Advertisement

ಕೈಲಾಸದಿಂದ ಭೂಮಿಗೆ ಬಂದು ಪೂಜೆ ಸ್ವೀಕರಿಸುವ ಗೌರಿ ಹಬ್ಬದ ಬಗ್ಗೆ ಗೊತ್ತಾ?

06:58 PM Aug 31, 2019 | Suhan S |

ಈಗ ಎಲ್ಲಿ ನೋಡಿದರೂ ಬೆರಳಷ್ಟು ಗಾತ್ರದ ಗಣೇಶನಿಂದ ಹಿಡಿದು ಆಕಾಶದತ್ತ ತಲೆ ಎತ್ತಿ ನೋಡುವಷ್ಟು ಎತ್ತರದ ಗಣೇಶನ ಮೂರ್ತಿಗಳು ಎಲ್ಲೆಡೆ ರಾರಾಜಿಸುತ್ತಿರುತ್ತವೆ. ಎಲ್ಲರ ಬಾಯಲ್ಲೂ ಈಗ ಒಂದೇ ಶಬ್ದ ಗಣೇಶ ಬಂದಾ ಗಣೇಶ ಬಂದಾ. ಆದರೆ ಈ ಗಣೇಶ ಭೂಮಿಗೆ ಬರಬೇಕಾದರೆ ಗೌರಿ ಮೊದಲೇ ಬಂದಿರಬೇಕು ಎಂಬುವುದು ನಿಮಗೆ ತಿಳಿದಿರಲಿ.

Advertisement

ಭಾದ್ರಪದ ಮಾಸದ ಚತುರ್ಥಿಯ ಹಿಂದಿನ ದಿನ ಬರುವ ಗೌರಿ ಹಬ್ಬ ಸುಮಂಗಲೆಯರಿಗೆ ಸಕಲ ಸೌಭಾಗ್ಯ ನೀಡುವ ಹಬ್ಬ. ಗೌರಿಯು ಕೈಲಾಸದಿಂದ ಭೂಮಿಗೆ ಭಾದ್ರಪದ ಶುಕ್ಲ-ತದಿಗೆಯಂದು ಬರುತ್ತಾಳೆ. ಅವಳನ್ನು ಕರೆದು ತವರು ಮನೆಯ ಆತಿಥ್ಯ ಮಾಡಿ ವಾಪಸ್ಸು ಮಗನೊಂದಿಗೆ ಕಳುಹಿಸಿಕೊಡುವುದೇ  ಈ ಹಬ್ಬದ ವೈಶಿಷ್ಟ್ಯ. ಅಮ್ಮನನ್ನು ಮಾರನೆ ದಿನ ಮಗ ಗಣೇಶ ಬಂದು ಕೈಲಾಸಕ್ಕೆ ಕರೆದುಕೊಂಡು ಹೋಗುವುದು ಈ ಗೌರಿ ಗಣೇಶನ ಹಬ್ಬದ ವಿಶೇಷತೆ.

ಗೌರಿ ಹಬ್ಬವನ್ನು ಗಣೇಶನ ಹಬ್ಬದ ರೀತಿಯಲ್ಲಿ ವಿಜೃಂಭಣೆಯಿಂದ ಆಚರಿಸದಿದ್ದರೂ ಸರಳವಾಗಿ ಭಕ್ತಿಯಿಂದ ಆಚರಿಸಲಾಗುತ್ತದೆ. ಗೌರಿ ಹಬ್ಬವನ್ನು ಸಾಮಾನ್ಯವಾಗಿ ದೇಶದಾದ್ಯಂತ ಆಚರಿಸಲಾಗುತ್ತದೆಯಾದರೂ ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರಿನಲ್ಲಿ ಆಚರಿಸಲಾಗುವ ಈ ಹಬ್ಬವನ್ನು ಉತ್ತರ ಭಾರತದಲ್ಲಿ ಹರ್ತಲಿಕಾ ಎಂಬ ಹೆಸರಿನಲ್ಲಿ ಆಚರಿಸಲಾಗುತ್ತದೆ. ಗೌರಿ ಹಬ್ಬ ಒಂದೆಡೆ ದೇವಾರಾಧನೆ ಹಬ್ಬವಾದರೆ ಇನ್ನೊಂದೆಡೆ ಮದುವೆಯಾಗಿರುವ ಹೆಣ್ಣು ಮಕ್ಕಳನ್ನು ಪ್ರೀತಿಯಿಂದ ತಂದೆ ತಾಯಿ ಬರ ಮಾಡಿಕೊಳ್ಳುವ ಸಂಪ್ರದಾಯ ಇನ್ನೊಂದೆಡೆ.

ಏನಿದು ಗೌರಿ ಹಬ್ಬ:

ಸ್ವರ್ಣಗೌರಿ ಪೂಜೆ ಆಚರಣೆಯ ಹಿಂದೆ ಹಲವಾರು ಪೌರಾಣಿಕ ಕಥೆಗಳಿವೆ. ಪಾರ್ವತಿಯ ಮತ್ತೊಂದು ಹೆಸರೇ ಗೌರಿ. ಪಾರ್ವತಿಯ ತಂದೆ ಪರ್ವತರಾಜ. ಶಿವನನ್ನು ವಿವಾಹವಾದ ಗೌರಿ ವರ್ಷಕ್ಕೊಮ್ಮೆ ತವರಿಗೆ ಅಂದರೆ ಕೈಲಾಸದಿಂದ ಭೂಮಿಗೆ ಬಂದು ಪೂಜೆ ಸ್ವೀಕರಿಸುತ್ತಾಳೆ. ಹೆಂಗಳೆಯರಿಂದ ಬಾಗಿನ ಸ್ವೀಕರಿಸಿ ಸಂತೃಪ್ತಳಾಗಿ ಕೈಲಾಸಕ್ಕೆ ಹೋಗುತ್ತಾಳೆ ಎಂಬ ನಂಬಿಕೆ ಇದೆ. ಮುತೈದೆಯವರು  ಗೌರಿ ಹಬ್ಬದಂದು ವ್ರತ ಕೈಗೊಂಡು ಪೂಜೆ ಮಾಡಿದರೆ ದೀರ್ಘ ಸುಮಂಗಲಿಗಳಾಗುತ್ತಾರೆ ಎನ್ನುವ ನಂಬಿಕೆ ಬಹಳ ಹಿಂದಿನ ಕಾಲದಿಂದಲೂ ಬಂದಿದೆ.

Advertisement

ಆಚರಣೆ ಹೇಗೆ :

ಗೌರಿಹಬ್ಬ ವಿಶೇಷವಾಗಿ ಹೆಂಗಳೆಯರ ಹಬ್ಬ. ಹಬ್ಬದ ಹಿಂದಿನ ದಿನವೇ  ಗೌರಿ ವಿಗ್ರಹವನ್ನು ಮನೆಗೆ ತರಲಾಗುತ್ತದೆ. ಗೌರಿಯ ವಿಗ್ರಕ್ಕೆ ಅರಶಿಣ, ಕುಂಕುಮ, ಹೂವುಗಳಿಂದ ಅಲಂಕರಿಸುತ್ತಾರೆ. ನಂತರ ದೇವಿಯ ಮಂತ್ರಗಳನ್ನು ಹೇಳಿ ಗೌರಿಯನ್ನು ಆಹ್ವಾನಿಸುತ್ತಾರೆ. ನಂತರ ದೇವಿಯನ್ನು ಅಕ್ಕಿ ಹಾಗೂ ಧಾನ್ಯದಿಂದ ತಯಾರಿಸಿದ ದಿಬ್ಬದ ಬಟ್ಟಲಿನಲ್ಲಿ ಇರಿಸಲಾಗುತ್ತದೆ. ಬಳಿಕ ಗೌರಿ ದೇವಿಯ ಆಶೀರ್ವಾದ ಸಂಕೇತವಾಗಿ 16 ಸುತ್ತಿನ ದಾರವನ್ನು ಮಹಿಳೆಯರು ಕೈಗೆ ಸುತ್ತಿಕೊಳ್ಳುತ್ತಾರೆ. ವೃತದ ಬಳಿಕ ಬಾಗಿನಗಳನ್ನು ನೀಡಲಾಗುತ್ತದೆ. ನಂತರ ದೇವಿಯ ನೈವೇದ್ಯವಾಗಿ ಸಿಹಿ ತಿನಿಸು ಹೋಳಿಗೆ, ಒಬ್ಬಟ್ಟು ಮತ್ತು ಪಾಯಸವನ್ನು ಇಟ್ಟು, ಶಾಸ್ತ್ರಬದ್ದವಾಗಿ ಮನೆತನದ ಪದ್ದತಿಯಂತೆ ಒಂದು, ಮೂರು, ಒಂಬತ್ತು ಅಥವಾ ಹನ್ನೊಂದು ದಿನಗಳ ಕಾಲ ಮೂರ್ತಿಯನ್ನು ಇಟ್ಟು ಪೂಜಿಸಿ ನಂತರ ನೀರಿನಲ್ಲಿ ವಿಸರ್ಜಿಸಲಾಗುತ್ತದೆ.

ಏನಿದು ಬಾಗಿನ :

ಗೌರಿ ಹಬ್ಬದಂದು ವಿಶೇಶವಾಗಿ ಬಾಗಿನ ನೀಡುವ ಸಂಪ್ರದಾಯವಿದೆ. ತವರಿನೊಂದಿಗಿನ ಅವಿನಾಭಾವ ನಂಟು ಹೊಂದಿರುವ ಈ ಹಬ್ಬದಲ್ಲಿ ವಿವಾಹಿತ ಅಥವಾ ಅವಿವಾಹಿತ ಹೆಣ್ಣು ಮಕ್ಕಳಿಗೆ ಗೌರಿ ಹಬ್ಬದಲ್ಲಿ ಹೆತ್ತವರು ಅಥವಾ ಸೋದರ ಸಂಬಂಧಿಗಳು ಉಡುಗೊರೆ ನೀಡಿ ಹಾರೈಸುತ್ತಾರೆ. ಈ ಸ್ವರ್ಣಗೌರಿ ಹಬ್ಬದಲ್ಲಿಬಾಗಿನ ಕೊಡುವುದು ಒಂದು ವಿಶೇಷ. ಮೊರವನ್ನು ಶುಭ್ರಗೊಳಿಸಿ ಅದಕ್ಕೆ ಅರಿಶಿನ, ಕುಂಕುಮ ಹಚ್ಚಿ ಅದರಲ್ಲಿ ಧಾನ್ಯಗಳು, ತೆಂಗಿನಕಾಯಿ, ಬಿಚ್ಚೋಲೆ, ಕನ್ನಡಿ, ಬಳೆಗಳು, 5 ಬಗೆಯ ಹಣ್ಣುಗಳು, ರವಿಕೆ ಕಣ, ಸುಮಂಗಲಿಯರು ಉಪಯೋಗಿಸುವ ವಸ್ತುಗಳನ್ನು ಹಾಕಿ ಮೊರದ ಬಾಗಿನ ಸಿದ್ಧಪಡಿಸಿ ಗೌರಿಯ ಮುಂದಿಡುತ್ತಾರೆ. ಅದನ್ನು ಪೂಜೆಯಲ್ಲಿಪಾಲ್ಗೊಂಡ ಸುಮಂಗಲಿಯರಿಗೆ ನೀಡುತ್ತಾರೆ. ವಿವಾಹಿತ ಮಹಿಳೆಯರು ತನ್ನ ತಾಯಿಗೆ ಮತ್ತು ಅತ್ತಿಗೆಗೆ ಬಾಗಿನ ನೀಡುತ್ತಾರೆ. ಬಾಗಿನದಲ್ಲಿ ಅರಶಿನ, ಕುಂಕುಮ, ಕಪ್ಪುಬಳೆ, ಕರಿಮಣಿ, ಬಾಚಣಿಗೆ, ಕನ್ನಡಿ, ತೆಂಗಿನಕಾಯಿ, ಧಾನ್ಯಗಳು, ಅಕ್ಕಿ, ಗೋಧಿ ಮತ್ತು ಬೆಲ್ಲವನ್ನು ಇಡಲಾಗುತ್ತದೆ. ಶಕ್ತಿ ದೀವಿ ಗೌರಿಯನ್ನು ಶ್ರದ್ದೆ ಮತ್ತು ಭಕ್ತಿಯಿಂದ ಪೂಜಿಸಿದರೆ ನಮ್ಮ ಇಷ್ಟಾರ್ಥಗಳನ್ನು ಪೂರೈಸಿ ಸಂಸಾರದಲ್ಲಿ ಸುಖ, ಶಾಂತಿ ಸಂಮೃದ್ಧಿಯನ್ನು ನೀಡಿ ಕಾಪಾಡುತ್ತಾಳೆ ಎಂಬ ನಂಬಿಕೆ ಇದೆ.

ಪೂರ್ಣಿಮಾ ಪೆರ್ಣಂಕಿಲ

Advertisement

Udayavani is now on Telegram. Click here to join our channel and stay updated with the latest news.

Next