Advertisement

ಇನ್ನು ಒಂದು ವರ್ಷ ನೆಮ್ಮದಿ: ಕೇಂದ್ರ ಸಚಿವರನ್ನು ಭೇಟಿಯಾದ ರಾಜ್ಯ ನಿಯೋಗ

12:29 AM Jul 26, 2022 | Team Udayavani |

ಬೆಂಗಳೂರು: ಕಸ್ತೂರಿರಂಗನ್‌ ವರದಿ ಜಾರಿ ಮಾಡದಂತೆ ರಾಜ್ಯದ ಕರಾವಳಿ, ಮಲೆನಾಡು ಭಾಗದ ರೈತರು ಮತ್ತು ಜನಪ್ರತಿನಿಧಿಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ವಸ್ತುಸ್ಥಿತಿ ಅಧ್ಯಯನ ಮಾಡಲು ಹಿರಿಯ ಅಧಿಕಾರಿಗಳ ಉನ್ನತ ಮಟ್ಟದ ಸಮಿತಿ ರಚನೆ ಮಾಡಿದೆ.

Advertisement

ಪಶ್ಚಿಮ ಘಟ್ಟದ ಪ್ರತೀ ಹಳ್ಳಿಗೂ ಭೇಟಿ ನೀಡಿ, ಹೊಸ ವರದಿ ಸಲ್ಲಿಸಲು ಒಂದು ವರ್ಷದ ಕಾಲಾವಕಾಶವನ್ನೂ ಸಮಿತಿಗೆ ನೀಡಿದೆ. ಹೀಗಾಗಿ ಇನ್ನು ಒಂದು ವರ್ಷದ ಅವಧಿಗೆ ಕರಾವಳಿ, ಮಲೆನಾಡು ಭಾಗದ ಜನರು ನೆಮ್ಮದಿಯಿಂದ ಇರುವಂತಾಗಿದೆ.

ವರದಿ ವಿರೋಧಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯದ ಮಲೆನಾಡು ಹಾಗೂ ಕರಾವಳಿ ಭಾಗದ ಶಾಸಕರು ಮತ್ತು ಸಂಸದರ ನಿಯೋಗ ಸೋಮವಾರ ಹೊಸದಿಲ್ಲಿಯಲ್ಲಿ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್‌ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ವರದಿ ಸಿದ್ಧಪಡಿಸಿದ ಪ್ರಕ್ರಿಯೆಯಲ್ಲೇ ಹಲವು ಲೋಪಗಳಿದ್ದು, ಅರಣ್ಯ ಸಂರಕ್ಷಣೆಯ ಜತೆಗೆ ಜನರ ಜೀವನವೂ ಮುಖ್ಯ ಎಂದು ನಿಯೋಗವು ಮನವರಿಕೆ ಮಾಡಿಕೊಟ್ಟಿತು. ಇದರ ಬೆನ್ನಲ್ಲೇ ಸಚಿವರು ಉನ್ನತ ಮಟ್ಟದ ಸಮಿತಿ ರಚನೆ ಮಾಡಿದ್ದಾರೆ. ಸಂಪುಟ ಉಪ ಸಮಿತಿ ರಚನೆಗೂ ಸಮ್ಮತಿಸಿದ್ದಾರೆ.

ಒಂದು ವರ್ಷ ಕಾಲಾವಕಾಶ
ನಿವೃತ್ತ ಐಎಫ್ಎಸ್‌ ಅಧಿಕಾರಿ ಸಂಜಯ್‌ ಕುಮಾರ್‌ ನೇತೃತ್ವದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರು, ಜಿಯಾಲಾಜಿಕಲ್‌ ಸರ್ವೆ ಆಫ್ ಇಂಡಿಯಾದ ಪ್ರಧಾನ ನಿರ್ದೇಶಕರು, ಭಾರತೀಯ ವಿಜ್ಞಾನ ಸಂಸ್ಥೆಯ ಮಾಜಿ ಪ್ರಾಧ್ಯಾಪಕ ಆರ್‌.ಸಿ. ಕುಮಾರ್‌, ಪರಿಸರ ಸೂಕ್ಷ್ಮ ವಲಯದ ನಿರ್ದೇಶಕರ ಸಲಹೆಗಾರರು, ಸಂಚಾಲಕರು ಇವರನ್ನು ಒಳಗೊಂಡ ಸಮಿತಿ ರಚಿಸಿ, ಒಂದು ವರ್ಷದ ಕಾಲಾವಕಾಶವನ್ನು ನೀಡಲಾಗಿದೆ. ಸ್ಥಳೀಯ ಜನರೊಂದಿಗೆ ಮಾತನಾಡಿ, ಅಲ್ಲಿ ಜನ ಬೆಳೆದಿರುವ ಬೆಳೆಗಳು, ಸಾಂಸ್ಕೃತಿಕ ಮತ್ತು ನೈಸರ್ಗಿಕ ಭೂ ಪ್ರದೇಶದ ಕುರಿತು ಸಂಪೂರ್ಣ ಅಧ್ಯಯನ ಕೈಗೊಂಡು ವರದಿ ನೀಡಬೇಕು. ಅಲ್ಲಿಯ ವರೆಗೆ ಈ ಅಧಿಸೂಚನೆಯನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಗುವುದಿಲ್ಲ ಎನ್ನುವ ವಿಚಾರವನ್ನು ತಿಳಿಸಿದ್ದಾರೆ.

ರಾಜ್ಯದ ನಿಲುವಿನ ಬಗ್ಗೆ ಸ್ಪಷ್ಟನೆ
ಭೇಟಿ ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ, ಕಸ್ತೂರಿ ರಂಗನ್‌ ವರದಿಯ ಬಗ್ಗೆ ರಾಜ್ಯದ ನಿಲುವನ್ನು ಸ್ಪಷ್ಟಪಡಿಸಲಾಗಿದೆ. ಮೊದಲಿದ್ದ ಗಾಡ್ಗಿàಳ್‌ ಸಮಿತಿ ವರದಿಯನ್ನು ಎಲ್ಲ ರಾಜ್ಯಗಳೂ ವಿರೋಧಿಸಿದ್ದವು. ಅನಂತರ ಕಸ್ತೂರಿರಂಗನ್‌ ವರದಿ ಬಂತು. ಈ ವರದಿಯಲ್ಲಿ ಯಾವುದೇ ಭೂ ಸಮೀಕ್ಷೆ ಮಾಡದೆ ಕೇವಲ ಸ್ಯಾಟಲೈಟ್‌ ಸಮೀಕ್ಷೆ ನಡೆಸಲಾಗಿದ್ದು, ಹಸುರು ಪ್ರದೇಶಗಳನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಲು ಹೊರಟಿದ್ದಾರೆ. ಅಲ್ಲಿಯ ಜನಜೀವನ ಪರಿಸರ ಜತೆ ಜತೆಯಲ್ಲಿದ್ದು, ಹಸುರನ್ನು ಅವಲಂಬಿಸಿರುವ ಜನರಿದ್ದಾರೆ. ಕಾಫಿ, ಅಡಿಕೆ, ತೆಂಗು, ರಬ್ಬರ್‌ ತೋಟಗಳಿದ್ದು, ಅಲ್ಲಿಯ ಜನ ಹಸುರನ್ನು ಉಳಿಸಿ ಬೆಳೆಸಿದ್ದಾರೆ. ಆದ್ದರಿಂದ ಈ ಪ್ರದೇಶದ ಭೂಮಿ ಸಮೀಕ್ಷೆ ನಡೆಸದೆ ವಾಸ್ತವಾಂಶ ತಿಳಿಯುವುದಿಲ್ಲ ಎಂಬುದು ರಾಜ್ಯದ ವಾದ ಎಂದರು.

Advertisement

ರಾಜ್ಯದ ಜೈವಿಕ ವೈವಿಧ್ಯ ನೀತಿಯ ಪ್ರಕಾರ ವರದಿ ತಯಾರಿಸುವಾಗ ಸ್ಥಳೀಯ ಗ್ರಾ.ಪಂ., ತಾ. ಪಂ. ಅಭಿಪ್ರಾಯ ಪಡೆದಿರುವುದಿಲ್ಲ. ಸ್ಥಳೀಯ ಜನರ ಅಭಿಪ್ರಾಯವನ್ನು ಪಡೆಯದೆಯೇ ಕಸ್ತೂರಿರಂಗನ್‌ ವರದಿಯನ್ನು ಸಿದ್ಧಪಡಿಸಲಾಗಿದೆ. ಅಲ್ಲಿನ ನೈಸರ್ಗಿಕ ಮತ್ತು ಸಾಂಸ್ಕೃತಿಕ ಭೂ ಪ್ರದೇಶವನ್ನು ಪ್ರತ್ಯೇಕವಾಗಿ ಗುರುತಿಸಲು ವರದಿಯ ವಿಚಾರಣ ಉಲ್ಲೇಖಗಳಲ್ಲಿದ್ದರೂ ಅದನ್ನು ಪ್ರತ್ಯೇಕಿಸಿಲ್ಲ ಎಂದರು.

ವರದಿ ಅವೈಜ್ಞಾನಿಕ
ಕಸ್ತೂರಿರಂಗನ್‌ ಸಮಿತಿ ರಚನೆಯಾದ ಸಂದರ್ಭದ ವಾಸ್ತವಾಂಶಗಳನ್ನು ಸಲ್ಲಿಸುವುದರ ಜತೆಗೆ ಎಲ್ಲ ಗ್ರಾ.ಪಂ.ಗಳ ಭಾವನೆಗಳನ್ನು ಮನವರಿಕೆ ಮಾಡಿಕೊಡಲಾಗುವುದು. ಪ್ರತೀ ಗ್ರಾಮವನ್ನು ಒಂದು ಘಟಕವಾಗಿ ಪರಿಗಣಿಸಿ ಅವರ ಅಹವಾಲುಗಳನ್ನು ಕೇಳಬೇಕೆಂದು ಮನವಿ ಮಾಡುತ್ತೇವೆ. ಕಸ್ತೂರಿ ರಂಗನ್‌ ವರದಿ ಬಹಳ ಅವೈಜ್ಞಾನಿಕವಾಗಿದೆ. ವೈಜ್ಞಾನಿಕವಾಗಿ ಅದನ್ನು ರೂಪಿಸುವ ಸಲುವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಉನ್ನತ ಮಟ್ಟದ ಸಮಿತಿ ರಚನೆಯಾಗಿದೆ.

ರಾಜ್ಯಕ್ಕೆ ಕೇಂದ್ರ ಸಚಿವರ ಭೇಟಿ?
ರಾಜ್ಯಕ್ಕೆ ಭೇಟಿ ನೀಡಿ ಈ ಭಾಗಗಳಲ್ಲಿ ಪ್ರವಾಸ ಮಾಡಿ ಪರಿಶೀಲಿಸುವಂತೆ ಕೇಂದ್ರ ಸಚಿವ ಭೂಪೇಂದ್ರ ಯಾದವ್‌ ಅವರನ್ನು ಕೋರಲಾಗಿದೆ. ರಾಜ್ಯಕ್ಕೆ ಭೇಟಿ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದೂ ಸಿಎಂ ಹೇಳಿದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯಾದ್ಯಕ್ಷ ನಳಿನ್‌ ಕುಮಾರ್‌ ಕಟೀಲು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಸಂಸದರಾದ ಪ್ರತಾಪಸಿಂಹ, ಬಿ.ವೈ. ರಾಘವೇಂದ್ರ, ಸಚಿವರಾದ ಗೋವಿಂದ ಕಾರಜೋಳ, ಆರಗ ಜ್ಞಾನೇಂದ್ರ, ಶಾಸಕ ಹಾಲಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಜೀವರಾಜ್‌ ನಿಯೋಗದಲ್ಲಿದ್ದರು.

ಕಸ್ತೂರಿರಂಗನ್‌ ವರದಿಯು ಉಪಗ್ರಹ ಆಧಾರಿತವಾಗಿದ್ದು ಅವೈಜ್ಞಾನಿಕವಾಗಿದೆ. ಆಯೋಗವು ತೆಂಗು, ಕಂಗು, ರಬ್ಬರ್‌ ಮೊದಲಾದ ಹಸುರು ಪ್ರದೇಶವನ್ನು ಚಿತ್ರದಲ್ಲಿ ಕಂಡು ಅರಣ್ಯ ಎಂದು ಪರಿಗಣಿಸಿತ್ತು. ಇದರ ಬದಲು ಭೌತಿಕ ಸಮೀಕ್ಷೆ ನಡೆಸಲು ನಾವು ಮನವಿ ಮಾಡಿದ್ದೆವು. ಈಗ ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್‌ ಒಂದು ವರ್ಷದೊಳಗೆ ಭೌತಿಕ ಸಮೀಕ್ಷೆ ನಡೆಸಲು ಸಮಿತಿಯೊಂದನ್ನು ರಚಿಸಿ ಆದೇಶಿಸಿದ್ದಾರೆ. ಈ ಸಮಿತಿಯು ಪ್ರತೀ ಹಳ್ಳಿಗಳಿಗೆ ಹೋಗಿ ಸಂಬಂಧಪಟ್ಟವರನ್ನು ಭೇಟಿ ಮಾಡಿ ವರದಿ ನೀಡಲಿದೆ. ಕರ್ನಾಟಕವೂ ಸೇರಿದಂತೆ ಐದಾರು ರಾಜ್ಯಗಳಿಗೆ ಈ ಸಮಿತಿ ರಚನೆ ಅನುಕೂಲವಾಗಲಿದೆ. ವರ್ಷದೊಳಗೆ ಸಮಿತಿಯು ನಮ್ಮ ಹಳ್ಳಿಗಳಿಗೆ ಭೇಟಿ ನೀಡಲಿದೆ ಎಂಬ ವಿಶ್ವಾಸವಿದೆ.
-ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ

ಪಶ್ಚಿಮ ಘಟ್ಟಗಳಿರುವ ಎಲ್ಲ ರಾಜ್ಯಗಳಿಗೆ ಅದನ್ನು ಉಳಿಸುವ ಮತ್ತೂಂದು ಅವಕಾಶ ದೊರೆತಿದೆ. ರಾಜ್ಯ ಮಟ್ಟದಲ್ಲಿಯೂ ಸಮಿತಿಯ ವಿಚಾರಣ ಉÇÉೇಖಗಳ ಆಧಾರದ ಮೇಲೆ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗುವುದು.
-ಬಸವರಾಜ ಬೊಮ್ಮಾಯಿ, ಸಿಎಂ

ಸಮಿತಿಗೆ ನೀಡಿರುವ ಸೂಚನೆಗಳೇನು?
1 ಪಶ್ಚಿಮ ಘಟ್ಟಗಳಲ್ಲಿ ವಾಸವಿರುವ, ಕೃಷಿ ಚಟುವಟಿಕೆ ನಡೆಸುತ್ತಿರುವ ರೈತರ ಕೋರಿಕೆಯಂತೆ ಭೌತಿಕ ಪರಿಶೀಲನೆ ನಡೆಸಬೇಕು.
2 ಎಲ್ಲ 6 ರಾಜ್ಯಗಳ ಸರಕಾರಿ ಪ್ರತಿನಿಧಿಗಳ ಜತೆ ಸಮಗ್ರ ಚರ್ಚೆ ನಡೆಸಬೇಕು.
3 ಪಶ್ಚಿಮ ಘಟ್ಟದ ಪ್ರತೀ ಹಳ್ಳಿಗೂ ಭೇಟಿ ನೀಡಿ ಹೊಸ ವರದಿ ತಯಾರಿಸಬೇಕು.
4 ನಿಷೇಧಿತ ಮತ್ತು ನಿಯಂತ್ರಿತ ಚಟು ವಟಿಕೆಗಳನ್ನು ಪರಿಶೀಲಿಸಿ, ಸ್ಥಳೀಯರ ಅಗತ್ಯವನ್ನು ಮನಗಾಣಬೇಕು.
5 ಐವರು ಸದಸ್ಯರ ತಂಡವು ರಾಜ್ಯಗಳ ಸಲಹೆ ಸ್ವೀಕರಿಸಿ ಒಂದು ವರ್ಷದೊಳಗಾಗಿ ರೈತರ ಹಿತ ಕಾಯುವ ವರದಿ ಸಲ್ಲಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next