Advertisement

ಜಿಲ್ಲೆಯಲ್ಲಿ ಮಿತಿ ಮೀರಿದ ಬೀದಿ ನಾಯಿಗಳ ಹಾವಳಿ

05:17 PM May 10, 2019 | Team Udayavani |

 ರಾಮನಗರ: ಮುಖ್ಯಮಂತ್ರಿ ಕುಮಾರಸ್ವಾಮಿ ತವರು ಕ್ಷೇತ್ರವಾಗಿರುವ ರಾಮನಗರ ಜಿಲ್ಲೆಯಲ್ಲಿ ಬೀದಿ ನಾಯಿಗಳ ಸಮಸ್ಯೆ ಮಿತಿಮೀರಿದೆ. 2018ರ ಜನವರಿಯಿಂದ ಡಿಸೆಂಬರ್‌ವರೆಗೆ ಜಿಲ್ಲೆಯಲ್ಲಿ 10,492 ಮಂದಿಗೆ ಬೀದಿ ನಾಯಿಗಳು ಕಚ್ಚಿ ಗಾಯ ಮಾಡಿವೆ ಎಂದು ಆರೋಗ್ಯ ಇಲಾಖೆ ಇತ್ತೀಚೆಗೆ ಸುದ್ದಿಗಾರರೊಂದಿಗೆ ನಡೆಸಿದ ಸಂವಾದದಲ್ಲಿ ಬಿಡುಗಡೆ ಮಾಡಿದ್ದು, ಆತಂಕ ಸ್ಥಿತಿಯನ್ನು ಜನರ ಮುಂದೆ ಬಿಚ್ಚಿಟ್ಟಿದೆ. ರಾಮನಗರ ತಾಲೂಕಿನಲ್ಲಿ 3,344 ಮಂದಿಗೆ, ಚನ್ನಪಟ್ಟಣದಲ್ಲಿ 2,027, ಕನಕಪರದಲ್ಲಿ 3,418 ಮತ್ತು ಮಾಗಡಿಯಲ್ಲಿ 1,703 ಮಂದಿಗೆ ಬೀದಿ ನಾಯಿಗಳು ಕಚ್ಚಿವೆ ಎಂದು ಆರೋಗ್ಯ ಇಲಾಖೆ ಅಧಿಕೃತ ಅಂಕಿ ಅಂಶಗಳನ್ನು ನೀಡಿದೆ.

Advertisement

2019ರ ಜನವರಿಯಿಂದ ಮಾರ್ಚ್‌ ಅಂತ್ಯದವರೆಗೆ ರಾಮನಗರದಲ್ಲಿ 199, ಚನ್ನಪಟ್ಟಣದಲ್ಲಿ 172, ಕನಕಪುರದಲ್ಲಿ 182 ಮತ್ತು ಮಾಗಡಿಯಲ್ಲಿ 191 ಮಂದಿ ಒಟ್ಟು 744 ಮಂದಿಗೆ ನಾಯಿ ಕಚ್ಚಿದ ಪ್ರಕರಣಗಳು ದಾಖಲಾಗಿರುವುದು ಈ ವರ್ಷದ
ಸಾಧನೆಯಂತಿದೆ.

ಸ್ಥಳೀಯ ಸಂಸ್ಥೆಗಳ ನಿರ್ಲಕ್ಷ: ಬೀದಿ ನಾಯಿಗಳ ಉಪಟಳ ಮಿತಿ ಮೀರುವ ಹಂತಕ್ಕೆ ತಲುಪಿದೆ. ಈ ಬಗ್ಗೆ ಜನಸಾಮಾನ್ಯರು ನಗರಸಭೆ, ಪುರಸಭೆ, ಗ್ರಾಮಪಂಚಾಯ್ತಿ ಸ್ಥಳೀಯ ಸಂಸ್ಥೆಗಳ ಗಮನ ಸೆಳೆದು ಮನವಿ ಮಾಡಿಕೊಂಡರು ಉಪಯೋಗವಾಗಿಲ್ಲ. ಬೀದಿ ನಾಯಿಗಳ
ಹಾವಳಿಯನ್ನು ನಿಯಂತ್ರಿಸಲು ನಗರ ಸ್ಥಳೀಯ ಸಂಸ್ಥೆಗಳು, ಆಯಾ ಗ್ರಾಪಂಗಳು ಸಂಪೂರ್ಣ ವಿಫ‌ಲವಾಗಿದೆ. ಸ್ಥಳೀಯ ಸಂಸ್ಥೆಗಳ ನಿರ್ಲಕ್ಷದಿಂದಾಗಿ ಸಾಮಾನ್ಯ ನಾಗರಿಕರು ಪರದಾಡುವಂತಾಗಿದೆ. ಬಹುತೇಕ ಎಲ್ಲಾ ಸಂಸ್ಥೆಗಳ ಅಧಿಕಾರಿಗಳು ಪ್ರಾಣಿದಯೆ ಹೋರಾಟದ ನೆಪವೊಡ್ಡಿ ಸುಮ್ಮನಾಗುತ್ತಿದ್ದು, ಸರಿಯಾದ ಕ್ರಮ ಜರುಗಿಸಲು ಮನಸ್ಸು ಮಾಡುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ನಾಯಿಗಳಿಂದ ಕಚ್ಚಿಸಿಕೊಂಡ ನಾಗರಿಕರು ರೇಬಿಸ್‌ ನಿರೋಧಕ ಚುಚ್ಚು ಮದ್ದಿಗೆ ದುಡ್ಡು ಕೊಟ್ಟು ಹೈರಾಣಾಗುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ದೊರೆಯಬೇಕಾದ ಸವಲತ್ತಿಗೆ ಅಲ್ಲೂ ಹಣ ಕೊಡಬೇಕಾದ ಪರಿಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ.

ನಾಯಿ, ಕೋತಿ ಹಾವಳಿ ತಪ್ಪಲಿ: ಬೇಸಿಗೆ ರಜೆ ಕಳೆದು ಇನ್ನೇನು ಶಾಲೆಗಳು ಆರಂಭವಾಗಲಿವೆ. ಜಿಲ್ಲಾ ಕೇಂದ್ರ ರಾಮನಗರದಲ್ಲಿ ಬೀದಿ ನಾಯಿಗಳ ಜೊತೆಗೆ, ಕೋತಿಗಳ ಹಾವಳಿಯೂ ಹೆಚ್ಚಾಗಿದೆ.

Advertisement

ನಗರಸಭೆ ಮತ್ತು ಜಿಲ್ಲಾಡಳಿತ ಶಾಲೆಗಳ ಆರಂಭಕ್ಕೆ ಮುನ್ನವೇ ನಾಯಿ ಮತ್ತು ಕೋತಿಗಳ ಹಾವಳಿಯನ್ನು ತಪ್ಪಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ. ಅಲ್ಲದೆ ಶಾಶ್ವತ ಪರಿಹಾರ ಕಂಡುಕೊಳ್ಳದಿದ್ದರೆ ಪ್ರತಿಭಟಿಸುವ ಎಚ್ಚರಿಕೆಯನ್ನೂ ನೀಡಿದ್ದಾರೆ.

ನಾಯಿಗಳ್ಳೋ, ನರಿಗಳ್ಳೋ?
ಕೆಲವು ಹಳ್ಳಿಗಳಲ್ಲಿ ನಾಯಿಗಳು ಕೋಳಿ, ಕುರಿಯನ್ನು ಕಚ್ಚಿ ತಿನ್ನುತ್ತಿವೆ. ಇವೇನು ನಾಯಿಗಳ್ಳೋ ಅಥವಾ ನರಿಗಳ್ಳೋ ಎಂದು ಗ್ರಾಮೀಣ ಪ್ರದೇಶದ ನಾಗರಿಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಚಿಕ್ಕಮಕ್ಕಳನ್ನು ಕಚ್ಚಿರುವ ಅನೇಕ ಉದಾಹರಣೆಗಳಿವೆ. ಆಟವಾಡಲು ಮಕ್ಕಳನ್ನು ಹೊರಗಡೆ ಬಿಡಲು ಹೆದರಿಕೆಯಾಗುತ್ತಿದೆ ಎಂದು ಗ್ರಾಮೀಣ ಪ್ರದೇಶದ ನಾಗರಿಕರು ಪ್ರತಿಕ್ರಯಿಸಿದ್ದಾರೆ. ಜಿಲ್ಲಾ ಕೇಂದ್ರ ರಾಮನಗರವೊಂದರಲ್ಲೇ 2 ಸಾವಿರಕ್ಕೂ ಅಧಿಕ ನಾಯಿಗಳಿವೆ ಎಂದು ಅಂದಾಜಿಸಲಾಗಿದೆ. ಬೀದಿ ನಾಯಿಗಳ ನಿಯಂತ್ರಣಕ್ಕೆ
ಸಂತಾನ ಶಕ್ತಿ ಹರಣ ಕ್ರಮ ಕೈಗೊಳ್ಳಲು ಟೆಂಡರ್‌ ಪ್ರಕ್ರಿಯೆ ಚಾಲನೆಯಲ್ಲಿದೆ. ಆದರೆ ಟೆಂಡರ್‌ಗೆ ಪ್ರತಿಕ್ರಿಯೆ ಇನ್ನು ಸಿಕ್ಕಿಲ್ಲ
ಎಂದು ಮೂಲಗಳು ತಿಳಿಸಿವೆ.

ಬೀದಿ ನಾಯಿಗಳ ಹಾವಳಿಯ ಬಗ್ಗೆ ನಾಗರಿಕರು, ಪೋಷಕರು ಮತ್ತು ಶಿಕ್ಷಕರು ಗಮನ ಸೆಳೆದಿದ್ದಾರೆ. ಶಾಲೆಗಳು ಆರಂಭವಾಗುವ ಮುನ್ನ ನಾಯಿಗಳ ನಿಯಂತ್ರಣ ಕೈಗೊಂಡು ಮಕ್ಕಳನ್ನು ರಕ್ಷಿಸುವಂತೆ ನಗರಸಭೆಯ ಆಯುಕ್ತ ಮತ್ತು ಮತ್ತು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿಕೊಳ್ಳಲಾಗುವುದು.
●ಮರೀಗೌಡ, ಬಿಇಒ, ರಾಮನಗರ

Advertisement

Udayavani is now on Telegram. Click here to join our channel and stay updated with the latest news.

Next