Advertisement

State Govt; ಸರ್ವೇಗೆ ವೇಗ: 1000 ಭೂಮಾಪಕರಿಗೆ ಪ್ರಮಾಣಪತ್ರ

12:17 AM Mar 14, 2024 | Team Udayavani |

ಬೆಂಗಳೂರು: ರಾಜ್ಯಾದ್ಯಂತ ಸರ್ವೇ ಕಾರ್ಯಕ್ಕೆ ವೇಗ ನೀಡುವ ಸಲುವಾಗಿ ಪರವಾನಗಿಯುಳ್ಳ 1,000 ಭೂಮಾಪಕರಿಗೆ ಸರಕಾರ ಪ್ರಮಾಣಪತ್ರ ನೀಡಿದ್ದು, ಗ್ರಾಮ ಲೆಕ್ಕಿಗರಿಗೆ ಲ್ಯಾಪ್‌ಟಾಪ್‌ ನೀಡುವ ಮೂಲಕ ಕಂದಾಯ ಇಲಾಖೆಯಲ್ಲಿ ಮತ್ತಷ್ಟು ಸುಧಾರಣೆ ತರುವ ನಿಟ್ಟಿನಲ್ಲಿ ರಾಜ್ಯ ಸರಕಾರ ಹೆಜ್ಜೆ ಇಟ್ಟಿದೆ.

Advertisement

ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಬುಧವಾರ ಜರಗಿದ ಸಮಾರಂಭದಲ್ಲಿ ಭೂಮಾಪಕರಿಗೆ ಸಾಂಕೇತಿಕವಾಗಿ ಪ್ರಮಾಣ ಪತ್ರ ನೀಡಿ, ಗ್ರಾಮಲೆಕ್ಕಿಗರಿಗೆ ಲ್ಯಾಪ್‌ಟಾಪ್‌ ವಿತರಿಸಿ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡರು, ಮುಂದಿನ 2 ತಿಂಗಳಲ್ಲಿ ಆಕಾರ್‌ಬಂದ್‌ಗಳ ಡಿಜಿಟಲೀಕರಣ ಆಗಲಿದೆ. ಎಲ್ಲ ಗ್ರಾಮ ಲೆಕ್ಕಿಗರಿಗೂ ಲ್ಯಾಪ್‌ಟಾಪ್‌ ನೀಡುವ ಮೂಲಕ ಇ-ಆಫೀಸ್‌ ವ್ಯವಸ್ಥೆಯನ್ನು ಪಂಚಾಯತ್‌ ಮಟ್ಟ ದಿಂದಲೂ ಜಾರಿಗೊಳಿಸ ಲಾಗುತ್ತದೆ ಎಂದು ವಿವರಿಸಿದರು.

ಮುಖ್ಯಮಂತ್ರಿಗಳು ನಡೆಸಿದ ಜನತಾದರ್ಶನದಲ್ಲಿ ಶೇ.30 ಅರ್ಜಿಗಳು ನಮ್ಮ ಇಲಾಖೆಗೆ ಸಂಬಂಧಿ ಸಿದವೇ ಇದ್ದವು. ಅಷ್ಟು ಪ್ರಮಾಣದ ಕೆಲಸಗಳು ಬಾಕಿಯಾಗುತ್ತಲೇ ಇವೆ. ಯಾವುದೇ ಸಮಸ್ಯೆಗಳಿಗೆ ಒಮ್ಮೆಲೇ ಪರಿಹಾರ ಸಿಗುವುದಿಲ್ಲ. ಆದರೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ನೀಲನಕ್ಷೆ ಇರಬೇಕು. ಅದನ್ನು ಅನುಷ್ಠಾನಗೊಳಿಸುವ ಮಾನವ ಸಂಪನ್ಮೂಲ ಬೇಕು ಹಾಗೂ ತಂತ್ರಜ್ಞಾನ ಬಳಸಿಕೊಂಡು ಪರಿಹಾರ ನೀಡುವ ವೇಗವನ್ನು ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.

ರಾಜ್ಯದಲ್ಲಿ 3.90 ಕೋಟಿ ಜಮೀನುದಾರರಿದ್ದಾರೆ. ಆದರೆ ಸರ್ವೇ ನಂಬರ್‌ಗಳು ಮಾತ್ರ 1.87 ಕೋಟಿಯಷ್ಟಿದೆ. ಕೋಟ್ಯಂತರ ಪ್ರಕರಣಗಳಲ್ಲಿ ಸರ್ವೇ ನಂಬರ್‌ ಸೃಷ್ಟಿಸಿ ಹಿಸ್ಸೆ ಮಾಡಬೇಕಿದೆ. ಬ್ರಿಟಿಷರ ಅವಧಿ 1920ರ ಬಳಿಕ ರಾಜ್ಯದಲ್ಲಿ ಸರ್ವೇ ಕಾರ್ಯ ನಡೆದಿಲ್ಲ. 21 ಜಿಲ್ಲೆಗಳಲ್ಲಿ ಡ್ರೋನ್‌ ಮೂಲಕ ಮರುಸರ್ವೇ ಮಾಡಲು ಚಿಂತನೆಗಳು ನಡೆದಿದ್ದು ರೈತರ ಜಮೀನು, ಅರಣ್ಯ ಭೂಮಿ ಹಾಗೂ ಕಂದಾಯ ಜಮೀ ನುಗಳ ಜಂಟಿ ಸರ್ವೇ ನಡೆಸಲಾಗುತ್ತಿದೆ. ಕಾಲಕಾಲಕ್ಕೆ ಇಲಾಖೆಯಲ್ಲಿ ಸಣ್ಣಪುಟ್ಟ ಸುಧಾರಣೆಗಳನ್ನು ತರಲಾಗುತ್ತಿದ್ದು, ಪಹಣಿಗಳ ಡಿಜಿಟಲೀಕರಣ ಮಾಡಲಾಗುತ್ತಿದೆ ಎಂದರು.

ಇದಕ್ಕೆ ಪೂರಕವಾಗಿ ಮಾನವ ಸಂಪನ್ಮೂಲವನ್ನೂ ಒದಗಿಸಲಾಗುತ್ತಿದ್ದು, ಕೆಪಿಎಸ್‌ಸಿ ಮೂಲಕ ತಹಶೀಲ್ದಾರರ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಪರವಾನಗಿಯುಳ್ಳ 1000 ಭೂಮಾಪಕರಿಗೆ ಇಂದು ಪ್ರಮಾಣಪತ್ರ ನೀಡಿದ್ದು, ಮುಂದಿನ 6 ತಿಂಗಳಲ್ಲಿ 364 ಭೂಮಾಪಕರ ನೇಮಕವನ್ನೂ ಮಾಡಿಕೊಳ್ಳಲಾಗುತ್ತದೆ. 27 ಎಡಿಎಲ್‌ಆರ್‌ ನೇಮಕಕ್ಕೂ ಅಧಿಸೂಚಿಸಿದ್ದು, 541 ಭೂಮಾಪಕರ ನೇರ ನೇಮಕಾತಿಗೂ ಸಿಎಂ ಭರವಸೆ ನೀಡಿದ್ದಾರೆ. ಅಲ್ಲದೆ, ಹೆಚ್ಚುವರಿಯಾಗಿ 500 ಹುದ್ದೆಗಳನ್ನು ಕಂದಾಯ ಇಲಾಖೆಗೆ ಮಂಜೂರು ಮಾಡುವುದಾಗಿಯೂ ಆಶ್ವಾಸನೆ ಸಿಕ್ಕಿದೆ ಎಂದು ಹೇಳಿದರು.

Advertisement

ಗ್ರಾಮ ಸೇವಕರ ಗೌರವಧನ 15 ಸಾವಿರ ರೂ.
ರಾಜ್ಯದಲ್ಲಿರುವ 10 ಸಾವಿರ ಗ್ರಾಮ ಸೇವಕರಿಗೆ ಮಾಸಿಕ 13 ಸಾವಿರ ರೂ. ಇದ್ದ ಗೌರವಧನವು ಎ.1ರಿಂದ 15 ಸಾವಿರ ರೂ. ಆಗಲಿದೆ. ಕ್ರಿಯಾಯೋಜನೆ, ಮಾನವ ಸಂಪನ್ಮೂಲದ ಜತೆಗೆ ತಂತ್ರಜ್ಞಾನಕ್ಕೂ ಮಹತ್ವ ನೀಡಿದ್ದು, ಡ್ರೋನ್‌ ಹಾಗೂ ರೋವರ್‌ಗಳನ್ನು ಬಳಸಿ ಭೂಮಾಪನ ಮಾಡಲು ನಿರ್ಧರಿಸಿದ್ದು, 13 ಕೋಟಿ ರೂ. ವೆಚ್ಚದಲ್ಲಿ 420 ರೋವರ್‌ಗಳನ್ನು ಖರೀದಿಸಲಾಗುತ್ತಿದೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next