Advertisement

ರಾಜೀನಾಮೆಗೆ ಒಪ್ಪಿದ ಶ್ರೀಲಂಕಾದ ಪ್ರಧಾನಿ ಮಹಿಂದಾ ರಾಜಪಕ್ಸ

10:12 PM May 07, 2022 | Team Udayavani |

ಕೊಲಂಬೊ: ರಾಜೀನಾಮೆಯ ಒತ್ತಡಕ್ಕೆ ಕಡೆಗೂ ಮಣಿದಿರುವ ಶ್ರೀಲಂಕಾದ ಪ್ರಧಾನಿ ಮಹಿಂದಾ ರಾಜಪಕ್ಸ, ತಮ್ಮ ಸ್ಥಾನವನ್ನು ತ್ಯಜಿಸಲು ಒಪ್ಪಿದ್ದಾರೆ.

Advertisement

ಶುಕ್ರವಾರ ಮಧ್ಯರಾತ್ರಿಯಿಂದಲೇ ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿದ್ದು ಅದರ ಬೆನ್ನಲ್ಲೇ ಮಹಿಂದಾ ಅವರಿಂದ ಪದತ್ಯಾಗದ ನಿರ್ಧಾರ ಪ್ರಕಟವಾಗಿದೆ.

ಶನಿವಾರದಂದು, ರಾಷ್ಟ್ರಪತಿ ಗೊಟಬಾಯ ರಾಜಪಕ್ಸ ಅವರ ನಿವಾಸದಲ್ಲಿ ನಡೆದ ಮಹಿಂದಾ ಸಂಪುಟದ ವಿಶೇಷ‌ ಸಭೆಯಲ್ಲಿ ರಾಜೀನಾಮೆಗೆ ಗೊಟಬಾಯ ಅವರು ನೀಡಿದ ಸೂಚನೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ಮೂಲಗಳು ತಿಳಿಸಿವೆ. ಇತ್ತೀಚೆಗೆ, ಖುದ್ದು ಗೊಟಬಾಯ ಅವರೇ ಪ್ರಧಾನಿಯವರನ್ನು ಸದ್ಯದಲ್ಲೇ ಪದಚ್ಯುತಗೊಳಿಸುವುದಾಗಿ ಪ್ರಕಟಿಸಿದ್ದರು.

ಮತ್ತೊಂದು ಬೆಳವಣಿಗೆಯಲ್ಲಿ, ಇತ್ತೀಚೆಗಷ್ಟೇ ಶ್ರೀಲಂಕಾ ಸಂಸತ್ತಿನ ಉಪಾಧ್ಯಕ್ಷರಾಗಿ (ಡೆಪ್ಯುಟಿ ಸ್ಪೀಕರ್‌) ಪುನಾರಾಯ್ಕೆಯಾಗಿರುವ ಸಂಸದ ರಂಜಿತ್‌ ಸಿಯಂಬಲಪಿಟಿಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಈ ಸ್ಥಾನಕ್ಕೆ ಮರು ಆಯ್ಕೆಯಾದ 24 ಗಂಟೆಗಳೊಳಗೆ ಅವರು ಇಂತಹ ನಿರ್ಧಾರ ತೀರ್ಮಾನಕ್ಕೆ ಬಂದಿರುವುದು ಅಚ್ಚರಿ ಮೂಡಿಸಿದೆ. ಯಾವ ಕಾರಣಕ್ಕೆ ಈ ನಿರ್ಧಾರ ಮಾಡಿದ್ದಾರೆನ್ನುವುದು ಬಹಿರಂಗವಾಗಿಲ್ಲ.

ಯೂರೋಪ್‌, ಬಾಂಗ್ಲಾದಿಂದ ಸಹಾಯ
ಶ್ರೀಲಂಕಾದ ಪ್ರಕ್ಷುಬ್ಧ ಪರಿಸ್ಥಿತಿಗೆ ಮಿಡಿದಿರುವ ಐರೋಪ್ಯ ಒಕ್ಕೂಟ, ಮಾನವೀಯತೆ ಆಧಾರದಲ್ಲಿ ಆ ರಾಷ್ಟ್ರಕ್ಕೆ ಆರ್ಥಿಕ ಸಹಾಯ ನೀಡಲು ನಿರ್ಧರಿಸಿದೆ. ಆದರೆ, ಎಷ್ಟು ಹಣ ನೀಡುತ್ತದೆ ಎಂಬುದಿನ್ನೂ ಪ್ರಕಟವಾಗಿಲ್ಲ.

Advertisement

ಆರ್ಥಿಕ ದುಸ್ಥಿತಿಗೆ ತಲುಪಿರುವ ಲಂಕಾದ ಸುಮಾರು 80 ಸಾವಿರ ಬಡವರಿಗೆ ಮೂಲಸೌಕರ್ಯಗಳನ್ನು ಕಲ್ಪಿಸುವ ಉದ್ದೇಶದಿಂದಾಗಿ ಧನಸಹಾಯ ನೀಡಲಾಗುತ್ತದೆ ಎಂದು ಐರೋಪ್ಯ ಒಕ್ಕೂಟ (ಇ.ಯು.) ಪ್ರಕಟಿಸಿದೆ. ಮತ್ತೊಂದೆಡೆ, ಔಷಧಿ ಕೊಳ್ಳಲು ಹಣವಿಲ್ಲದೆ ಪರಿತಪಿಸುತ್ತಿರುವ ಶ್ರೀಲಂಕಾದ ಸರ್ಕಾರಿ ಆಸ್ಪತ್ರೆಗಳಿಗೆ ಔಷಧ ಸಹಾಯ ನೀಡುವುದಾಗಿ ಬಾಂಗ್ಲಾದೇಶ ಸರ್ಕಾರ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next