Advertisement

ಶ್ರೀಕೃಷ್ಣಮಠ: ಅಕ್ಷರಲಕ್ಷ ಮಂತ್ರ ಜಪ ;ನಿರಂತರ ಚತುರ್ವೇದ ಪಾರಾಯಣ

12:31 AM Mar 19, 2021 | Team Udayavani |

ಉಡುಪಿ: ಶ್ರೀಕೃಷ್ಣಮಠದಲ್ಲಿ ಅಕ್ಷರಲಕ್ಷ ಮಂತ್ರ ಜಪದ ಅನುಷ್ಠಾನ ಆರಂಭವಾಗಿದೆ. ಸುಮಾರು 60 ಲಕ್ಷ ಆವರ್ತಿಯಾಗುವಷ್ಟು ಅನುಷ್ಠಾನವಾಗಲಿದೆ.

Advertisement

ಮಾ. 7ರಂದು ಆರಂಭಗೊಂಡ ಇದು ಎ. 24ರ ವರೆಗೆ ನಡೆಯಲಿದೆ. ಕೃಷ್ಣ ಷಡಕ್ಷರ ಮಂತ್ರ (ಆರು ಅಕ್ಷರ, ಆರು ಲಕ್ಷ ಜಪ), ಧನ್ವಂತರಿ ಮಂತ್ರ (ಎಂಟು ಅಕ್ಷರ, ಎಂಟು ಲಕ್ಷ ಜಪ), ವೇದವ್ಯಾಸ ಮಂತ್ರ (ಎಂಟು ಅಕ್ಷರ, ಎಂಟು ಲಕ್ಷ ಜಪ), ರಾಮಮಂತ್ರ (ಆರು ಅಕ್ಷರ, ಆರು ಲಕ್ಷ ಜಪ), ಹಯಗ್ರೀವ ಮಂತ್ರ (ಎಂಟು ಅಕ್ಷರ, ಎಂಟು ಲಕ್ಷ ಜಪ), ಭೂವರಾಹ ಮಂತ್ರಗಳ (ಏಳು ಅಕ್ಷರ, ಏಳು ಲಕ್ಷ ಜಪ) ಜಪಾನುಷ್ಠಾನ 25ರಿಂದ 50 ವೈದಿಕರಿಂದ ನಿತ್ಯ ನಡೆಯುತ್ತಿದೆ.

ಇದೇ ರೀತಿ ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ ಈ ನಾಲ್ಕು ವೇದಗಳ ಪಾರಾಯಣಗಳೂ ನಡೆಯುತ್ತಿವೆ. ವಿವಿಧ ಕಡೆ ಇರುವ ವೇದ ವಿದ್ವಾಂಸರನ್ನು ಆಹ್ವಾನಿಸಿ ಅವರಿಂದ ಪಾರಾಯಣ ನಡೆಸಲಾಗುತ್ತಿದೆ. ಪರ್ಯಾಯ ಅವಧಿ ಮುಗಿಯುವವರೆಗೆ ಸುಮಾರು 500 ವಿದ್ವಾಂಸರು ಬರುವ ನಿರೀಕ್ಷೆ ಇದೆ. ಈ ವಿದ್ವಾಂಸರ ವೇದ ಪಾರಾಯಣವಲ್ಲದೆ ನಿತ್ಯ ಬೆಳಗ್ಗೆ ಮಠದ ಸಿಬಂದಿ ವಿದ್ವಾಂಸರು ಪಂಚಾಮೃತ ಅಭಿಷೇಕ, ಕಲಶ ಪೂಜೆಯ ಹೊತ್ತಿಗೆ ನಡೆಸುತ್ತಾರೆ.

ಭಕ್ತರ ದೇವರ ದರ್ಶನದ ವ್ಯವಸ್ಥೆ ಪುನಾರಚನೆ ಮಾಡಿದ ಬಳಿಕ ಕೃಷ್ಣಮಠದ ಎದುರಿನ ಚಂದ್ರಶಾಲೆಯ ಮಹಡಿಯಲ್ಲಿ ಸ್ಥಳಾವಕಾಶ ಲಭ್ಯವಾಗಿದ್ದು, ಅಲ್ಲಿ ಅಕ್ಷರ ಲಕ್ಷ ಜಪ, ವೇದ ಪಾರಾಯಣಗಳನ್ನು ನಡೆಸಲಾಗುತ್ತಿದೆ.

ಸ್ವಾಮೀಜಿಯವರ ಇಚ್ಛೆ
ಶ್ರೀಕೃಷ್ಣನ ಸನ್ನಿಧಿಯಲ್ಲಿ ಮಂತ್ರ ಜಪಾನುಷ್ಠಾನ ನಡೆಯಬೇಕೆಂಬುದು ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯತೀರ್ಥ ಶ್ರೀಪಾದರ ಅಪೇಕ್ಷೆ. ಬೇರೆ ಬೇರೆ ಊರಿನಲ್ಲಿ ವೇದಾಧ್ಯಯನ ನಡೆಸಿ, ವಿದ್ಯಾರ್ಥಿಗಳಿಗೆ ಪಾಠ ಹೇಳುವ ವಿದ್ವಾಂಸರು ಇದ್ದಾರೆ. ಇವರಿಗೆ ಬೇರೆ ಆದಾಯಗಳಿಲ್ಲದಿದ್ದರೂ ವೇದ ಪಾಠವನ್ನು ಸಂರಕ್ಷಣೆ ಮಾಡಿ ಕೊಂಡು ಬಂದಿರುವುದರಿಂದ ವಿಶೇಷ ವಾಗಿ ಇವರನ್ನು ಕರೆಸಿ ಪಾರಾಯಣ ಮಾಡಿಸ ಬೇಕೆಂಬುದು ಸ್ವಾಮೀಜಿಯವರ ಇಚ್ಛೆ.
– ಭಾರತೀಶ ಬಲ್ಲಾಳ್‌, ವೇದ ವಿದ್ವಾಂಸರು, ಜಪ, ಪಾರಾಯಣದ ಉಸ್ತುವಾರಿ, ಶ್ರೀಕೃಷ್ಣಮಠ, ಉಡುಪಿ

Advertisement
Advertisement

Udayavani is now on Telegram. Click here to join our channel and stay updated with the latest news.

Next