Advertisement

ಭೂ ಸ್ಫೋಟಕ ಪತ್ತೆ ಮಾಡುವ ಡ್ರೋಣ್ ತಯಾರಿಸಿ ಭಾರತೀಯ ಸೇನೆ ಮೆಚ್ಚುಗೆ ಪಡೆದ ಬಾಲಕನ ಯಶೋಗಾಥೆ

07:23 PM Jul 29, 2020 | Suhan S |

ಕಳೆದ ಕೆಲ ದಿನಗಳಿಂದ ಎಲ್ಲೆಡೆ ಡ್ರೋಣ್ ಪ್ರತಾಪ್ ಎಂದು ಖ್ಯಾತರಾಗಿರುವ ಪ್ರತಾಪ್ ಅವರ ಕುರಿತು ಚರ್ಚೆಗಳು ನಡೆಯುತ್ತಲೇ ಇದೆ. ಅವರ ಸಾಧನೆ, ಅವರು ಮಾಡಿದ ಸಾಧನ ಸುಳ್ಳು ಹೀಗೆ ಗೊಂದಲದ ವಿಷಯದ ಚರ್ಚೆ ಎಲ್ಲೆಡೆಯೂ ವೈರಲ್ ಆಗಿದೆ. ಇಂಥ ಸಂದರ್ಭದಲ್ಲಿ ಸಾಧನೆಯನ್ನು ಮಾಡಿ ಸಮಾಜದ ಕಣ್ಣಿಗೆ ಕಾಣದ, ಮಾಧ್ಯಮದ ಕ್ಯಾಮಾರಾಗಳಿಗೆ ಸಿಗದ ಕೆಲ ನಿಜವಾದ ಪ್ರತಿಭೆಗಳು ಇದೀಗ ಬೆಳಕಿಗೆ ಬರುತ್ತಿದ್ದಾರೆ.  ಅಂಥವರಲ್ಲಿ ಒಬ್ಬರು ಗುಜರಾತಿನ ಅಹಮದಬಾದ್ ನ 17  ವರ್ಷದ ಬಾಲಕ ಹರ್ಷವರ್ಧನ್ ಝಲಾ.

Advertisement

ಹರ್ಷವರ್ಧನ್ ಹುಟ್ಟಿದ್ದು 2002 ರಲ್ಲಿ. ಮಧ್ಯಮ ವರ್ಗದ ಹಿನ್ನಲೆಯಲ್ಲಿ ಬೆಳೆದ ಹರ್ಷವರ್ಧನ್ ಬಾಲ್ಯದಿಂದಲೇ ಆಟ-ಪಾಠಗಳ ರುಚಿಯನ್ನು ಅಷ್ಟಾಗಿ ಸವಿಯದೆ ಬೆರಗು ಕಣ್ಣಿನಿಂದ ಕುತೂಹಲ ಹುಟ್ಟಿಸುವ ತಾಂತ್ರಿಕ ವಿಷಯಗಳ ಕುರಿತು ಯೋಚಿಸಲು ಶುರು ಮಾಡುತ್ತಾರೆ. 10 ನೇ ವಯಸ್ಸಿನಲ್ಲಿ ಟಿ.ವಿ ರಿಮೋಟ್ ಹರ್ಷವರ್ಧನ್ ಕಣ್ಣಿಗೆ ಪ್ರಯೋಗವನ್ನು ಮಾಡುವ ಮೊದಲ ಸಾಧನವಾಗಿ ಕಾಣುತ್ತದೆ. ಟಿವಿ ರಿಮೋಟ್ ನಿಂದ ಫ್ಯಾನ್, ಎಸಿ ಹಾಗೂ ಟಿವಿಯನ್ನು ಕಂಟ್ರೋಲ್ ಮಾಡಬಹುದೇ ? ಎನ್ನುವ ಪ್ರಶ್ನೆಯೊಂದು ಅವರ ತಲೆಯೊಳಗೆ ಹೊಕ್ಕುತ್ತದೆ. ಈ ಪ್ರಶ್ನೆ ಎಷ್ಟು ಪರಿಣಾಮಕಾರಿಯಾಗಿರುತ್ತದೆ ಎಂದರೆ ಈ ಕುರಿತು ಯೋಚನೆ ಹಾಗೂ ಯೋಜನೆಯನ್ನು ಹಾಕಿಕೊಂಡು ಸಂಶೋಧನೆಯನ್ನು ಮಾಡಲು ಶುರು ಮಾಡುತ್ತಾರೆ. 14 ರ ಹರೆಯದಲ್ಲಿ ಇವರ ಯೋಚನೆ ಫಲ ಕೊಡುತ್ತದೆ. ತಿಂಗಳುಗಟ್ಟಲೇ ಗಂಟೆಗಟ್ಟಲೇ ಯೋಜನೆಗಳನ್ನು ಶೋಧಿಸಿದ ಬಳಿಕ ಯಶಸ್ವಿಯಾಗುತ್ತಾರೆ ಒಂದೇ ಟಿವಿ ರಿಮೋಟ್ ನಿಂದ ತಿರುಗುವ ಫ್ಯಾನ್ ನಿಲ್ಲಿಸುವ ತಂತ್ರ, ಎಸಿಯನ್ನು ಆನ್ ಆಫ್ ಮಾಡುವ ತಂತ್ರ ಹಾಗೂ ಟಿವಿಯ ಕೆಲಸ ಆಗುವ ಹಾಗೆ ಮಾಡುತ್ತಾರೆ. ಇದು ಅವರ ಮೊದಲ ಯೋಜನೆ.

ಮೂರ್ತಿ ಚಿಕ್ಕದಾದರೂ ಸಾಧನೆ ದೊಡ್ಡದು.. : ಹರ್ಷವರ್ಧನ್ ಸಣ್ಣ ವಯಸ್ಸಿನಲ್ಲಿ ಅಂದುಕೊಳ್ಳದ ಅನಿರೀಕ್ಷಿತ ಸಾಧನೆಗಳನ್ನು ಮಾಡುತ್ತಾ ಮುಂದೆ ಸಾಗುತ್ತಾರೆ. ಒಂದು ಬಾರಿ ಯೋಚಿಸಿದ್ದನ್ನು ನೂರು ಬಾರಿ ಶೋಧಿಸಿ, ಪ್ರಯತ್ನಿಸಿ ಅದರಲ್ಲಿ ನೈಪುಣ್ಯತೆಯನ್ನು ಪಡೆಯುವ ಅವರ ವ್ಯಕ್ತಿತ್ವ ಆ ವಯಸ್ಸಿನಲ್ಲಿ ಸುಮಾರು 42 ವಿವಿಧ ಸಾಧನ ಹಾಗೂ 8 ರೋಬೋಟ್ ಗಳನ್ನು ಮಾಡಿ ಸೈ ಎನ್ನಿಸಿಕೊಳ್ಳುತ್ತಾರೆ.  ಇವರ ನಿರಂತರ ಶ್ರಮದ ಹಿಂದೆ ಇಂಟರ್ ನೆಟ್ ಬಹುಮುಖ್ಯವಾಗಿ ಸಹಕಾರಿಯಾಗುತ್ತದೆ. ಪ್ರತಿದಿನ ಗಂಟೆಗಟ್ಟಲೇ ಸೈಬರ್ ವೊಂದಕ್ಕೆ ತನ್ನ ಅಜ್ಜನನ್ನು ಕರೆದುಕೊಂಡು ಹೋಗಿ ಸೈಬರ್ ನಲ್ಲಿ ತನ್ನ ಸಂಶೋಧನೆಗೆ ಸಂಬಂಧಿಸಿದ ವಿಷಯಗಳನ್ನು ಸಂಗ್ರಹಿಸಿ ಟಿಪ್ಪಣಿ ಮಾಡಿಕೊಂಡು ಮನೆಯಲ್ಲಿ ಕಾರ್ಯೋನ್ಮುಖರಾಗುತ್ತಾರೆ.

ಹರ್ಷವರ್ಧನ್  ಮಾಡಿದ ಸಾಧನಗಳು ಸ್ಥಳೀಯವಾದ ಮನೆಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಆಗುತ್ತಿತ್ತು. ಆದರೆ ಅವರ ಯೋಚನೆಗಳು ಏನಾದ್ರು ದೊಡ್ಡದಾಗಿ ಮಾಡುವ ಹಂಬಲವನ್ನು ಹೊಂದಿತ್ತು.  ಜುಲೈ  2015 ರಂದು ಯೂಟ್ಯೂಬ್ ನಲ್ಲಿ ಒಂದು ವಿಡಿಯೋ ನೋಡುತ್ತಾರೆ. ಲ್ಯಾಂಡ್ ಮೈನ್ ವೊಂದನ್ನು ( ಭೂ ಸ್ಫೋಟಕ) ನಿಷ್ಕ್ರಿಯೆ ಮಾಡುವ ಸಂದರ್ಭದಲ್ಲಿ ಭೂ ಸ್ಫೋಟಕ ಸ್ಫೋಟಕೊಂಡು ಯೋಧನೊಬ್ಬ ಹತನಾಗುವ ವಿಡಿಯೋ. ಇದನ್ನು ನೋಡಿ ಹರ್ಷವರ್ಧನ್ ಮನಸ್ಸು ತುಂಬಾ ಭಾವುಕಗೊಳ್ಳುವುದರ ಜೊತೆಗೆ ಇದಕ್ಕಾಗಿ ತಾನು ಏನಾದ್ರು ಮಾಡಬೇಕೆನ್ನುವ ನಿರ್ಧಾರದ ಯೋಚನೆ ಕಾಡಲಾರಂಭಿಸುತ್ತದೆ. ಲ್ಯಾಂಡ್ ಮೈನ್ ಎಂದರೆ ಏನು ಅದು ಹೇಗೆ ಕೆಲಸ ಮಾಡುತ್ತದೆ?, ಅದನ್ನು ನಿಷ್ಕ್ರಿಯಗೊಳಿಸಲು ಬಳಸುವ ಸಾಧನ ಯಾವುದು? ಅದರ ಕೆಲಸ ಹೇಗೆ ಹೀಗೆ ನಾನಾ ಬಗೆಯಲ್ಲಿ ಶೋಧಿಸಿದಾಗ ಅವರಿಗೆ ಡ್ರೋಣ್ ಕುರಿತಾಗಿ ಮಾಹಿತಿ ದೊರಕುತ್ತದೆ. ಈ ಬಗ್ಗೆ ಹರ್ಷವರ್ಧನ್ ಬಹಳಷ್ಟು ಸಂಶೋಧನೆ ನಡೆಸುತ್ತಾರೆ. ಅದರ ಫಲವಾಗಿ ಅವರು EAGLE A-7 ಎನ್ನುವ ಡ್ರೋಣ್ ವೊಂದನ್ನು ತಯಾರಿಸುತ್ತಾರೆ. ಈ ಡ್ರೋಣ್ ನೆಲದೊಳಗೆ ಹೂತ್ತಿಟ್ಟ ಭೂ ಸ್ಪೋಟಕವನ್ನು ಮೇಲಿಂದಲೇ ಗುರುತಿಸುವ ಕಾಯಕವನ್ನು ಮಾಡುತ್ತದೆ. ಆದರೆ ಇದು ನಿಖರವಾಗಿ ಶೇ.57 ರಷ್ಟು ಮಾತ್ರ ಸಾದ್ಯತೆಯಿಂದ ಕೆಲಸ ಮಾಡುತ್ತದೆ. ಅಹಮದಬಾದ್ ನಲ್ಲಿ ನಡೆದ ಗ್ಲೋಬಲ್ ಸಮಿಟ್ ವೊಂದರಲ್ಲಿ ಭಾಗವಿಹಿಸಿ ತಮ್ಮ  ಡ್ರೋಣ್ ವಿಶೇಷವನ್ನು ವಿವರಿಸುತ್ತಾರೆ. ಈ ಸಮಿಟ್ ನಲ್ಲಿ ಸಿ.ಆರ್.ಪಿ.ಎಫ್ ನ ಮುಖ್ಯ ಅಧಿಕಾರಿ ಬರುತ್ತಾರೆ. ಇದೇ ಸಂದರ್ಭದಲ್ಲಿ ಹರ್ಷವರ್ಧನ್ ಅವರ ಡ್ರೋಣ್ ನೋಡಿ ಮೆಚ್ಚಿದ ಡೈರೆಕ್ಟರ್ ಜನರಲ್ ಹರ್ಷವರ್ಧನ್ ಜೊತೆ ವೈಯಕ್ತಿಕಾವಿಗಿ ಮಾತುಗಳನ್ನಾಡಿ ಸಾಧನೆ ಹಾಗೂ ಸಾಧಕ ಎರಡನ್ನೂ ಹೂಗಳುತ್ತಾರೆ.

Advertisement

ಅಮೇರಿಕಾದಲ್ಲಿ ಆರ್.ಸಿ ಫೆಲೋಶಿಪ್ ನಲ್ಲಿ ಭಾಗವಹಿಸುತ್ತಾರೆ. ಅಮೇರಿಕಾದಿಂದ ಬಂದ ಮತ್ತೊಂದು ಕಾರ್ಯಕ್ರಮದ ಆಮಂತ್ರಣವನ್ನು ಒಪ್ಪಿ ತಮ್ಮ ಡ್ರೋಣ್ ಸಾಮರ್ಥ್ಯ ಹಾಗೂ ಮಾದರಿಯನ್ನು ಬದಲಾಯಿಸಿ ಹೊಸ ಬಗೆಯ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳುತ್ತಾರೆ. ತ್ರೀ ಡಿ ಮ್ಯಾಪಿಂಗ್ ತಂತ್ರವನ್ನು ಜೋಡಿಸಿ ತಯಾರಿಸಿದ ಡ್ರೋಣ್ ಶೇ.93 ರಷ್ಟು ನಿಖರವಾದ ಮಾಹಿತಿಯನ್ನು ನೀಡುವಷ್ಟು ಸಾಮಾರ್ಥ್ಯವನ್ನು ಹೊಂದಿರುತ್ತದೆ. ತಮ್ಮಲ್ಲಿದ್ದ ಕೌಶಲ್ಯದಿಂದ ತಮ್ಮದೆ ಆದ ಯೋಜನೆಯಿಂದ ತಯಾರಿಸಿದ ಡ್ರೋಣ್ ಖ್ಯಾತಿಗೊಳ್ಳುತ್ತದೆ.

ನೆಲೆದೊಳಗೆ ಅಡಗಿರುವ ಭೂ ಸ್ಫೋಟಕದ ಲೋಹವನ್ನು  ಸ್ಷಷ್ಟವಾಗಿ ಪತ್ತೆ ಹಚ್ಚುವ ಇವರ ಡ್ರೋಣ್ ನಿಂದ ಗುಜರಾತ್ ಸರ್ಕಾರ ಹರ್ಷವರ್ಧನ್ ರೊಂದಿಗೆ 5 ಕೋಟಿಯ ಒಪ್ಪಂದವನ್ನು ಮಾಡುತ್ತಾರೆ. ಇದರನ್ವಯ ಭಾರತೀಯ ಸೇನೆಯೊಂದಿಗೆ ಕೆಲಸ ಮಾಡುವುದಾಗಿತ್ತು. ಇವರ ಡ್ರೋಣ್ ಜನಪ್ರಿಯತೆಯಿಂದ ಇವರಿಗೆ ನಾನಾ ದೇಶದ ಆಫರ್ ಗಳು ಕೆಲಸಕ್ಕೆ ಆಹ್ವಾನ ನೀಡುತ್ತವೆ. ಆದರೆ ಭಾರತೀಯ ಸೇನೆಯೊಂದಿಗೆ ಮಾತ್ರ ಕೆಲಸ ಮಾಡುವ ಉದ್ದೇಶದಿಂದ ಅವೆಲ್ಲಾ ಆಫರ್ ಗಳನ್ನು ತಿರಸ್ಕರಿಸುತ್ತಾರೆ.

ಈಗಾಗಲೇ ಅವರು ಹೇಳಿರುವಂತೆ ತಮ್ಮ ಡ್ರೋಣ್ ನಿಂದ ಲ್ಯಾಂಡ್ ಮೈನ್  ಪತ್ತೆ ಹಚ್ಚಿ ಅದನ್ನು ಅಲ್ಲೇ ಯಾರಿಗೂ ಹಾನಿಯಾಗದಂತೆ ಸ್ಪೋಟಿಸುವ ಸಾಧನವನ್ನು ಅವರು ಡ್ರೋಣ್ ನಲ್ಲಿ ಅಳವಡಿಸಿದ್ದಾರೆ ಅಂತೆ.ಅದನ್ನು ಬಹಿರಂಗವಾಗಿ ಸಾಬೀತು ಮಾಡಿಸುವುದು ಭಾರತೀಯ ಸೇನೆಯ ದೃಷ್ಟಿಯಿಂದ ಸುರಕ್ಷಿತವಲ್ಲದ ಕಾರಣ ಆ ಸಾಧನವನ್ನು ಇನ್ನು ಎಲ್ಲೂ ಬಹಿರಂಗಗೊಳಿಸಿಲ್ಲ. ಹರ್ಷವರ್ಧನ್ ಸಾಧನೆಯ ಹಾದಿಯಲ್ಲಿ ಹಣಕಾಸಿನ ತೊಂದರೆ ತುಂಬಾ ಆಗಿದೆ. ಅದನ್ನು ಅವರು ಪರಿಹರಿಸಿಕೊಂಡದ್ದು ಕೂಡ ರೋಚಕ ತಮ್ಮಗಿಂತ ಹಿರಿಯರಿಗೆ ಅಂತಿಮ ವರ್ಷದ ಇಂಜಿನಿಯರ್ ವಿದ್ಯಾರ್ಥಿಗಳಿಗೆ ಟ್ಯೂಷನ್ ಕೊಟ್ಟು ತನಗಾಗಿ ತಂದೆ ತಾಯಿ ತೆಗೆಸಿಕೊಟ್ಟಿದ್ದ ಸಾಲವನ್ನು ತೀರಿಸಿ ಮೇಲೆದ್ದು ಬಂದವರು.

ಹರ್ಷವರ್ಧನ್ ಏರೋಬೊಟಿಕ್ಸ್ 7 ಎನ್ನುವ ಸಂಸ್ಥೆ ಕಟ್ಟಿ ಬೆಳೆಸಿದ್ದಾರೆ. ಇದು ನಾನಾ ಸಾಧನದ ಸಾಮಗ್ರಿಗಳನ್ನು ತಯಾರಿಸುತ್ತದೆ. ಹತ್ತು ಹಲವಾರು ಪ್ರಶಸ್ತಿಗಳು, ಟೆಡ್ ಎಕ್ಸ್ ನಂಥ ಮಹಾನ್ ವೇದಿಕೆಯಲ್ಲಿ ಸಾಧನೆಯ ಹಾದಿಯ ಅನುಭವನ್ನು ಹಂಚಿಕೊಂಡಿದ್ದಾರೆ.

 

-ಸುಹಾನ್ ಶೇಕ್

Advertisement

Udayavani is now on Telegram. Click here to join our channel and stay updated with the latest news.

Next