Advertisement

“ಪ್ರಕೃತಿ ಮೇಲೆ ಮಾನವನ ಹಸ್ತಕ್ಷೇಪ ನಿಲ್ಲಲಿ

06:00 AM Oct 04, 2018 | |

ಪ್ರಕೃತಿಯ ಮೇಲೆ ಮಾನವನ ಹಸ್ತಕ್ಷೇಪ ಹೆಚ್ಚಿದಂತೆ ಪ್ರಕೃತಿ ವಿಕೋಪಗಳೂ ಹೆಚ್ಚುತ್ತಿವೆ ಎಂಬುದಕ್ಕೆ ರಾಜ್ಯದಲ್ಲಿ ಇದೀಗ ಉದ್ಬಸಿರುವ ಅತಿವೃಷ್ಠಿ,ಅನಾವೃಷ್ಠಿಗಳೇ ಉದಾಹರಣೆ.ರಾಜ್ಯದ 45 ತಾಲೂಕುಗಳು ಪ್ರವಾಹ ಪೀಡಿತ ಎಂದಾದರೆ,89 ತಾಲೂಕುಗಳು ಬರ ಪೀಡಿತ ಎಂದು ಘೋಷಣೆಯಾಗಿವೆ. ಹವಾಮಾನ ವೈಪರೀತ್ಯದಿಂದ ಉಂಟಾಗಿರುವ ಈ ಪರಿಸ್ಥಿತಿ ಮರುಕಳಿಸದಂತೆ ನೋಡಿಕೊಳ್ಳಲು ಸರ್ಕಾರ ಕೂಡಲೇ ಎಚ್ಚೆತ್ತು ಪರಿಸರ ಸಂರಕ್ಷಣೆ ಮತ್ತು ಬೆಳೆ ಪದಟಛಿತಿಯಲ್ಲಿ ಬದಲಾವಣೆಗೆ ಕ್ರಮ ಕೈಗೊಳ್ಳಬೇಕು ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.

Advertisement

ಹವಾಮಾನದಲ್ಲಿ ಇಂಗಾಲಾಮ್ಲ ಏರಿಕೆಯಾಗಿದ್ದರಿಂದ ಉಷ್ಣಾಂಶ ಹೆಚ್ಚುತ್ತದೆ.ಇಂಗಾಲಾಮ್ಲ ಹೆಚ್ಚಲು ಪ್ರಮುಖ ಕಾರಣ ಪೆಟ್ರೋಲ್‌, ಡೀಸೆಲ್‌ ವಾಹನಗಳ ಬಳಕೆಯಲ್ಲಿ ಹೆಚ್ಚಳ. ಹವಾ ನಿಯಂತ್ರಣ ವ್ಯವಸ್ಥೆ, ರೆμÅಜರೇಟರ್‌ಗಳ ಬಳಕೆಯಲ್ಲಿ ಏರಿಕೆ, ನಗರೀಕರಣ, ಬೃಹತ್‌ ಕಟ್ಟಡಗಳು ಒಂದು ರೀತಿಯಲ್ಲಿ ಕಾರಣವಾದರೆ,ಅತಿಯಾದ ನೀರಿನ ಬೇಡಿಕೆ ಇರುವ ಬೆಳೆಗಳನ್ನು ಹೆಚ್ಚಾಗಿ ತೆಗೆಯುತ್ತಿರುವುದು ಕೂಡ ಕಾರಣ.

ಇದಕ್ಕೆ ಮೊದಲ ಪರಿಹಾರ ವಾತಾವರಣದಲ್ಲಿ ಇಂಗಾಲಾಮ್ಲದ ದಟ್ಟಣೆ ತಗ್ಗಿಸುವುದು. ಅದಕ್ಕಾಗಿ ವಾಹನ, ಎಸಿ, ರೆಫ್ರಿಜರೇಟರ್‌ ಬಳಕೆ ಕಡಿಮೆ ಮಾಡಬೇಕು. ಮರಗಳನ್ನು ಹೆಚ್ಚಾಗಿ ಬೆಳೆಸಬೇಕು. ಹೆಚ್ಚು ನೀರಿನ ಬೇಡಿಕೆ ಇರುವ ಬೆಳೆಗಳನ್ನು ಕೈಬಿಟ್ಟು ಕಡಿಮೆ ನೀರು ಬಳಸುವ ಬೆಳೆಗಳಿಗೆ ಆದ್ಯತೆ ನೀಡಬೇಕು.ಆಗ ಇಂಗಾಲಾಮ್ಲದ ದಟ್ಟಣೆ ಕಡಿಮೆಯಾಗಿ ಪರಿಸ್ಥಿತಿ ಸಹಜ ಸ್ಥಿತಿಗೆ ತಲುಪುತ್ತದೆ. ಇದರ ಜತೆಗೆ ಮಣ್ಣಿನ ಫ‌ಲವತ್ತತೆ ಹೆಚ್ಚಿಸುವ ಸಾವಯವ ಕೃಷಿ,ಕಡಿಮೆ ನೀರು ಬೇಕಾಗುವ ಮತ್ತು ಹೆಚ್ಚು ಪೌಷ್ಠಿಕಾಂಶ ಹೊಂದಿರುವ ಸಿರಿಧಾನ್ಯ ಬೆಳೆಯಬೇಕು. ಆಗ ನೀರಿನ ಬಳಕೆ ಕಡಿಮೆಯಾಗುವುದರೊಂದಿಗೆ ವಾತಾವರಣದಲ್ಲಿ ಇಂಗಾಲಾಮ್ಲದ ದಟ್ಟಣೆಯೂ ಇಳಿಮುಖವಾಗುತ್ತದೆ. ಇದರ ಪರಿಣಾಮ ಉಷ್ಣಾಂಶ ಕಡಿಮೆಯಾಗಿ ಮಳೆ ಸರಿಯಾದ ಸಮಯಕ್ಕೆ ಬೀಳುತ್ತದೆ.

ಕೃಷಿ ಚಟುವಟಿಕೆಗಳಿಗೆ ಬೇಕಾಬಿಟ್ಟಿ ನೀರು ಬಳಕೆ ಮಾಡುವುದೇ ಅಂತರ್ಜಲ ಮಟ್ಟದಲ್ಲಿಏರುಪೇರಾಗಲು ಕಾರಣ. ಇದನ್ನು ತಪ್ಪಿಸುವ ಉದ್ದೇಶದಿಂದ ರಾಜ್ಯದಲ್ಲಿ ಭೂವಿಜ್ಞಾನಿಗಳು, ಹವಾಮಾನ ತಜ್ಞರು ಸೇರಿ ಮುಂದಿನ 100 ವರ್ಷದಲ್ಲಿ ಬರಬಹುದಾದ ಮಳೆ ಮತ್ತು ಅದಕ್ಕೆ ತಕ್ಕಂತೆ ಹೇಗೆ ಬೆಳೆ ಬೆಳೆಯಬೇಕು ಎಂಬ ಬಗ್ಗೆ ಜಿಲ್ಲಾವಾರು ಮಾಹಿತಿಯನ್ನೊಳಗೊಂಡ ವರದಿಯನ್ನು ಸರ್ಕಾರಕ್ಕೆ ನೀಡಿದ್ದೇವೆ. ಅದರಂತೆ ಬೆಳೆ ಪದಟಛಿತಿಯಲ್ಲಿ ಬದಲಾವಣೆ ತರಬೇಕು. 
– ಎಂ.ಬಿ.ರಾಜೇಗೌಡ, ಕೃಷಿ ಹವಾಮಾನ ವಿಜ್ಞಾನಿ

ಇದು ಅಭಿವೃದ್ಧಿ ಯುಗ. ಹೀಗಾಗಿ ಅಭಿವೃದ್ಧಿ ಕೆಲಸಗಳನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ಹೀಗಿರುವಾಗ ಅಭಿವೃದ್ಧಿ ಜತೆಗೆ ಭವಿಷ್ಯದಲ್ಲಿ ಇದು ಪ್ರಕೃತಿಯ ಮೇಲೆ ದುಷ್ಪರಿಣಾಮ ಬೀರದಂತೆ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಗಮನ ಹರಿಸುವ ಅಗತ್ಯವಿದೆ. ಹವಾಮಾನ ಬದಲಾವಣೆ ಎಂಬುದು ಜಾಗತಿಕ ವಿದ್ಯಮಾನ. 

Advertisement

ಎಲ್ಲೋ ಪೆಸಿಫಿಕ್‌ ಮಹಾಸಾಗರ, ಹಿಂದೂ ಮಹಾಸಾಗರ ಅಥವಾ ಅರಬ್ಬಿ ಸಮುದ್ರದಲ್ಲಿ ಆಗುವ ಬದಲಾವಣೆಗಳು ರಾಜ್ಯ ಸೇರಿದಂತೆ ದೇಶದ ಹವಾಮಾನ ಏರುಪೇರಿಗೆ ಕಾರಣವಾಗುತ್ತದೆ.

ಈ ಏರುಪೇರುಗಳನ್ನು ಯಾವ ರೀತಿ ತಗ್ಗಿಸಬೇಕು? ಹವಾಮಾನದಲ್ಲಿ ಯಾವ ರೀತಿಯ ಬದಲಾವಣೆಗಳು ಆಗುತ್ತವೆ? ಹೆಚ್ಚು ಮಳೆಯಾದರೆ ಆ ಸಂದರ್ಭದಲ್ಲಿ ಅಪಾಯವಾಗದಂತೆ ಏನೇನು ಮಾಡಬೇಕು? ಮಳೆ ಕಡಿಮೆಯಾದಾಗ ಯಾವ ರೀತಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಬೇಕು? ಲಭ್ಯವಿರುವ ನೀರನ್ನು ಯಾವ ರೀತಿ ಬದಲಿಸಿಕೊಳ್ಳಬೇಕು? ಈ ನಿಟ್ಟಿನಲ್ಲಿ ಬೆಳೆ ಪದ್ಧತಿಯಲ್ಲಿ ಏನೆಲ್ಲಾ ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕು ಎಂಬ ಬಗ್ಗೆ ಗಮನಹರಿಸಬೇಕು. ಆಯಾ ಸಂದರ್ಭಕ್ಕೆ ತಕ್ಕಂತೆ ಬದಲಾವಣೆಗಳನ್ನು ಮಾಡಿಕೊಳ್ಳಬೇಕು.
– ಡಾ.ಜಿ.ಎಸ್‌.ಶ್ರೀನಿವಾಸ ರೆಡ್ಡಿ,
ಹವಾಮಾನ ತಜ್ಞ

ಕೇರಳ, ಕೊಡಗು ಸೇರಿದಂತೆ ಮಲೆನಾಡಿನಲ್ಲಿ ಉಂಟಾದ ಪ್ರವಾಹಕ್ಕೆ ಪ್ರಮುಖ ಕಾರಣ ಆ ಭಾಗದಲ್ಲಿ ಅರಣ್ಯ ನಾಶವಾಗಿರುವುದು. ಸಮೀಕ್ಷೆ ಪ್ರಕಾರ ಆ ಭಾಗದಲ್ಲಿ ಶೇ. 25ರಿಂದ 29ರಷ್ಟು ಅರಣ್ಯ ನಾಶವಾಗಿದೆ ಅಥವಾ ಮಾನವನ ಹಸ್ತಕ್ಷೇಪಕ್ಕೆ ಒಳಗಾಗಿದೆ. ಇದರ ಪರಿಣಾಮ ಮಳೆ ಬಂದಾಗ ಇಂತಹ ಪ್ರದೇಶದಲ್ಲಿ ಪ್ರವಾಹ ಉಂಟಾಗುತ್ತದೆ. ಸಾಮಾನ್ಯವಾಗಿ ಮಲೆನಾಡಿನಲ್ಲಿ ವರ್ಷದ 12 ತಿಂಗಳೂ ನೀರು ಲಭ್ಯವಿರಬೇಕು.

ಆದರೆ, ಮಾನವನ ಹಸ್ತಕ್ಷೇಪಕ್ಕೆ ಒಳಗಾದ ಪ್ರದೇಶದಲ್ಲಿ 6ರಿಂದ 8 ತಿಂಗಳು ಮಾತ್ರ ನೀರು ಸಿಗುತ್ತದೆ. ಅತಿ ಹೆಚ್ಚು ಅರಣ್ಯ ನಾಶವಾದ ಪ್ರದೇಶಗಳಲ್ಲಿ ನಾಲ್ಕು ತಿಂಗಳು ಮಾತ್ರ ನೀರು ಲಭ್ಯವಾಗುತ್ತದೆ. ಅಷ್ಟೇ ಅಲ್ಲ, ಮಳೆ ಬಂದಾಗ ಈ ನೀರು ಪ್ರವಾಹ ರೂಪದಲ್ಲಿ ಹರಿಯುತ್ತದೆಯೇ ಹೊರತು ಭೂಮಿಗೆ ಇಂಗುವುದಿಲ್ಲ. 

ಇದು ಮಲೆನಾಡಿನ ಸಮಸ್ಯೆಯಾದರೆ ಬಯಲು ಸೀಮೆ ಭಾಗಗಳಲ್ಲಿ ಮಳೆ ನೀರು ಸಂಗ್ರಹವಾಗುವ ಕೆರೆ, ಕುಂಟೆಗಳು ಒತ್ತುವರಿ ಅಥವಾ ಹೂಳಿನಿಂದ ತುಂಬಿ ನೀರು ಸಂಗ್ರಹಣಾ ಸಾಮರ್ಥ್ಯ ಕಳೆದುಕೊಂಡಿವೆ. ಇದರ ಪರಿಣಾಮ ಮಳೆ ಬಂದಾಗ ನೀರು ಹರಿದುಹೋಗುತ್ತದೆಯೇ ಹೊರತು ಸಂಗ್ರಹವಾಗುವುದಿಲ್ಲ. ಇದರಿಂದ ಅಂತರ್ಜಲ ಬಳಕೆ ಅನಿವಾರ್ಯವಾಗಿದೆ.ಮತ್ತೂಂದೆಡೆ ನೀರು ಇಂಗದ ಕಾರಣ ಅಂತರ್ಜಲ ಮಟ್ಟದಲ್ಲಿ ಏರುಪೇರಾಗುತ್ತಿದೆ. ಇನ್ನೊಂದೆಡೆ ಮಳೆ ಪ್ರಮಾಣಕ್ಕಿಂತ ಮಳೆ ಬೀಳುವ ಅವಧಿ ಕಡಿಮೆಯಾಗಿರುವುದು ಇಂದಿನ ಬರ ಪರಿಸ್ಥಿತಿಗೆ ಪ್ರಮುಖ ಕಾರಣ. ಹಿಂದೆಲ್ಲಾ ವಾರಗಟ್ಟಲೆ ಮಳೆ ಬರುತ್ತಿತ್ತು. 

ಆಗ ಸಹಜವಾಗಿಯೇ ನೀರು ಮಣ್ಣಿನಲ್ಲಿ ಇಂಗುತ್ತಿತ್ತು.ಆದರೆ, ಕಡಿಮೆ ಅವಧಿಯಲ್ಲಿ ಹೆಚ್ಚು ಮಳೆ ಬೀಳುವುದರಿಂದ ನೀರು ಇಂಗಲು ಅವಕಾಶವಾಗದೆ ಹರಿದು ಹೋಗಿ ಸಮುದ್ರ ಸೇರುತ್ತದೆ.ಅದರ ಬದಲು ನೀರು ಇಂಗಲು ಅನುಕೂಲ ವಾಗುವಂತೆ ಕೆರೆ, ಕುಂಟೆಗಳ ಹೂಳೆತ್ತಬೇಕು. ಜಲಾನಯನ ಕ್ಷೇತ್ರಗಳ ಸಂರಕ್ಷಣೆಗೆ ಗಮನಹರಿಸಬೇಕು. ಇದರಿಂದ ವಾತಾವರಣ ಸಹಜ ಸ್ಥಿತಿಗೆ ಮರಳುತ್ತದೆ. ವಾತಾವರಣ ಸಹಜ ಸ್ಥಿತಿಗೆ ತಲುಪಿದರೆ ಮಳೆ ಪ್ರಮಾಣ ಮತ್ತು ಬೀಳುವ ಅವಧಿ ಹೆಚ್ಚಾಗಿ ಪ್ರವಾಹ ಮತ್ತು ಬರ ಎರಡೂ ಸಮಸ್ಯೆಗಳು ಬಗೆಹರಿಯುತ್ತವೆ.
– ಟಿ.ವಿ.ರಾಮಚಂದ್ರ, ಐಐಎಸ್‌ಸಿ ವಿಜ್ಞಾನಿ

– ಪ್ರದೀಪ್‌ಕುಮಾರ್‌ ಎಂ.

Advertisement

Udayavani is now on Telegram. Click here to join our channel and stay updated with the latest news.

Next