು ಅತ್ಯಗತ್ಯವವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ| ವಿ.ವಿ. ಶಿಂಧೆ, ಆರೋಗ್ಯ ನಿರೀಕ್ಷಕ ಪಿ.ಕೆ.ಜಮಖಂಡಿ, ಕೆನರಾ ಬ್ಯಾಂಕ್ ಅಮೂಲ್ಯ ಸಾಕ್ಷರತಾ ತಾಲೂಕು ಕೌನ್ಸಿಲರ್ ವಿಜಯ ವಾಘಮಾರೆ, ಕಲಾತಂಡದ ಭರತ ಕಲಾಚಂದ್ರ, ಮಾರುತಿ ಕಾಮಗೌಡ, ಅಪ್ಪಾಸಾಬ ಚಿಮನೆ, ಮಾರುತಿ ಕಮತೆ, ಸಂತ್ರಾಮ ಮಯೂರ,ಪುಂಡಲೀಕ ನಾಯಿಕ, ಶಂಕರ ಖೋತ, ವಿಷ್ಣುಹಲಗೇಕರ, ಸಾವಿತ್ರಿ ಹಳಕಲ್, ಸುಜಾತಾ ಮಗದುಮ್ಮ ಇದ್ದರು.
ನಂತರ ಆಶಾದೀಪ ಕಲಾತಂಡದವರು ಹಾಡುಗಳ ಮುಖಾಂತರ ನೆರೆದ ಜನರಲ್ಲಿ ಅರಿವು ಮೂಡಿಸಿದರು. ಇದೇ ಸಂದರ್ಭದಲ್ಲಿ ಭಿತ್ತಿಪತ್ರ ಬಿಡುಗಡೆ ಮಾಡಿ ಸಾರ್ವಜನಿಕರಿಗೆ ವಿತರಿಸಲಾಯಿತು. ರಾಮನಗರ, ಕರೋಶಿ ಗ್ರಾಮದಲ್ಲಿಯೂ ಕೂಡ ಬೀದಿನಾಟಕ ಪ್ರಸ್ತುತಪಡಿಸಲಾಯಿತು.