Advertisement

ಹೊಳೆಆಲೂರಿನ ನೆರೆ ಸಂತ್ರಸ್ತರಿಗಾಗಿ ವಿಶೇಷ ರೈಲು

09:50 AM Aug 10, 2019 | Team Udayavani |

ಗದಗ: ಮಲಪ್ರಭೆ ಹಾಗೂ ಬೆಣ್ಣೆಹಳ್ಳ ಪ್ರವಾಹದ ಸಂತ್ರಸ್ತರನ್ನು ವಿಶೇಷ ರೈಲಿನಲ್ಲಿ ನಗರಕ್ಕೆ ಕರೆತಂದಿರುವ ಜಿಲ್ಲಾಡಳಿತ, ಮತ್ತಷ್ಟು ಜನರನ್ನು ಕರೆತರಲು ಬೆಳಗ್ಗೆ 11 ಗಂಟೆಗೆ ಮತ್ತೊಂದು ವಿಶೇಷ ರೈಲಿನ ವ್ಯವಸ್ಥೆ ಮಾಡಿದೆ.

Advertisement

ಸಂತ್ರಸ್ತರಿಗೆ ಇಲ್ಲಿನ ಜಣತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ.

ಗುರುವಾರ ಸೂರ್ಯ ಮುಳುಗುತ್ತಿದ್ದಂತೆ ರೋಣ ತಾಲೂಕಿನ ಹೊಳೆಆಲೂರು, ಮೆಣಸಗಿ ಗ್ರಾಮಗಳು ಜಲದಿಗ್ಬಂಧನಕ್ಕೆ ಒಳಗಾಗಿದ್ದವು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಜಿಲ್ಲಾಡಳಿತ, ಗುರುವಾರ ರಾತ್ರಿ ರೈಲ್ವೇ ಅಧಿಕಾರಿಗಳೊಂದಿಗೆ ಚರ್ಚಿಸಿ, ಪ್ರವಾಹ ಸಂತ್ರಸ್ತರ ರಕ್ಷಣೆಗಾಗಿ ಹೊಳೆಆಲೂರಿನಿಂದ ಗದಗಿಗೆ ವಿಶೇಷ ರೈಲಿನ ವ್ಯವಸ್ಥೆ ಮಾಡಿತ್ತು. ಈ ಮೂಲಕ ಆ ಭಾಗದ ನರೆ ಸಂತ್ರಸ್ತರನ್ನು ಸುರಕ್ಷಿತವಾಗಿ ನಗರಕ್ಕೆ ಕರೆ ತರುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ.

ಗುರುವಾರ ತಡ ರಾತ್ರಿ ಗದಗ ರೈಲ್ವೇ ನಿಲ್ದಾಣಕ್ಕೆ ಆಗಮಿಸಿದ ವಿಶೇಷ ರೈಲಿನಲ್ಲಿ ಸುಮಾರು 500ಕ್ಕೂ ಹೆಚ್ಚು ಜನರು ತಮ್ಮ ಗಂಟು ಮೂಟೆಗಳೊಂದಿಗೆ ಆಗಮಿಸಿದರು. ತಮ್ಮ ಮಕ್ಕಳು ಮರಿ, ಹಾಗೂ ಸಾಕು ಪ್ರಾಣಿಗಳಾದ ನಾಯಿ, ಆಡು ಹಾಗೂ ಕುರಿಗಳನ್ನು ತಂದಿದ್ದು, ಪ್ರವಾಹದ ಭೀಕರತೆಯನ್ನು ಸಾರಿತು.
ಪ್ರವಾಹ ಸಂತ್ರಸ್ತರು ಉಳಿದುಕೊಳ್ಳಲು ಇಲ್ಲಿನ ಜಣತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ತಾತ್ಕಾಲಿಕ ವ್ಯವಸ್ಥೆ ಒದಗಿಸಲಾಗಿದೆ. ರಾತ್ರಿ 1 ಗಂಟೆ ಸುಮಾರಿಗೆ ಸಂತ್ರಸ್ತರು ಕಲ್ಯಾಣ ಕೇಂದ್ರಕ್ಕೆ ತಲುಪುತ್ತಿದ್ದಂತೆ ನೂರಾರು ಬ್ಲಾಂಕೆಟ್‌ ಗಳೊಂದಿಗೆ ದಾವಿಸಿದ ಸ್ಥಳೀಯ ಜೈನ ಸಮಾಜದ ಯುವಕರು, ಸಂತ್ರಸ್ತರಿಗೆ ಹೊಸ ಬ್ಲಾಂಕೇಟ್‌ಗಳನ್ನು ವಿತರಿಸಿ, ಮಾನವೀಯತೆ ಮೆರೆದರು.

ಸಂತ್ರಸ್ತರಿಗೆ ಶ್ರೀಮಠದಿಂದ ಪ್ರಸಾದ ಹಾಗೂ ಆರೋಗ್ಯ ಇಲಾಖೆಯಿಂದ ವೈದ್ಯಕೀಯ ಸೇವೆ ಒದಗಿಸಲಾಗುತ್ತಿದೆ. ಹೊಳೆಆಲೂರು ಭಾಗದಲ್ಲಿ ಇನ್ನೂ ನೆರೆ ಸಂತ್ರಸ್ತರು ಉಳಿದುಕೊಂಡಿದ್ದಾರೆ. ಅವರನ್ನು ನಗರಕ್ಕೆ ಕರೆತರಲು ಶುಕ್ರವಾರ ಬೆಳಗ್ಗೆ 11 ಗಂಟೆಗೆ ಮತ್ತೊಂದು ವಿಶೇಷ ರೈಲು ಸಂಚರಿಸಲಿದೆ. ಅದರಲ್ಲಿ ಸುಮಾರು 200ಕ್ಕೂ ಹೆಚ್ಚು ಜನರು ನಗರಕ್ಕೆ ಆಗಮಿಸುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next