Advertisement

ರಾಜ್ಯದ ಕಾನೂನು-ಸುವ್ಯವಸ್ಥೆ: ಆರೋಪ – ಪ್ರತ್ಯಾರೋಪ

11:07 PM Feb 19, 2024 | Team Udayavani |

ಬೆಂಗಳೂರು: ಮಂಗಳೂರು ಶಾಲೆಯೊಂದರಲ್ಲಿ ರಾಮನ ದೂಷಣೆ, ಮಂಡ್ಯದ ಹನುಮಧ್ವಜ ಗಲಾಟೆ, ಹಾವೇರಿಯ ಸಾಮೂಹಿಕ ಅತ್ಯಾಚಾರ ಪ್ರಕರಣ ಸಹಿತ ರಾಜ್ಯದಲ್ಲಿ ಇತ್ತೀಚೆಗೆ ನಡೆದ ಅಹಿತಕರ ಘಟನೆಗಳು ಮೇಲ್ಮನೆಯಲ್ಲಿ ಪ್ರತಿಧ್ವನಿಸಿದವು. ಕಾನೂನು ಸುವ್ಯವಸ್ಥೆ ಬಗೆಗಿನ ಆರೋಪ-ಪ್ರತ್ಯಾರೋಪಗಳ ಸುರಿಮಳೆಗೆ ವೇದಿಕೆಯಾಯಿತು.

Advertisement

ಸೋಮವಾರ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ವಿಪಕ್ಷದ ಮುಖ್ಯ ಸಚೇತಕ ಎನ್‌. ರವಿಕುಮಾರ್‌, ಪ್ರತಾಪ್‌ಸಿಂಹ ನಾಯಕ್‌, ಡಾ| ತಳವಾರ ಸಾಬಣ್ಣ, ಎಸ್‌.ವಿ. ಸಂಕನೂರ ಗಮನಸೆಳೆಯುವ ಸೂಚನೆ ಅಡಿ ವಿಷಯ ಪ್ರಸ್ತಾವಿಸಿ, ರಾಜ್ಯದಲ್ಲಿ ಇತ್ತೀಚೆಗೆ ಕೊಲೆ, ಕೋಮುಗಲಭೆ, ಅತ್ಯಾಚಾರ, ಅಪರಾಧ ಕೃತ್ಯಗಳು ಹೆಚ್ಚಾಗಿವೆ. ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿರುವ ಬಗ್ಗೆ ಈ ಘಟನೆಗಳೇ ಸಾಕ್ಷಿಯಾಗಿವೆ ಎಂದು ಆರೋಪಿಸಿದರು.

ಮಂಗಳೂರಿನ ಶಾಲೆಯೊಂದರಲ್ಲಿ ಶಿಕ್ಷಕಿಯೊಬ್ಬರು ರಾಮನನ್ನು ದೂರುತ್ತಾರೆ. ಈ ಪ್ರಕರಣದಲ್ಲಿ ಶಾಸಕರಾದ ವೇದವ್ಯಾಸ ಕಾಮತ್‌ ಮತ್ತು ಭರತ್‌ ಶೆಟ್ಟಿ ವಿರುದ್ಧ ಎಫ್ಐಆರ್‌ ದಾಖಲಾಗುತ್ತದೆ. ಆದರೆ ಪ್ರಕರಣದ ಮೂಲಕಾರಣಕರ್ತರಾದ ಶಿಕ್ಷಕಿ ವಿರುದ್ಧ ಯಾವುದೇ ಕ್ರಮ ಇಲ್ಲ. ಬಿಜೆಪಿ ಶಾಸಕರ ಮೇಲೆ ಯಾಕೆ ಇಷ್ಟೊಂದು ದ್ವೇಷ? ಹಾಗಿದ್ದರೆ ಎಲ್ಲ ಬಿಜೆಪಿ ಶಾಸಕರನ್ನೂ ಜೈಲಿಗೆ ಹಾಕಿಬಿಡಿ ಎಂದು ತರಾಟೆಗೆ ತೆಗೆದುಕೊಂಡರು.

ಮಂಡ್ಯದ ಕೆರಗೋಡಿನ ಹನುಮಧ್ವಜ ಪ್ರಕರಣದಲ್ಲೂ ಸರಕಾರದ ನಡೆ ಪ್ರಶ್ನಿಸುವಂತಿದೆ. ಹನುಮಧ್ವಜ ಇಳಿಸಿದ್ದರ ಉದ್ದೇಶ ಏನು? ಅದರಿಂದ ಸಾರ್ವಜನಿಕರಿಗೆ ಏನಾದರೂ ತೊಂದರೆ ಆಗುತ್ತಿತ್ತಾ? ಸರಕಾರದ ಅಜೆಂಡಾ ಏನು? ಈ ವಿಚಾರದಲ್ಲಿ ಗೃಹಸಚಿವರ ಕೈಕಟ್ಟಿ ಹಾಕಲಾಗಿದೆಯೇ ಎಂದು ಪ್ರಶ್ನಿಸಿದ ಕೋಟ ಶ್ರೀನಿವಾಸ ಪೂಜಾರಿ, ಹಾವೇರಿ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಕ್ರಮ ಕೈಗೊಳ್ಳುವಲ್ಲಿ ವಿಳಂಬವಾಗಿದೆ. ಬೆಳಗಾವಿಯಲ್ಲಿ ದಲಿತ ಮಹಿಳೆಯನ್ನು ವಿವಸ್ತ್ರಗೊಳಿಸಿದ ಪ್ರಕರಣದಲ್ಲೂ ಅಷ್ಟೇ ಎಂದು ಆರೋಪಿಸಿದರು.

ಇದಕ್ಕೆ ದನಿಗೂಡಿಸಿದ ಎನ್‌. ರವಿಕುಮಾರ್‌ ಮತ್ತು ತಳವಾರ ಸಾಬಣ್ಣ, ಬರೀ ಬಿಜೆಪಿ ಕಾರ್ಯಕರ್ತರನ್ನೇ ಗುರಿಯಾಗಿರಿಸಿಕೊಂಡು ಪ್ರಕರಣ ದಾಖಲಿಸಲಾಗುತ್ತಿದೆ. ಉದಾಹರಣೆಗೆ ಹುಬ್ಬಳ್ಳಿಯಲ್ಲಿ 30 ವರ್ಷಗಳ ಹಿಂದಿನ ಪ್ರಕರಣವನ್ನು ತೆಗೆದುಕೊಂಡು ಕರಸೇವಕರ ವಿರುದ್ಧ ಕೇಸು ದಾಖಲಿಸಲಾಗಿದೆ. ಚಿತ್ತಾಪುರದಲ್ಲಿ ಕೋಳಿ ಸಮಾಜದ ಯುವಕನ ಕೊಲೆ ಪ್ರಕರಣದಲ್ಲಿ ಆರೋಪಿ ಬಗ್ಗೆ ಮೃದುಧೋರಣೆ ತಾಳಿದ್ದು, ಆತ ರಾಜಾರೋಷವಾಗಿ ಓಡಾಡುತ್ತಿದ್ದಾನೆ. ಇದೆಲ್ಲವನ್ನೂ ನೋಡಿದರೆ, ಈ ಸರಕಾರದಲ್ಲಿ ದಲಿತ ಮತ್ತು ಹಿಂದುಳಿದವರಿಗೆ ರಕ್ಷಣೆ ಇಲ್ಲ ಎಂದನಿಸುತ್ತದೆ ಎಂದು ದೂರಿದರು.

Advertisement

ಸಚಿವರ ಸಮರ್ಥನೆ
ಇದಕ್ಕೆ ತಿರುಗೇಟು ನೀಡಿದ ಗೃಹ ಸಚಿವ ಡಾ| ಜಿ. ಪರಮೇಶ್ವರ್‌, ಕೈಕಟ್ಟಿ ಹಾಕಲಾಗಿದೆ ಅಥವಾ ಕೈಚೆಲ್ಲಿದ್ದಾರೆ ಎಂಬ ಆರೋಪಗಳಲ್ಲಿ ಅರ್ಥವಿಲ್ಲ. ಮಂಗಳೂರು ಶಾಲೆಯೊಂದರ ಘಟನೆ ವಿಚಾರದಲ್ಲಿ ಶಾಸಕರಿಬ್ಬರು ನೀಡಿದ ಹೇಳಿಕೆಗಳ ವಿರುದ್ಧ ದೂರುಗಳು ಬಂದಿದ್ದವು. ಹಾಗಾಗಿ ಎಫ್ಐಆರ್‌ ದಾಖಲಾಗಿತ್ತು. ಪ್ರಕರಣ ಸಂಬಂಧ ಶಿಕ್ಷಕಿ ವಿರುದ್ಧ ಶಿಕ್ಷಣ ಇಲಾಖೆ ತನಿಖೆಗೆ ಆದೇಶಿಸಿದೆ. ಹಾವೇರಿ ಪ್ರಕರಣದಲ್ಲಿ ವಿಳಂಬ ಮಾಡಿದ್ದಕ್ಕೆ ಮೂವರು ಪೊಲೀಸ್‌ ಸಿಬಂದಿಯನ್ನು ಅಮಾನತುಗೊಳಿಸಲಾಗಿದೆ. ಈ ಪ್ರಕರಣದಲ್ಲಿ 19 ಜನರನ್ನು ಬಂಧಿಸಲಾಗಿದೆ. ಮಂಡ್ಯ ಹನುಮಧ್ವಜ ವಿಚಾರದಲ್ಲಿ ಅನುಮತಿ ಪಡೆದಿದ್ದು ರಾಷ್ಟ್ರಧ್ವಜ ಮತ್ತು ಕನ್ನಡ ಧ್ವಜಕ್ಕೆ. ಆದರೆ ಹಾರಿಸಿದ್ದು ಹನುಮಧ್ವಜ. ಹಾಗಾಗಿ, ಕ್ರಮ ಕೈಗೊಳ್ಳಲಾಯಿತು ಎಂದು ಸ್ಪಷ್ಟಪಡಿಸಿದರು.

ಶ್ರೀರಾಮ ನಮ್ಮವ ನೆನಪಿರಲಿ….
ಶ್ರೀರಾಮ ನಮ್ಮವನು. ಇದನ್ನು ನೀವು ಚೆನ್ನಾಗಿ ನೆನಪಿಟ್ಟು ಕೊಳ್ಳಿ. ರಾಮ ನಿಮಗೆ ಈಗ ನೆನಪಾಗಿದ್ದಾನೆ. ಆದರೆ ಚಿಕ್ಕವರಿದ್ದಾ ಗಿಂದ ರಾಮನ ಪಾನಕ, ಕೋಸಂಬರಿ ಹಂಚಿದವರು ನಾವು…’
– ರಾಮನನ್ನು ದೂಷಿಸಿದ ಶಿಕ್ಷಕಿ ವಿರುದ್ಧ ಯಾವುದೇ ಎಫ್ಐಆರ್‌ ಇಲ್ಲ. ಬದಲಿಗೆ ಅದನ್ನು ಖಂಡಿಸಿದವರ ವಿರುದ್ಧ ಎಫ್ಐಆರ್‌ ಹಾಕಲಾಗಿದೆ ಎಂದು ವಿಪಕ್ಷ ಬಿಜೆಪಿ ಸದಸ್ಯರ ಆರೋಪಕ್ಕೆ ಗೃಹ ಸಚಿವ ಡಾ| ಪರಮೇಶ್ವರ ನೀಡಿದ ತಿರುಗೇಟು ಇದು. ಶಾಸಕರ ವಿರುದ್ಧ ದೂರು ಬಂದಿದ್ದರಿಂದ ಎಫ್ಐಆರ್‌ ದಾಖಲಿಸಲಾಗಿದೆ ಅಂತ ಸಚಿವರ ಸಮರ್ಥನೆಗೆ ಖಾರವಾಗಿ ಪ್ರತಿಕ್ರಿಯಿಸಿದ ವಿಪಕ್ಷದ ಸದಸ್ಯರು, ಹಾಗಿದ್ದರೆ ರಾಮನನ್ನು ದೂಷಿಸಿದವರ ವಿರುದ್ಧ ಯಾವುದೇ ಎಫ್ಐಆರ್‌ ಇಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next