Advertisement

ವಿರೋಧಿಗಳಿಂದ ಬೇಕಾಬಿಟ್ಟಿ ಹೇಳಿಕೆ

10:21 AM Jun 02, 2022 | Team Udayavani |

ಹುಬ್ಬಳ್ಳಿ: ನಾಲ್ಕು ದಶಕದ ರಾಜಕೀಯ ಇತಿಹಾಸದಲ್ಲಿ ಶಿಕ್ಷಕರಿಗೆ ನೀಡಿದ ಭರವಸೆ ಹಾಗೂ ಪ್ರಮಾಣವನ್ನು ಎಂದಿಗೂ ಮುರಿದಿಲ್ಲ. ಶಿಕ್ಷಕರು ಯಾವುದೇ ಸಮಸ್ಯೆ ಹೊತ್ತು ತಂದರೂ ಅಂದೇ ಸಂಬಂಧಿಸಿದವರಿಗೆ ಮಾತನಾಡಿ ಬಗೆಹರಿಸುವ ಕೆಲಸ ಮಾಡಿದ್ದೇನೆ. ನನ್ನ ಬಗ್ಗೆ ಮಾತನಾಡಲು ಯಾವುದೇ ವಿಚಾರಗಳು ಇಲ್ಲ. ಹೀಗಾಗಿ ವಿರೋಧ ಪಕ್ಷದ ಅಭ್ಯರ್ಥಿಗಳು ಬೇಕಾಬಿಟ್ಟಿಯಾಗಿ ಮಾತನಾಡುತ್ತಿದ್ದಾರೆ ಎಂದು ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಹೇಳಿದರು.

Advertisement

ಬುಧವಾರ ಇಲ್ಲಿನ ಕುಸುಗಲ್ಲ ರಸ್ತೆಯ ಶ್ರೀನಿವಾಸ ಗಾರ್ಡನ್‌ನಲ್ಲಿ ಬಿಜೆಪಿ ಮಹಾನಗರ ಜಿಲ್ಲೆ ಹಾಗೂ ಗ್ರಾಮಾಂತರ ಜಿಲ್ಲೆ ವತಿಯಿಂದ ಏರ್ಪಡಿಸಿದ್ದ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಲು ಸಂಘಟನೆ ಸೂಚಿಸಿದಾಗ ಇನ್ನೂ 31 ವರ್ಷ ಸೇವಾವಧಿಯಿತ್ತು. ಶಿಕ್ಷಕರ ಸಮಸ್ಯೆಗಳ ವಿರುದ್ಧ ಹೋರಾಡಲು ರಾಜೀನಾಮೆ ನೀಡಿ ಸ್ಪರ್ಧೆ ಮಾಡಿದೆ. ಮೊದಲ ಬಾರಿಗೆ ಗೆಲುವು ಸಾ ಧಿಸಿದಾಗ ಮಾಡಿದ ಪ್ರಮಾಣ ಇಂದಿಗೂ ಉಳಿಸಿಕೊಂಡು ಬಂದಿದ್ದೇನೆ. ಶಿಕ್ಷಕರ ನಂಬಿಗಸ್ಥ ಸೇವಕನಾಗಿದ್ದರಿಂದ ಏಳು ಬಾರಿ ಗೆದ್ದಿದ್ದೇನೆ. ಸಚಿವನಾದ ನಂತರ ಶಿಕ್ಷಕರ ವರ್ಗಾವಣೆಯಲ್ಲಿ ಆಗುತ್ತಿದ್ದ ದೊಡ್ಡ ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದಿತು. ಹಣ ಒಂದೆಡೆಯಾದರೆ ಮಹಿಳಾ ಶಿಕ್ಷಕರ ವರ್ಗಾವಣೆ ಅದು ಅನುಭವಿಸುತ್ತಿದ್ದ ನರಕಯಾತನೆಗೆ ಪೂರ್ಣ ವಿರಾಮ ನೀಡುವ ಕೆಲಸ ಮಾಡಿದೆ ಎಂದರು.

ವರ್ಗಾವಣೆ ಬಿಲ್‌ನ್ನು ನಮ್ಮವರೇ ಎರಡು ಬಾರಿ ಫೇಲ್‌ ಮಾಡಿದರು. ಎಲ್ಲರ ಮನೆಗೂ ಹೋಗಿ ಶಿಕ್ಷಕರು ಅನುಭವಿಸುತ್ತಿರುವ ಸಂಕಷ್ಟ ಮನವರಿಕೆ ಮಾಡಿದ ನಂತರ ಪಾಸ್‌ ಮಾಡಿದರು. ಈ ಮಾದರಿ ನೀತಿಯನ್ನು ಬೇರೆ ರಾಜ್ಯದಲ್ಲಿ ಅಳವಡಿಸಿಕೊಂಡಿದ್ದಾರೆ. ನನ್ನ ಬಗ್ಗೆ ಹೇಳಲು ವಿರೋಧ ಪಕ್ಷದವರಿಗೆ ಬೇರೆ ವಿಚಾರಗಳಿಲ್ಲ. ಹೀಗಾಗಿ ಬೇಕಾಬಿಟ್ಟಿಯಾಗಿ ಮಾತನಾಡುತ್ತಿದ್ದಾರೆ. ಯಾವ ಪಕ್ಷದಲ್ಲಿದ್ದರೂ ಆ ಪಕ್ಷದ ತತ್ವ ಸಿದ್ಧಾಂತಗಳನ್ನು ಬಿಟ್ಟು ನಡೆದುಕೊಳ್ಳುವುದಿಲ್ಲ. ಶಿಕ್ಷಕರಿಗೆ ನೋವಾದರೆ, ಸಮಸ್ಯೆಯಾದರೆ ಪಕ್ಷ ಬಿಟ್ಟು ಹೋಗಲು ಸಿದ್ಧ. ನನ್ನ ಸ್ಥಾನ ಮಾನಗಳು ಶಿಕ್ಷಕರಿಗೆ ಅರ್ಪಣೆ ಮಾಡಿದ್ದೇನೆ ಎಂದರು.

ನಾಲ್ಕು ಜಿಲ್ಲೆಯಲ್ಲಿ ಶಿಕ್ಷಕರ ಸಂಘಟನೆಯವರು, ಪಕ್ಷದ ಕಾರ್ಯಕರ್ತರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಒಮ್ಮೆ ಬಿಟ್ಟರೆ ಇಲ್ಲಿಯವರೆಗೆ ಕಾಂಗ್ರೆಸ್‌ ಗೆಲುವು ಸಾ ಧಿಸಿಲ್ಲ. ಏಳು ಬಾರಿ ಆಯ್ಕೆ ಹೆದರಿಕೆ, ಬೆದರಿಕೆಯಿಂದ ಗೆಲ್ಲಲಿಲ್ಲ. ಹಾಗೆ ಶಿಕ್ಷಕರಿಗೆ ಮೋಸ ಒಂದೆರಡು ಬಾರಿ ಮಾಡಬಹುದಿತ್ತು. ಇಲ್ಲಿಯವರೆಗೂ ಗೆಲ್ಲಿಸಿಕೊಂಡ ಬಂದ ಶಿಕ್ಷಕರ ಮತಗಳು ಹಾಗೂ ಬಿಜೆಪಿಯ ಮತಗಳು ಸೇರಿದರೆ ಶೇ. 80 ಮತಗಳು ನನಗೆ ಬರಲಿವೆ ಎನ್ನುವ ವಿಶ್ವಾಸವಿದೆ ಎಂದರು.

Advertisement

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಮಾತನಾಡಿದರು. ಮಾಜಿ ಶಾಸಕ ಅಶೋಕ ಕಾಟವೆ, ಮುಖಂಡರಾದ ಬಸವರಾಜ ಕುಂದಗೋಳಮಠ, ಸಂಜಯ ಕಪಟಕರ, ನಾಗೇಶ ಕಲಬುರ್ಗಿ, ಉಮಾ ಮುಕುಂದ, ತಿಪ್ಪಣ್ಣ ಮಜ್ಜಗಿ, ಸಂತೋಷ ಚವ್ಹಾಣ, ಪ್ರಭು ನವಲಗುಂದಮಠ, ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿ.ಆರ್‌.ಭಟ್ಟ, ಶ್ಯಾಮ ಮಲ್ಲನಗೌಡರ ಇನ್ನಿತರರಿದ್ದರು.

ಹೋರಾಟದಿಂದ ಬಂದ ಹೊರಟ್ಟಿ ಗೆಲುವು ನಿಶ್ಚಿತ:  ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಮಾತನಾಡಿ, ಸಂಘಟಿತವಾದ ಚುನಾವಣೆಯನ್ನು ಪಕ್ಷ ಮಾಡುತ್ತಿದೆ. ಹೋರಾಟದಿಂದ ಬಂದಿರುವ ಹೊರಟ್ಟಿ ಅವರ ಗೆಲುವು ನಿಶ್ಚಿತವಾಗಿದೆ. ಗೆಲುವು ಅವರ ಪರವಾಗಿದೆ. ಅವರ ಮತಗಳು ಹಾಗೂ ಬಿಜೆಪಿಯ ಮತಗಳು ಒಂದೆಡೆಯಾಗಿವೆ. ಹೀಗಾಗಿ ಅವರ ಗೆಲುವು ನೂರಕ್ಕೆ ನೂರರಷ್ಟು ನಿಶ್ಚಿತ. ಆದರೆ ಶೇ.80 ಮೊದಲ ಪ್ರಾಶಸ್ತ್ಯ ಮತಗಳು ಇವರ ಪರವಾಗಿ ಬರಬೇಕು. ದೊಡ್ಡ ಅಂತರದ ಗೆಲುವಿಗೆ ಶ್ರಮಿಸಬೇಕು. ಶಿಕ್ಷಕರ ಸಮಸ್ಯೆಗೆ ಡಬಲ್‌ ಇಂಜಿನ್‌ ಸರಕಾರ ಸ್ಪಂದಿಸಲಿದೆ. ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಪಕ್ಷದ ನಮ್ಮದು ಎಂದರು.

ಶಿಕ್ಷಕ ಸಮುದಾಯಕ್ಕೆ ಒಳಿತು ಮಾಡಿದ ನಾಯಕ:  ವಿಧಾನ ಪರಿಷತ್ತು ಸದಸ್ಯ ಎಸ್‌.ವಿ.ಸಂಕನೂರು ಮಾತನಾಡಿ, ಹೊರಟ್ಟಿ ಅವರು ನಿರಂತರವಾಗಿ ಶಿಕ್ಷಕರ ಪರವಾಗಿ ಹೋರಾಟ ಮಾಡಿಕೊಂಡು ಬಂದವರು. ಹಲವು ಜ್ವಲಂತ ಸಮಸ್ಯೆಗಳ ವಿರುದ್ಧ ಹೋರಾಡಿ ಶಿಕ್ಷಕ ಸಮುದಾಯಕ್ಕೆ ಒಳಿತು ಮಾಡಿದ್ದಾರೆ. ಶಿಕ್ಷಣ ಸಚಿವರಾಗಿ ಹಲವು ಸುಧಾರಣೆಗಳನ್ನು ಶಿಕ್ಷಕರು ಮರೆಯುವಂತಿಲ್ಲ. ಅವರು ಇರದಿದ್ದರೆ ಕಾನೂನು ವಿವಿ ಇಲ್ಲಿಗೆ ಬರುತ್ತಿರಲಿಲ್ಲ. ಕಾಂಗ್ರೆಸ್‌ ಅಭ್ಯರ್ಥಿ ಪ್ರಾಥಮಿಕ ಶಾಲಾ ಶಿಕ್ಷಕರ ಪರವಾಗಿ ಹೋರಾಟ ಮಾಡಿದ್ದಾರೆ. ಉಳಿದವರಿಗೆ ಅವರ ಕೊಡುಗೆ ಏನು. ಇನ್ನೂ ಈ ಭಾಗದಲ್ಲಿ ಹೆಸರು ಇಲ್ಲದ ಜೆಡಿಎಸ್‌ ಅಭ್ಯರ್ಥಿಯ ಹೋರಾಟವೇನು ಎಂದು ಶಿಕ್ಷಕರು ಪ್ರಶ್ನಿಸಬೇಕೆಂದರು.

ಇತಿಹಾಸ ಸೃಷ್ಟಿಸುವ ಅವಕಾಶ: ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ಹೊಸ ಇತಿಹಾಸ ಸೃಷ್ಟಿಸುವ ಅವಕಾಶ ಶಿಕ್ಷಕರಿಗೆ ದೊರೆತಿದೆ. ಹೊರಟ್ಟಿಯವರ ಆಗಮನದಿಂದ ಮೊದಲ ಬಾರಿಗೆ ಈ ಕ್ಷೇತ್ರ ಬಿಜೆಪಿಗೆ ಒಲಿಯುತ್ತಿದೆ. ಇನ್ನೂ ಪಕ್ಷದಿಂದಲೇ ಇತಿಹಾಸ ಸೃಷ್ಟಿಸುತ್ತಿದ್ದಾರೆ. ದೊರೆತ ಅಲ್ಪಾವಧಿಯಲ್ಲಿ ವಹಿಸಿಕೊಂಡ ಇಲಾಖೆಗಳಲ್ಲಿ ದೊಡ್ಡ ಬದಲಾವಣೆ ತಂದಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಯಾರೂ ಮಾಡದ ಕೆಲಸಗಳನ್ನು ಮಾಡಿದ್ದಾರೆ. ಪ್ರಮುಖವಾಗಿ ಇಲಾಖೆ ಹಾಗೂ ಶಿಕ್ಷಕರ ಪ್ರಗತಿಗೆ ಹಲವು ಸುಧಾರಣೆಗಳನ್ನು ತಂದಿದ್ದಾರೆ ಎಂದರು.

ಎಂಟನೇ ಗೆಲುವು ಖಚಿತ: ಜಿಲ್ಲಾ ಉಸ್ತುವಾರಿ ಸಚಿವ ಆಚಾರ ಹಾಲಪ್ಪ  ಶಿಕ್ಷಕರ ನಾಯಕರಾಗಿ ಆಯ್ಕೆಯಾಗುವುದರಲ್ಲಿ ಎರಡು ಮಾತಿಲ್ಲ. ಸುದೀರ್ಘ‌ ರಾಜಕಾರಣದಲ್ಲಿ ಮತದಾರರ ಮನಸ್ಸು ಗೆಲ್ಲುವುದು ಸುಲಭವಲ್ಲ. ಪ್ರಾಮಾಣಿಕ ಸೇವೆ ಇದ್ದರೆ ಮಾತ್ರ ಇದು ಸಾಧ್ಯ. ತಮ್ಮ ಸಂಘಟನೆ ಮೂಲಕ ಚುನಾವಣೆ ಎದುರಿಸಿದವರು ಈ ಚುನಾವಣೆಯಲ್ಲಿ ಬಿಜೆಪಿಯ ಶಕ್ತಿ ಅವರೊಂದಿಗೆ ಕೈ ಜೋಡಿಸಿದೆ. ಇತರೆ ಅಭ್ಯರ್ಥಿಗಳ ಬಗ್ಗೆ ಚರ್ಚೆ ಮಾಡುವುದು ವ್ಯರ್ಥ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next