ಉಡುಪಿ: ದೇವರ ಅನುಗ್ರಹ ವಿದ್ದರೆ ಸಕಲ ರೋಗಗಳು ವಾಸಿಯಾಗಲಿವೆ ಎಂದು ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ನುಡಿದರು.
ಶ್ರೀ ಕೃಷ್ಣಮಠ ಹಾಗೂ ಪರ್ಯಾಯ ಪಲಿಮಾರು ಮಠದ ಸಹಯೋಗದಲ್ಲಿ ಆಯೋಜಿಸಿದ್ದ ಧನ್ವಂತರಿ ಚಿಕಿತ್ಸಾಲಯದ ನೂತನ ಕಟ್ಟಡವನ್ನು ಶ್ರೀಪಾದರು ಉದ್ಘಾಟಿಸಿ ಮಾತನಾಡಿದರು.
ರಕ್ತದಾನದ ಮೂಲಕ ಇತರರ ಜೀವವನ್ನು ರಕ್ಷಿಸಬಹುದಾಗಿದೆ. ಈ ನಿಟ್ಟಿನಲ್ಲಿ ಧನ್ವಂತರಿ ಚಿಕಿತ್ಸಾಲಯದಲ್ಲಿ ದಾನಿಗಳ ಹಾಗೂ ಸರಕಾರಿ ಆಸ್ಪತ್ರೆಯ ಸಹಯೋಗದಲ್ಲಿ ಬ್ಲಡ್ ಬ್ಯಾಂಕ್ ತೆರೆಯುವಲ್ಲಿ ಸಂಕಲ್ಪವಿದೆ. ಧನ್ವಂತರಿ ಚಿಕಿತ್ಸಾಲಯ ಕೇವಲ ಭಕ್ತರಿಗೆ ಮಾತ್ರವಲ್ಲ. ಆವಶ್ಯಕತೆಯುಳ್ಳವರಿಗೆ ವೈದ್ಯಕೀಯ ಸೇವೆ ಸಿಗಲಿದೆ ಎಂದರು.
ಅದಮಾರು ಮಠದ ಕಿರಿಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.
ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ| ಜಿ. ಶಂಕರ್ ಮಾತನಾಡಿ, ಧನ್ವಂತರಿ ಚಿಕಿತ್ಸಾಲಯಕ್ಕೆ ಅಗತ್ಯವಿರುವ ಇಸಿಜಿ ಯಂತ್ರ , ಔಷಧಿ ವೆಚ್ಚವನ್ನು ಭರಿಸುವುದಾಗಿ ಭರವಸೆ ನೀಡಿದರು.
ಡಾ| ಎ.ವಿ. ಬಾಳಿಗಾ ಆಸ್ಪತ್ರೆಯ ಮನೋವೈದ್ಯ ಡಾ| ಪಿ.ವಿ. ಭಂಡಾರಿ, ಡಾ| ಡಿ. ಸುಧನ್ವ, ಗುರುರಾಜ್, ಚ್ಯವನ ಲ್ಯಾಬ್ನ ಎ.ಪಿ. ಭಟ್, ನೊವೆಲ್ಟಿ ಜುವೆಲರಿಯ ಜಯ ಆಚಾರ್ಯ, ಪದ್ಮರಾಜ್ ಮತ್ತಿತರರು ಉಪಸ್ಥಿತರಿದ್ದರು.