ಕುಂದಾಪುರ: ಕಟ್ಬೆಲೂ¤ರು ಹಾಗೂ ಹೆಮ್ಮಾಡಿ ಗ್ರಾಮಗಳ ನೂರಾರು ಎಕ್ರೆ ಕೃಷಿ ಪ್ರದೇಶಕ್ಕೆ ವರದಾನವಾಗಿರುವ ಜಾಲಾಡಿಯ ಸಣ್ಣ ಕಿಂಡಿ ಅಣೆಕಟ್ಟು ಗುರುವಾರ ಮತ್ತೆ ಕುಸಿದಿದ್ದು ನೂರಾರು ಎಕ್ರೆ ಗದ್ದೆಗೆ ಉಪ್ಪುನೀರು ನುಗ್ಗಿದೆ.
ಜಾಲಾಡಿಯ ಹೊಸಕಳಿ ಎಂಬಲ್ಲಿ ಇರುವ ಅಣೆಕಟ್ಟಿನಲ್ಲಿ ಸಮುದ್ರದ ಉಬ್ಬರ ಇಳಿತದ ಸಂದರ್ಭ ಉಪ್ಪುನೀರಿನಲ್ಲಿ ಏರಿಳಿಕೆಯಾಗುತ್ತದೆ. ಮೊದಲೇ ಇಲ್ಲಿ ಕಿಂಡಿ ಅಣೆಕಟ್ಟು ತುಸು ಕುಸಿದಿತ್ತು.
ಬುಧವಾರ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಭೇಟಿ ನೀಡಿ ಪರಿಶೀಲಿಸಿದ್ದರು. ಹೊಸ ಅಣೆಕಟ್ಟು ಹಾಗೂ ತಡೆಗೋಡೆಗೆ ಅನುದಾನ ಮಂಜೂರಾಗಿದೆ ಎಂದಿದ್ದರು. ಇದೀಗ ಕಾಮಗಾರಿಗೆ ಶಿಲಾನ್ಯಾಸ ನಡೆಯುವ ಮೊದಲೇ ಹಳೆ ಅಣೆಕಟ್ಟು ಕುಸಿತ ಕಾಣುತ್ತಿದೆ. ಇದರ ತಾತ್ಕಾಲಿಕ ದುರಸ್ತಿಗೆ ಮಾಡಿದ ಕ್ರಮ ಸರಿಯಾಗದ ಕಾರಣ ದಿನೇ ದಿನೇ ಕುಸಿತಕ್ಕೆ ಒಳಗಾಗುತ್ತಿದೆ. ಮತ್ತಷ್ಟು ಕುಸಿಯದಂತೆ ತಾತ್ಕಾಲಿಕವಾಗಿ 10 ಲೋಡ್ ಮಣ್ಣು ಹಾಕಲು ಶಾಸಕರು ಸೂಚಿಸಿದ್ದರೂ ಅದಕ್ಕೂ ಮೊದಲೇ ಕುಸಿತವಾಗುತ್ತಿದೆ.
ಸುಮಾರು 60 ಮನೆಗಳು ಈ ಪ್ರದೇಶದಲ್ಲಿದ್ದು ಗದ್ದೆಗೆ ಉಪ್ಪುನೀರು ನುಗ್ಗಿದರೆ ಮುಂಬರುವ ಅವಧಿಯಲ್ಲಿ ಭತ್ತದ ಬೆಳೆ ಬೆಳೆಯಲು ಆಗುವುದಿಲ್ಲ. ಜತೆಗೆ ಉದ್ದಿನ ಬೆಳೆ ಮುಗಿಸಿದ ಗದ್ದೆಯಲ್ಲಿ ಈಗ ತರಕಾರಿ ಬೆಳೆಯಲೂ ಸಾಧ್ಯವಾಗುವುದಿಲ್ಲ.
ಆದ್ದರಿಂದ ಇಲಾಖೆ ತತ್ಕ್ಷಣ ಸ್ಪಂದಿಸಬೇಕು ಎಂದು ಊರವರು ಆಗ್ರಹಿಸಿದ್ದಾರೆ.