Advertisement

ಶ್ರೀರಂಗಪಟ್ಟಣ ದಸರಾ ಅದ್ಧೂರಿ ಆಚರಣೆಗೆ ಸಹಕರಿಸಿ

07:07 PM Sep 12, 2019 | Naveen |

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ದಸರಾ ಆಚರಣೆಗೆ ಎಲ್ಲಾ ಇಲಾಖೆ ಅಧಿಕಾರಿಗಳು ಶ್ರದ್ಧಾಸಕ್ತಿಯಿಂದ ಕಾರ್ಯ ನಿರ್ವಹಿಸಿ ಅದ್ದೂರಿಯಾಗಿ ಆಚರಣೆಗೆ ಸಹಕರಿಸಬೇಕು ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದರು.

Advertisement

ಪಟ್ಟಣದಲ್ಲಿ ಜಿಲ್ಲಾಧಿಕಾರಿ ಡಾ.ವೆಂಕಟೇಶ್‌ ಅಧ್ಯಕ್ಷತೆಯಲ್ಲಿ ನಡೆದ ದಸರಾ ಮಹೋತ್ಸವ 2019ರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಶ್ರೀರಂಗಪಟ್ಟಣ ದಸರಾ ಆಚರಣೆ ಸಂಬಂಧ ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ಚರ್ಚಿಸಿ ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ 2 ಕೋಟಿ ರೂ. ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದು, ಅದಕ್ಕೆ ಅವರೂ ಒಪ್ಪಿಗೆ ಸೂಚಿಸಿದ್ದಾರೆ. ಈ ಬಾರಿ ಮೂರನೇ ದಿನ ದಸರಾ ಆಚರಿಸಲಾಗುವುದು. ಈ ಬಾರಿ ದಸರಾ ಉತ್ಸವದಲ್ಲಿ ಪ್ರತಿ ಇಲಾಖೆಯೂ ಮಾಹಿತಿಯುಳ್ಳ ಅತ್ಯುತ್ತಮ ಸ್ತಬ್ಧ ಚಿತ್ರಗಳನ್ನು ತಯಾರಿಸಿ ಮೆರವಣಿಗೆಯಲ್ಲಿ ಪ್ರದರ್ಶಿಸಬೇಕು ಎಂದು ಹೇಳಿದರು.

ಮನರಂಜನೆಗೆ ಸೀಮಿತವಲ್ಲ: ಜಿಲ್ಲಾಧಿಕಾರಿ ಡಾ.ಎಂ..ವೆಂಕಟೇಶ್‌ ಮಾತನಾಡಿ, ದಸರಾ ಉತ್ಸವ ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಬಾರದು. ದಸರಾ ಆಚರಣೆ ಮಾಡುವುದರಿಂದ ಸ್ಥಳೀಯ ಕಲಾವಿದರು, ವ್ಯಾಪಾರಿಗಳಿಗೆ ಉದ್ಯೋಗ ಲಭಿಸಲಿದೆ. ಜೊತೆಗೆ ಸ್ಥಳೀಯ ಆರ್ಥಿಕ ಪರಿಸ್ಥಿತಿ ಅಭಿವೃದ್ಧಿಯಾಗಲಿದೆ. ಮುಂದಿನ ದಿನಗಳಲ್ಲಿ ಶ್ರೀರಂಗಪಟ್ಟಣ ಪ್ರವಾಸೋದ್ಯಮ ಕ್ಷೇತ್ರವಾಗಿ ಮತ್ತಷ್ಟು ಅಭಿವೃದ್ಧಿ ಹೊಂದಲಿದೆ. ಕೆಆರ್‌ಎಸ್‌ ಬೃಂದಾವನ, ದೇವಸ್ಥಾನಗಳು ಸೇರಿದಂತೆ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಜನಜಾಗೃತಿ ಮೂಡಿಸಿ, ಶ್ರೀರಂಗಪಟ್ಟಣ ದಸರಾವನ್ನು ಅರ್ಥಪೂರ್ಣವಾಗಿ ಆಚರಿಸಲು ಸಹಕರಿಸುತ್ತೇವೆ ಎಂದು ಹೇಳಿದರು.

ಸಂಘಟನೆಗಳ ಸಲಹೆ: ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರು, ದಸರಾ ಆಚರಣೆ ಕುರಿತು ಪತ್ರಿಕೆಗಳಲ್ಲಿ ಜಾಹಿರಾತು ಮೂಲಕ ಹೆಚ್ಚು ಪ್ರಚಾರ ನೀಡಬೇಕು. ಕಿರಂಗೂರು ಗ್ರಾಮದಿಂದ ಪಟ್ಟಣದವರೆಗೆ ಮುಖ್ಯರಸ್ತೆಯಲ್ಲಿ ಬೀದಿ ದೀಪಗಳಿಲ್ಲದೆ ಹೆದ್ದಾರಿ ಬಿಕೋ ಎನ್ನುತ್ತಿದೆ. ಮೊದಲು ಬೀದಿ ದೀಪಗಳನ್ನು ಸರಿಪಡಿಸಬೇಕು.. ಬೆಂಗಳೂರು-ಮೈಸೂರು ಹೆದ್ದಾರಿ ವೃತ್ತದಲ್ಲಿ ಸಿಗ್ನಲ್ ದೀಪ ಅಳವಡಿಸಬೇಕು. ಆಳ್ವಿಕೆ ನಡೆಸಿರುವ ರಾಜರ ಭಾವಚಿತ್ರಗಳ ಜೊತೆಗೆ ಅವರ ಕಿರುಪರಿಚಯ ಮಾಡಿಕೊಡು ಕೆಲಸ ಆಗಬೇಕು. ದಸರಾ ಉತ್ಸವದಲ್ಲಿ ದೇಸೀಯ ಕಲಾವಿದರಿಗೆ ಆದ್ಯತೆ ಕೊಡಬೇಕು. ಕಲಾವಿದರಿಗೆ ಊಟದ ವ್ಯವಸ್ಥೆ, ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರು ಹಾಗೂ ಪೌರಕಾರ್ಮಿಕರನ್ನು ಅಭಿನಂದಿಸಬೇಕು. ವಿಕಲಚೇತನರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸುವುದೂ ಇತ್ಯಾದಿ ಸಲಹೆ ನೀಡಿದರು.

ಸಭೆಯಲ್ಲಿ ಜೋತಿಷಿ ಡಾ.ಭಾನುಪ್ರಕಾಶ್‌ ಶರ್ಮಾ, ಜಿಪಂ ಸಿಇಒ ಯಾಲಕ್ಕಿಗೌಡ, ಉಪ ವಿಭಾಗಾಧಿಕಾರಿ ಶೈಲಜಾ, ತಹಶೀಲ್ದಾರ್‌ ನಾಗೇಶ್‌, ತಾಪಂ ಇಒ ಹಡಗಲಿ ಅರುಣ್‌ಕುಮಾರ್‌, ಪುರಸಭೆ ಮುಖ್ಯಾಧಿಕಾರಿ ಕೃಷ್ಣ, ಜಿಪಂ, ತಾಪಂ, ಪುರಸಭೆ ಸದಸ್ಯರು, ಜನಪ್ರತಿನಿಧಿಗಳು, ಅಧಿಕಾರಿಗಳು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next