Advertisement

ಭಾಗ್ಯಗಳ ಹೆಸರಲ್ಲಿ ರಾಜ್ಯ ಲೂಟಿ

04:40 PM Apr 30, 2018 | Team Udayavani |

ಸಿಂಧನೂರು: ರಾಜ್ಯದಲ್ಲಿ ಐದು ವರ್ಷ ಆಡಳಿತ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಹಲವು ಭಾಗ್ಯಗಳ ಯೋಜನೆ ಹೆಸರಲ್ಲಿ ರಾಜ್ಯವನ್ನು ಕೊಳ್ಳೆ ಹೊಡೆದಿದೆ. ಇದುವೇ ಅದರ ಸಾಧನೆಯಾಗಿದೆ. ಇಂತಹ ಭ್ರಷ್ಟ ಸರ್ಕಾರ ಕಿತ್ತೂಗೆಯಲು ಬಿಜೆಪಿಗೆ ಮತ ನೀಡಬೇಕು ಎಂದು ಬಳ್ಳಾರಿ ಸಂಸದ ಬಿ. ಶ್ರೀರಾಮುಲು ಹೇಳಿದರು.

Advertisement

ನಾಯಕ ಸಮುದಾಯ ಪ್ರಾಬಲ್ಯವಿರುವ ಸಿಂಧನೂರು ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಹಾಗೂ ಸಿಂಧನೂರು ನಗರದಲ್ಲಿ ರೋಡ್‌ ಶೋ ನಡೆಸಿ ಬಿಜೆಪಿ ಅಭ್ಯರ್ಥಿ ಕೊಲ್ಲಾ ಶೇಷಗಿರಿರಾವ್‌ ಪರ ಮತಯಾಚಿಸಿ ಅವರು ಮಾತನಾಡಿದರು. ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ತುಂಗಭದ್ರಾ ಎಡದಂಡೆ ಕಾಲುವೆಗಳ ಆಧುನೀಕರಣಕ್ಕೆ ವಿಶೇಷ ಅನುದಾನ ನೀಡಿ ರೈತರ ಹಿತ ಕಾಪಾಡಿದರು. ಆದರೆ ಸಿದ್ದರಾಮಯ್ಯ ಸರ್ಕಾರ ಸಂಪೂರ್ಣ ದುರಾಡಳಿತ ನಡೆಸಿ, ಯಾವುದೆ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸದೆ ರಾಜ್ಯದ ಜನತೆಗೆ ಮೋಸ ಮಾಡಿದೆ. ತುಂಗಭದ್ರಾ ಜಲಾಶಯದಲ್ಲಿ ಸಮರ್ಪಕ ನೀರಿದ್ದರೂ ಸಹ ಎಡದಂಡೆ
ನಾಲೆಗಳಿಗೆ ನೀರು ಹರಿಸದೆ ರೈತರು ಕಣ್ಣೀರು ಹಾಕುವ ಸ್ಥಿತಿ ತಂದಿಟ್ಟಿದೆ. ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆಲ್ಲಾ ಕಾಂಗ್ರೆಸ್‌ ಸರ್ಕಾರವೇ ಹೊಣೆ ಎಂದು ಶ್ರೀರಾಮುಲು ಆರೋಪಿಸಿದರು.

ತಾವು ಈ ಬಾರಿ ಮೊಳಕಾಲ್ಮೂರು ಹಾಗೂ ಬಾದಾಮಿ ಕ್ಷೇತ್ರಗಳಿಂದ ಸ್ಪರ್ಧಿಸಿದ್ದು, ಎರಡು ಕ್ಷೇತ್ರಗಳಲ್ಲಿ ಮತದಾರರು
ತಮ್ಮನ್ನು ಗೆಲ್ಲಿಸುತ್ತಾರೆ. ಬನಶಂಕರಿದೇವಿ ತಮಗೆ ಆಶೀರ್ವದಿಸುತ್ತಾಳೆ. ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬಾದಾಮಿಯಲ್ಲಿ ತೀವ್ರ ಮುಖಭಂಗವಾಗಲಿದೆ ಎಂದರು. ಸಿಂಧನೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೊಲ್ಲಾ ಶೇಷಗಿರಿರಾವ್‌ ಉತ್ತಮ ಅಭ್ಯರ್ಥಿಯಾಗಿದ್ದು. ಜನಪರ ಕಾಳಜಿ ಅಭಿವೃದ್ಧಿ ಪರ ಚಿಂತನೆಗಳನ್ನು ಹೊಂದಿದ್ದಾರೆ. ಅವರಿಗೆ ಕ್ಷೇತ್ರದ ಮತದಾರರು ಆಶೀರ್ವದಿಸಬೇಕು ಎಂದು
ಕೋರಿದರು.

ಪ್ರಚಾರ: ಸಿಂಧನೂರು ತಾಲೂಕಿನ ಯಾಪಲಪರ್ವಿ, ವಲ್ಕಂದಿನ್ನಿ, ಧುಮತಿ, ರಾಗಲಪರ್ವಿ, ಪುಲಮೇರಶ್ವರದಿನ್ನಿ, ಚಿತ್ರಾಲಿ, ಚಿಂತಮಾನದೊಡ್ಡಿ, ಆಯನೂರು, ವಳಬಳ್ಳಾರಿ, ಬಾದರ್ಲಿ ಗ್ರಾಮಗಳಲ್ಲಿ ಹಾಗೂ ಸಿಂಧನೂರು ನಗರದಲ್ಲಿ ಶ್ರೀರಾಮುಲು ರೋಡ್‌ ಶೋ ನಡೆಸಿದರು. ಬಿಜೆಪಿ ಅಭ್ಯರ್ಥಿ ಕೊಲ್ಲಾ ಶೇಷಗಿರಿರಾವ್‌, ಬಿಜೆಪಿ ತಾಲೂಕು ಅಧ್ಯಕ್ಷ ಅಮರೇಗೌಡ ವಿರುಪಾಪುರ, ಜಿಪಂ ಅಧ್ಯಕ್ಷೆ ವೀರಲಕ್ಷ್ಮೀ ಆದಿಮನಿ, ರಾಜಶೇಖರ ಪಾಟೀಲ, ಮುಖಂಡರಾದ ದೇವೇಂದ್ರಪ್ಪ ನಾಯಕ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next