Advertisement

ಶಾವಿಗೆ ಮತ್ತು ನಾಟಿ ಕೋಳಿ ಸಾರು!

11:40 AM Nov 26, 2018 | |

“ಶಾವಿಗೆ ಮತ್ತು ನಾಟಿ ಕೋಳಿ ಸಾರು’ ಅಂದರೆ ಅಂಬರೀಷ್‌ ಅವರಿಗೆ ಬಲು ಇಷ್ಟ…’ ಹೀಗೆ ಹೇಳುತ್ತಲೇ, ಕ್ಷಣಕಾಲ ಮೌನವಾದರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್‌.ಎ.ಚಿನ್ನೇಗೌಡ. ಅವರ ಹೇಳಿಕೊಂಡಿದ್ದು ಅಂಬರೀಷ್‌ ಅವರ ಕುರಿತು. ಅಂಬರೀಷ್‌ ಅವರಿಗೆ ಶಾವಿಗೆ ಮತ್ತು ನಾಟಿ ಕೋಳಿ ಸಾರು ಬಲುಇಷ್ಟ ಅಂತ ಗೊತ್ತಾಗಿದ್ದು, ಚಿನ್ನೇಗೌಡ ಅವರು ತಮ್ಮ ಸಂಸ್ಥೆಯಿಂದ ಅಂಬರೀಷ್‌ ಅವರ ನಾಲ್ಕು ಚಿತ್ರಗಳನ್ನು ನಿರ್ಮಾಣ ಮಾಡುವ ಸಂದರ್ಭದಲ್ಲಂತೆ.

Advertisement

ಹೌದು, ಎಸ್‌.ಎ.ಚಿನ್ನೇಗೌಡ ಅವರು ಅಂಬರೀಷ್‌ ಅವರಿಗೆ ತಮ್ಮ ನಿರ್ಮಾಣ ಸಂಸ್ಥೆಯಡಿ “ಹೃದಯ ಹಾಡಿತು’,”ಸಪ್ತಪದಿ’, “ಗಂಡು ಸಿಡಿಗುಂಡು’ ಮತ್ತು “ವಸಂತ ಗೀತ’ ಚಿತ್ರಗಳನ್ನು ನಿರ್ಮಿಸಿದ್ದಾರೆ. ಆ ಚಿತ್ರಗಳ ಚಿತ್ರೀಕರಣ ವೇಳೆ, ಅಂಬರೀಷ್‌ ಅವರಿಗೆ ಊಟ ಅಂದಾಕ್ಷಣ, ಶಾವಿಗೆ ಮತ್ತು ನಾಟಿ ಕೋಳಿ ಸಾರು ನೆನಪಾಗುತ್ತಿತ್ತಂತೆ. ಅದರಲ್ಲೂ, ಚಿನ್ನೇಗೌಡ ಅವರ ಮನೆಯಿಂದಲೇ ಅದನ್ನು ಮಾಡಿಸಿಕೊಂಡು ಹೋಗುತ್ತಿದ್ದರಂತೆ.

ಅದನ್ನು ತುಂಬಾ ಆತ್ಮೀಯವಾಗಿ ಮೆಲುಕು ಹಾಕುವ ಚಿನ್ನೇಗೌಡರು, ಕಳೆದ ಭಾನುವಾರ ಕೂಡ ಅಂಬರೀಷ್‌ ಅವರಿಗೆ ಶಾವಿಗೆ ಮತ್ತು ನಾಟಿ ಕೋಳಿ ಸಾರು ತಮ್ಮ ಮನೆಯಿಂದಲೇ ಕಳುಹಿಸಿಕೊಟ್ಟಿದ್ದನ್ನು ನೆನಪಿಸಿಕೊಂಡು ಭಾವುಕರಾಗುತ್ತಾರೆ. ಕಳೆದ ವಾರವಷ್ಟೇ, ವಿಜಯರಾಘವೇಂದ್ರ ಅವರ ಬಳಿ, ನಿಮ್ಮ ಅಮ್ಮ ತುಂಬಾ ರುಚಿಯಾಗಿ ಶಾವಿಗೆ, ನಾಟಿ ಕೋಳಿ ಸಾರು ಮಾಡುತ್ತಾರೆ, ಮಾಡಿಸಿಕೊಂಡು ಬಾರಪ್ಪ, ಅಂದಿದ್ದರಂತೆ.

ಆ ಮಾತು ಕೇಳಿದ ಚಿನ್ನೇಗೌಡರು, ಅವರೇ ಸ್ವತಃ ಮಾರ್ಕೆಟ್‌ನಿಂದ ನಾಟಿ ಕೋಳಿ ತರಿಸಿ, ರುಚಿಯಾಗಿ ಸಾರು ಮಾಡಿಸಿ ಕಳುಹಿಸಿದ್ದರಂತೆ. ಅಷ್ಟೇ ಅಲ್ಲ, ನ.24 ರಂದ ಮಧ್ಯಾಹ್ನ ಅವರ ಮನೆಗೆ ಚಿನ್ನೇಗೌಡರು ಹೋಗಿ, ಅವರೊಂದಿಗೆ ಎರಡು ಗಂಟೆಗಳ ಕಾಲ ಮಾತನಾಡಿದ್ದರಂತೆ. ಆ ವೇಳೆ, ನಾಟಿ ಕೋಳಿ ಸಾರು ಬಗ್ಗೆ ಮಾತನಾಡಿ, ಖುಷಿಪಟ್ಟಿದ್ದನ್ನು ನೆನಪಿಸಿಕೊಳ್ಳುವ ಚಿನ್ನೇಗೌಡರು, ಕಳೆದ ವಾರ ನಮ್ಮ ಮನೆಯಿಂದ ಊಟ ತರಿಸಿಕೊಂಡು ಮಾಡಿ, ಈ ಶನಿವಾರ.

ಆ ಬಗ್ಗೆ ನಮ್ಮೊಂದಿಗೆ ಮಾತನಾಡಿ, ಈಗ ರಾತ್ರಿ ಹೊತ್ತಿಗೆ ಇಲ್ಲ ಅಂದರೆ, ಊಹಿಸಿಕೊಳ್ಳುವುದಕ್ಕೂ ಆಗುತ್ತಿಲ್ಲ ಎಂದು ಮೌನವಾಗುತ್ತಾರೆ. ಅಂಬರೀಷ್‌ ನನಗೆ ನಾಲ್ಕು ದಶಕದ ಗೆಳೆಯರು. ನಾನು 1980 ರಲ್ಲಿ ಬೆಂಗಳೂರಿಗೆ ಬಂದಾಗಿನಿಂದಲೂ ಅವರೊಂದಿಗೆ ಒಡನಾಟವಿತ್ತು. ಅವರೊಬ್ಬ ಸ್ನೇಹ ಜೀವಿ. ಮೃದು ಸ್ವಭಾವದ ವ್ಯಕ್ತಿ. ಸಿನಿಮಾ ಮತ್ತು ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಛಾಯೆ ಮೂಡಿಸಿದ್ದಾರೆ.

Advertisement

ಕನ್ನಡ ಚಿತ್ರರಂಗ ಕಂಡ ಲೆಜೆಂಡ್‌ ಅವರು. ಚಿತ್ರರಂಗದಲ್ಲಿ ಯಾವುದೇ ಸಮಸ್ಯೆ ಬಂದರೂ, ಅವರ ಅಂತಿಮ ತೀರ್ಮಾನವನ್ನು ಎಲ್ಲರೂ ಒಪ್ಪುತ್ತಿದ್ದರು. ನಿಜವಾಗಲೂ ಅಂಬರೀಷ್‌ ಶ್ರೇಷ್ಠ ಕಲಾವಿದರಷ್ಟೇ ಅಲ್ಲ, ವರ್ಣರಂಜಿತ ರಾಜಕಾರಣಿಯೂ ಹೌದು. ಚಿತ್ರರಂಗ, ರಾಜಕೀಯದಲ್ಲಿ ಏಳು-ಬೀಳು ಕಂಡಿದ್ದರೂ, ಎದೆಗುಂದದೆ ಜಾಲಿಯಾಗಿಯೇ ಬದುಕು ಸವೆಸಿದ ಅಪರೂಪದ ವ್ಯಕ್ತಿ. ಸ್ನೇಹಕ್ಕೆ ಮತ್ತೂಂದು ಹೆಸರೇ ಅಂಬರೀಷ್‌.

ದಕ್ಷಿಣ ಭಾಗದ ಎಲ್ಲಾ ಕಲಾವಿದರೊಂದಿಗೂ ಒಡನಾಟ ಬೆಳೆಸಿಕೊಂಡಿದ್ದ ಸ್ನೇಹ ಜೀವಿಯಾಗಿದ್ದರು ಎಂದು ಅಂಬಿ ಸ್ನೇಹ ಕುರಿತು ಕೊಂಡಾಡುತ್ತಾರೆ ಚಿನ್ನೇಗೌಡರು. “ಒಡಹುಟ್ಟಿದರು’ ಚಿತ್ರದ ಚಿತ್ರೀಕರಣದಲ್ಲಿ ನಿರ್ದೇಶಕ ಭಗವಾನ್‌ ಬಳಿ ಬಂದು, “ಮೊದಲು ಅಣ್ಣಾವ್ರ ಭಾಗದ ದೃಶ್ಯಗಳನ್ನು ಕಂಪ್ಲೀಟ್‌ ಮಾಡಿಬಿಡಿ, ಆಮೇಲೆ ನನ್ನ ಭಾಗದ ದೃಶ್ಯ ತೆಗೆಯಿರಿ. ನಾನು ಮಧ್ಯಾಹ್ನ ಹೊತ್ತಿಗೆ ಬರಿನಿ ಅಂತ ಹೇಳುತ್ತಿದ್ದರು.

ಅಣ್ಣಾವ್ರ ಬೆಳಗ್ಗೆ 8 ಗಂಟೆಗೆ ಮೇಕಪ್‌ ಮಾಡಿಕೊಂಡು ಅಂಬರೀಷ್‌ ಬರುವಿಕೆಗೆ ಕಾಯುತ್ತಿದ್ದರು. ಭಗವಾನ್‌, ಸರ್‌, ಶಾಟ್‌ ರೆಡಿ ಅಂದಾಗ, ರಾಜಕುಮಾರ್‌, ಇಲ್ಲಾ, ಅಂಬರೀಷ್‌ ಬರಲಿ, ಇಬ್ಬರ ಕಾಂಬಿನೇಷನ್‌ನಲ್ಲಿ ಚಿತ್ರೀಕರಿಸಿ ಅನ್ನುತ್ತಿದ್ದರು. ಆದರೆ, ಭಗವಾನ್‌ ಮಾತ್ರ ಅವರು ಬರೋದು ತಡವಾಗುತ್ತೆ ನೀವು ಬನ್ನಿ ಅಂದರೂ ರಾಜಕುಮಾರ್‌, ಅಂಬರೀಷ್‌ ಬರುವಿಕೆಗೆ ಕಾದಿದ್ದೂ ಹೌದು. ಅಂಬರೀಷ್‌ ಸ್ವಲ್ಪ ತಡವಾಗಿ ಬಂದಾಗ, “ಭಗವಾನ್‌ ನಿಮಗೆ ಬುದ್ಧಿ ಇಲ್ವಾ? ಅಣ್ಣಾವ್ರನ ಯಾಕೆ ಹೀಗೆ ಕಾಯಿಸಿದ್ದೀರಿ. ಅಂತ ಹೇಳುತ್ತಿದ್ದರು. ಕೊನೆಗೆ ಇಬ್ಬರ ಕಾಂಬಿನೇಷನ್‌ನಲ್ಲಿ ಶೂಟಿಂಗ್‌ ನಡೆಯುತ್ತಿತ್ತು.

“ಒಡಹುಟ್ಟಿದವರು’ ಬಿಡುಗಡೆ ಮುನ್ನ, ರಾಜಕುಮಾರ್‌ ಅವರು ಅಂಬರೀಷ್‌ ಅವರ ಕಟೌಟ್‌ ನನಗಿಂತ ಎತ್ತರದಲ್ಲಿರಬೇಕು. ಅವರೊಬ್ಬ ಒಳ್ಳೆಯ ಕಲಾವಿದರು. ಅದರಲ್ಲೂ ಅವರು ಎತ್ತರದಲ್ಲಿದ್ದಾರೆ. ಅವರ ಕಟೌಟ್‌ ಎತ್ತರವಿರಬೇಕು ಅಂದಾಗ, ಸ್ವತಃ ಅಂಬರೀಷ್‌ ಅವರೇ, “ಏನಣ್ಣಾ ನಿಮ್ಮ ಮುಂದೆ ನಾವೆಲ್ಲಾ ಏನೂ ಇಲ್ಲಾ. ನೀವೇ ಈಗ ಎತ್ತರದಲ್ಲಿರೋದು ಅಂತ ಹೇಳಿದ್ದರು. ಅಂಬರೀಷ್‌ ಸಿನಿಮಾ ಲೋಕದ ಆಪ್ತಮಿತ್ರರಾಗಿ, ಸದಾ, ನನ್ನನ್ನು ಪಾಂಡುರಂಗ ಅಂತ ಕರೆಯುವ ಮೂಲಕವೇ ತಮಾಷೆ ಮಾಡುತ್ತಿದ್ದರು’ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾರೆ ಚಿನ್ನೇಗೌಡ.

Advertisement

Udayavani is now on Telegram. Click here to join our channel and stay updated with the latest news.

Next