Advertisement

ಧೂಳಿನ ಕಾರಣಕ್ಕಾಗಿ ಕ್ರೀಡಾಂಗಣ ಬಂದ್

10:16 AM Dec 13, 2019 | Suhan S |

ಬೆಂಗಳೂರು: ರಸ್ತೆಯಲ್ಲಿನ ಕಸ ಗಾಳಿಗೆ ಹಾರಿ ಮನೆಯೊಳಗೆ ಬರುತ್ತದೆ ಅಂತ ಮನೆಗೆ ಬೀಗಹಾಕಿ ಎಲ್ಲರೂ ಹೊರಗೆ ವಾಸವಿದ್ದರೆ ಹೇಗಿರುತ್ತದೆ? ಕೇಳಲಿಕ್ಕೂ ಇದು ಹಾಸ್ಯಾಸ್ಪದ. ಆದರೂ ಇಂತಹದ್ದೇ ಕಾರಣಕ್ಕಾಗಿ ಮಲ್ಲೇಶ್ವರದಲ್ಲಿ ಐದೂವರೆ ಕೋಟಿ ರೂ. ಸುರಿದು ನಿರ್ಮಿಸಿದ ಕಟ್ಟಡ ವೊಂದರ ಬಾಗಿಲನ್ನು ಕಳೆದ ಒಂದೂವರೆ ವರ್ಷದಿಂದ ತೆರೆದಿಲ್ಲ. ಇದರಿಂದಾಗಿ ಧೂಳು ತುಂಬಿದ ಆ ಕಟ್ಟಡವು ಈಗ ಭೂತಬಂಗಲೆಯಂತೆ ಗೋಚರಿಸುತ್ತಿದೆ!- ರಾಜ್ಯದ ಏಕೈಕ ವಾಲಿಬಾಲ್‌ ಒಳಾಂಗಣ ಕ್ರೀಡಾಂಗಣದ ದುಃಸ್ಥಿತಿ ಇದು.

Advertisement

ವಾಲಿಬಾಲ್‌ ಪಟುಗಳ ಅನುಕೂಲಕ್ಕಾಗಿ ಸಂಸದರ ಅನುದಾನ 1.9 ಕೋಟಿ ರೂ., ರಾಜ್ಯಸಭಾ ಸದಸ್ಯರ ಅನುದಾನ 50 ಲಕ್ಷ ರೂ., ಶಾಸಕರ ಅನುದಾನ 3.21 ಕೋಟಿ ರೂ. ಸೇರಿದಂತೆ ಒಟ್ಟಾರೆ 5.61 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ವಾಲಿಬಾಲ್‌ ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗಿದೆ. ಈ ಮೂರಂತಸ್ತಿನ ಕಟ್ಟಡದಲ್ಲಿ ಒಂದು ವಾಲಿಬಾಲ್‌ ಕೋರ್ಟ್‌, ಎರಡು ತಂಡಗಳ ಕೊಠಡಿಗಳು, ಎರಡು ಸ್ಟೋರ್‌ ರೂಮ್‌ ಗಳು, 500 ಜನರು ಕುಳಿತುಕೊಳ್ಳುವ ಆಸನಗಳುಳ್ಳ ಸಾರ್ವಜನಿಕ ಗ್ಯಾಲರಿ, ವಿಐಪಿ ಗ್ಯಾಲರಿ ನಿರ್ಮಿಸಲಾಗಿದೆ. ಮುಖ್ಯದ್ವಾರಕ್ಕೆ ಗ್ಲಾಸ್‌ ಅಳವಡಿಸಲಾಗಿದೆ. ಹಾಗೆಯೇ ಕ್ರೀಡಾಂಗಣದಲ್ಲಿ ಗಾಳಿ, ಬೆಳಕಿನ ವ್ಯವಸ್ಥೆಯನ್ನೂ ಮಾಡಲಾಗಿದೆ. ಆದರೆ, ಅಲ್ಲಿ ಆಟ ಆಡಲಿಕ್ಕೆ ಮಾತ್ರ ಅವಕಾಶ ನೀಡಿಲ್ಲ. ಒಂದೆಡೆ ಕ್ರೀಡಾಪಟುಗಳಿಗೆ ಸೂಕ್ತ ಕ್ರೀಡಾಂಗಣಗಳಿಲ್ಲದೆ ಒದ್ದಾಡುತ್ತಿದ್ದಾರೆ. ಜತೆಗೆ ಅಭ್ಯಾಸಕ್ಕಾಗಿ ಕ್ರೀಡಾಂಗಣಗಳ ಕೊರತೆ ಇರುವ ಕಾರಣ ಪ್ರತಿಭೆಗಳು ಮುನ್ನೆಲೆಗೆ ಬರುತ್ತಿಲ್ಲ ಎಂಬ ಆರೋಪಗಳೂ ಕೇಳಿಬರುತ್ತಿವೆ.  ಆದರೆ, ಇತ್ತ ದೂಳಿನ ಕಾರಣಕ್ಕಾಗಿ ಕ್ರೀಡಾಂಗಣಕ್ಕೆ ಬಾಗಿಲು ಹಾಕಲಾಗಿದೆ.

 ಹೊರಾಂಗಣ ಕಾಮಗಾರಿಗಾಗಿ ಬೀಗ?: ಒಳಾಂಗಣ ಕ್ರೀಡಾಂಗಣಕ್ಕೆ ಹೊಂದಿಕೊಂಡಂತೆ ಅಂದರೆ ಚಂದ್ರ ಶೇಖರ್‌ ಆಜಾದ್‌ ಮೈದಾನದಲ್ಲಿ ಬಿಬಿಎಂಪಿಯ 2 ಕೋಟಿ ರೂ. ವೆಚ್ಚದಲ್ಲಿ ಹೊರಾಂಗಣ ಕ್ರೀಡಾಂಗಣದ ಕಾಮಗಾರಿ ಒಂದು ವರ್ಷದಿಂದ ನಡೆಯುತ್ತಿದೆ. ಈ ಹೊರಾಂಗಣ ಕ್ರೀಡಾಂಗಣದ ಮಧ್ಯಭಾಗದಲ್ಲಿ ಚರಂಡಿ ಪೈಪುಗಳು ಹಾದುಹೋಗಿದ್ದು, ಅತ್ಯಂತ ಜಾಗರೂಕತೆಯಿಂದ ಈ ಕಾಮಗಾರಿ ಮಾಡಬೇಕಾಗಿದೆ. ಈ ಕಾಮಗಾರಿಯಿಂದ ಮೈದಾನದ ದೂಳು ಒಳಾಂಗಣ ಕ್ರೀಡಾಂಗಣಕ್ಕೆ ಹೋಗಲಿದೆ. ಆದ್ದ ರಿಂದ ಬಾಗಿಲು ಹಾಕಲಾಗಿದೆ ಎಂದು ಸ್ಥಳೀಯ ಪಾಲಿಕೆ ಸದಸ್ಯ ಮಂಜುನಾಥ ರಾಜು ಸ್ಪಷ್ಟಪಡಿಸುತ್ತಾರೆ.

ಹೊರಾಂಗಣ ಕ್ರೀಡಾಂಗಣದಲ್ಲಿ ಬಹುತೇಕ ಕಾಮಗಾರಿಯು ಮುಗಿದಿದೆ. ಸಿಂಥಟಿಕ್‌ ಟ್ರ್ಯಾಕ್‌, ಬಾಲ್‌ ಬ್ಯಾಡ್ಮಿಂಟನ್‌, ಶೆಟಲ್‌ ಕಾಕ್‌, ಕಬಡ್ಡಿ ಮೈದಾನ ಸೇರಿದಂತೆ ವಿವಿಧ ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆಯೇ ವಾಲಿಬಾಲ್‌ ಒಳಾಂಗಣ ಕ್ರೀಡಾಂಗಣ ಸೇವೆಗೆ ಮುಕ್ತವಾಗಲಿದೆ ಎಂದು ಅವರು ತಿಳಿಸಿದರು. ಆದರೆ, ಇದು ಸಮಂಜಸವಾದ ಕಾರಣವಲ್ಲ. ಹಾಗೆ ನೋಡಿದರೆ, ಸುಮಾರು ದಿನಗಳಿಂದ ಬೀಗ ಹಾಕಿದ್ದರಿಂದ ನೂತನ ಒಳಾಂಗಣ ಕ್ರೀಡಾಂಗಣವು ದೂಳಿನಿಂದ ತುಂಬಿದೆ ಎಂದು ಕ್ರೀಡಾಪಟುಗಳು ಸದಸ್ಯರ ಸಮಜಾಯಿಷಿಯನ್ನು ನಿರಾಕರಿಸುತ್ತಾರೆ.

ಈ ವಾಲಿಬಾಲ್‌ ಒಳಾಂಗಣ ಕ್ರೀಡಾಂಗಣ ಸ್ಥಳದಲ್ಲಿ ಎರಡು ವರ್ಷಗಳ ಹಿಂದೆ ಬಿಬಿಎಂಪಿ ಕಚೇರಿ ಮತ್ತು ವಸತಿ ಗೃಹ ಕಟ್ಟಡವಿತ್ತು. ಬಿಬಿಎಂಪಿ ಜತೆ ಚರ್ಚಿಸಿ ಕಚೇರಿಯನ್ನು ಸೇವಾ ಕೇಂದ್ರ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಹಳೆಯ ಕಟ್ಟಡ ತೆರವುಗೊಳಿಸಿ ಮೂರು ಮಹಡಿಗಳ ಕಟ್ಟಡ ನಿರ್ಮಿಸಲಾಯಿತು.

Advertisement

ಉದ್ಘಾಟನಾ ಫ‌ಲಕ ತೆರವುಗೊಳಿಸಿಲ್ಲ :  2018ರ ಮಾರ್ಚ್‌ 19ರಂದು ಸ್ಥಳೀಯ ಸಂಸದ ಹಾಗೂ ಕೇಂದ್ರ ಸಚಿವರು ಉದ್ಘಾಟಿಸಿದ್ದರು. ಕಟ್ಟಡವುಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ಉದ್ಘಾಟನಾ ಸಮಾರಂಭವೆಂದು ಬ್ಯಾನರ್‌ ಅಳವಡಿಸಲಾಗಿತ್ತು. ಆದರೆ, ಈವರೆಗೂ ಬ್ಯಾನರ್‌ ತೆರವುಗೊಳಿಸಿಲ್ಲ. ಕೆಲ ಉಪಕರಣಗಳಿಗೆ ದೂಳು ಹಿಡಿದಿವೆ. ಕ್ರೀಡಾಂಗಣದ ಮುಂಭಾಗವು ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳ ನಿಲುಗಡೆ ತಾಣವಾಗಿದೆ.

ಎಲೆಕ್ಟ್ರಿಕಲ್‌ ವರ್ಕ್‌, ಎಸಿ ಅಳವಡಿಕೆ ಸೇರಿದಂತೆ ಕೆಲವು ಕೆಲಸಗಳು ನಡೆಯುತ್ತಿರುವುದರಿಂದ ಕ್ರೀಡಾ ಚಟುವಟಿಕೆಗಳಿಗೆ ಅವಕಾಶ ನೀಡಿಲ್ಲ. 2020ರ ಆರಂಭದಲ್ಲೇ ಎಲ್ಲ ಕೆಲಸಗಳು ಪೂರ್ಣಗೊಳ್ಳಲಿದ್ದು, ಫೆಬ್ರವರಿಯಿಂದ ಕ್ರೀಡಾಂಗಣಕ್ಕೆ ಮುಕ್ತ ಅವಕಾಶ ನೀಡಲಾಗುವುದು. ಕೆ. ನಂದಕುಮಾರ್‌, ವಾಲಿಬಾಲ್‌ ಅಸೋಸಿಯೇಷನ್‌ಪ್ರಧಾನ ಕಾರ್ಯದರ್ಶಿ.

 

-ಮಂಜುನಾಥ ಗಂಗಾವತಿ

Advertisement

Udayavani is now on Telegram. Click here to join our channel and stay updated with the latest news.

Next