Advertisement

ಶ್ರೀಕೃಷ್ಣ ಪಾರಿಜಾತ ಮನೋಹರ ಕಾಂತಾ ಸಂಮಿತ

06:50 PM Mar 06, 2020 | mahesh |

ಪುರುಷ ಪ್ರಧಾನವೆನಿಸಿದ ಪಾತ್ರಗಳನ್ನೂ ವಹಿಸಿ ಸೈ ಎನಿಸಿಕೊಳ್ಳುತ್ತಿರುವ ಈ ದಿನಗಳಲ್ಲಿ ಬಹುಮುಖ ಪ್ರತಿಭೆಯ ಮೂಲಕ ಗಮನ ಸೆಳೆಯುತ್ತಿರುವವರು ಸುವರ್ಣಕುಮಾರಿ. ಸುವರ್ಣಕುಮಾರಿ ಸಂಗೀತ, ಗಮಕ, ಯಕ್ಷಗಾನ ಅಲ್ಲದೆ ಹರಿಕತೆಯಲ್ಲಿಯೂ ಕೂಡ ನೈಪುಣ್ಯ ಪಡೆದವರು.ಜ.1ರಂದು ಬೆಳ್ತಂಗಡಿಯ ಕಂಡಿಗ ಸಂತಾನ ಗೋಪಾಲಕೃಷ್ಣ ದೇವರ ಜಾತ್ರೆಯಲ್ಲಿ ಮಧ್ಯಾಹ್ನದಿಂದ ಸಂಜೆ ತನಕ ಮೂರು ಗಂಟೆಗಳ ಕಾಲ ಶ್ರೋತೃಗಳಿಗೆ ಕರ್ಣಾಮೃತವೆನಿಸಿದ ಶ್ರೀಕೃಷ್ಣ ಪಾರಿಜಾತ ಯಕ್ಷಗಾನ ಪ್ರಸಂಗದ ಸತ್ಯಭಾಮೆ, ಶ್ರೀಕೃಷ್ಣರ ಕಾಂತಾ ಸಂಮಿತವೆಂಬ ರಸಗವಳ. ಇಲ್ಲಿ ಸುವರ್ಣಕುಮಾರಿ ಮತ್ತು ಮೋಹನ ಕಲ್ಲೂರಾಯ ದಂಪತಿ ಈ ಪಾತ್ರಗಳ ಸಂವಾದದ ಮೂಲಕ ಒಂದು ಮೃದು ಮಧುರವಾದ ಸಾಂಸಾರಿಕ ಘಟ್ಟವನ್ನು ಸೃಷ್ಟಿಸಿ ಆಲಿಸಿದವರ ಮನಸ್ಸಿಗೆ ಕಚಗುಳಿಯನ್ನಿಟ್ಟರು. ಇದು ಪಾತ್ರವಲ್ಲ, ಮನೆಯ ಅನುಭವ ಎಂಬಂತಹ ಆಪ್ತಭಾವವನ್ನು ಮೂಡಿಸಿಬಿಟ್ಟರು.

Advertisement

ಭೂದೇವಿ ಮತ್ತು ವರಾಹಮೂರ್ತಿ ಇವರಿಬ್ಬರ ಗಾಢಾಲಿಂಗನದಿಂದ ಉದುರಿದ ಸ್ವೇದಬಿಂದುವೇ ಮಗುವಾಗಿ ಜನಿಸಿ ಪ್ರಾಗೊjàತಿಷಪುರದ ಅರಸನಾಗಿ ಮೆರೆಯುವ ನರಕಾಸುರನ ಒಡ್ಡೋಲಗದಿಂದಲೇ ಪ್ರಸಂಗ ಆರಂಭವಾಗುತ್ತದೆ. ತಾಯಿ, ತಂದೆ ಒಟ್ಟುಗೂಡಿ ಬಂದು ಬಾಣ ಹೊಡೆದರೆ ಮಾತ್ರ ತನಗೆ ಸಾವು ಬರಲಿ ಎಂದು ಬ್ರಹ್ಮನಲ್ಲಿ ಕೇಳಿ ವರ ಪಡೆದ ನರಕ ಮದೋನ್ಮತ್ತನಾಗಿ ಸ್ವರ್ಗದ ಮೇಲೆ ದಾಳಿಯಿಡುತ್ತಾನೆ. ಇಂದ್ರನನ್ನು ಸೋಲಿಸಿ ನಾಕದ ಸಮಸ್ತ ಸುವಸ್ತುಗಳೊಂದಿಗೇ ಅದಿತಿದೇವಿಯ ಕರ್ಣಕುಂಡಲಗಳು, ಕುಬೇರನ ಮಣಿಶೈಲವನ್ನೂ ಬಿಡದೆ ಸೆಳೆದು ತರುತ್ತಾನೆ. ಸೋತ ಇಂದ್ರನು ಶ್ರೀಕೃಷ್ಣನಿಗೆ ಶರಣಾಗಿ, ಮೊರೆಯಿಟ್ಟು ಅಸುರನನ್ನು ವಧಿಸುವಂತೆ ಕೋರುತ್ತಾನೆ.

ಇಂದ್ರನಿಗೆ ಶ್ರೀಕೃಷ್ಣನು ಅಭಯ ನೀಡಿ ಕಳುಹಿಸಿದ ಮೇಲೆ ಪ್ರವೇಶವಾಗುವುದು ಸತ್ಯಭಾಮೆಯ ಪಾತ್ರ. ಸ್ತ್ರೀ ಸಹಜವಾದ ವಯ್ನಾರ, ಸಿಟ್ಟು, ಸೆಡವು, ಹುಸಿಮುನಿಸುಗಳ ಭಾವ ಪ್ರಕಟಣೆಯ ಜೊತೆಗೆ ಶುದ್ಧವಾದ ಕಾವ್ಯಾತ್ಮಕ ಸಾಹಿತ್ಯವಿರುವ ಸಂಭಾಷಣೆಯ ಮೂಲಕ ಸತ್ಯಭಾಮೆಯಾಗಿ ಸುವರ್ಣಕುಮಾರಿ ರಂಗಕ್ಕೆ ಕಳೆ ತುಂಬಿದರು. ಗರುಡನನ್ನೇರಿ ಸ್ವರ್ಗದತ್ತ ಹೊರಡಲು ಅಣಿಯಾದ ವಲ್ಲಭನೊಂದಿಗೆ, “ಎಲ್ಲಿಗೆ ಗಮನ ನಿಲ್ಲು ನಿಲ್ಲೆಲೊ ಎನ್ನಯ ರಮಣ, ಏನು ಹದನ, ಯಾರೊಡನಿಂತು ಕದನ?’ ಎಂದು ಪ್ರಶ್ನಿಸುವಾಗ ಸತ್ಯಭಾಮೆಯ ಎಲ್ಲ ಅಹಮಿಕೆಗಳೂ ಆವಿರ್ಭವಿಸಿತು.

“ಕೀರವಾಣಿ ಕೇಳೆ ಪೊರಟಿಹ ಕಾರಣ ಗುಣಶೀಲೆ’ ಎಂಬ ಪದ್ಯಕ್ಕೆ ಮೋಹನ ಕಲ್ಲೂರಾಯರ ಚಿತ್ತಾಕರ್ಷಕ ಮಾತಿನ ವರಸೆ, ಜೊತೆಗೆ ಬರುವೆನೆನ್ನುವ ಮಡದಿಯನ್ನು ಓಲೈಸುವ, ಸಮಾಧಾನಪಡಿಸುವ, ಯಾಚಿಸುವ ಪರಿಯನ್ನು ನಿಕಟವಾದ ಶೈಲಿಯಲ್ಲಿ ಬಿಂಬಿಸಿತು. ಸ್ವರ್ಗದಲ್ಲಿರುವ ಪಾರಿಜಾತ ವೃಕ್ಷವನ್ನು ತೋರಿಸುವುದಾಗಿ ನಲ್ಲನು ಎಂದೋ ನೀಡಿದ ಮಾತನ್ನು ನೆನಪಿಸುವ ಸತ್ಯಭಾಮೆ ಜೊತೆಗೆ ತಾನು ಬರುವುದಾಗಿ ಕೋರಿದಾಗ ಶ್ರೀಕೃಷ್ಣನು, “ಅದನ್ನು ನೋಡಲು ಇನ್ನೊಮ್ಮೆ ಹೋಗಬಹುದು. ನಾನೀಗ ಯುದ್ಧಕ್ಕೆ ಹೊರಟವನು. ಅಬಲೆಯಾದ ನೀನು ಯುದ್ಧವನ್ನು ನೋಡಿದರೆ ಭಯಪಡಬಹುದು’ ಎಂದು ನಿರಾಕರಿಸಿದಾಗ ಸತ್ಯಭಾಮೆಯ ಮುಖದಲ್ಲಿ ಮೂಡುವ ಕೆಚ್ಚನ್ನು ಸಮರ್ಥವಾಗಿ ವ್ಯಕ್ತಗೊಳಿಸಿದ ಕಲಾವಿದೆ, “ನಾನು ಕ್ಷಾತ್ರಿಯಾಣಿ! ಸಮರಕ್ಕೆ ಅಂಜುವವಳಲ್ಲ’ ಎಂದು ಹೇಳುವ ದಿಟ್ಟ ಮಾತುಗಾರಿಕೆ, ಕಡೆಗೂ ಪತಿ ಒಪ್ಪುವುದಿಲ್ಲವೆನಿಸಿದಾಗ, “ನನ್ನ ಮಾತಿಗೆ ನೀವು ಒಪ್ಪದಿದ್ದರೆ ಶಯ್ನಾಗೃಹದ ಬಾಗಿಲು ಮುಚ್ಚಿ ಹೊರಗೆಯೇ ಉಳಿಯುವಂತೆ ಮಾಡುತ್ತೇನೆ’ ಎನ್ನುತ್ತ ತನ್ನ ಮಾತಿಗೆ ಒಪ್ಪಿಸುವ ಕೋಪದ ಪರಿ ಎಲ್ಲವೂ ಕೃತಕವಾಗಿ ಕಾಣಿಸದೆ ನಿಜ ಬದುಕಿನ ಸಂವಾದದ ಹಾಗೆಯೇ ಸಹಜವಾಗಿ ಮೂಡಿಬಂತು.

ಸಗ್ಗವನ್ನು ಸೇರಿ ನರಕನೊಂದಿಗೆ ಕಾದಾಡಿ ಸೋಲಿನ ನಟನೆ ಮಾಡುತ್ತ ಕೆಳಗೆ ಕುಸಿಯುವ ಶ್ರೀಕೃಷ್ಣ, ಸತ್ಯಭಾಮೆಯೇ ಬಿಲ್ಲನ್ನು ಹಿಡಿದು ಬಾಣ ಪ್ರಯೋಗ ಮಾಡುವಾಗ ಕೈಜೋಡಿಸುವ ಘಟ್ಟಗಳಲ್ಲಿ ದಂಪತಿ ಶ್ರುತಪಡಿಸಿದ ಮಾತುಗಾರಿಕೆ ಇನ್ನಿಲ್ಲದ ಮೋಡಿ ಹಾಕಿತು. ಪ್ರಸಂಗದಲ್ಲಿ ಎದ್ದು ಕಾಣುವಂತಿದ್ದುದು ಈ ಕಾಂತಾ ಸಂಮಿತವೇ ಆದರೂ ನರಕನಾಗಿ ಬಾಸುಮೆ ನಾರಾಯಣ ಭಟ್ಟರು ವೇಷಗಾರಿಕೆಯ ಅನುಭವದಿಂದಾಗಿ ಅಬ್ಬರದ ಪ್ರವೇಶದಿಂದಲೇ ರಂಗವನ್ನು ತುಂಬಿಬಿಟ್ಟರು. ಮೋಕ್ಷ ಸನ್ನಿವೇಶದಲ್ಲಿ ಇವರು ತನ್ನ ಜನನಿ, ಜನಕರೆಂಬುದನ್ನು ತಿಳಿದಾಗ ವ್ಯಕ್ತವಾಗುವ ಅವನ ಮನದಳಲನ್ನು ಚಿತ್ರಿಸಿದ ಬಗೆ ಹೃದಯಸ್ಪರ್ಶಿಯಾಗಿ ಮೂಡಿಬಂತು. ಮುರಾಸುರನಾಗಿ ಶಿಕ್ಷಕ ರಾಮಕೃಷ್ಣ ಬಳಂಜ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದರು.

Advertisement

ವಾಸುದೇವ ಕಲ್ಲೂರಾಯರ ತುಂಬು ಕಂಠದ ಭಾಗವತಿಕೆ ಹಾಡುಗಳಿಗೆ ಜೀವಂತಿಕೆ ತುಂಬಿತು. ಮೂರು ರಾಗಳನ್ನು ಬಳಸಿಕೊಂಡ ಪರಿ ಮನಮೋಹಕವೆನಿಸಿತ್ತು. ಅಮೋಘ ಕುಂಟಿನಿಯ ಮೃದಂಗ ಹರಿವ ಜಲದ ಹಾಗೆ ರಾಗ ರಸಾಮೃತಕ್ಕೆ ಜೊತೆಯಾಯಿತು. ರಾಮಪ್ರಕಾಶ್‌ ಮತ್ತು ನರಸಿಂಹಮೂರ್ತಿಯವರ ಚೆಂಡೆ ವಾದನ ಯಶಸ್ವೀ ಕಥಾನಕದ ಪರಿಪೂರ್ಣತೆಗೆ ಹೆಚ್ಚು ಸಹಕಾರಿಯಾಗಿತ್ತು.

ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next