Advertisement

ಶ್ರೀಕೃಷ್ಣಮಠ: ಗರ್ಭಗುಡಿಯ ತಾಮ್ರದ ಹಾಳೆ ಭಕ್ತರಿಗೆ ಪ್ರಸಾದ ರೂಪದಲ್ಲಿ

01:00 AM Mar 20, 2019 | Harsha Rao |

ಉಡುಪಿ: ಕೃಷ್ಣ ಮಠದ ಗರ್ಭಗುಡಿಯ ಗೋಪುರದ ಮೇಲ್ಛಾವಣಿಯಲ್ಲಿ ಅಳವಡಿಸಿದ ಜೀರ್ಣವಾದ ತಾಮ್ರದ ಹಾಳೆ ರೂಪದಲ್ಲಿ ಸುವರ್ಣ ಗೋಪುರ ನಿರ್ಮಾಣಕ್ಕೆ ಸಹಾಯಧನ ಮಾಡಿರುವ ಭಕ್ತರಿಗೆ ಪ್ರಸಾದದ ರೂಪದಲ್ಲಿ ಸೇರಲಿದೆ.

Advertisement

ಪಲಿಮಾರು ಮಠದ ಶ್ರೀಗಳ ದ್ವಿತೀಯ ಪರ್ಯಾಯ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಶ್ರೀ ಕೃಷ್ಣಮಠದ ಸುವರ್ಣ ಗೋಪುರ ನಿರ್ಮಾಣ ಕಾಮಗಾರಿಗೆ ಪಲಿಮಾರು ಶ್ರೀಪಾದರು ಈಗಾಗಲೇ ಚಾಲನೆ ನೀಡಿದ್ದಾರೆ. ಗೋಪುರಕ್ಕೆ ಸುವರ್ಣ ಅಳವಡಿಸುವ ಪ್ರಾರಂಭಿಕ ಹಂತವಾಗಿ ಮಠದ ಗೋಪುರಕ್ಕೆ ಆಳವಡಿಸಿದ ತಾಮ್ರ ಹಾಗೂ ಮರವನ್ನು ಹೊರ ತೆಗೆಯುವ ಕಾರ್ಯ ಭರದಿಂದ ಸಾಗುತ್ತಿದೆ.

1,500 ಕೆ.ಜಿ. ತಾಮ್ರ
ಕೃಷ್ಣ ಮಠದ ಗರ್ಭ ಗುಡಿಯ ಮೇಲ್ಛಾವಣಿಯಲ್ಲಿ ಒಟ್ಟು 1,500 ಕೆ.ಜಿ. ತಾಮ್ರವಿದೆ. ಸುಮಾರು 20 ಮಂದಿ ಬಳಸಿ ತಾಮ್ರದ ತಗಡನ್ನು ಗೋಪುರದಿಂದ ಬೇರ್ಪಡಿಸಲಾಗುತ್ತಿದೆ. ಮುಂದಿನ ಎರಡು ದಿನಗಳಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿದೆ. 

ಟಂಕೆಗೆ ವಿಶೇಷ ಶಕ್ತಿ
ಗೋಪುರ ನಿರ್ಮಾಣದಲ್ಲಿ ಧನ ಸಹಾಯ ಮಾಡಿರುವ ಭಕ್ತರಿಗೆ ಬ್ರಹ್ಮಕಲಶೋತ್ಸವದ ಅನಂತರ ಜೀರ್ಣವಾದ ತಾಮ್ರದ ತಗಡು ಬಳಸಿ ನಿರ್ಮಿಸುವ ಹಾಳೆಯನ್ನು ಪ್ರಸಾದದ ರೂಪದಲ್ಲಿ ವಿತರಿಸಲಾಗುತ್ತದೆ. ಈ ಟಂಕೆ ದೇವರ ಪೀಠದಲ್ಲಿಟ್ಟು ನಿತ್ಯ ಪೂಜೆ ಮಾಡುವ ಅರ್ಹತೆಯನ್ನು ಹೊಂದಿದೆ. ಟಂಕೆಯಲ್ಲಿ ಒಂದು ಭಾಗದಲ್ಲಿ ಶ್ರೀ ಕೃಷ್ಣ ಹಾಗೂ ಇನ್ನೊಂದು ಬದಿಯಲ್ಲಿ ಶ್ರೀರಾಮನ ವಿಗ್ರಹ ಕೆತ್ತಿಸಲಾಗುತ್ತದೆ.

Advertisement

ಕಲಶಕ್ಕೂ ಚಿನ್ನದ ಲೇಪನ
ಕೃಷ್ಣ ಮಠದ ಗರ್ಭ ಗುಡಿಯ ಮೂರು ಕಲಶಗಳಿಗೂ ಚಿನ್ನದ ಲೇಪನವನ್ನು ಹಾಕಲಾಗುತ್ತಿದೆ. 

ಶೇ. 50 ಮರ ಜೀರ್ಣ
ಗೋಪುರದಲ್ಲಿ ಹಿಂದೆ ಅಳವಡಿಸಲಾದ ಸಾಗುವಾನಿ ಮರದ ಹಲಗೆಯನ್ನು ಗೋಪುರದಿಂದ ಬೇರ್ಪಡಿಸಲಾಗುತ್ತಿದೆ. ಶೇ. 50ರಷ್ಟು ಮರದ ಹಲಗೆ ಜೀರ್ಣಗೊಂಡಿವೆ. ಈ ನಿಟ್ಟಿನಲ್ಲಿ ಗೋಪುರಕ್ಕೆ ಸಂಪೂರ್ಣವಾಗಿ ಹೊಸ ಸಾಗುವನಿ ಮರವನ್ನು ಅಳವಡಿಸಲಾಗುತ್ತಿದೆ. ಮುಂದಿನ 10 ದಿನದಲ್ಲಿ ಮರದ ಹಲಗೆಯನ್ನು ತೆಗೆಯುವ ಕೆಲಸ ಪೂರ್ಣವಾಗಲಿದೆ. 

ಶೇ. 80 ಚಿನ್ನ, ಬೆಳ್ಳಿ ಸಂಗ್ರಹ
ಸುವರ್ಣಗೋಪುರ ನಿರ್ಮಾಣದ ಸಲುವಾಗಿ ಶೇ. 80 ರಷ್ಟು ಚಿನ್ನ, ಬೆಳ್ಳಿ ಸಂಗ್ರಹವಾಗಿದೆ. 

ಜೂ. 9ಕ್ಕೆ ಬ್ರಹ್ಮಕಲಶ
ಸುವರ್ಣ ಗೋಪುರದ ಪೂರ್ವಭಾವಿಯಾಗಿ ಜೂ. 1 ರಂದು ಗರ್ಭಗುಡಿಯ ಸುವರ್ಣ ಲೇಪಿತ ಮೂರು ಕಲಶಗಳನ್ನು ಜೋಡುಕಟ್ಟೆಯಿಂದ ಮೆರವಣಿಗೆ ಮೂಲಕ ಮಠಕ್ಕೆ ತರಲಾಗುತ್ತದೆ. ಜೂ. 6ರಂದು ಸುವರ್ಣಗೋಪುರದ ಪ್ರತಿಷ್ಠಾಪನೆ ನಡೆಯಲಿದ್ದು, ಜೂ. 9ರಂದು ಬ್ರಹ್ಮ ಕಲಶೋ ತ್ಸವ ನಡೆಯಲಿದೆ.
     
ಮಳೆಗಾಲಕ್ಕೂ ಮುನ್ನ ಕಾಮಗಾರಿ ಪೂರ್ಣ
ಮಳೆಗಾಲಕ್ಕೆ ಮುನ್ನ ಸುವರ್ಣ ಗೋಪುರದ ಕಾಮಗಾರಿ ಮುಗಿಸಲಾಗುತ್ತದೆ. ಜೂ. 9ರಂದು ಬ್ರಹ್ಮಕಲಶೋತ್ಸವ ನಡೆಯಲಿದೆ. ಅದರ ಪೂರ್ವಭಾವಿಯಾಗಿ ಈಗಾಗಲೇ ಸಭೆಯನ್ನು ನಡೆಸಲಾಗಿದೆ.
-ಶ್ರೀಶ ಭಟ್‌,  ಶ್ರೀಮಠದ ಅಧಿಕಾರಿ. 

ಮೂರ್ತಿ ಕೆತ್ತನೆ
ಸುಮಾರು 4 ಇಂಚಿನ ತಾಮ್ರದ ತಗಡಿನಲ್ಲಿ ಶ್ರೀರಾಮ ಹಾಗೂ ಶ್ರೀ ಕೃಷ್ಣ ಮೂರ್ತಿಯನ್ನು ಕೆತ್ತಲಾಗುತ್ತದೆ. ಇದರ ಸಂಪೂರ್ಣ ಕಾರ್ಯವನ್ನು ಉಡುಪಿಯ ಕುಶಲ ಕರ್ಮಿಗಳು ಮಾಡಲಿದ್ದಾರೆ.
– ವೆಂಕಟೇಶ್‌ ಶೇಟ್‌,  ಸುವರ್ಣಗೋಪುರ ಉಸ್ತುವಾರಿ

– ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next