Advertisement

ಸಾ.ರಾ.ಮಹೇಶ್‌ ಹೇಳಿಕೆ ಸರಿಯಲ್ಲ: ವಿಶ್ವನಾಥ್‌ ಬೇಸರ

01:08 PM Mar 29, 2019 | Lakshmi GovindaRaju |

ಹುಣಸೂರು: ಸಚಿವ ಸಾ.ರಾ.ಮಹೇಶ್‌ ಇತ್ತೀಚೆಗೆ ಮಂಡ್ಯದಲ್ಲಿ ಜೆಡಿಎಸ್‌ ಗೆಲ್ಲಿಸಿದರೆ ಮಾತ್ರ ಮೈಸೂರಲ್ಲಿ ನಾವು ಕಾಂಗ್ರೆಸ್‌ಅಭ್ಯರ್ಥಿಯನ್ನು ಗೆಲ್ಲಿಸ್ತೀವಿ ಎಂಬ ಹೇಳಿಕೆ ಮೈತ್ರಿಧರ್ಮಕ್ಕೆ ವಿರುದ್ಧವಾದುದು ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ತಿಳಿಸಿದರು.

Advertisement

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸ‌ರ ವಿರುದ್ಧದ ಸಾ.ರಾ. ಮಹೇಶ್‌ ನಡೆ ಕೂಡ ಸರಿಯಲ್ಲ. ಮಾತಿನ ಭರದಲ್ಲಿ ಆರೀತಿ ಹೇಳಿರಬಹುದು. ಇನ್ನು ಯಾರೇ ಮಂತ್ರಿಯಾಗಿರಲಿ ಅವರ ನಡತೆ ಸರಕಾರಕ್ಕೆ ಭೂಷಣವಾಗಿರಬೇಕು. ಬಹುತೇಕ ಸಿಬ್ಬಂದಿಗೆ ಮಂತ್ರಿಗಳ ಪರಿಚಯವಿರಲ್ಲ. ಇಂತಹ ಘಟನೆ ವೇಳೆ ಸಮಧಾನವಾಗಿ ವರ್ತಿಸಬೇಕು. ಈ ಬಗ್ಗೆ ಅವರಿಗೆ ಕಿವಿಮಾತು ಹೇಳುತ್ತೇನೆಂದರು.

ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯಾದ್ಯಂತ ಸಿದ್ದರಾಮಯ್ಯ ಹಾಗೂ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರಗಳ ಸಾಧನೆಗಳನ್ನು ಹಾಗೂ ಕೇಂದ್ರದ ಮೋದಿ ಸ‌ರ್ಕಾರದ ವೈಪಲ್ಯಗಳನ್ನು ಜನರ ಮುಂದಿಟ್ಟು ಮತಯಾಚಿಸಲಾಗುವುದು. ಕನಿಷ್ಠ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆಂದು ವಿಶ್ವಾಸ ವ್ಯಕ್ತಪಡಿಸಿದರು.

ಮೈತ್ರಿ ಅಭ್ಯರ್ಥಿ ಸಿ.ಎಚ್‌.ವಿಜಯಶಂಕರ್‌ ಪರವಾಗಿ ಎರಡೂ ಪಕ್ಷಗಳ ನಾಯಕರ ನೇತೃತ್ವದಲ್ಲಿ ಏ.1ರ ನಂತರ ಜಂಟಿಪ್ರಚಾರ ನಡೆಸಲಾಗುವುದು. ಎಲ್ಲಡೆ ಪ್ರಚಾರದ ವೇಳೆ ಸಮನ್ವಯಸಮಿತಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ. ಮಹೇಶ್‌ ಹಾಗೂ ಮೈಸೂರು ಮತ್ತು ಕೊಡಗು ಜಿಲ್ಲೆಯ ಎರಡೂಪಕ್ಷಗಳ ಶಾಸಕರು, ಮಾಜಿ ಶಾಸಕರು ಹಾಗೂ ಮುಖಂಡರ ನೇತೃ‌Ìದಲ್ಲಿ ಎರಡೂ ಜಿಲ್ಲೆಗಳಲ್ಲಿ ವ್ಯಾಪಕ ಪ್ರಚಾರ ನಡೆಸಿ, ಬಹಳ ಅಂತರದಿಂದ ಗೆಲ್ಲಿಸಲು ಶ್ರಮ ಹಾಕಲಾಗುವುದು ಎಂದರು.

ಕುಟುಂಬ ರಾಜಕಾರಣ ಅರ್ಥಹೀನ: ಜೆಡಿಎಸ್‌ ವರಿಷ್ಟ ದೇವೇಗೌಡ ಮತ್ತು ಮೊಮ್ಮಕ್ಕಳಿಗೆ ಟಿಕೆಟ್‌ ನೀಡಲಾಗಿದೆ. ಅಲ್ಲಿ ಗೆಲ್ಲುವ ಅಭ್ಯರ್ಥಿಗಳಿಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿಶ್ವನಾಥ್‌, ದೇಶದಲ್ಲಿ ಕುಟುಂಬ ರಾಜಕಾರಣವೆಂಬುದು ಅರ್ಥ ಕಳೆದುಕೊಂಡಿದೆ. ಎಲ್ಲಾ ಪಕ್ಷಗಳಲ್ಲೂ ಕುಟುಂಬ ರಾಜಕಾರಣ ಮೇಳೆ„ಸುತ್ತಿದ್ದು, ಈ ಸಂಬಂಧ ಮಾತನಾಡುವುದರಲ್ಲಿ ಅರ್ಥವಿಲ್ಲವೆಂದು ತಿಳಿಸಿದರು.

Advertisement

ನಾನು ಅಂಬರೀಶ್‌ ಸ್ನೇಹಿತರಾಗಿದ್ದವರು. ಸುಮಲತಾ ಅಂಬರೀಶ್‌ ಬಗ್ಗೆ ಅಪಾರ ಗೌರವವಿದ್ದು, ಅವರ ಬಗ್ಗೆ ನಾನೇನು ಮಾತನಾಡುವುದಿಲ್ಲ ಎಂದು ಹೇಳಿದರು. ನಿರೊದ್ಯೋಗ ಸೃಷ್ಟಿಯೇ ಸಾಧನೆ:2014ರ ಚುನಾವಣೆ ಪ್ರಣಾಳಿಕೆಯಲ್ಲಿ ಬಿ.ಜೆ.ಪಿ.ನೀಡಿದ್ದ ಎರಡು ಕೋಟಿ ಉದ್ಯೋಗಸೃಷ್ಟಿ ಭರವಸೆಯ ಬದಲಿಗೆ ಕೇವಲ 27 ಸಾವಿರ ಉದ್ಯೋಗ ಕಲ್ಪಿಸಿದೆ.

ಉದ್ಯೋಗಸೃಷ್ಟಿಗೆ ಯಾವುದೇ ಕಾರ್ಯಕ್ರಮ ರೂಪಿಸಲಿಲ್ಲ, ಇನ್ನು ಜನ್‌ಧನ್‌ ಯೋಜನೆಯ ಜೀರೋಬ್ಯಾಲೆನ್ಸ್‌ ಖಾತೆ ಹಾಗೆ ಉಳಿದಿದ್ದು, ಪ್ರತಿ ಖಾತೆಗೆ 15 ಲಕ್ಷ ತುಂಬವ ಭರವಸೆ ಹುಸಿಯಾಗಿದ್ದು, ಜೀರೋಬ್ಯಾಲೆನ್ಸ್‌ ಸ‌ರ್ಕಾರವೆಂದು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ತಾಲೂಕು ಜೆಡಿಎಸ್‌ ಅಧ್ಯಕ್ಷ ಮಹದೇವೇಗೌಡ, ನಗರ ಅಧ್ಯಕ್ಷ ಮಹಮದ್‌ಪೀರ್‌, ನಗರಸಭೆ ಮಾಜಿ ಅಧ್ಯಕ್ಷರಾದ ಎಚ್‌.ವೈ.ಮಹದೇವ್‌, ಎಂ.ಶಿವಕುಮಾರ್‌, ಜಿ.ಪಂ.ಮಾಜಿ ಸದಸ್ಯ ಫಜಲುಲ್ಲಾ, ಕೆ.ಆರ್‌.ನಗರದ ಜೆಡಿಎಸ್‌ ಮುಖಂಡ ಪ್ರಭುಶಂಕರ್‌, ತಾಪಂ ಸದಸ್ಯ ಶ್ರೀನಿವಾಸ್‌ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next