Advertisement

ಮಲೆನಾಡಿಗರಿಗೀಗ ಬಿಡುವಿಲ್ಲದ ಕೆಲಸ!

02:52 PM May 13, 2019 | Naveen |

ಶೃಂಗೇರಿ: ಮಲೆನಾಡಿನ ಗ್ರಾಮೀಣ ಜನರಗೀಗ ಬಿಡುವಿಲ್ಲದ ಕೆಲಸ ಮಳೆ ಆರಂಭವಾಗುವುದರೊಳಗೆ ಎಲ್ಲ ಕೃಷಿ ಕಾರ್ಯಗಳನ್ನು ಮಾಡಿ ಮುಗಿಸುವ ಗಡಿಬಿಡಿಯಲ್ಲಿದ್ದಾರೆ.

Advertisement

ಕಾರ್ಮಿಕರ ಕೊರತೆ ಸಾಕಷ್ಟಿದ್ದರೂ ರೈತಾಪಿ ಕೆಲಸಗಳನ್ನು ಆಯಾ ಕಾಲದಲ್ಲಿ ಮಾಡಲೇಬೇಕಾದ ಅನಿವಾರ್ಯ ಸ್ಥಿತಿ. ಮೇ ತಿಂಗಳು ಬಂತೆಂದರೆ ಮಲೆನಾಡಿನ ಹಳ್ಳಿಗಳ ಜನರಿಗೆ ಬರಲಿರುವ ಮುಂಗಾರಿಗೆ ಸಜ್ಜಾಗುವ ತರಾತುರಿ. ಶೃಂಗೇರಿ ಪಟ್ಟಣದಿಂದ ಸುಮಾರು 20-25 ಕಿ.ಮೀ ದೂರದಲ್ಲಿರುವ ಉಡ್ತಾಳ್‌, ದ್ಯಾವಂಟ, ಆವಂಟ ಮುಂತಾದ ಗ್ರಾಮಗಳಿಗೆ ಮಳೆಗಾಲದ ಸಮಯದಲ್ಲಿ ಪಟ್ಟಣಕ್ಕೆ ಬರಲು ಬಹಳ ಶ್ರಮ ಪಡಬೇಕಾಗಿದೆ.

ಸಮರ್ಪಕವಾದ ರಸ್ತೆ ಹಾಗೂ ವಾಹನ ಸೌಲಭ್ಯವಿಲ್ಲದೇ ನದಿ, ಹಳ್ಳ ಕೊಳ್ಳಗಳನ್ನು ದಾಟಿ ಬರಬೇಕಾದ ಸ್ಥಿತಿ. ಇದರಿಂದಾಗಿ ಈ ಭಾಗದ ಜನರು ನಡು ಮಳೆಗಾಲದ ಸಮಯದಲ್ಲಿ ಪಟ್ಟಣಕ್ಕೆ ಬಂದು ಮನೆಗೆ ಬೇಕಾಗುವ ಅಗತ್ಯ ವಸ್ತುಗಳಾದ ದಿನಸಿ ಸಾಮಾನುಗಳನ್ನು ಕೊಂಡುಕೊಳ್ಳಲು ಕಷ್ಟಸಾಧ್ಯವಾಗುವುದರಿಂದ ಈಗಲೇ ಮನೆಯಲ್ಲಿ ಸಂಗ್ರಹಿಸಿಡಬೇಕಾದ ಅನಿವಾರ್ಯ ಸ್ಥಿತಿ ಎನ್ನುತ್ತಾರೆ ಉಡ್ತಾಳ್‌ ಅರುಣ್‌ ಮತ್ತು ಇತರರು.

ಮನೆಗಳ ರಕ್ಷಣೆ: ಮಳೆಗಾಲದಲ್ಲಿ ಮಳೆ ಗಾಳಿ ಹೊಡೆತಕ್ಕೆ ಮನೆ ರಕ್ಷಣೆ ಕೆಲಸ ಹರಸಾಹಸವಾಗಿರುತ್ತದೆ. ಜಾನುವಾರುಗಳ ಕೊಟ್ಟಿಗೆಯ ರಿಪೇರಿ ಕಾರ್ಯ ದರಗು ಮತ್ತು ಒಣಹುಲ್ಲಿನ ಕೊಟ್ಟಿಗೆ ದುರಸ್ತಿ ಜೊತೆಗೆ ಅಡಿಕೆ ಮರದ ಸೋಗೆಯಿಂದ ಕೊಟ್ಟಿಗೆಗಳಿಗೆ ಮರೆ ಮಾಡುವುದು, ಅಡಿಕೆ ಚಪ್ಪರ ಕಟ್ಟಿಡುವುದು ಇತ್ಯಾದಿಗಳ ಭರಾಟೆ ಜೋರಾಗಿಯೇ ನಡೆಯುತ್ತಿದೆ.

ಅಕ್ಕಿ ಸಂಗ್ರಹ: ಮಳೆಗಾಲದ ಸಮಯದಲ್ಲಿ ಮನೆಗಳಿಗೆ ಬೇಕಾಗುವ ಅಕ್ಕಿಯನ್ನು ಮನೆಯಿಂದ ಭತ್ತವನ್ನು ಅಕ್ಕಿ ಗಿರಣಿಗೆ ಕೊಂಡೊಯ್ದು ಅಕ್ಕಿ ಮಾಡಿಸಿ ಸಂಗ್ರಹಿಸುವ ಕಾರ್ಯವು ನಡೆಯುತ್ತಿದೆ.

Advertisement

ಕೃಷಿ ಕಾರ್ಯ: ಇನ್ನೇನು ಮಳೆಗಾಲ ಆರಂಭವಾಗುವ ಹಂತದಲ್ಲಿ ರೈತರ ಗದ್ದೆಗಳಿಗೆ ಗೊಬ್ಬರ ಹುಡಿ ಹೂಟಿ ಗೊಬ್ಬರ ಬೀಜ ಬಿತ್ತುವ ಕಾರ್ಯ ಆರಂಭಗೊಳ್ಳಲಿದೆ. ವರ್ಷಪೂರ್ತಿ ಮಾಡುವ ಕೆಲಸ ಒಂದು ಸಣ್ಣ ಲೋಪವಾದರೂ ವರ್ಷವಿಡೀ ಅನುಭವಿಸಬೇಕಾದ ಸಮಸ್ಯೆ. ಆದ್ದರಿಂದ ಮಳೆ ಆರಂಭಕ್ಕೆ ಮೊದಲು ಈ ಎಲ್ಲ ಕೆಲಸಗಳನ್ನು ಮೊದಲು ಮಾಡಿ ಮುಗಿಸಬೇಕಾದ ಅನಿವಾರ್ಯ ಸ್ಥಿತಿ ರೈತರದ್ದು.

ಸೌದೆ ಸಂಗ್ರಹ: ಮಳೆಗಾಲ ಮುಗಿಯುವವರೆಗೂ ಬೇಕಾದ ಎಲ್ಲ ಅಗತ್ಯಗಳ ಜೊತೆಗೆ ಸೌದೆಯ ಅಗತ್ಯವು ಬಹಳವೇ ಇದೆ. ಸಾಮಾನ್ಯವಾಗಿ ತಾಲೂಕಿನ ರೈತರ ಮನೆಗಳಲ್ಲಿ ಅಡಿಗೆ ಮಾಡಲು ಗ್ಯಾಸ್‌ ಬಳಸುತ್ತಿದ್ದರೂ ಸಹ ಅಡಿಕೆ ಬೇಯಿಸುವುದಕ್ಕೆ ಕಟ್ಟಿಗೆ ಕಡಿಯಲೇಬೇಕಾದ ಸ್ಥಿತಿ. ಕಟ್ಟಿಗೆ ಕಡಿದು ಒಣಗಿಸಿ ಅದನ್ನು ಒಪ್ಪವಾಗಿ ಜೋಡಿಸಿಡುವ ಕಾರ್ಯ ತಾಲೂಕಿನಾದ್ಯಂತ ಭರದಿಂದ ಸಾಗಿದೆ.

ಅಮ್ಮ-ಅಜ್ಜಿಯಂದಿರ ಬಿಡುವಿಲ್ಲದ ಕೆಲಸ: ಮಳೆಗಾಲ ಆರಂಭವಾಗುವ ಮೊದಲು ಮನೆಗೆ ಬೇಕಾಗುವ ದವಸ-ಧಾನ್ಯಗಳನ್ನು ಒಣಗಿಸುವುದು ಹಪ್ಪಳ, ಸಂಡಿಗೆ, ಉಪ್ಪಿನಕಾಯಿ ಇತ್ಯಾದಿಗಳನ್ನು ತಯಾರಿಸಿ ಅದನ್ನು ಸಂಗ್ರಹಿಸಿಟ್ಟುಕೊಳ್ಳುವ ಕಾರ್ಯವು ನಡೆಯುತ್ತಿದೆ.

ಈ ವರ್ಷ ಒಳ್ಳೇಯ ಮಾವಿನಮಿಡಿ ಸಿಗುತ್ತಿಲ್ಲ. ಕಳೆದ ತಿಂಗಳಿನಲ್ಲಿ ಜೋರಾಗಿ ಬಂದ ಮಳೆ, ಗಾಳಿ, ಸಿಡಿಲಿನಿಂದಾಗಿ ಮಾವಿನ ಮಿಡಿಗಳು ಕೊಳೆತದ್ದರಿಂದಾಗಿ ಉಪ್ಪಿನಕಾಯಿ ಮಾಡಲು ಕಷ್ಟಸಾಧ್ಯವಗಿದೆ. ಪಕ್ಕದ ತಾಲೂಕುಗಳಾದ ರಿಪ್ಪನಪೇಟೆ, ಬೇಲೂರು ಮುಂತಾದೆಡೆಯಿಂದ ಮಾವಿನಮಿಡಿಗಳನ್ನು ತರಬೇಕಾಗಿದೆ.
• ಕೆರೆಮನೆ ಭರತರಾಜ್‌.

Advertisement

Udayavani is now on Telegram. Click here to join our channel and stay updated with the latest news.

Next