Advertisement
ಕಾಡಿನಲ್ಲಿ ನನಗೊಂದು ಅಚ್ಚರಿ ಕಾದಿತ್ತು. ರಾಮನಿಗೆ ನಾಡಿನಲ್ಲಿ ಗೌರವವಾಯಿತಲ್ಲ; ಕಾಡಿಗೆ ಹೋದರೂ ಅದೇ ಗೌರವ-ಪ್ರೀತಿ. ಅರೆ ಹೇಗೆ ಸಾಧ್ಯ? ಈ ಕಾಡಜನರು ರಾಮನಿಗೆ ಹೇಗೆ, ಯಾವಾಗ ಪರಿಚಯವಾದರು? ಬೇಡಜನಾಂಗ, ಆದಿವಾಸಿ ಪಂಗಡಗಳು ಬಂದು ರಾಮನನ್ನು ಮುತ್ತಿಕೊಳ್ಳುತ್ತಿದ್ದರು. ರಾಮ ಎಲ್ಲರನ್ನೂ ಪ್ರೀತಿಯಿಂದ ಮಾತಾಡಿಸುತ್ತಿದ್ದ. ರಾಮನ ಪ್ರಭಾವಳಿ ನನ್ನನ್ನೂ ಬೆಳಗಿಸಿತ್ತು. ಗೌರವ ನನಗೂ ವರ್ಗಾವಣೆಯಾಗಿತ್ತು. ಹೂವಿನಿಂದಾಗಿ ನಾರೂ ಮುಡಿಗೆ.
Related Articles
Advertisement
ಓಹ್, ಎಲ್ಲಿಂದ ಎಲ್ಲಿಗೋ ಹೋಗಿಬಿಟ್ಟೆ. ಎಲ್ಲಿದ್ದೆ ನಾನು? ಗುಹನ ವಿಚಾರ ಹೇಳುತ್ತಿದ್ದೆನಲ್ಲವಾ, ಕೇಳಿ: ಮುಂದಿನ ವನವಾಸದಲ್ಲಿ ನಮಗೆ ಅನುಕೂಲವಾಗಲೆಂದು ರಾಮನ ವಿರೋಧದ ನಡುವೆಯೂ ಕೆಲ ಪಾತ್ರೆಗಳು, ಚಾಪೆ- ಹೊದಿಕೆಗಳನ್ನು ಗುಹ ಕೊಟ್ಟ. ನಿನ್ನ ಮುಖ ನೋಡಿಕೊಂಡು ಕೊಡುತ್ತಿಲ್ಲ, ಅತ್ತಿಗೆಯ ಮುಖ ನೋಡಿಕೊಂಡು ಕೊಡುತ್ತಿದ್ದೇನೆ ಎಂದು ರಾಮನಿಗೆ ಪ್ರೀತಿಯಿಂದ ತಿವಿದಿದ್ದ (ಈ ಅತ್ತಿಗೆ ಕಾಡಿನಲ್ಲಿ ಅಡುಗೆ, ತಿಂಡಿ ಅಂತ ಕಷ್ಟಪಡುವುದು ಅಷ್ಟರಲ್ಲೇ ಇದೆಯೆಂದು ಪಾಪ ಅವನಿಗೇನು ಗೊತ್ತು?) ಗಂಗೆಯನ್ನು ದಾಟಿಸಿ ಬೀಳ್ಕೊಟ್ಟ. ರಾಮಲಕ್ಷ್ಮಣರು ಗಂಗೆಗೆ ನಮಸ್ಕರಿಸಿದರು. ಪಾವನ ಗಂಗೆ, ಆಶೀರ್ವದಿಸು ತಾಯಿ, ವನವಾಸ ಮುಗಿಸಿ ಸಾಧ್ಯವಾದರೆ ಮತ್ತೆ ಇದೇ ದಾರಿಯಲ್ಲಿ ಬರುತ್ತೇವೆ ಎಂದು ಹೇಳಿ ನಾನೂ ನಮಿಸಿದೆ.
ಹೆಜ್ಜೆಗಳು ಮುಂದೆ ಮುಂದೆ, ಮನಸ್ಸು ಹಿಂದೆ ಹಿಂದೆ. ಈ ಕಾಡುಜನರ ಅವ್ಯಾಜ ಪ್ರೀತಿ, ಮುಗ್ಧತೆಯ ಬಗ್ಗೆಯೇ ಮನಸ್ಸು ಆಲೋಚಿಸತೊಡಗಿತು. ಚಿನ್ನದರಮನೆ ಕಟ್ಟಿಸಿಕೊಡುತ್ತೇನೆಂದರೂ ಈ ಕಾಡಿನ ಜನ ನಾಡಿಗೆ ಬರಲು ಸಿದ್ಧರಿಲ್ಲ. ಅವರಿಗೆ ಸಿದ್ಧಿ, ಪ್ರಸಿದ್ಧಿ (ಸಿಕ್ಕಿದರೆ) ಎಲ್ಲ ಈ ನೆಲದಲ್ಲೇ. ಅವರನ್ನು ಹಿಡಿದಿಟ್ಟ ನೆಲದ ಶಕ್ತಿ ಯಾವುದು, ಮಣ್ಣಿನ ಋಣವನ್ನು ಎಷ್ಟು ಎತ್ತರದಲ್ಲಿ ಭಾವಿಸಿದ್ದರವರು?! ಇವರೆಲ್ಲ ಜನಪದೀಯ ಸಂಸ್ಕೃತಿಯ ಹರಿಕಾರರೆನಿಸಿತು.
“ನೆಲದ ಋಣ, ಸಂಸ್ಕೃತಿ, ಮಣ್ಣಿನ ವಾಸನೆ’ ಎಂದು ಹೇಳಿದಾಗಲೆಲ್ಲ ನನ್ನವರು ನನ್ನನ್ನು ತಮಾಷೆ ಮಾಡುತ್ತಿದ್ದರು. “ನೀನು ಮಣ್ಣಿನ ಮಗಳಲ್ಲವೇ, ಅದಕ್ಕೇ ಮಣ್ಣೆಂದರೆ ಭಾವುಕಳಾಗ್ತಿಯ’ ಎನ್ನುತ್ತಿದ್ದರು. ನೀವೂ ಏನೂ ಕಮ್ಮಿಯಿಲ್ಲ ಬಿಡಿ, “ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ ಎಂಬ ನುಡಿಗಟ್ಟನ್ನು ಜಗತ್ತಿಗೆ ಕೊಟ್ಟವರು ನೀವೇ ಅಲ್ವಾ ಎಂದು ಅವರ ಮಾತನ್ನು ಅವರಿಗೇ ತಿರುಗಿಸಿದ್ದೆ.
ಅದಿರಲಿ, ಈ ಕಾಡು ನನ್ನನ್ನು ಇನ್ನೊಂದು ಆಲೋಚನೆಗೆ ಹಚ್ಚಿತು… (ಮುಂದುವರಿಯುತ್ತದೆ) ಸಿ.ಎ. ಭಾಸ್ಕರ ಭಟ್ಟ