Advertisement

ಯಹೂದಿ ಕತೆ: ಭಿಕ್ಷುಕನಾದ ರಾಜ

07:08 PM Apr 13, 2019 | mahesh |

ಹಗಾಗ್‌ ಎಂಬ ರಾಜನಿದ್ದ. ಐಶ್ವರ್ಯದ ಮದ ಅವನ ತಲೆಗೇರಿತ್ತು. ತನ್ನ ಶಕ್ತಿ, ಸಾಮರ್ಥ್ಯಗಳಿಂದಾಗಿ ತನಗೆ ಈ ಅಧಿಕಾರ ಬಂದಿದೆಯೆಂಬ ಜಂಭ ಅವನಲ್ಲಿತ್ತು. ದಿನವೂ ಬೆಳಗ್ಗೆ ಅವನು ಸಭೆಗೆ ಬಂದು ಸಿಂಹಾಸನದ ಮೇಲೆ ಕುಳಿತುಕೊಳ್ಳುತ್ತಿದ್ದ. ರಾಜ ಪುರೋಹಿತನು ಪವಿತ್ರ ಧರ್ಮ ಗ್ರಂಥದಿಂದ ಒಂದು ಸುಭಾಷಿತವನ್ನು ಓದಿ ಹೇಳಿದ ಬಳಿಕ ಅವನು ಸಭೆಯನ್ನು ಆರಂಭಿಸುತ್ತಿದ್ದ. ಆದರೆ ಒಂದು ದಿನ ಸುಭಾಷಿತವನ್ನು ಕೇಳಿ ರಾಜನು ಕೋಪದಿಂದ ಕೆಂಡವಾಗಿಬಿಟ್ಟ. ಪುರೋಹಿತನು ಗ್ರಂಥದಿಂದ, “ಸಿಂಹಾಸನವು ಶಾಶ್ವತವಲ್ಲ, ಅದು ಭಿಕ್ಷುಕನಿಗೂ ಒಲಿಯಬಹುದು’ ಎಂದು ಓದಿದ ವಾಕ್ಯದಿಂದ ಅವನು ಕೆರಳಿದ್ದ. “”ಏನು ಓದಿದಿರಿ ಪುರೋಹಿತರೇ, ಈ ವಾಕ್ಯವನ್ನು ಯಾರು ಹೇಳಿದರು?” ಎಂದು ಕೇಳಿದ.

Advertisement

ರಾಜನ ಕೋಪ ಕಂಡು ಪುರೋಹಿತನು ಭಯದಿಂದ ನಡುಗಿದ. “”ದೊರೆಯೇ, ಇದು ನನ್ನ ಕಲ್ಪನೆಯ ಮಾತಲ್ಲ, ಈ ಧರ್ಮ ಗ್ರಂಥದ ಪುಟದಲ್ಲಿ ಇಂತಹ ಸಾಲುಗಳು ಬರೆದಿವೆ” ಎಂದು ಹೇಳಿದ. “”ಹೌದೆ? ಆ ಕೆಟ್ಟ ಗ್ರಂಥವನ್ನು ಇಲ್ಲಿ ತನ್ನಿ. ಸಿಂಹಾಸನವು ಎಂದಿಗೂ ಭಿಕ್ಷುಕನಿಗೆ ಒಲಿಯುವುದಿಲ್ಲ. ಇದು ನನ್ನ ಪಾಲಿಗೆ ಶಾಶ್ವತ, ಯಾರೂ ಇದನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ. ಇಂತಹ ಹುಸಿಮಾತು ಈ ಪುಸ್ತಕದಲ್ಲಿ ಇನ್ನು ಮುಂದೆ ಇರಕೂಡದು” ಎಂದು ಹೇಳಿ ಪುರೋಹಿತನ ಕೈಯಿಂದ ಗ್ರಂಥವನ್ನು ತೆಗೆದುಕೊಂಡ. ಅವನು ಓದಿದ ವಾಕ್ಯವನ್ನು ಕತ್ತಿಯ ಮೊನೆಯಿಂದ ಗೀಚಿ ಅಳಿಸಿ ಹಾಕಿದ.

ರಾಜನಿಗೆ ಮೃಗ ಬೇಟೆಯೆಂದರೆ ತುಂಬ ಪ್ರೀತಿ. ಆಗಾಗ ಸೇವಕರನ್ನು ಕೂಡಿಕೊಂಡು ಕಾಡಿಗೆ ಹೋಗುತ್ತಿದ್ದ. ಕಣ್ಣಿಗೆ ಕಂಡ ಮೃಗಗಳನ್ನು ನಿರ್ದಯವಾಗಿ ಕೊಂದು ಮಾಂಸವನ್ನು ಅರಮನೆಗೆ ತರುತ್ತಿದ್ದ. ಅಂದು ಕೂಡ ಅವನು ಕುದುರೆಯೇರಿಕೊಂಡು ಬೇಟೆಯಾಡಲು ಕಾಡಿಗೆ ಹೊರಟ. ಸಂಗಡಿಗರು ತುಂಬ ಮಂದಿ ಜತೆಗೆ ಬಂದರು. ದಟ್ಟ ಕಾಡಿನಲ್ಲಿ ಒಂದು ದೊಡ್ಡ ಜಿಂಕೆಯನ್ನು ರಾಜನು ನೋಡಿದ. ಅದನ್ನು ಕೊಲ್ಲಬೇಕೆಂದು ಬಿಲ್ಲಿಗೆ ಬಾಣ ಹೂಡಿ ಬೆಂಬತ್ತಿ ಹೋದ.

ಆದರೆ ಶರವೇಗದಿಂದ ಓಡುತ್ತಿದ್ದ ಜಿಂಕೆಯು ರಾಜನ ಕೈಗೆ ಸಿಗಲಿಲ್ಲ. ಓಡುತ್ತ ಮುಂದೆ ಹೋಯಿತು. ರಾಜನು ಅದರ ಬೆನ್ನು ಬಿಡಲಿಲ್ಲ. ಜಿಂಕೆ ತುಂಬಿ ಹರಿಯುವ ಒಂದು ನದಿಗೆ ಇಳಿಯಿತು. ರಾಜನು ಕುದುರೆಯಿಂದ ಇಳಿದು ತನ್ನ ಉಡುಪುಗಳು ಒದ್ದೆಯಾಗಬಾರದೆಂದು ಕಳಚಿ ತಲೆಗೆ ಕಟ್ಟಿಕೊಂಡ. ಈಜಿಕೊಂಡು ಮುಂದೆ ಹೋದ. ಜಿಂಕೆ ನದಿಯ ದಡಕ್ಕೆ ಏರಿತು. ರಾಜನೂ ದಡಕ್ಕೆ ಹತ್ತಿದ. ಆಗ ಜಿಂಕೆಯ ಬದಲು ಅದರ ಚರ್ಮವನ್ನು ಉಡುಪಿನಂತೆ ಧರಿಸಿದ್ದ ಒಬ್ಬ ಯುವಕ ಕಾಣಿಸಿದ. ರಾಜನು ಅಚ್ಚರಿಯಿಂದ, “”ಯಾರು ನೀನು?” ಎಂದು ಕೇಳಿದ.

ಯುವಕನು ಮುಗುಳ್ನಕ್ಕು, “”ನಾನು ಯಾರೆಂದು ತಿಳಿಯಲಿಲ್ಲವೆ? ನಿನ್ನ ರಾಜ್ಯದ ಸಿಂಹಾಸನ ಏರಿ ಆಳುವ ಭಾವೀ ದೊರೆ!” ಎಂದು ಹೇಳುತ್ತ ರಾಜನು ತಲೆಯಲ್ಲಿ ಕಟ್ಟಿಕೊಂಡಿದ್ದ ಬಟ್ಟೆಗಳ ಗಂಟನ್ನು ಕಿತ್ತುಕೊಂಡು ತಾನು ಧರಿಸಿದ. ರಾಜನಿಗೆ ಅವನನ್ನು ತಡೆಯಲು ಸಾಧ್ಯವೇ ಆಗಲಿಲ್ಲ. ಮರುಕ್ಷಣವೇ ರಾಜನ ಜೊತೆಗೆ ಬೇಟೆಗೆ ಬಂದಿದ್ದ ಸಂಗಡಿಗರು ಕುದುರೆಯೊಂದಿಗೆ ನದಿ ದಾಟಿಕೊಂಡು ಅಲ್ಲಿಗೆ ಬಂದರು. “”ದೊರೆಗಳೇ, ಜಿಂಕೆ ಸಿಕ್ಕಿತೆ? ಬೇಟೆಯಾಡಿದಿರಾ?” ಎಂದು ಕೇಳಿದರು. ಯುವಕನು ಮುಂದೆ ಬಂದ. “”ಜಿಂಕೆ ತಪ್ಪಿಸಿಕೊಂಡಿತು. ಹೋಗಲಿ, ನಾವು ಈಗ ಶೀಘ್ರವಾಗಿ ಅರಮನೆ ಸೇರಬೇಕು” ಎನ್ನುತ್ತ ಕುದುರೆಯೇರಿಕೊಂಡು ಅವರೊಡನೆ ಸಾಗತೊಡಗಿದ.

Advertisement

ಮೈಯಲ್ಲಿ ಉಡುಪುಗಳಿಲ್ಲದ ರಾಜನು ಇದನ್ನು ಕಂಡು ಕೋಪದಿಂದ, “”ಸೇವಕರೇ, ಆ ಮೋಸಗಾರನೊಂದಿಗೆ ಎಲ್ಲಿಗೆ ಹೋಗುತ್ತಿದ್ದೀರಿ? ನಿಜವಾದ ರಾಜ ನಾನು. ಅವನನ್ನು ಹಿಡಿಯಿರಿ. ನನ್ನ ಉಡುಪುಗಳನ್ನು ತೊಟ್ಟುಕೊಂಡ ಮೋಸಗಾರನನ್ನು ಶಿಕ್ಷಿಸಿ, ಉಡುಪುಗಳನ್ನು ತಂದು ನನಗೆ ಕೊಡಿ” ಎಂದು ಕೂಗಿದ. ಸೇವಕರು ಹಿಂತಿರುಗಿ ಅವನತ್ತ ನೋಡಿ ಜೋರಾಗಿ ನಕ್ಕರು. “”ಪಾಪ, ಅವನಿಗೆ ಮತಿ ಭ್ರಮಣೆಯಾಗಿದೆ ಅನಿಸುತ್ತದೆ, ಹಾಗಾಗಿ ಹೀಗೆ ಕೂಗಿಕೊಳ್ಳುತ್ತಿದ್ದಾನೆ” ಎಂದು ಹೇಳಿಕೊಂಡು ಮುಂದೆ ಹೋಗಿಬಿಟ್ಟರು.

ತನಗೊದಗಿದ ದಯನೀಯ ಸ್ಥಿತಿ ಕಂಡು ರಾಜನಿಗೆ ತಾಳಲಾಗದ ದುಃಖವಾಯಿತು. ಚಿಂದಿ ಬಟ್ಟೆಯಿಂದ ಮೈ ಮುಚ್ಚಿಕೊಂಡ. ನದಿಯಲ್ಲಿ ಈಜುತ್ತ ಹೇಗೋ ದಡ ಸೇರಿದ. ತನ್ನ ಪಟ್ಟಣದೆಡೆಗೆ ಹೋದ. ಆದರೆ ಯಾವ ಪ್ರಜೆಯೂ ಅವನ ಗುರುತು ಹಿಡಿಯಲಿಲ್ಲ. ಆಗ ಅವನೇ, “”ನಾನು ಬಹು ವರ್ಷಗಳಿಂದ ಸಿಂಹಾಸನದ ಮೇಲೆ ಕುಳಿತು ನಿಮ್ಮನ್ನು ಪ್ರೀತಿಯಿಂದ ಪರಿಪಾಲಿಸುತ್ತಿದ್ದ ರಾಜ ಹಗಾಗ್‌. ನನ್ನ ಗುರುತು ಸಿಗಲಿಲ್ಲವೆ?” ಎಂದು ಕೇಳಿದ. ಅವರು ಅವನ ಕಡೆಗೆ ಅನುಕಂಪದಿಂದ ನೋಡಿದರು. “”ಅಯ್ಯೋ ಪಾಪ, ನಿನಗೆ ಹುಚ್ಚು ಹಿಡಿದಿದೆ ಅನಿಸುತ್ತದೆ. ನಮ್ಮ ಮಹಾರಾಜರು ಸುಖವಾಗಿ ಅರಮನೆಯಲ್ಲಿದ್ದಾರೆ. ನೀನೊಬ್ಬ ತಿರುಕ, ಕನಸು ಕಾಣುವುದಕ್ಕೂ ಮಿತಿ ಇರಬೇಕು, ಹೋಗು ಹೋಗು” ಎಂದು ಹೇಳಿ ಓಡಿಸಿಬಿಟ್ಟರು. ಮಕ್ಕಳಂತೂ, “”ಹುಚ್ಚ, ಹುಚ್ಚ!” ಎಂದು ಕೂಗುತ್ತ ಅವನ ಹಿಂದಿನಿಂದ ಓಡಿಬಂದು ಕಲ್ಲುಗಳಿಂದ ಘಾಸಿಗೊಳಿಸಿದರು. ಹಗಾಗ್‌ ಇದೇ ವೇಷದಲ್ಲಿ ಅರಮನೆಯಲ್ಲಿ ಕೆಲಸ ಮಾಡುತ್ತಿದ್ದ ಎಲ್ಲರ ಬಳಿಗೂ ಹೋಗಿ ತಾನು ರಾಜನೆಂಬುದನ್ನು ಮನವರಿಕೆ ಮಾಡಲು ಯತ್ನಿಸಿದ. ಆದರೆ ಪ್ರಯೋಜನವಾಗಲಿಲ್ಲ, ಅವನ ಆಪೆ¤àಷ್ಟರು ಕೂಡ ಅವನು ಹೇಳುವ ಮಾತುಗಳನ್ನು ನಂಬಲೇ ಇಲ್ಲ.

ಹಗಾಗ್‌ ಹಸಿವು ತಾಳಲಾಗದೆ ತುಂಬ ಮನೆಗಳ ಮುಂದೆ ಏನಾದರೂ ಆಹಾರ ಕೊಡುವಂತೆ ಕೇಳಿದ. ಆದರೆ ಯಾರೂ ಅವನಿಗೆ ಏನೂ ಕೊಡಲಿಲ್ಲ. “”ಅಯ್ನಾ, ಭಿಕ್ಷೆ ಬೇಡಲು ನಿನಗೆ ನಾಚಿಕೆ ಯಾಗುವುದಿಲ್ಲವೆ? ಕಣ್ಣು, ಕಾಲಿಲ್ಲದ ಅಂಗವಿಕಲನಲ್ಲ. ಒಳ್ಳೆಯ ಮೈಕಟ್ಟಿರುವ ಆರೋಗ್ಯವಂತ. ನಿನಗೆ ಕೆಲಸ ಬೇಕಿದ್ದರೆ ಕೊಡುತ್ತೇವೆ. ಆದರೆ ಭಿಕ್ಷೆ ಕೊಡುವುದಿಲ್ಲ” ಎಂದು ನಿಷ್ಠುರವಾಗಿ ಹೇಳಿದರು. ಭಿಕ್ಷುಕರು ಕೂಡ ಅವನನ್ನು ಬಳಿಗೆ ಸೇರಿಸಿಕೊಳ್ಳಲಿಲ್ಲ. “”ನೀನು ನಮ್ಮೊಂದಿಗಿದ್ದರೆ ನಮಗೂ ಭಿಕ್ಷೆ ಸಿಗುವುದಿಲ್ಲ, ಬೇರೆಡೆ ಹೋಗಿಬಿಡು” ಎಂದರು. ಹಗಾಗ್‌ ಒಂದೆಡೆ ಅಂಧರಾದ ಭಿಕ್ಷುಕರನ್ನು ನೋಡಿದ. ಅವರ ಬಳಿಗೆ ಬಂದು, “”ಅಣ್ಣಾ, ನನಗೆ ಕಣ್ಣುಗಳಿಲ್ಲ. ನಿಮ್ಮ ಜೊತೆಗೆ ನಾನೂ ಒಬ್ಬನಾಗಿ ಬದುಕಬಹುದೆ?” ಎಂದು ಕೇಳಿದ.

ಅಂಧ ಭಿಕ್ಷುಕರು, “”ಧಾರಾಳವಾಗಿ ಬರಬಹುದು. ಕಣ್ಣುಗಳಿಲ್ಲದ ನಮಗೆ ಜನರೇ ದಿಕ್ಕು. ಜತೆಗೂಡಿ ಭಿಕ್ಷೆ ಬೇಡಿ ಜೀವನ ನಡೆಸಲು ನೀನು ನಮ್ಮೊಂದಿಗೆ ಬಂದರೆ ನಮ್ಮ ಆಕ್ಷೇಪವಿಲ್ಲ” ಎಂದರು. ಹಗಾಗ್‌ ಕುರುಡನಂತೆ ನಟಿಸುತ್ತ ಅವರೊಂದಿಗೆ ಭಿಕ್ಷೆ ಬೇಡಿಕೊಂಡು ಕಾಲ ಕಳೆಯತೊಡಗಿದ.

ಹೀಗಿರುವಾಗ ಒಂದು ದಿನ ರಾಜನ ಅರಮನೆಯಲ್ಲಿ ಬಹು ದೊಡ್ಡ ಸಮಾರಂಭವೊಂದು ನಡೆಯಲಿರುವುದಾಗಿ ಸುದ್ದಿ ಹರಡಿತು. ಆ ದಿನ ಬಡವರಿಗೆ, ಭಿಕ್ಷುಕರಿಗೆ ರಾಜನು ಬಹುಮಾನ ಕೊಡುತ್ತಾನೆ, ಎಲ್ಲರೂ ಹೋಗಬೇಕು ಎಂದು ಡಂಗುರದವರು ಸಾರಿದರು. ಅಂಧ ಭಿಕ್ಷುಕರು ರಾಜ ಹಗಾಗ್‌ನನ್ನು ಕರೆದುಕೊಂಡು ಅಲ್ಲಿಗೆ ಹೋದರು. ರಾಜನು ಎಲ್ಲರನ್ನೂ ಆದರದಿಂದ ಬರಮಾಡಿಕೊಂಡ. ಊಟೋಪಚಾರಗಳಿಂದ ಸಂತೃಪ್ತಿಪಡಿಸಿದ. ಬಳಿಕ ಅರಮನೆಯ ಖಜಾನೆಯಿಂದ ಚಿನ್ನದ ನಾಣ್ಯಗಳನ್ನು ತರಿಸಿ ಬೊಗಸೆ ತುಂಬ ನೀಡಿದ.

ಕಡೆಗೆ ರಾಜನು ಅಂಧ ಭಿಕ್ಷುಕರೊಂದಿಗೆ, “”ನಾನು ಈ ರಾಜ್ಯದ ಸಿಂಹಾಸನದಲ್ಲಿ ನಿಮ್ಮ ಪೈಕಿ ಒಬ್ಬನನ್ನು ಕೂಡಿಸಿ, ಕಿರೀಟವನ್ನು ಅವರ ತಲೆಯ ಮೇಲಿರಿಸಿ ರಾಜ್ಯಭಾರವನ್ನು ಒಪ್ಪಿಸುತ್ತೇನೆ. ಯಾರು ಸಿದ್ಧರಿದ್ದೀರಿ?” ಎಂದು ಕೇಳಿದ. ಒಬ್ಬನೂ ರಾಜ್ಯದ ಹೊಣೆ ಹೊರಲು ಒಪ್ಪಲಿಲ್ಲ. “””ದೊರೆಯೇ, ಭಿಕ್ಷೆ ಬೇಡಿ ತಂದು ಬದುಕುವ ಜೀವನದಲ್ಲಿ ನೆಮ್ಮದಿಯಿದೆ. ರಾಜನಾಗಿ ಸುಖದಿಂದ ಜೀವನ ನಡೆಸುವಾಗ ನಾವು ಅಹಂಕಾರದಿಂದ ಬೀಗಬಹುದು. ಅದು ನಮಗೆ ಇಷ್ಟವಿಲ್ಲ” ಎಂದು ಹೇಳಿದರು.

ಕೊನೆಗೆ ರಾಜನು ಕುರುಡನಂತೆ ನಟಿಸುತ್ತಿದ್ದ ಹಗಾಗ್‌ ಬಳಿಗೆ ಕಿರೀಟವನ್ನು ತೆಗೆದುಕೊಂಡು ಹೋದ. “”ಈ ಕಿರೀಟವನ್ನು ನಿನ್ನ ತಲೆಯ ಮೇಲಿಡಬಹುದೆ? ರಾಜನಾಗಲು ನಿನಗೆ ಇಷ್ಟವಿದೆಯೇ?” ಎಂದು ಕೇಳಿದ. ಹಗಾಗ್‌ ಕೈಗಳಿಂದ ಮುಖ ಮುಚ್ಚಿಕೊಂಡ. “”ಬೇಡ ದೊರೆ, ಈ ಕಿರೀಟವು ನಮ್ಮನ್ನು ಗರ್ವಿಷ್ಟರನ್ನಾಗಿ ಮಾಡುತ್ತದೆ. ಗರ್ವವು ಕಿರೀಟವನ್ನು ಕಳಚಿ ಭಿಕ್ಷುಕನ ಬಳಿಗೆ ತೆಗೆದುಕೊಂಡು ಹೋಗುತ್ತದೆ. ಆದ್ದರಿಂದ ನನಗೆ ರಾಜನಾಗಲು ಇಷ್ಟವಿಲ್ಲ. ಭಿಕ್ಷುಕನಾಗಿಯೇ ಇರುತ್ತೇನೆ” ಎಂದು ಹೇಳಿದ.

ಆಗ ರಾಜನು ತನ್ನ ಉಡುಪುಗಳನ್ನು ಕಳಚಿದ. “”ಧರಿಸಿಕೋ” ಎಂದು ಹಗಾಗ್‌ನಿಗೆ ನೀಡಿದ. “”ನೋಡು, ರಾಜನಾದವನು ಪ್ರಜೆಗಳ ಭಿಕ್ಷೆಯಿಂದ ಬದುಕುತ್ತಿರುವುದನ್ನು ಮರೆಯಬಾರದು. ಸತ್ಯ ಏನೆಂಬುದನ್ನು ತಿಳಿದುಕೊಂಡಿರುವ ನಿನಗೆ ರಾಜನಾಗಲು ನಿಜವಾದ ಅರ್ಹತೆ ಬಂದಿದೆ. ನಿನ್ನನ್ನು ಗುರುತು ಹಿಡಿಯದ ಎಲ್ಲರೂ ಈಗ ಗುರುತಿಸುತ್ತಾರೆ. ರಾಜನಾಗಿ ಅಹಂಕಾರವಿಲ್ಲದೆ ಪ್ರಜೆಗಳ ಸೇವಕನಾಗಿ ರಾಜ್ಯವಾಳು” ಎಂದು ಹೇಳಿದ. ಹಗಾಗ್‌ ಅವನ ಕಾಲುಗಳಿಗೆರಗಿ, “”ನನಗೆ ಬುದ್ಧಿ ಬಂತು. ಇಷ್ಟೆಲ್ಲ ಮಾಡಿದ ತಾವು ಯಾರು?” ಎಂದು ಕೇಳಿದ. ಉತ್ತರ ಬರಲಿಲ್ಲ. ತಲೆಯೆತ್ತಿ ನೋಡಿದಾಗ ಪಾಠ ಕಲಿಸಿದವನು ಅದೃಶ್ಯನಾಗಿದ್ದ.

ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next