Advertisement

ಕರುಣೆಯ ಸಾಕಾರಮೂರ್ತಿ ಶ್ರೀ ಗುರು ರಾಘವೇಂದ್ರರು

11:28 PM Aug 23, 2021 | Team Udayavani |

ಗುರು ಶಬ್ದ ಖಂಡಿತ ಗುರುತರವೇ ಸರಿ. ಯಾರು ಮಾನವನ ಸ್ವರೂಪ- ಸುಖಾನುಭವಗಳಿಗೆ ಕಾರಣರಾಗಿ, ದೇವರನ್ನು ಕಾಣಲು ಬರಬಹುದಾದ ಅಡ್ಡಿ, ಆತಂಕಗಳನ್ನು ಕಳೆದು ಸಜ್ಜನರನ್ನು ರಕ್ಷಿಸುವರೋ, ಯಾರು ಉತ್ತಮ ಜ್ಞಾನದಾಯಕರೋ, ಯಾರಿಗೆ ಸಂಶಯ, ವಿಪರೀತ ಜ್ಞಾನಗಳಿಲ್ಲವೋ, ಯಾರು ತಮ್ಮನ್ನು ನಂಬಿದ ಭಕ್ತರಿಗೆ ಮೋಕ್ಷಾದಿ ಪುರುಷಾರ್ಥದಾಯಕರೋ ಅವರಿಗಷ್ಟೇ ಅನ್ವಯವಾಗುವ ಗುರು ಶಬ್ದ ನಿಜಾರ್ಥದಲ್ಲಿ ಅನ್ವಯವಾಗುವುದು ಈ ಗುರುರಾಯರಿಗೆ!

Advertisement

ಜಾತಿ, ಮತ, ಪಂಥ ಮೀರಿ ಎಲ್ಲ ರಿಂದಲೂ ಗುರುತ್ವೇನ ಮಾನ್ಯರಾದವರು ಶ್ರೀ ರಾಘವೇಂದ್ರರು. ದೇವರೆಂದರೆ ತಿರುಪತಿ ತಿಮ್ಮಪ್ಪ, ಗುರುಗಳೆಂದರೆ “ಮಂಚಾಲೆಯ ರಾಘಪ್ಪ’ ಎಂಬುದು ಅತಿಶಯೋಕ್ತಿಯಲ್ಲ. ರಾಯರ ನೆರಳಲ್ಲಿ ನಾಸ್ತಿಕನಿಗೂ ಆಸ್ತಿಕತೆಯ ಚಿಗುರು ಟಿಸಿಲೊಡೆದರೂ ವಿಶೇಷವಿಲ್ಲ. ರಾಯರಿಂದ ಅನುಗ್ರಹೀತರಾದ ಭಕ್ತ ಸಮೂಹವೇ ಇದಕ್ಕೆ ಸಾಕ್ಷಿ. ರಾಯರು ಭಗವಂತನಲ್ಲ, ದೇವರ ದೂತರಾಗಿ, ಭಕ್ತಿಯ ಪ್ರಚಾರಕರಾಗಿ ಭುವಿಗೆ ಬಂದವರು. “ಹರಿಪಾದ-ಕಂಜ ನಿಷೇವಣಾಲಬ್ಧ ಸಮಸ್ತ ಸಂಪತ್‌’- ಭಗವಂತನ ಅನುಗ್ರಹದ ದೊಡ್ಡ ಬಲವೇ ರಾಯರ ಪ್ರಭಾವ, ಪವಾಡ, ಆಶೀರ್ವಾದದ ಮೂಲ ಸ್ರೋತ.

ಆಚಾರ್ಯ ಮಧ್ವರ ಭಕ್ತಿ ಸಿದ್ಧಾಂತವನ್ನು ಜಗದಗಲದಲ್ಲಿ ಪಸರಿಸಿದವರು ಶ್ರೀ ಗುರುರಾಯರು. ತಾವು ಹೊಸತನ್ನು ಏನನ್ನೂ ನೀಡಲಿಲ್ಲ. ಆಚಾರ್ಯ ಮಧ್ವರ ತಣ್ತೀ¤ವಾದದ ತಿರುಳನ್ನೇ ಜನಸಾಮಾನ್ಯರಿಗೆ ತಮ್ಮ ಮಾತುಗಳಿಂದ ಉಣಬಡಿಸಿದರು. ಪ್ರಾಚೀನರ ಎಲ್ಲ ಭಾಷ್ಯ, ಟೀಕೆಗಳಿಗೆ ಟಿಪ್ಪಣಿ ಬರೆದು ಜಯತೀರ್ಥರು ಟೀಕಾಕಾರರಾದರೆ ರಾಯರು ಟಿಪ್ಪಣಿ ಕಾರರಾದರು. ರಾಯರ ಪಾಂಡಿತ್ಯ ಅಸದೃಶ. “ಶಾಬ್ದಂ ಭಾಷ್ಯ ಜಾಯ ದೇವೀಂ ಚ ಟೀಕಾಂ, ಭಾಟ್ಟಂ ತಂತ್ರಂ ಭಾಮತೀಂ ಗೌರವಂ ಚ – “”ಮಹಾಭಾಷ್ಯ ವಾಮಾನ, ಜಯಾದಿತ್ಯ, ಕಾಶಿಕ, ಮೀಮಾಂಸ, ಭಾಮತಿ, ಮಧ್ವ ಭಾಷ್ಯ, ಚಂದ್ರಿಕಾ ಎಲ್ಲವನ್ನೂ ಆಶ್ರಮಪೂರ್ವದಲ್ಲೇ ಅಭ್ಯಸಿಸಿದರು.

ಅವರ ಗ್ರಂಥಗಳೇ ಅಪೂರ್ವ. ಅಪರೂಪವೂ ಹೌದು. ಅವರ ವ್ಯಾಖ್ಯಾನ ಶೈಲಿಯನ್ನು ಗುರುಗುಣಸ್ತವ ಹೀಗೆ ನುಡಿದಿದೆ – “ಚಿತ್ತೇ ನಾಯುಕ್ತಮರ್ಥಂ ಕಲಯತಿ…’ ಅವರೆಂದೂ ಅಯೋಗ್ಯ ಅನುಪಪನ್ನ, ಯುಕ್ತಿ ಶೂನ್ಯ ಅರ್ಥವನ್ನು ಮನಸ್ಸಿನಲ್ಲೂ ಚಿಂತಿಸಿ ದವರಲ್ಲ. ಛಲದಿಂದ ಅಂತಹ ಅರ್ಥವನ್ನು ಹೇಳಿದವರಲ್ಲ. ಅಯುಕ್ತ ಅರ್ಥವನ್ನು ಸಾಧಿಸ ಹೋಗುವವರಲ್ಲ. ವಿತಂಡವಾ ದವಂತೂ ಅವರತ್ತ ಸುಳಿದಿಲ್ಲ. ಅಯುಕ್ತ ಅರ್ಥವನ್ನು ಬರೆದವರೇ ಅಲ್ಲ. ಒಂದೆಡೆ ಹೇಳಿದ್ದನ್ನು ಮಗದೊಮ್ಮೆ ಹೇಳಿದವರಲ್ಲ. ಒಮ್ಮೆ ವಿಚಾರ ಮಾಡಿ ಬರೆದುದನ್ನು ಅಳಿಸಿದವರಲ್ಲ. ಇಂತಹ ಅಸಾಧಾರಣ ಗುಣದಿಂದಲೇ ಸಮಗ್ರ ಉಪನಿಷತ್ತು, ಗೀತೆ, ಸೂತ್ರ, ವೇದಗಳಿಗೆ ಟಿಪ್ಪಣಿಗಳನ್ನು ರಚಿಸಿ ಮಾನ್ಯರಾಗಿದ್ದಾರೆ.

ಇಂದು ಭಜಕರಿಗೆ ಕಲ್ಪವೃಕ್ಷದಂತೆ, ಭಕ್ತಿಯಿಂದ ಬಾಗಿದವರಿಗೆ ಕಾಮಧೇನುವಿನಂತೆ ಅನುಗ್ರಹಿಸುವ ಗುರುರಾಯರು ತಮ್ಮ ಜೀವನದಲ್ಲಿ ಪ್ರಾರಬ್ಧವಶಾತ್‌ ಅನುಭವಿಸಿದ ಕಡು ದಾರಿರ್ದ್ರ್ಯಅದೊಂದು ಭಗವದನುಗ್ರಹವೇ ಸರಿ. “ಯಸ್ಯ ಅನುಗ್ರಹಂ ಇಚ್ಛಾಮಿಹರಿಷ್ಯೆà ತದ್ಧನಂ ಶನೈ’. ಭಗವಂತನು ಯಾರಿಗೆ ಅನುಗ್ರಹಿಸಲಿಚ್ಛಿಸುವನೋ ಮೊದಲು ಅವರ ಎಲ್ಲವನ್ನೂ ಕಸಿದು ಪರೀಕ್ಷಿಸುವನಂತೆ. ರಾಯರೇ ಇದಕ್ಕೆ ನಿದರ್ಶನ. ಜೀವನದಲ್ಲಿ ಒಪ್ಪೊತ್ತಿಗೂ ಅನ್ನವಿಲ್ಲದೆ, ಸಿಕ್ಕಿದ್ದನ್ನು ನೆಲದಲ್ಲೇ ಉಂಡು ಪಕ್ಷದಲ್ಲಿ ಐದಾರು ಏಕಾದಶೀ ಉಪವಾಸಗಳನ್ನು ಆಚರಿಸಿದವರು ಗುರುರಾಯರು. ಉಡಲು ಬಟ್ಟೆಯೂ ಇಲ್ಲದೆ, ಮೊದಲೇ ಕೌಪೀನಧಾರಿಗಳಾಗಿದ್ದರು ರಾಯರು. ಅಂತಹ ದಾರಿದ್ರéದಿಂದ ಮೇಲೆದ್ದು, ಭಗವದನುಗ್ರಹದಿಂದ ಇಂದು ಭಕ್ತರ ಕಾಮನೆಗಳನ್ನೆಲ್ಲ ಪೂರೈಸುತ್ತಿರುವ ಗುರುರಾಯರು- ನರರೊಳಗಂತೂ ಅಲ್ಲ.

Advertisement

ಪ್ರಹ್ಲಾದನ ಭೌಮ ಅವತಾರವೆಂದು ನಂಬಿದೆ ಭಕ್ತ ವೃಂದ. ನಾರದ ಬಿತ್ತಿದ ಭಕ್ತಿಯ ಭೀಜ ಧರೆಯೊಳಗೆ ಟಿಸಿಲೊಡೆದು ರೆಂಬೆ ಕೊಂಬೆಗಳಿಂದ ತುಂಬಿ ಫ‌ಲಭರಿತ ವೃಕ್ಷವಾಗಿ ಕಂಗೊಳಿಸುತ್ತಿರುವುದು. ರಾಯರಿಂದ “ಅದ್ಯ ಶ್ರೀ ರಾಘವೇಂದ್ರಾತ್‌ ವಿಲಸತಿ ಫ‌ಲಿತೋ ಮಧ್ವ ಸಿದ್ಧಾಂತ ಶಾಖೀ’. ಅನೇಕ ಟಿಪ್ಪಣಿ ಗ್ರಂಥಗಳು, ಹಾಡುಗಬ್ಬದಿಂದ, ದಾಸ ಹಾಗೂ ವ್ಯಾಸ ಸಾಹಿತ್ಯವನ್ನು ಪುಷ್ಟಿಗೊಳಿಸಿದರು ರಾಯರು.

ಥಾಮಸ್‌ ಮನ್ರೋರಂತ ಆಂಗ್ಲರೇ ಇರಲಿ, ಆದವಾನಿಯ ನವಾಬನೇ ಇರಲಿ; ಜಾತಿ, ಮತಗಳ ಎಲ್ಲೆ ಮೀರಿ ಅನುಗ್ರಹಿಸಿದರು ರಾಯರು. ಅದಕ್ಕೆ ಸಾಕ್ಷಿಯೇ ಇಂದು ಮಂಚಾಲೆಯಲ್ಲಿ ನೆಲೆನಿಂತ ಶ್ರೀರಾಯರ ಮೂಲ ಬೃಂದಾವನ. ತಮ್ಮ ಪ್ರತಿಯೊಂದು ಪವಾಡಗಳ ಹಿನ್ನೆಲೆಯಲ್ಲೂ ರಾಯರು ತಣ್ತೀವನ್ನು ಜನರಿಗೆ ತೋರಿದರು. ವಿಷಯಾಸಕ್ತರಾಗಿ ಭೌತಿಕದಲ್ಲೇ ಮುಳುಗಿದವರನ್ನೂ ಜ್ಞಾನಭಕ್ತಿ ಕೊಟ್ಟು ಉದ್ಧರಿಸುವೆನೆನ್ನಲು ಕುಲಕರ್ಣಿಯ ಮಗನನ್ನು ಪರಮಾನ್ನದ ಕೊಪ್ಪರಿಗೆಯಿಂದ ರಕ್ಷಿಸಿದರು. ದೇವರ ಅಸ್ತಿತ್ವನ್ನು ತೋರಲು ಆದವಾನಿಯ ನವಾಬನಿಗೆ ಅನುಗ್ರಹಿಸಿದರು. ಆದರೆ ರಾಯರು ಕೇವಲ ಪವಾಡಗಳಿಂದಲೇ ದೊಡ್ಡವರಾದವರಲ್ಲ. ಭಗವನ್ಮಹಿಮೆಯನ್ನು ಜನಮಾನಸದಲ್ಲಿ ಬಿತ್ತಿದ್ದರಿಂದಲೇ ಎತ್ತರಕ್ಕೇರಿದರು. ಇದಕ್ಕೂ ಅವರ ಪೂರ್ವಾವತಾರ ಪ್ರಹ್ಲಾದನೇ ಸಾಕ್ಷಿ.

ಭಗವಂತ ವರವನ್ನು ನೀಡಿದರೂ ಸ್ವೀಕರಿಸದೆ ಭಕ್ತಿಯನ್ನಷ್ಟೇ ಬಯಸಿದ. ಅನುಗ್ರಹಕ್ಕಾಗಿ ಆರಾಧಿಸುವವನು ವ್ಯಾಪಾರಿಯಷ್ಟೇ. ಆತ ಭಕ್ತನಾಗಲಾರ. “ನಸಭಕ್ತಃ ಸವೈವಣಿಕ್‌’ ಎಂಬ ಅನುಸಂಧಾನದವನು ಪ್ರಹ್ಲಾದ. ದೇವರ ಪ್ರೀತಿಗಾಗಿಯಷ್ಟೇ ಅವನನ್ನು ಆರಾಧಿಸಬೇಕು ಎಂದವನು ಪ್ರಹ್ಲಾದ. ಅವನ ಭೌಮ ಅವತಾರ ಎಂದು ನಂಬಿದ ರಾಯರಲ್ಲಿ ಭೌತಿಕ ಸುಖಕ್ಕಾಗಿ ಲೌಕಿಕ ಕಾಮನೆಗಳನ್ನಷ್ಟೇ ಪ್ರಾರ್ಥಿಸುವುದು ಎಷ್ಟು ಉಚಿತ? ನಿಜವಾಗಿ ಅದರಲ್ಲಿ ನಾವು ಬೇಡಬೇಕಾಗಿರುವುದು ಭಗವಂತನಲ್ಲಿ ನಿರ್ವ್ಯಾಜ ಭಕ್ತಿ. ಅದೇ ರಾಯರಿಗೆ ಸಲ್ಲಿಸುವ ಸೇವೆ. “ನೈತಾನ್‌ ವಿಹಾಯ ಕೃಪಣಾನ್‌’ ಎಂಬಂತೆ ರಾಯರು ಖಂಡಿತವಾಗಿಯೂ ನಮ್ಮೆಲ್ಲರ ಅನುಗ್ರಹವನ್ನು ಮಾಡುತ್ತಾರೆ.

ರಾಯರು ಪೂರ್ವಾಶ್ರಮದಲ್ಲಿ ದೊಡ್ಡ ವೈಣಿಕರಂತೆ. ಆದರೆ ಆಶ್ರಮಾನಂತರದಲ್ಲಿ ಉಪನಿಷತ್ತಿನ “ದೈವೀ ವೀಣಾ’ ಎಂಬ ನುಡಿಗೆ ಸಾಕ್ಷಿಯಾದರು. ಈ ಶರೀರವೆಂಬ ವೀಣೆಯಲ್ಲಿ ನಿರಂತರ ಭಗ ವಂತನ ಗುಣಗಾನ, ಭಕ್ತಿಯೆಂಬ ಸ್ವರವನ್ನು ಮೀಟಿದರು. ಇಂತಹ ಗುರುರಾಯರು ಇಂದು ನಮಗೆಲ್ಲ ನಮ್ಮ ಬಯಕೆಗಳ ದಾತಾರರಾಗಿ ದೊರಕಿರು ವುದು ನಮ್ಮೆಲ್ಲರ ಭಾಗ್ಯವೇ ಸರಿ.

 

-ಚಿಪ್ಪಗಿರಿ ನಾಗೇಂದ್ರ ಆಚಾರ್ಯ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next