Advertisement

ಆಟದ ಮೈದಾನ: ಗಬ್ಬೆದ್ದು ಹೈರಾಣ 

07:28 PM Sep 04, 2021 | Team Udayavani |

ಕುಂದಾಪುರ: ಆಟವಾಡ ಲೆಂದೇ ಇರುವ ಗಾಂಧಿ ಮೈದಾನವೂ ಸಾಂಸ್ಕೃತಿಕ ಕೂಟಗಳಿಗೆಂದೇ ಇರುವ ನೆಹರೂ ಮೈದಾನವೂ ಉಪಯೋಗಕ್ಕೆ ದೊರೆಯದ ಮಾದರಿಯಲ್ಲಿ ಹಡಾಲೆದ್ದು ಹೋಗಿದೆ. ಎದೆಯೆತ್ತರ ಬೆಳೆದ ಪೊದೆಯಿಂದಾಗಿ ಹುಲ್ಲು ಹಾವು ಚೇಳುಗಳ ಆವಾಸ ಸ್ಥಾನವಾಗಿದೆ. ನಿರ್ವಹಣೆ ಮಾಡಬೇಕಾದ ಇಲಾಖೆ ಪುರಸಭೆ ಕಡೆಗೆ ಬೆಟ್ಟು ಮಾಡಿದರೆ ಪುರಸಭೆ ಯುವಜನ ಸೇವಾ ಇಲಾಖೆ ಕಡೆಗೆ ಕೈ ತೋರಿಸುತ್ತದೆ. ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾದಂತಾಗಿದೆ.

Advertisement

ಮೈದಾನಗಳು:

ಶಾಸ್ತ್ರಿ ಪಾರ್ಕ್‌ ಸಮೀಪ ಕುಂದಾಪುರಕ್ಕೆ ಭಂಡಾರ್‌ಕಾರ್ಸ್‌ ಕಾಲೇಜು ಪಕ್ಕದ ಗಾಂಧಿ ಕ್ರೀಡಾಂಗಣ, ಅದರ ಪಕ್ಕದಲ್ಲಿ ನೆಹರೂ ಮೈದಾನ ಎಂದು ವಿವಿಧ ಚಟುವಟಿಕೆಗಳಿಗೆ ಯೋಗ್ಯವಾದ ಮೈದಾನಗಳಿವೆ. ಗಾಂಧಿ ಮೈದಾನ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸುಪರ್ದಿಯಲಿದೆ. ನೆಹರೂ ಮೈದಾನ ಪುರಸಭೆಯ ಹಿಡಿತದಲ್ಲಿದೆ.

ಸಾಂಸ್ಕೃತಿಕ ವೈಭವ  :

ಸಾಂಸ್ಕೃತಿಕವಾಗಿ ಈ ಮೈದಾನಗಳಿಗೆ ಬಹಳ ಮಹತ್ವವಿದೆ. ಕುಂದಾಪುರದ ಗಾಂಧಿ,

Advertisement

ನೆಹರೂ ಮೈದಾನದಲ್ಲಿ  ನಡೆದ ಯಕ್ಷಗಾನ ಯಶಸ್ಸು ಪಡೆದರೆ ಇಡೀ ತಿರುಗಾಟದಲ್ಲಿ ಯಕ್ಷಗಾನ ಪ್ರದರ್ಶನ ಜನಮೆಚ್ಚುಗೆ ಪಡೆಯುತ್ತದೆ ಎನ್ನುವುದು ಪ್ರತೀತಿ. ಆದರೆ ಈಗ ಕೋವಿಡ್‌ ಕಾರಣಗಳಿಂದ ಎಲ್ಲ ಚಟುವಟಿಕೆಗಳೂ ಸ್ತಬ್ಧವಾಗಿವೆ.

ಆಟದ ಆಡಂಬೋಲ:

ಗಾಂಧಿ ಮೈದಾನದಲ್ಲಿ ಅದೆಷ್ಟು ಆಟೋಟ ಚಟುವಟಿಕೆಗಳು ನಡೆಯುತ್ತಿದ್ದವು ಎಂದು ಯಾರೂ ಲೆಕ್ಕ ಇಟ್ಟಿರಲಾರರು. ಪ್ರತಿದಿನ ಸಂಜೆ, ಶನಿವಾರ, ರವಿವಾರ ಆಟದ ಸದ್ದುಗದ್ದಲದಿಂದಲೇ ತುಂಬಿರುತ್ತಿತ್ತು. ಅಭ್ಯಾಸ ನಡೆಸುವವರಿಗೂ ಅನುಕೂಲ ವಾತಾವರಣ ಇದೆ. ಪ್ರತ್ಯೇಕ ಓಟದ ಟ್ರಾಕ್‌ ಇದೆ. ಈಚೆಗಷ್ಟೇ 40 ಲಕ್ಷ ರೂ. ವೆಚ್ಚದಲ್ಲಿ ಸ್ಟೇಡಿಯಂ ನಿರ್ಮಾಣವಾಗಿದೆ. ಕೋವಿಡ್‌ ಲಾಕ್‌ಡೌನ್‌ ಅನಂತರದ ದಿನಗಳಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಅಂಕುಶ ಬಿದ್ದು ಕ್ರೀಡಾಂಗಣದೊಳಗೆ ಪ್ರವೇಶಿಸುವವರ ಸಂಖ್ಯೆಯೇ ಕಡಿಮೆಯಾಯಿತು. ಸಾಯಂಕಾಲದ ವಾಯುವಿಹಾರಕ್ಕೆ ಬರುವ ವೃದ್ಧರು ಮನೆ ಬಿಟ್ಟು ಹೊರಬರುವುದು ಕಡಿಮೆಯಾಗಿದೆ. ಇದರಿಂದ ಬೀದಿ ದೀಪ ಹಾಳಾದರೂ, ಪಾದಚಾರಿ ಪಥದಲ್ಲಿ ಹುಲ್ಲು ತುಂಬಿದರೂ, ಟ್ರಾಕ್‌ ಮುಚ್ಚಿ ಹೋಗುವಂತೆ ಹುಲ್ಲು ಬೆಳೆದರೂ ಕೇಳುವವರೇ ಇಲ್ಲವಾಯಿತು.

ಗುಜರಿ ವಸ್ತುಗಳು :

ಅತ್ತ ನೆಹರೂ  ಮೈದಾನದ ರಂಗಮಂದಿರ ಉಪಯೋಗಕ್ಕೆ ದೊರೆಯುತ್ತಿಲ್ಲ. ಅದರ ಎದುರು ಕೂಡ ಸ್ವಲ್ಪ ಗುಜರಿ ರಾಶಿಯಿದೆ. ರಂಗಮಂದಿರವೇ ಶಿಥಿಲ ಅವಸ್ಥೆಗೆ ಹೋಗುವಂತೆ ಉಪಯೋಗ ಶೂನ್ಯವಾಗಿದೆ. ಇತ್ತ ಗಾಂಧಿ ಮೈದಾನವೂ ಗುಜುರಿ ವಸ್ತುಗಳ ಸಂಗ್ರಹದ ಅಡ್ಡೆಯಾಗಿದೆ. ಈಚೆಗೆ ಪೆವಿಲಿಯನ್‌ ನವೀಕರಣ ಸಂದರ್ಭ ಬಳಕೆಯಾಗಿ ಉಳಿದ ವಸ್ತುಗಳ ರಾಶಿಯನ್ನು ಹಾಗೆಯೇ ಬಿಡಲಾಗಿದೆ. ತುಕ್ಕು ಹಿಡಿದ ಕಬ್ಬಿಣದ ತುಂಡು, ಸಲಾಕೆ ಮೊದಲಾದವು ಇವೆ. ಬೆಳಕಿನ ವ್ಯವಸ್ಥೆ ಸರಿಯಾಗಿಲ್ಲದ ಕಾರಣ ಸಾಯಂಕಾಲ ಆಗುತ್ತಲೇ ಮೈದಾನದಿಂದ ಕಾಲ್ಕಿàಳಬೇಕು. ಸಂಜೆಯ ಗಾಳಿ ಸೇವನೆಗೆ ಬರುವವರಿಗೆ ಕತ್ತಲೆಯ ಆತಂಕ.

ನಿರ್ವಹಣೆ ಸವಾಲು :

ಸಹಾಯಕ ಕಮಿಷನರ್‌ ಅಧ್ಯಕ್ಷತೆಯ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಅಧೀನದಲ್ಲಿ ಗಾಂಧಿ ಮೈದಾನವೂ, ಪುರಸಭೆ ಅಧೀನದಲ್ಲಿ ನೆಹರೂ ಮೈದಾನವು ಇವೆ. ಈವರೆಗೆ ಪುರಸಭೆಯೇ ಈ ಎರಡೂ ಮೈದಾನಗಳ ಸ್ವತ್ಛತ ಕಾರ್ಯ ನಿರ್ವಹಿಸುತ್ತಾ ಬಂದಿದೆ. ಯುವಜನ ಸೇವಾ ಇಲಾಖೆ ಅನುದಾನ ಬಂದಾಗ ತಾನೂ ತನ್ನ ಕೈಲಾದ ಸೇವೆ ಮಾಡಿದೆ. ಆದರೆ ಈಗ ಯಾರು ಮಾಡುವುದು ಎಂಬ ಅನುಮಾನದಲ್ಲೇ ನಿರ್ವಹಣೆ ಬಾಕಿಯಾಗಿದೆ. ನಿರ್ವಹಣೆ ನಡೆಯದ ಕಾರಣ ಮೈದಾನ ಸಮರ್ಪಕವಾಗಿ ಬಳಕೆಗೆ ದೊರೆಯುತ್ತಿಲ್ಲ. ಮಳೆ ಬಂದಾಗ ನೀರು ನಿಲ್ಲುತ್ತದೆ. ಕೆಸರು ತುಂಬುತ್ತದೆ. ಹುಲ್ಲಿನ ಎಡೆಯಲ್ಲಿ ಏನು ಇರುತ್ತದೆ ಎನ್ನುವುದೇ ತಿಳಿಯದ ಸ್ಥಿತಿಯಲ್ಲಿದೆ. ದೀಪಗಳ ನಿರ್ವಹಣೆ ತೀರಾ ತುರ್ತಿನ ಅವಶ್ಯವಾಗಿದೆ.

ಮೈದಾನಗಳು ಹಾಳು ಬಿದ್ದು ಹೋಗಿ ಜನರ ಪಯೋಗಕ್ಕೆ ದೊರೆಯುತ್ತಿಲ್ಲ. ಸುಂದರ ಕುಂದಾಪುರ ಎಂದು ಸುಂದರ ಮೈದಾನಗಳೇ ಹಾಳುಕೊಂಪೆಗಳಾದರೆ ಹೇಗೆ. ಸಂಬಂಧಪಟ್ಟವರು ತತ್‌ಕ್ಷಣ ಗಮನಹರಿಸಿ ಸರಿಪಡಿಸುವಂತೆ ಮನವಿ ಮಾಡಿದ್ದೇನೆ. ಗಿರೀಶ್‌ ಜಿ.ಕೆ., ಸದಸ್ಯರು, ಪುರಸಭೆ

ಸ್ವಾತಂತ್ರ್ಯ ಸಂದರ್ಭ ಪುರಸಭೆಯವರು ಸ್ವತ್ಛತೆ ನಡೆಸುತ್ತಾರೆ. ಈ ಬಾರಿ ಪೂರ್ಣ ಪ್ರಮಾಣದಲ್ಲಿ ನಡೆಯಲಿಲ್ಲ. ನಮ್ಮ ಇಲಾಖೆಯಲ್ಲಿ ಅನುದಾನದ ಕೊರತೆ ಇದೆ. ಹಾಗಿದ್ದರೂ ಎಲ್ಲ ಅವ್ಯವಸ್ಥೆಗಳನ್ನು ಶೀಘ್ರ  ಸರಿಪಡಿಸಲಾಗುವುದು. ಕುಸುಮಾಕರ ಶೆಟ್ಟಿ,  ಯುವಜನ ಸೇವೆ ಕ್ರೀಡಾ ಇಲಾಖೆ ಅಧಿಕಾರಿ

 

-ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next