Advertisement

ತಂತಿ ಮೇಲೆ ಬೀಳುವ ರೆಂಬೆ ತೆರವು ಕಾರ್ಯ ಶುರು

10:04 AM May 23, 2018 | Team Udayavani |

ಮಹಾನಗರ: ಮಳೆಗಾಲ ಬಂತೆಂದರೆ ಸಾಕು ಪ್ರತಿಯೊಂದೆಡೆಯೂ ಅಪಾಯ- ಅಪಘಾತಗಳ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಪ್ರತಿ ಇಲಾಖೆಗಳು ಕೂಡ ಅದನ್ನು ಎದುರಿಸಲು ಸಿದ್ಧತೆ ನಡೆಸುತ್ತವೆ. ಇದಕ್ಕೆ ಪೂರಕವಾಗಿ ವಿದ್ಯುತ್‌ ಪೂರೈಕೆ ಮಾಡುವ ಮೆಸ್ಕಾಂ ಕೂಡ ಮಳೆಗಾಲವನ್ನೆದುರಿಸಲು ಪೂರ್ಣ ರೀತಿಯಲ್ಲಿ ಸಜ್ಜಾಗಿದೆ. ಸಾಮಾನ್ಯವಾಗಿ ಮೆಸ್ಕಾಂ ಪ್ರತಿ ಬಾರಿಯೂ ತಂತಿಯ ಮೇಲೆ ಬೀಳುವ ರೆಂಬೆಗಳನ್ನು ತೆರವು ಗೊಳಿಸುತ್ತದೆ. ಆದರೆ ಮಳೆಗಾಲ ಆರಂಭದಲ್ಲಿ ಅಪಾಯಕಾರಿ ರೆಂಬೆಗಳನ್ನೂ ತೆರವುಗೊಳಿಸಿದರೆ ಉತ್ತಮ. ಈ ಬಾರಿ ಮೆಸ್ಕಾಂ ಕಾರ್ಯಾಚರಣೆ ಆರಂಭಿಸಿದ್ದು, ಮುಂಗಾರು ಆರಂಭಕ್ಕೆ ಮೊದಲು ತೆರವು ಕಾರ್ಯಾಚರಣೆ ಪೂರ್ಣಗೊಳಿಸಲಿದೆ.

Advertisement

ಸಂಚಾರಿ ಸೇವೆ ವಾಹನ ಲಭ್ಯ
ಯಾವುದೇ ಅಪಾಯ ಸಂಭವಿಸಿದರೆ ತುರ್ತು ಕಾರ್ಯಾಚರಣೆಗಾಗಿ ಪ್ರತಿ ವಿಭಾಗ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಸರ್ವೀಸ್‌ ಸ್ಟೇಷನ್‌ಗಳು ಕಾರ್ಯಾಚರಿಸುತ್ತಿವೆ. ಜತೆಗೆ 24 ಗಂಟೆಗಳ ಮೊಬೈಲ್‌ ಸೇವೆ ವ್ಯಾನ್ಸ್‌ಗಳನ್ನು ಕೂಡ ಒದಗಿಸಲಾಗಿದೆ. ಇಲ್ಲಿ ತುರ್ತು ಕಾರ್ಯಾಚರಣೆಗೆ ಬೇಕಿರುವ ಎಲ್ಲ ಅಗತ್ಯ ಪರಿಕರಗಳಿದ್ದು, ಸಮಸ್ಯೆಗಳಿಗೆ ತತ್‌ಕ್ಷಣ ಸ್ಪಂದಿಸಲಿದೆ.

ಮಳೆಗಾಲದಲ್ಲಿ ವಿದ್ಯುತ್‌ ಪೂರೈಕೆಗೆ ಸಂಬಂಧಪಟ್ಟಂತೆ ಹೆಚ್ಚಿನ ಸಮಸ್ಯೆಗಳು ಕಂಡುಬರುತ್ತವೆ. ಜತೆಗೆ ಗ್ರಾಹಕ ಸಹಾಯ ವಾಣಿಗೆ ಜನರ ದೂರುಗಳು ಕೂಡ ಹೆಚ್ಚಿರುತ್ತವೆ. ಹೀಗಿರುವಾಗ ಮೆಸ್ಕಾಂ ಮಳೆಗಾಲದ ಕಾರ್ಯಾಚರಣೆಗೆ ಬೇಕಿರುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಅದಕ್ಕಾಗಿ ಮೆಸ್ಕಾಂ ಸಿಬಂದಿಗೆ ಸೂಚನೆ ನೀಡುವ ಕಾರ್ಯವನ್ನೂ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತತ್‌ಕ್ಷಣ ಸ್ಪಂದನೆ
ಗಾಳಿಮಳೆಗೆ ವಿದ್ಯುತ್‌ ಕಂಬಗಳು ಧರೆಗುರುಳುವ ಘಟನೆಗಳು, ಟ್ರಾನ್ಸ್‌ ಫಾರ್ಮರ್‌(ಟಿಸಿ)ಗೆ ಸಿಡಿಲಿನಿಂದ ಹಾನಿಯಾಗುವ ಘಟನೆಗಳು ಸಾಮಾನ್ಯವಾಗಿರುತ್ತವೆ. ಇಂತಹ ಘಟನೆಗಳು ನಡೆದಾಗ ತತ್‌ಕ್ಷಣ ಸ್ಪಂದಿಸುವುದಕ್ಕೆ ಮೆಸ್ಕಾಂ ಸರ್ವಸನ್ನದ್ಧವಾಗಿದೆ. ವಿದ್ಯುತ್‌ ಕಂಬಗಳು ಉರುಳಿದಾಗ ಅವುಗಳನ್ನು ಸರಿಪಡಿ ಸುವುದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. ಆದರೂ ಶೀಘ್ರದಲ್ಲಿ ಹೊಸ ಕಂಬಗಳನ್ನು ಅಳವಡಿಸುವ ಕಾರ್ಯ ನಡೆಸಲಾಗುತ್ತದೆ. ಸಿಡಿಲಿನಿಂದ ಟಿಸಿಗಳಿಗೆ ಹಾನಿಯಾದರೆ ತತ್‌ ಕ್ಷಣ ಅದನ್ನು ಬದಲಿಸಲಾಗುತ್ತದೆ. ಅದಕ್ಕಾಗಿ ಹೆಚ್ಚುವರಿ ಟಿಸಿಗಳು ಲಭ್ಯವಿದೆ ಎಂದು ಮೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸರ್ವೀಸ್‌ ಸ್ಟೇಷನ್‌
ಮೆಸ್ಕಾಂನಿಂದ ವಿದ್ಯುತ್‌ ದುರಸ್ತಿಗಾಗಿ ಪ್ರತಿ ವಿಭಾಗ ವ್ಯಾಪ್ತಿಯಲ್ಲೂ ಸರ್ವೀಸ್‌ ಸ್ಟೇಷನ್‌ಗಳು ಕಾರ್ಯಾಚರಿಸುತ್ತಿದೆ. ಮಂಗಳೂರು ಉಪವಿಭಾಗದಲ್ಲಿ 9 ಹಾಗೂ ಕಾವೂರು ಉಪವಿಭಾಗದಲ್ಲಿ 6 ಸರ್ವೀಸ್‌ ಸ್ಟೇಷನ್‌ಗಳು ಕಾರ್ಯಾಚರಿಸುತ್ತಿದೆ. ಇವು ಮರಗಳ ರೆಂಬೆ ತೆರವು ಕಾರ್ಯಾಚರಣೆ, ವಿದ್ಯುತ್‌ ತಂತಿ ದುರಸ್ತಿ ಮೊದಲಾದ ಕಾರ್ಯಗಳನ್ನು ಮಾಡಲಿವೆ. ಅದಕ್ಕೆ ಬೇಕಿರುವ ಎಲ್ಲ ಪರಿಕರಗಳು ಸರ್ವೀಸ್‌ ಸ್ಟೇಷನ್‌ನಲ್ಲಿದೆ. ಅದರಲ್ಲೂ ಮುಖ್ಯವಾಗಿ ದುರಸ್ತಿ ಕಾರ್ಯಕ್ಕೆ ಸೂಕ್ತ ಸಿಬಂದಿಯನ್ನೂ ನೇಮಿಸುವ ಕಾರ್ಯ ನಡೆದಿದೆ. ಮಳೆಯಿಂದ ಯಾವುದೇ ತೊಂದರೆಯಾದರೂ ಮೆಸ್ಕಾಂ ಸ್ಪಂದಿಸಲು ಸಿದ್ಧವಾಗಿದೆ ಎಂದು ಅಧಿಕಾರಿಗಳು ವಿವರಿಸುತ್ತಾರೆ.

Advertisement

ಹೆಲ್‌ ಲೈನ್ – 1912
ಮಳೆಗಾಲದಲ್ಲಿ ವಿದ್ಯುತ್‌ಗೆ ಸಂಬಂಧಪಟ್ಟಂತೆ ಹೆಚ್ಚಿನ ಸಮಸ್ಯೆಗಳಿರುತ್ತವೆ. ಈ ಕುರಿತು ಸಾರ್ವಜನಿಕರಿಗೆ ದೂರು ನೀಡಲು ಗ್ರಾಹಕ ಸಹಾಯವಾಣಿ-1912ಗೆ ಕರೆ ಮಾಡಬಹುದಾಗಿದೆ. ಇಲ್ಲಿ 15 ಕನೆಕ್ಷನ್‌ಗಳಿದ್ದು, 24 ಗಂಟೆಯೂ ಕಾರ್ಯಾಚರಿಸುತ್ತಿರುತ್ತದೆ. ಇಲ್ಲಿ ಸ್ವೀಕರಿಸಿದ ದೂರುಗಳನ್ನು ನಿಯೋಜಿತ ಸರ್ವೀಸ್‌ ಸ್ಟೇಷನ್‌ಗಳಿಗೆ ವರ್ಗಾಯಿಸಲಾಗುತ್ತದೆ.

ದುರಸ್ತಿ ಕಾರ್ಯ ಚುರುಕು
ಮುಂಗಾರು ಪೂರ್ವದಲ್ಲಿ ಮೆಸ್ಕಾಂ ವಿದ್ಯುತ್‌ ತಂತಿಗಳಲ್ಲಿ ಕಂಡುಬರುವ ದೋಷ, ಕೆಲವೊಂದು ಪರಿಕರಗಳ ಬದಲಾವಣೆ ಕಾರ್ಯವನ್ನು ಕೈಗೆತ್ತಿಕೊಳ್ಳುತ್ತದೆ. ಜತೆಗೆ ಪದೇ ಪದೇ ದೋಷ ಕಂಡುಬರುತ್ತಿದ್ದ ಪ್ರದೇಶದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತದೆ. ವಿದ್ಯುತ್‌ ಕಂಬಗಳು ಅಪಾಯದಲ್ಲಿದ್ದರೆ ಮಳೆಗಾಲದಲ್ಲಿ ಗಾಳಿಗೆ ಹೆಚ್ಚಿನ ತೊಂದರೆ ಇರುತ್ತದೆ. ಹೀಗಾಗಿ ಅದನ್ನು ಸರಿಪಡಿಸುವ ಕಾರ್ಯಗಳೂ ಪ್ರಸ್ತುತ ನಡೆಯುತ್ತಿವೆ. ಕೆಲವೊಂದು ಸಂದರ್ಭದಲ್ಲಿ ತಂತಿಗಳ ಬದಲಾವಣೆಯನ್ನೂ ನಡೆಸಬೇಕಾಗುತ್ತದೆ. ಮಂಗಳೂರು ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲೂ ಈ ಕಾರ್ಯ ಭರದಿಂದ ಸಾಗುತ್ತಿದೆ.

ಮಳೆಗಾಲಕ್ಕೆ ಮೆಸ್ಕಾಂ ಸಿದ್ಧ
ಮೆಸ್ಕಾಂ ವಿದ್ಯುತ್‌ ತಂತಿಗಳಿಗೆ ತೊಂದರೆ ಕೊಡುವ ಮರದ ರೆಂಬೆಗಳನ್ನು ತೆರವುಗೊಳಿಸುವ ಕಾರ್ಯವನ್ನು ಮುಂಗಾರು ಆರಂಭಕ್ಕೆ ಪೂರ್ವಭಾವಿಯಾಗಿ ನಡೆಸುತ್ತಿ ದೆ. ಜತೆಗೆ ಮಳೆಗಾಲದಲ್ಲಿ ಯಾವುದೇ ಸಮಸ್ಯೆ ಕಂಡುಬಂದರೂ ಸ್ಪಂದಿಸುವುದಕ್ಕೆ ಸರ್ವೀಸ್‌ ಸ್ಟೇಷನ್‌, ವಿಶೇಷ ವಾಹನಗಳು ಸಿದ್ಧವಿದೆ.
 - ಕಾರ್ಯಕಾರಿ ಎಂಜಿನಿಯರ್‌, ಮೆಸ್ಕಾಂ, ಮಂಗಳೂರು ಉಪವಿಭಾಗ 

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next