Advertisement

ಹೈಕೋರ್ಟ್‌ ಮಧ್ಯಾಂತರ ಆದೇಶ ಯಥಾವತ್‌ ಜಾರಿ: ಜಿಲ್ಲಾಧಿಕಾರಿ

01:57 AM Feb 16, 2022 | Team Udayavani |

ಉಡುಪಿ: ಜಿಲ್ಲೆಯಲ್ಲಿ ಬುಧವಾರ ಪ.ಪೂ. ಕಾಲೇಜು ಮತ್ತು ಪದವಿ ಕಾಲೇಜುಗಳು ಪುನರಾರಂಭವಾಗಲಿದ್ದು, ಜಿಲ್ಲಾಧಿಕಾರಿ ಕೂರ್ಮಾರಾವ್‌ ಅವರು ಜಿಲ್ಲೆಯ ವಿವಿಧ ಸಂಘಟನೆಗಳು ಮತ್ತು ಧಾರ್ಮಿಕ ಮುಖಂಡರ ಸಭೆ ಕರೆದು ಸಮವಸ್ತ್ರ ಸಂಬಂಧ ನ್ಯಾಯಾ ಲಯದ ಮಧ್ಯಾಂತರ ಆದೇಶ ಪಾಲನೆಗೆ ನಿರ್ದೇಶನ ನೀಡಿದ್ದಾರೆ.

Advertisement

ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತ ಸರ್ವ ಕ್ರಮ ತೆಗೆದುಕೊಂಡಿದೆ. ಧಾರ್ಮಿಕ ಮುಖಂಡರು, ವಿವಿಧ ಸಂಘ ಟನೆಗಳ ಪ್ರತಿನಿಧಿಗಳು, ಪಾಲಕ, ಪೋಷ ಕರು ನ್ಯಾಯಾಲಯದ ಮಧ್ಯಾಂತರ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಜಿ.ಪಂ. ಸಭಾಂಗಣದಲ್ಲಿ ಮಂಗಳವಾರ ಸಭೆ ನಡೆಸಿ ಅವರು ಸೂಚಿಸಿದ್ದಾರೆ.

ಕಾಲೇಜುಗಳಿಗೆ ಸೂಚನೆ
ತಹಶೀಲ್ದಾರ್‌ಗಳ ಮೂಲಕ ಆಯಾ ಕಾಲೇಜುಗಳ ಆಡಳಿತ ಮಂಡಳಿ ಸಭೆ ನಡೆಸಿ, ನ್ಯಾಯಾಲಯದ ಆದೇಶ ವನ್ನು ಕಟ್ಟುನಿಟ್ಟಾಗಿ ಪಾಲಿಸಲು ನಿರ್ದೇಶಿಸಲಾಗಿದೆ. ಸೌಹಾರ್ದ ವಾತಾವರಣ ಕಾಪಾಡಿಕೊಂಡು ಹೋಗಲು ಕಾಲೇಜುಗಳಿಗೆ ತಿಳಿಸಿದ್ದೇವೆ. ನ್ಯಾಯಾಲಯದ ಆದೇಶವನ್ನು ಎಲ್ಲರೂ ಪಾಲನೆ ಮಾಡಬೇಕು. ಅಂತಿಮ ಆದೇಶ ಬರುವವರೆಗೂ ಮಧ್ಯಾಂತರ ಆದೇಶವನ್ನು ಉಲ್ಲಂಘನೆ ಮಾಡುವಂತಿಲ್ಲ ಎಂದು ಸಭೆಯ ಬಳಿಕ ಜಿಲ್ಲಾಧಿಕಾರಿ ಹೇಳಿದರು.

700 ಪೊಲೀಸ್‌ ಸಿಬಂದಿ
ಸೂಕ್ಷ್ಮ ಪ್ರದೇಶಗಳ ಎಲ್ಲ ಕಾಲೇಜು ಗಳಿಗೂ ಪೊಲೀಸ್‌ ಸಿಬಂದಿ ಇರಲಿದೆ. ಭದ್ರತೆಗೆ 8 ಡಿಎಆರ್‌, 2 ಕೆಎಸ್‌ಆರ್‌ಪಿ, 4 ಡಿವೈಎಸ್‌ಪಿ, ಓರ್ವ ಹೆಚ್ಚುವರಿ ಎಸ್‌ಪಿ,11 ಇನ್‌ಸ್ಪೆಕ್ಟರ್‌, 36 ಪಿಎಸ್‌ಐ ಹಾಗೂ ಎಎಸ್‌ಐ, ಕಾನ್‌ಸ್ಟೆಬಲ್‌ ಸಹಿತ 700ಕ್ಕೂ ಅಧಿಕ ಸಿಬಂದಿಯನ್ನು ಭದ್ರತೆಗೆ ನಿಯೋಜಿಸಿದ್ದೇವೆ. ಒಂದು ಮಹಿಳಾ ಕೆಎಸ್‌ಆರ್‌ಪಿ ತುಕಡಿ ಯನ್ನು ಕರೆಸಿ ಕೊಳ್ಳಲಾಗಿದೆ. ಸಿಬಂದಿ ಕೊರತೆಯಿಲ್ಲ. ನ್ಯಾಯಾಲಯದ ಆದೇಶ ಉಲ್ಲಂಘನೆಗೆ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾ ಎಸ್‌ಪಿ ಎನ್‌. ವಿಷ್ಣುವರ್ಧನ್‌ ಎಚ್ಚರಿಕೆ ನೀಡಿದರು.

ಜಿ.ಪಂ. ಸಿಇಒ ಡಾ| ನವೀನ್‌ ಭಟ್‌, ಎಡಿಸಿ ಸದಾಶಿವ ಪ್ರಭು, ಕುಂದಾಪುರ ಉಪವಿಭಾಗಾಧಿಕಾರಿ ರಾಜು, ಎಎಸ್‌ಪಿ ಸಿದ್ದಲಿಂಗಪ್ಪ ಉಪಸ್ಥಿತರಿದ್ದರು.

Advertisement

ಎಂಜಿಎಂ ಕಾಲೇಜಿಗೆ ರಜೆ
ಎಂಜಿಎಂ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಫೆ. 17ರಿಂದ ಪ್ರಾಯೋಗಿಕ ಪರೀಕ್ಷೆ ಆರಂಭವಾಗಲಿದೆ. ಪದವಿ ವಿದ್ಯಾರ್ಥಿಗಳಿಗೆ ಫೆ. 18ರಿಂದ ಇಂಟರ್ನಲ್ಸ್‌ ಆರಂಭವಾಗಲಿದೆ. ಹೀಗಾಗಿ ಪಿಯುಸಿ ವಿದ್ಯಾರ್ಥಿಗಳಿಗೆ ಬುಧವಾರ ಮತ್ತು ಪದವಿ ವಿದ್ಯಾರ್ಥಿಗಳಿಗೆ ಬುಧ ವಾರ, ಗುರುವಾರ ರಜೆ ನೀಡಿದ್ದೇವೆ. ಈ ಬಗ್ಗೆ ಆಡಳಿತ ಮಂಡಳಿ ಜತೆಗೆ ಚರ್ಚೆ ನಡೆಸಿದ್ದೇವೆ. ಆನ್‌ಲೈನ್‌ ತರಗತಿ ಎಂದಿನಂತೆ ನಡೆಯಲಿವೆ ಎಂದು ಪ್ರಾಂಶುಪಾಲ ಡಾ| ದೇವಿದಾಸ ನಾಯ್ಕ “ಉದಯವಾಣಿ’ಗೆ ಮಾಹಿತಿ ನೀಡಿದರು.

ಫೆ. 23ರ ವರೆಗೆ ನಿಷೇಧಾಜ್ಞೆ
ಉಡುಪಿಯ ಪ.ಪೂ., ಪದವಿ, ಪಾಲಿಟೆಕ್ನಿಕ್‌ ಕಾಲೇಜುಗಳ ವ್ಯಾಪ್ತಿಯಲ್ಲಿ ಫೆ. 23ರ ವರೆಗೆ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಧಾರ್ಮಿಕ ವಸ್ತ್ರಕ್ಕೆ ಅವಕಾಶವಿಲ್ಲ
ಬುಧವಾರ ಪದವಿ, ಪದವಿಪೂರ್ವ ತರಗತಿಗಳು ಆರಂಭವಾಗಲಿವೆ. ಜಿಲ್ಲಾಡಳಿತ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಲು ಎಲ್ಲ ರೀತಿಯ ಸುರಕ್ಷಾ ಕ್ರಮಗಳನ್ನು ತೆಗೆದುಕೊಂಡಿದೆ. ಶಾಲಾ ಕಾಲೇಜು ಆವರಣದಲ್ಲಿ ಶಾಂತಿ ಸುವ್ಯವಸ್ಥೆ ಕಾಡುವ ನಿಟ್ಟಿನಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ನ್ಯಾಯಾಲಯವು ಯಾವುದೇ ಧಾರ್ಮಿಕ ವಸ್ತ್ರ ಧರಿಸಿಕೊಂಡು ಬರಲು ಅವಕಾಶವಿಲ್ಲ ಎಂದಿದೆ. ಧರಿಸಿ ಬರುವ ವಿದ್ಯಾರ್ಥಿಗಳಿಗೆ ತರಗತಿ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

ದಕ್ಷಿಣ ಕನ್ನಡ
ಇಂದಿನಿಂದ ಪಿಯು, ಪದವಿ ಆರಂಭ
ಮಂಗಳೂರು: ಧಾರ್ಮಿಕ ವಸ್ತ್ರ ಗೊಂದಲದ ಕಾರಣ ಮುಚ್ಚಲಾಗಿದ್ದ ಪದವಿಪೂರ್ವ ಮತ್ತು ಪದವಿ ತರಗತಿಗಳು ದ.ಕ. ಜಿಲ್ಲೆಯಾದ್ಯಂತ ಬುಧವಾರ ಆರಂಭವಾಗಲಿವೆ. ಮುಂಜಾಗ್ರತೆಯ ಕ್ರಮವಾಗಿ ದ.ಕ. ಜಿಲ್ಲಾಡಳಿತ ಫೆ. 19ರ ವರೆಗೆ ಜಿಲ್ಲೆಯ ಶಿಕ್ಷಣ ಸಂಸ್ಥೆಗಳ 200 ಮೀ. ವ್ಯಾಪ್ತಿಯಲ್ಲಿ ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಸೆಕ್ಷನ್‌ 144 ಜಾರಿಗೊಳಿಸಿದೆ. ವಿದ್ಯಾರ್ಥಿಗಳ ವಿನಾ ಇತರರು ಶಾಲಾ ಆವರಣದ ಬಳಿ ಸೇರುವುದನ್ನು ನಿಷೇಧಿಸಲಾಗಿದೆ. ವಿದ್ಯಾರ್ಥಿಗಳು ನಿರಾತಂಕವಾಗಿ ತರಗತಿಗೆ ಹಾಜರಾಗುವಂತೆ ಮತ್ತು ಯಾವುದೇ ಸಮಸ್ಯೆ ಆಗದಂತೆ ಪೊಲೀಸ್‌ ಇಲಾಖೆ ಬಂದೋಬಸ್ತ್ ಕೈಗೊಳ್ಳಲಿದೆ ಎಂದು ದ.ಕ. ಜಿಲ್ಲಾಡಳಿತ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next