Advertisement

ಶ್ರೀಮನ್ಮಹಾಭಾರತ ಮಂಗಳ್ಳೋತ್ಸವಕ್ಕೆ ಚಾಲನೆ

04:28 PM May 23, 2019 | Team Udayavani |

ಧಾರವಾಡ: ನಾಲ್ಕು ವೇದಗಳ ಸಂಗಮದ ಸನ್ನಿಧಾನವೇ ಮಹಾಭಾರತ ಆಗಿದೆ ಎಂದು ಉಡುಪಿಯ ಅದಮಾರು ಮಠದ ವಿಶ್ವಪ್ರಿಯತೀರ್ಥ ಸ್ವಾಮೀಜಿ ಹೇಳಿದರು.

Advertisement

ನಗರದ ಕವಿಸಂನ ಪುಂಡರೀಕ್ಷಕ ಸಭಾಂಗಣದ ವ್ಯಾಸಪೀಠ ವೇದಿಕೆಯಲ್ಲಿ ಲೋಕ ಕಲ್ಯಾಣಾರ್ಥ ಮೇ 22ರಿಂದ ಮೇ 26ರವರೆಗೆ ಹಮ್ಮಿಕೊಂಡ ಪಂಡಿತ ಕಂಠಪಲ್ಲಿ ಸಮೀರಾಚಾರ್ಯ ಅವರಿಂದ ನಾಲ್ಕು ವರ್ಷಗಳ ಪರ್ಯಂತ ನಡೆದ ಶ್ರೀಮನ್ಮಹಾಭಾರತ ಮಂಗಳ್ಳೋತ್ಸವಕ್ಕೆ ಚಾಲನೆ ನೀಡಿ ಅವರು ಆರ್ಶೀವಚನ ನೀಡಿದರು.

ಪ್ರತಿಯೊಬ್ಬರು ಎಲ್ಲ ವೇದಗಳನ್ನು ಅಧ್ಯಯನ ಮಾಡಲಾಗದು. ಇಂತಹ ಸಂದರ್ಭದಲ್ಲಿ ಮಹಾಭಾರತದ ಅಧ್ಯಯನದಿಂದ ವೇದಗಳ ಸನ್ನಿಧಾನ ಪ್ರಾಪ್ತಿ ಆಗುತ್ತದೆ. ಅದರಲ್ಲೂ ಇಡೀ ವಿಶ್ವಕ್ಕೆ ಕಣ್ಣಿನಂತೆ ಮಹಾಭಾರತ, ರಾಮಾಯಣ ಆಗಿದ್ದು, ಇವು ವಿಶ್ವಕ್ಕೆ ಶ್ರೇಷ್ಠ ಗ್ರಂಥಗಳಾಗಿವೆ ಎಂದರು.

ಭಾರತ ದೇಶ, ನಮ್ಮ ಸಂಸ್ಕೃತಿ ಆಚಾರ-ವಿಚಾರಗಳ ಬಗ್ಗೆ ಅಪಮಾನ, ಟೀಕಿಸುವ ಜನರಿಗೆ ತಕ್ಕ ಪಾಠ ಕಲಿಸುವ ಕೆಲಸ ಆಗಬೇಕಿದೆ. ಅದಕ್ಕಾಗಿ ಮಕ್ಕಳಿಗೆ ನಮ್ಮ ಸಂಸ್ಕೃತಿಯ ವಿಚಾರದ ಚಿಂತನೆಗಳ ಬೀಜ ಬಿತ್ತುವ ಕಾರ್ಯವಾಗಬೇಕು. ಯಾರೇ ತಪ್ಪು ಮಾಡಿದ್ದರೂ ಅದನ್ನು ನೇರವಾಗಿ ಹೇಳುವ, ಎದುರಿಸುವ ತಾಕತ್ತು ಕೊಡುವ ಶಕ್ತಿ ಮಹಾಭಾರತಕ್ಕಿದೆ. ಅದಕ್ಕಾಗಿ ಪ್ರತಿ ದಿನ ಅದರ ಒಂದು ಶ್ಲೋಕವನ್ನಾದರೂ ಮಾಡಬೇಕೆಂದು ಸಲಹೆ ನೀಡಿದರು.

ಮಹಾಭಾರತ-ರಾಮಾಯಣ ಗ್ರಂಥಗಳು ಇಡೀ ಜಗತ್ತಿಗೆ ಮಾರ್ಗದರ್ಶನ ಮಾಡಿವೆ. ಈ ಗ್ರಂಥಗಳನ್ನು ನಾವು ಪ್ರತಿನಿತ್ಯ ಪಠಣ ಮಾಡಬೇಕು. ಈ ಮಹಾನ್‌ ಗ್ರಂಥಗಳ ಪರಿಚಯ ಇಂದಿನ ಜನಾಂಗಕ್ಕೆ ಅವಶ್ಯವಿದೆ. ನಮ್ಮ ಸಂಸ್ಕತಿಯ ಹಿರಿಮೆ ನಮಗೆ ಗೊತ್ತೇ ಇಲ್ಲ. ಮಹಾಪುರುಷರ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

Advertisement

ಬೆಂಗಳೂರಿನ ಜಯತೀರ್ಥ ವಿದ್ಯಾಪೀಠದ ಡಾ|ಸತ್ಯಧ್ಯಾನಾಚಾರ್ಯ ಕಟ್ಟಿ ಮಾತನಾಡಿ, ಮಕ್ಕಳು ಪೋಷಕರು ಮಾತು ಕೇಳುತ್ತಿಲ್ಲ. ಮನೆಯಲ್ಲಿ ಸಮ್ಮತಿಯ ಮದುವೆಗಳೇ ಆಗುತ್ತಿಲ್ಲ. ಆದ ಮದುವೆಗಳು ಮುರಿದು ಬೀಳುತ್ತಿವೆ. ಪೋಷಕರನ್ನು ವೃದ್ಧಾಶ್ರಮಕ್ಕೆ ಹಾಕಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸಮಾಜದಲ್ಲಿ ಮೌಲ್ಯಗಳು ನಶಿಸಿ ಹೋಗುತ್ತಿವೆ. ಹೀಗಾಗಿ ಸಮಾಜದಲ್ಲಿ ಮತ್ತೆ ಮೌಲ್ಯಗಳ ಪುನರ್‌ ಸ್ಥಾಪಿಸಲು ಮಕ್ಕಳಿಗೆ ನಮ್ಮ ಸಂಸ್ಕೃತಿ ಪರಿಚಯಿಸುವ ಕೆಲಸ ಆಗಬೇಕಿದೆ ಎಂದರು.

ರಾಮಾಯಣ, ಮಹಾಭಾರತದಂತಹ ಶ್ರೇಷ್ಠ ಗ್ರಂಥಗಳನ್ನು ಬರೀ ಪತಿ-ಪತ್ನಿ, ಸಹೋದರರ ಜಗಳದ ಮನೋಭಾವಕ್ಕೆ ಹೋಲಿಸುತ್ತಿರುವುದು ವಿಷಾದನೀಯ. ಮೊಬೈಲ್, ಟಿವಿಗಳಿಂದ ಎಂದಿಗೂ ಮನಸ್ಸಿಗೆ ನೆಮ್ಮದಿ, ಸುಖ, ಶಾಂತಿ ಲಭಿಸಲಾರದು. ಬದಲಾಗಿ ಈ ಗ್ರಂಥಗಳಿಂದ ಮಾತ್ರವೇ ಸುಖ-ಶಾಂತಿ ಪಡೆಯಲು ಸಾಧ್ಯ. ಮಹಾಭಾರತ, ರಾಮಾಯಣದಂತಹ ಶ್ರೇಷ್ಠ ಗ್ರಂಥಗಳಿಂದ ಸಮಾಜ ದೂರವಾದಷ್ಟು ದುಃಖ, ಅಶಾಂತಿಗೆ ಸ್ವಾಗತ ಕೋರಿದಂತೆ ಎಂದರು.

ಪಂ|ಸಮೀರಾಚಾರ್ಯ ಕಂಠಪಲ್ಲಿ, ಡಾ|ಆರ್‌. ಜಿ. ಜೋಶಿ, ಎಸ್‌.ಎಂ.ಸರಾಫ್‌, ಪ್ರಕಾಶ ಬೇಗೂರ, ಕೃಷ್ಣಮೂರ್ತಿ, ಎಸ್‌.ಎನ್‌. ದೇಶಪಾಂಡೆ ಸೇರಿದಂತೆ ಹಲವರು ಇದ್ದರು. ತೇಜಸ್ವಿನಗರದ ತೇಜಸ್ವಿ ಮಹಿಳಾ ಮಂಡಳದವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಮಂಗಳ್ಳೋತ್ಸವ ಪ್ರಯುಕ್ತ ಮೇ 26 ರವರೆಗೆ ದಿನನಿತ್ಯ ವಿವಿಧ ಕಾರ್ಯಕ್ರಮ ಜರುಗಲಿವೆ.

Advertisement

Udayavani is now on Telegram. Click here to join our channel and stay updated with the latest news.

Next