Advertisement

UV Fusion: ಹರಿ ಚಿತ್ತ ಸತ್ಯ

02:42 PM Oct 10, 2023 | Team Udayavani |

ತಾನೊಂದು ಬಗೆದರೆ ದೈವವೊಂದು ಬಗೆಯಿತು ಎಂಬ ಮಾತಿದೆ. ಹಾಗೆ ಈ ಜಗತ್ತಿನಲ್ಲಿ ಎಲ್ಲವೂ ಪೂರ್ವ ನಿರ್ಧರಿತ. ವಿಧಿ ಲಿಖಿತವನ್ನು ಬದಲಾಯಿಸಲು ಯಾರಿಗೂ  ಸಾಧ್ಯವಿಲ್ಲ. ಆದರೆ ವಿಧಿ ತನ್ನ ಬಾಳಿನಲ್ಲಿ ಮುಂದೇನು ಬರೆದಿದೆ ಎಂದು ತಿಳಿಯಲು ಸಾಮಾನ್ಯ ಮನುಷ್ಯನಿಗೆ ಸಾಧ್ಯವಿಲ್ಲ. ಹೀಗಾಗಿ ಆತ ತನಗೆ ಸರಿ ಕಂಡ ಅಥವಾ ತನ್ನ ಹಿತೈಷಿಗಳು ಸರಿ ಎಂದು ತೋರಿದ ದಾರಿಯಲ್ಲಿ ಮುನ್ನಡೆಯುತ್ತಾನೆ, ಹಾಗೆಯೆ ಮುನ್ನಡೆಯಬೇಕು ಕೂಡ.

Advertisement

ಕೆಲಸವನ್ನೇ ಮಾಡದೆ ಫಲ ಬೇಕೆಂದರೆ ಸಿಗುವುದೂ ಇಲ್ಲ. ಇದನ್ನೇ ಅಲ್ಲವೇ ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮ ಹೇಳುವುದು? ಆದರೆ ನಾವು ಬೇಕೆನಿಸಿದ್ದನ್ನು ಪಡೆಯಲು ಹಂಬಲಿಸಿ, ಶ್ರಮಿಸಿದ ಮಾತ್ರಕ್ಕೆ ಒಳ್ಳೆಯ ಫಲಿತಾಂಶವೇ ಸಿಕ್ಕಿ ಬಿಡುತ್ತದೆಂದು ಹೇಳುವುದು ಸಾಧ್ಯವಿಲ್ಲ. ಕೆಲವೊಮ್ಮೆ ಬಯಸದೇ ಭಾಗ್ಯ ಬಾಗಿಲಲ್ಲಿ ನಿಂತರೆ, ಮತ್ತೆ ಕೆಲವೊಮ್ಮೆ ಬಯಸಿದ ಭಾಗ್ಯ ಕೈ ತಪ್ಪಿ ಹೋಗುತ್ತದೆ.

ಹಲವು ಬಾರಿ ನಾವು ಏನನ್ನು ಬೇಡ ಎಂದು ತಿರಸ್ಕರಿಸುತ್ತೇವೋ, ಅದರಿಂದ ದೂರ ಹೋಗಲು ಶತ ಪ್ರಯತ್ನ ಮಾಡಿದರೂ ಕೊನೆಯಲ್ಲಿ ಅದೇ ನಮ್ಮನ್ನು ಅರಸಿಕೊಂಡು ಬಂದು ಅದನ್ನೇ ಅಪ್ಪಿಕೊಂಡು ಬಾಳುವುದು ಅನಿವಾರ್ಯವಾಗಿ ಬಿಡುತ್ತದೆ. ಆಗ ಪರಿಸ್ಥಿತಿಯನ್ನು ಮುಖ ಹಿಂಜಿಕೊಂಡು, ನನ್ನ ಹಣೆಬರಹವೇ ಹೀಗೆ ಎಂದು ಹಲುಬುತ್ತಾ ಅದನ್ನು ಅನಿವಾರ್ಯತೆಯಾಗಿ ಸ್ವೀಕರಿಸಿದರೆ ಬಾಳು  ದುರ್ಬರವಾಗುತ್ತದೆ.

ಅದೇ ಸನ್ನಿವೇಶವನ್ನು ಪ್ರೀತಿಯಿಂದ ಸ್ವೀಕರಿಸಿ ಅದಕ್ಕೆ ಹೊಂದಿಕೊಂಡು ಬಿಟ್ಟರೆ  ನರಕವೂ ನಾಶವಾಗುವುದು. ಒಟ್ಟಿನಲ್ಲಿ ದೇವರ ಆಟ ಬಲ್ಲವರಾರು ಇಲ್ಲ. ಮತ್ತು ಕೊನೆಯಲ್ಲಿ ಆ ಆಟದಲ್ಲಿ ಗೆಲ್ಲುವವನು ಅವನೇ. ಇದನ್ನೇ ದಾಸರು ಹೇಳಿದ್ದು ಹರಿಚಿತ್ತ ಸತ್ಯ ಎಂದು.

ದಾಸರು ನೀಡಿದ ಈ ತಣ್ತೀವನ್ನು ಮತ್ತೂ ಸರಳೀಕರಿಸಿ ಇದನ್ನು ಕಥಾನಕದ ಮೂಲಕ ನಿರೂಪಿಸುವ  ಹೃದಯಸ್ಪರ್ಶಿ ಕಾದಂಬರಿ ವಸುಧೇಂದ್ರರ ಹರಿಚಿತ್ತ ಸತ್ಯ. ಕಥೆ ಓದುಗನನ್ನು ಒಂದಷ್ಟು ಕಾಲ ಹಿಂದಕ್ಕೆ ಕೊಂಡೊಯ್ದು ಬಳ್ಳಾರಿ, ಸಂಡೂರು, ಬಿಜಾಪುರ, ಬೆಂಗಳೂರು, ಮುಂತಾದ ಕಡೆ ಸುತ್ತಾಡಿಸುತ್ತಾ ಆ ಕಾಲದ ಜನರ ದೈವಭಕ್ತಿ ಆಗ ತಾನೆ ಯುವ ಮನಸ್ಸುಗಳಲ್ಲಿ ಮೊಳಕೆಯೊಡೆಯುತ್ತಿದ್ದ ನಾಸ್ತಿಕವಾದ, ಅದಕ್ಕೂ ಮಿಗಿಲಾಗಿ ಎಲ್ಲವನ್ನೂ ಒಪ್ಪಿಕೊಳ್ಳುವ  ಮೊದಲು   ಪ್ರಶ್ನಿಸುವ  ಪ್ರವೃತ್ತಿ, ಜನರ ಮುಗ್ಧತೆ,  ಧರ್ಮಾಚರಣೆಗಳ ಹಿಂದಿನ ವೈಜ್ಞಾನಿಕ ಕಾರಣಗಳನ್ನರಿಯದೆ ಅವುಗಳನ್ನು ತಪ್ಪಾಗಿ ಅರ್ಥೈಸಿಕೊಂಡು ತಮಗೆ ತೋಚಿದಂತೆ ಆಚರಿಸುತ್ತ ಅವುಗಳನ್ನು ಮುಂದು ಮಾಡಿ ಆಧುನಿಕತೆಯಿಂದ ದೂರವಿದ್ದ ಜನರ  ರೀತಿ ಎಲ್ಲವನ್ನು ಪರಿಚಯಿಸುತ್ತಾ ಹೋಗುತ್ತದೆ.  ಪುಸ್ತಕದುದ್ದಕ್ಕೂ ಬಳಸಿರುವ  ಗ್ರಾಮ್ಯ ಭಾಷೆ ಓದುಗನ ಹೃದಯಕ್ಕೆ ಹತ್ತಿರವಾಗುತ್ತದೆ.

Advertisement

ಅಂದಿನ ಕಾಲದಲ್ಲಿ ತನ್ನ ತಪ್ಪು ಇಲ್ಲದಿದ್ದರೂ ಗಂಡ ಸತ್ತ ಎಂಬ ಏಕೈಕ ಕಾರಣಕ್ಕೆ ವಿಧವೆ ಒಬ್ಬಳನ್ನು ಆಜೀವನ  ಪರ್ಯಂತ  ಇತರರು ಅನುಭವಿಸುವ ಎಲ್ಲ ಸುಖಗಳಿಂದ ವಂಚಿತಳನ್ನಾಗಿಸಿ ಅವಳನ್ನು ಸಮಾಜ ನಡೆಸಿಕೊಳ್ಳುತ್ತಿದ್ದ ರೀತಿ ಮನಸ್ಸಿಗೆ ಖೇದವನ್ನುಂಟು ಮಾಡುತ್ತದೆ.

ಅಂತಹ ಸಮಯದಲ್ಲೂ ಜೀವನದ ರಥವನ್ನು ಸಮರ್ಥವಾಗಿ ಮುನ್ನಡೆಸಿ ಮಗಳನ್ನೂ ಬೆಳೆಸಿ ಕಷ್ಟಗಳಿಗೆ  ಕಲ್ಲಾಗಿ ನಿಲ್ಲುವ ರಂಗಮ್ಮ ಬತ್ತದ ಜೀವನ್ನೋತ್ಸಾಹದ ದ್ಯೋತಕವಾಗಿ ಕಾಣುತ್ತಾಳೆ. ಆಕೆಯ ಜೀವನ ಪ್ರೀತಿ, ಕಷ್ಟಗಳಿಗೆ ಎದೆಯೊಡ್ಡಿ ನಿಲ್ಲುವ ಧೈರ್ಯ, ಸಣ್ಣಪುಟ್ಟ ಸಮಸ್ಯೆಗಳನ್ನೂ ದೊಡ್ಡದು ಮಾಡಿಕೊಂಡು ಕೊರಗುವ ನಮ್ಮಂತ  ಯುವ ಜನರಿಗೆ ಮಾದರಿ.

ಇನ್ನು ಇಡೀ ಕತೆಯನ್ನು ಸೂತ್ರದಂತೆ ಬಿಗಿದು ಕಥೆಯ ಉದ್ದಕ್ಕೂ  ವಿಜೃಂಭಿಸಿರುವುದು ಪ್ರೀತಿಯೇ.  ತಾಯಿ -ಮಗಳು, ತಂದೆ -ಮಕ್ಕಳು, ಗಂಡ -ಹೆಂಡಿರ  ಹಾಗೂ ಗೆಳತಿಯರ ನಡುವಣ ನಿಷ್ಕಲ್ಮಶ ಪ್ರೀತಿಯೇ ಕತೆಯ ಜೀವಾಳ.  ಜೀವನದಲ್ಲಿ ಎಲ್ಲವೂ ಮುಗಿದು ಹೋಯಿತು ಎಂದುಕೊಂಡಾಗ ಮತ್ತೆ ಮನಸಿನಲ್ಲಿ ಜೀವನೋತ್ಸಾಹ ಮೂಡಿಸಿ ಚಿಂತೆಯ ಕಾರ್ಮೋಡಗಳಿಂದ ಹೊರಬಂದು ಭರವಸೆಯ ಭಾಸ್ಕರ ಮತ್ತೆ  ಪ್ರಜ್ವಲಿಸುವಂತೆ ಮಾಡಿ ಜೀವನವನ್ನು ಧನಾತ್ಮಕ ದೃಷ್ಟಿಯಲ್ಲಿ ನೋಡುವಂತೆ ಮಾಡುವ ಶಕ್ತಿ ಪ್ರೀತಿಗೆ ಇದೆ  ಎನ್ನುವುದನ್ನು ಕಥೆ ರುಜುವಾತು ಪಡಿಸುತ್ತದೆ.

ಕಥೆಯ ಧಾರುಣ, ಅನಿರೀಕ್ಷಿತ ಅಂತ್ಯ ಮಾತ್ರ ಒಂದರೆಕ್ಷಣ ಎದೆ ಧಸಕ್‌ ಎನ್ನಿಸಿ ಒಂದೇ ಗತಿಯಲ್ಲಿ ಕಥೆಯನ್ನು ಆಸ್ವಾದಿಸಿಕೊಂಡು ಹೋಗುತ್ತಿದ್ದ ಮನಸ್ಸಿಗೆ ಲಘು ಆಘಾತವನ್ನುಂಟು ಮಾಡುತ್ತದೆ. ಆದರೆ ಉಪಸಂಹಾರದಲ್ಲಿ ಎಲ್ಲವೂ ತಕ್ಕ ಮಟ್ಟಿಗೆ ಮೊದಲಿನಂತಾಗಿ ಕೊಂಚ ಸಮಾಧಾನದಿಂದ ಪುಸ್ತಕ ಮುಚ್ಚಿಡುವಂತಾಗುತ್ತದೆ.

ಒಟ್ಟಿನಲ್ಲಿ ಪುಸ್ತಕ ಸರಳ, ಆದರೆ ಸುಂದರವಾಗಿ, ಹೃದಯ ತಂತಿಯನ್ನು ಮೀಟಿ ಬಹಳ ಹೊತ್ತು ಕಥೆಯನ್ನು ಮೆಲುಕು ಹಾಕುತ್ತಾ ಮನಸ್ಸು ಕಥೆಯ ಸುತ್ತವೇ ಸುತ್ತುವಂತೆ ಮಾಡುತ್ತದೆ.

-ಅಭಿರಾಮ್‌ ಭಾಗವತ್‌

Advertisement

Udayavani is now on Telegram. Click here to join our channel and stay updated with the latest news.

Next