Advertisement

ಬಂಡವಾಳ ಹೂಡಿಕೆಯಲ್ಲಿ ರಾಜ್ಯ 2ನೇ ಸ್ಥಾನ

11:15 AM Feb 19, 2020 | Team Udayavani |

ವಿಧಾನಮಂಡಲ: 2019ರ ನವೆಂಬರ್‌ವರೆಗೆ ರಾಜ್ಯದಲ್ಲಿ ಒಟ್ಟು 71,475 ಕೋಟಿ ರೂ.ಹೂಡಿಕೆಯನ್ನು ಆಕರ್ಷಿಸಲಾಗಿದ್ದು, ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ, ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. 2 ಮತ್ತು 3ನೇ ಸ್ತರದ ನಗರಗಳಲ್ಲಿ ಆದ್ಯತಾ ವಲಯಗಳಲ್ಲಿನ ಸಮಗ್ರ ಕೈಗಾರಿಕಾಭಿವೃದ್ಧಿಗಾಗಿ ನೂತನ ಕೈಗಾರಿಕಾ ನೀತಿ ಘೋಷಿಸಲು ಕ್ರಮ ಕೈಗೊಳ್ಳಲಾಗಿದೆ.

Advertisement

ಈ ನಿಟ್ಟಿನಲ್ಲಿ ನೂತನ ಜವಳಿ ಮತ್ತು ಸಿದ್ಧ ಉಡುಪು ನೀತಿ-2019-24ನ್ನು ಘೋಷಿಸಲಾಗಿದೆ ಎಂದು ರಾಜ್ಯಪಾಲ ವಜೂಭಾಯ್‌ ವಾಲಾ ಹೇಳಿದರು. ಸೋಮವಾರ ಆರಂಭವಾದ ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ಅವರು, ಸರ್ಕಾರದ ಕಾರ್ಯ ಯೋಜನೆಗಳ ಸಮಗ್ರ ಮಾಹಿತಿ ನೀಡಿದರು.

ಸೈಬರ್‌ ಅಪರಾಧ ತಡೆಗೆ ಕ್ರಮ: ರಾಜ್ಯದಲ್ಲಿ ಹೆಚ್ಚುತ್ತಿರುವ ಸೈಬರ್‌ ಆರ್ಥಿಕ ಮತ್ತು ಮಾದಕ ವಸ್ತು ಅಪರಾಧಗಳ ನಿಯಂತ್ರಣಕ್ಕಾಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಈ ಅಪರಾಧಗಳ ಸೂಕ್ತ ತನಿಖೆಗಾಗಿ ಬೆಂಗಳೂರಿನಲ್ಲಿ ಎಂಟು ಹೊಸ ಸೈಬರ್‌ ಕ್ರೈಮ್‌ ಆರ್ಥಿಕ ಮತ್ತು ಮಾದವ ದ್ರವ್ಯ ಸಂಬಂಧಿತ ಪೊಲೀಸ್‌ ಠಾಣೆಗಳನ್ನು ಸ್ಥಾಪಿಸಲಾಗಿದೆ. ದುಷ್ಟ ಅಪರಾಧಿಗಳು ಹಾಗೂ ಭಯೋ ತ್ಪಾದಕರನ್ನು ಬಂಧಿಸಿಡಲು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಅತಿ ಭದ್ರತಾ ಕಾರಾಗೃಹ ನಿರ್ಮಿಸಲಾಗುತ್ತಿದೆ. ವಿಜಯಪುರ ಮತ್ತು ಬೀದರ್‌ನಲ್ಲಿಯೂ ಕೇಂದ್ರ ಕಾರಾಗೃಹ ನಿರ್ಮಿಸಲಾಗುತ್ತಿದೆ. ಪೊಲೀಸ್‌ ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ.25ರಷ್ಟು ಮೀಸಲಾತಿ ಕಲ್ಪಿಸಲು ಅನುಮೋದನೆ ನೀಡಲಾಗಿದೆ ಎಂದರು.

3 ವರ್ಷಗಳಲ್ಲಿ 10 ಸಾವಿರ ಕಿ.ಮೀ.ಹೆದ್ದಾರಿ ಅಭಿವೃದ್ಧಿ: ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾರ್ಯಕ್ರಮ ಹಂತ-4ರ ಅನುಷ್ಟಾನಕ್ಕೆ ಅನುಮೋದನೆ ನೀಡಿ, 3 ವರ್ಷಗಳಲ್ಲಿ 10 ಸಾವಿರ ಕಿ.ಮೀ.ಹೆದ್ದಾರಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಮೊದಲ ಹಂತದಲ್ಲಿ 3,692 ಕಿ.ಮೀ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಹೈದರಾಬಾದ್‌-ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯನ್ನು ಅಲ್ಲಿನ ಜನರ ಆಶಯಕ್ಕೆ ತಕ್ಕಂತೆ “ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ’ ಎಂದು ಮರು ನಾಮಕರಣ ಮಾಡಿ 2019-20ನೇ ಸಾಲಿನಲ್ಲಿ 1,500 ಕೋಟಿ ರೂ.ಹಂಚಿಕೆ ಮಾಡಲಾಗಿದೆ ಎಂದು ರಾಜ್ಯಪಾಲರು ತಿಳಿಸಿದರು.

ಮೀನುಗಾರಿಕೆಗೆ ಉತ್ತೇಜನ: ಕರ್ನಾಟಕ, ದೇಶದಲ್ಲಿಯೇ ಕಡಲ ಮೀನು ಉತ್ಪಾದನೆಯಲ್ಲಿ 6ನೇ ಸ್ಥಾನ ಮತ್ತು ಒಳನಾಡು ಮೀನು ಉತ್ಪಾದನೆಯಲ್ಲಿ 9ನೇ ಸ್ಥಾನ ಹೊಂದಿದೆ. ಸುಸ್ಥಿರ ಆದಾಯ ಮತ್ತು ಉದ್ಯೋಗ ಸೃಷ್ಟಿಯಿಂದಾಗಿ ಈ ವಲಯದ ಸಾಮರ್ಥ್ಯ ಪರಿಗಣಿಸಿ, ಕಡಲು ಮತ್ತು ಒಳನಾಡು ಮೀನುಗಾರಿಕೆಯ ಸುಸ್ಥಿರ ಅಭಿವೃದ್ಧಿಯತ್ತ ಗಮನ ಕೇಂದ್ರೀಕರಿಸುವುದನ್ನು ಮುಂದುವರಿಸಲಾಗಿದೆ. ಅರಣ್ಯ ಮತ್ತು ಮರದ ತೋಪು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ.

Advertisement

2.83 ಕೋಟಿ ಸಸಿ ನೆಟ್ಟು, 41 ಸಾವಿರ ಹೆಕ್ಟೇರ್‌ ನೆಡುತೋಪು ಅಭಿವೃದ್ಧಿಪಡಿಸಲಾಗಿದೆ ಎಂದರು. ಜೈಕಾ ಆರ್ಥಿಕ ನೆರವಿನೊಂದಿಗೆ ಕಾವೇರಿ ನೀರು ಸರಬರಾಜು ಯೋಜನೆ, ಹಂತ-5ರ ಶೀಘ್ರ ಅನುಷ್ಟಾನಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ. ಈ ಯೋಜನೆ ಕಾರ್ಯಗತಗೊಂಡ ನಂತರ ಬೆಂಗಳೂರು ನಗರಕ್ಕೆ ಸರಬರಾಜು ಮಾಡಲು ಹೆಚ್ಚುವರಿ 775 ದಶಲಕ್ಷ ಲೀಟರ್‌ ನೀರು ಲಭ್ಯವಾಗುತ್ತದೆ ಎಂದು ರಾಜ್ಯಪಾಲರು ತಮ್ಮ ಭಾಷಣದಲ್ಲಿ ತಿಳಿಸಿದರು.

ಮಾಹೆ ಸಹಯೋಗದಲ್ಲಿ ನವೋದ್ಯಮ ಸ್ಥಾಪನೆಗೆ ಉತ್ತೇಜನ: ಮಣಿಪಾಲ ಉನ್ನತ ಶಿಕ್ಷಣ ಆಕಾಡೆಮಿಯ ಸಹಯೋಗದಲ್ಲಿ ಬಯೋಫಾರ್ಮಾ ಕ್ಷೇತ್ರ ಗಳಲ್ಲಿ ನವೋದ್ಯಮ ಘೋಷಿಸಲು ಮತ್ತು ಬೆಂಬಲಿಸಲು ಬಯೋ-ಇನುಬೇಟರ್‌ ಸ್ಥಾಪಿ ಸಲಾಗಿದೆ. ರಾಜ್ಯದಲ್ಲಿನ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ಕಲಬುರಗಿ ವಿಮಾನ ನಿಲ್ದಾಣ ಈಗಾಗಲೇ ಕಾರ್ಯಾರಂಭ ಮಾಡಿದೆ. ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣದ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದೆ.

ಹಾಸನ, ವಿಜಯಪುರ, ಕಾರವಾರ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದೆ. ಪಾವಗಡದ ಮಾದರಿಯಲ್ಲಿ 2,500 ಮೆಗಾವ್ಯಾಟ್‌ ಸಾಮ ರ್ಥ್ಯದ ಅಲ್ಟ್ರಾ ಮೆಗಾ ನವೀಕರಿಸಬಹುದಾದ ಇಂಧನ ಪವರ್‌ ಪಾರ್ಕ್‌ ಗಳನ್ನು ಕೊಪ್ಪಳ, ಬೀದರ್‌, ಗದಗದಲ್ಲಿ ಸ್ಥಾಪಿಸುವ ಕಾರ್ಯ ಪ್ರಗತಿಯಲ್ಲಿದೆ. ಸ್ವತಂತ್ರವಾದ ಮತ್ತು ಗ್ರಿಡ್‌ ಸಂಪರ್ಕ ಹೊಂದಿದ ಸೌರಶಕ್ತಿ ಚಾಲಿತ ಕೃಷಿ ಪಂಪ್‌ಸೆಟ್‌ಗಳು ಉತ್ತೇಜಿಸಲು ನೀತಿ ರೂಪಿಸ ಲಾಗುತ್ತಿದೆ ಎಂದು ರಾಜ್ಯಪಾಲರು ಹೇಳಿದರು.

ರಾಜ್ಯಪಾಲರ ಭಾಷಣದ ಪ್ರಮುಖಾಂಶಗಳು
-ಪ್ರವಾಹ ಪೀಡಿತ ಪ್ರದೇಶಗಳಲ್ಲಿ 1.24 ಲಕ್ಷ ಮನೆ ನಿರ್ಮಾಣಕ್ಕೆ 827 ಕೋಟಿ ರೂ.

-2.07 ಲಕ್ಷ ಕುಟುಂಬಗಳಿಗೆ ಗೃಹೋಪಯೋಗಿ ವಸ್ತುಗಳ ಖರೀದಿಗೆ 207 ಕೋಟಿ ರೂ.

-6.38 ಲಕ್ಷ ರೈತರ ಖಾತೆಗಳಿಗೆ ತಲಾ 10 ಸಾವಿರದಂತೆ 1,126 ಕೋಟಿ ರೂ.

-ಮೂಲಸೌಕರ್ಯಗಳ ಪುನರ್‌ ನಿರ್ಮಾಣಕ್ಕೆ 2,104 ಕೋಟಿ ರೂ.

-ಕಿಸಾನ್‌ ಸಮ್ಮಾನ್‌ ಯೋಜನೆಯಡಿ 41 ಲಕ್ಷ ರೈತರ ಖಾತೆಗಳಿಗೆ 825 ಕೋಟಿ ರೂ.

-9 ಲಕ್ಷ ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನಕ್ಕಾಗಿ 691 ಕೋಟಿ ರೂ.

-4,050 ಕೋಟಿ ರೂ.ವೆಚ್ಚದಲ್ಲಿ 21 ನೀರಾವರಿ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ

-“ನಮ್ಮ ಗ್ರಾಮ ನಮ್ಮ ರಸ್ತೆ’ಯಡಿ 695 ಕೋಟಿ ರೂ.ವೆಚ್ಚದಲ್ಲಿ 874 ಕಿ.ಮೀ.ರಸ್ತೆ ನಿರ್ಮಾಣ

-175 ಕೆರೆಗಳನ್ನು ತುಂಬಿಸಲು 496 ಕೋಟಿ ರೂ.ಮೊತ್ತದ 4 ಯೋಜನೆಗೆ ಅನುಮತಿ

-ಎಸ್‌ಸಿ-ಎಸ್‌ಟಿ ಸಮುದಾಯದ ಅಭಿ ವೃದ್ಧಿಗೆ 30,445 ಕೋಟಿ ರೂ.ಮೀಸಲು

-ವಸತಿ ಶಾಲೆಗಳ ನಿರ್ವಹಣೆ ಮತ್ತು ನಿರ್ಮಾಣಕ್ಕೆ 1,500 ಕೋಟಿ ರೂ.

-ಹಿಂದುಳಿದ, ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ವೇತನ, ಕೌಶಲ್ಯಾಭಿವೃದ್ಧಿ, ಜೀವನೋಪಾಯಕ್ಕೆ 4,762 ಕೋಟಿ ರೂ.

-411 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪದವಿ ಶಿಕ್ಷಣ ಪಡೆಯುತ್ತಿರುವ 1.70 ಲಕ್ಷ ವಿದ್ಯಾರ್ಥಿನಿಯವರಿಗೆ ಶುಲ್ಕ ವಿನಾಯಿತಿ

-ರಾಯಚೂರಿಗೆ ಐಐಐಟಿ ಮಂಜೂರು

-ಮುಖ್ಯಮಂತ್ರಿಗಳ ನಗರೋತ್ಥಾನ ಕಾಮಗಾರಿಗಳಿಗೆ 8,344 ಕೋಟಿ ರೂ.

-ಹಾಸನ, ವಿಜಯಪುರ, ಕಾರವಾರ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ವಿಸ್ತೃತ ಯೋಜನಾ ವರದಿ

ಅಧಿವೇಶನದಲ್ಲಿ ವಿಚಾರ ವಿಮರ್ಶೆ ಮತ್ತು ಚರ್ಚೆಗಳ ಗುಣಾತ್ಮಕತೆಯನ್ನು ನಿರ್ವಹಿಸುವಲ್ಲಿ ಎಲ್ಲ ಸದಸ್ಯರೂ ಸಹಕರಿಸಬೇಕು. ವಿಚಾರ ಮಂಥನದಿಂದ ಹೊರ ಹೊಮ್ಮುವ ಹೊಸ ಆಲೋಚನೆಗಳು ಮತ್ತು ವಿಚಾರಗಳು ರಾಜ್ಯವನ್ನು ಅತ್ಯುನ್ನತ ಬೆಳವಣಿಗೆ ಮತ್ತು ಅಭಿವೃದ್ಧಿಯ ಕಡೆಗೆ ಕೊಂಡೊಯ್ಯಲಿ ಎಂಬ ಆಶಯ ನನ್ನದು.
-ವಜೂಭಾಯ್‌ ವಾಲಾ, ರಾಜ್ಯಪಾಲರು

ರಾಜ್ಯಪಾಲರು ಜಲಸಂಪನ್ಮೂಲ ಇಲಾಖೆ ಬಗ್ಗೆ ಉತ್ಸುಕತೆಯಿಂದ ಮಾತನಾಡಿ ರುವುದು ಹೆಮ್ಮೆಯ ಸಂಗತಿ. ಬಿಜೆಪಿ ಸರ್ಕಾರವು ಆದ್ಯತೆಯ ಮೇರೆಗೆ ಬೃಹತ್‌ ನೀರಾವರಿ ಯೋಜನೆಗಳನ್ನು ಕೈಗೊಂಡಿದ್ದು, ರಾಜ್ಯದ 12 ಸಾವಿರ ಹೆಕ್ಟೇರ್‌ ಪ್ರದೇಶಕ್ಕೆ ಪ್ರಸಕ್ತ ವರ್ಷದಲ್ಲಿ ನೀರಾವರಿ ಸಾಮರ್ಥ್ಯ ಕಲ್ಪಿಸಿದೆ. ಪ್ರಸಕ್ತ ಸಾಲಿನಲ್ಲಿ 4,050 ಕೋಟಿ ರೂ. ಮೀಸಲಾಗಿಡುತ್ತಿದ್ದು, ಈ ಕಾರಣಕ್ಕೆ ಮುಖ್ಯಮಂತ್ರಿಗಳನ್ನು ಅಭಿನಂದಿಸುತ್ತೇನೆ.
-ರಮೇಶ ಜಾರಕಿಹೊಳಿ, ಜಲಸಂಪನ್ಮೂಲ ಸಚಿವ

ರಾಜ್ಯಪಾಲರ ಭಾಷಣ ತೀವ್ರ ನಿರಾಶೆ ತಂದಿದೆ. ಪ್ರಸ್ತುತ ರಾಷ್ಟ್ರ ಹಾಗೂ ರಾಜ್ಯದಲ್ಲಿನ ಸಾಮಾಜಿಕ, ಆರ್ಥಿಕ, ರಾಜಕೀಯ ಬೆಳವಣಿಗೆಗಳು ಹಾಗೂ ರಾಜ್ಯದ ಅಭಿವೃದ್ಧಿಯ ಮೇಲಾಗುವ ಪರಿಣಾಮ, ರಾಜ್ಯ ಸರ್ಕಾರದ ಗುರಿ ಯಾವುದೂ ಭಾಷಣದಲ್ಲಿ ಇಲ್ಲ. ರಾಜ್ಯಪಾಲರ ಭಾಷಣ ಬಜೆಟ್‌ನ ದಿಕ್ಸೂಚಿಯಾಗಬೇಕಿತ್ತು. ಅದು ಭಾಷಣದಲ್ಲಿ ಆಗಿಲ್ಲ.
-ಎಚ್‌.ಕೆ.ಪಾಟೀಲ್‌, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next