Advertisement

Yakshagana: ಸಿಗಂದೂರು ಯಕ್ಷಗಾನ ಮಂಡಳಿ… ಕಲಾವಿದರು-ಜನರ ಕಳಕಳಿ

04:49 PM Aug 15, 2023 | Team Udayavani |

ಯಾವುದೇ ಒಂದು ಧಾರ್ಮಿಕ ಕ್ಷೇತ್ರ, ಶಕ್ತಿ ಕ್ಷೇತ್ರಗಳು ದೇವರ ಪೂಜೆ, ಸಮಾಜ ಕಲ್ಯಾಣಕ್ಕಾಗಿ ಹೋಮ ಜಪಾದಿಗಳನ್ನು ನಡೆಸುವ ಮೂಲಕ ಜನಮುಖೀಯಾಗಿದ್ದರೆ ಸಾಕು ಎಂಬ ಅಭಿಮತ ಒಂದೆಡೆಯಾದರೆ ಭಕ್ತರ ಕೊಡುಗೈಯಿಂದ ಆರ್ಥಿಕವಾಗಿ ಸಬಲವಾಗುವ ಧಾರ್ಮಿಕ ಕ್ಷೇತ್ರಗಳು ಬಡತನ, ಸಂಕಷ್ಟದಲ್ಲಿರುವವರಿಗೆ ವಿವಿಧ ಸಾಮಾಜಿಕ ಚಟುವಟಿಕೆಗಳ ಮುಖಾಂತರ ಸಹಾಯಕ್ಕೆ ನಿಲ್ಲಬೇಕು ಎಂಬ ಅನಿಸಿಕೆ ಮತ್ತೂಂದೆಡೆ ಇದೆ. ಧಾರ್ಮಿಕ ಕೈಂಕರ್ಯ ಹಾಗೂ ಜನಮುಖೀ ಎರಡರಲ್ಲೂ ತೊಡಗಿಸಿಕೊಂಡಿರುವ ಶ್ರೀ ಕ್ಷೇತ್ರಗಳಲ್ಲಿ ಸಾಗರ ತಾಲೂಕಿನ ಸಿಗಂದೂರು ಶ್ರೀ ಚೌಡಮ್ಮ ದೇವಿ ದೇವಾಲಯವೂ ಒಂದು.

Advertisement

ಕ್ಷೇತ್ರಗಳಲ್ಲಿ ಅನ್ನದಾನ ನಡೆಯಬೇಕು, ಶೈಕ್ಷಣಿಕ ಸಹಾಯ ಆಗಬೇಕು ಎಂಬ ಸಲಹೆ ಸಾಮಾನ್ಯ. ಸಿಗಂದೂರು ಕ್ಷೇತ್ರದಲ್ಲಿ ಅನುದಿನವೂ ಅನ್ನದಾಸೋಹವಿದೆ. ಶರಾವತಿ ಹಿನ್ನೀರಿನ ಅತಿ ಹಿಂದುಳಿದ ಪ್ರದೇಶವಾಗಿರುವ ಇಲ್ಲಿನ ತುಮರಿ ಭಾಗದ ಸರ್ಕಾರಿ ಶಾಲೆಗಳನ್ನು ಉಚಿತವಾಗಿ ಆಧುನೀಕರಿಸುವ ಕೆಲಸವನ್ನು ಸಿಗಂದೂರು ಕ್ಷೇತ್ರ ಮಾಡುತ್ತಿದೆ. ವೈಯಕ್ತಿಕ ಹಾಗೂ ಸಾಮುದಾಯಿಕ ಸಹಾಯ ನಿರಂತರವಾಗಿ ನಡೆದಿದೆ. ಇದರೊಂದಿಗೆ ಸಿಗಂದೂರು ಚೌಡಮ್ಮ ದೇವಿ ಕೃಪಾಪೋಷಿತ ಯಕ್ಷಗಾನ ಮಂಡಳಿಯನ್ನು ರೂಪಿಸಿ ಸಿಗಂದೂರು ಕ್ಷೇತ್ರದ ಪಾರಂಪರಿಕ ಧರ್ಮದರ್ಶಿ ಡಾ| ಎಸ್‌.ರಾಮಪ್ಪ ದೊಡ್ಡ ಸಂಖ್ಯೆಯ ಯಕ್ಷಗಾನ ಕಲಾವಿದರನ್ನು, ಕಲೆಯನ್ನು ಪೋಷಿಸುವ ಕೆಲಸವನ್ನು ಸಾಮಾಜಿಕ ವಿನಮ್ರತೆಯಿಂದ ಮಾಡುತ್ತಿದ್ದಾರೆ.

ಘಟ್ಟದ ಮೇಲಿನ ಮಲೆನಾಡು ಭಾಗದಲ್ಲಿ ಯಕ್ಷಗಾನ ಮೇಳಗಳೇ ಕಡಿಮೆ. ಧಾರ್ಮಿಕ ಕ್ಷೇತ್ರಗಳಿಂದಲಂತೂ ಅಂತಹ ಪ್ರಯತ್ನ ನಡೆದಿರುವುದು ವಿರಳಾತಿವಿರಳ ಎನ್ನಬಹುದು. ಈ ಹಿನ್ನೆಲೆಯಲ್ಲಿ ಸಿಗಂದೂರು ಕ್ಷೇತ್ರದಿಂದ 23 ವರ್ಷಗಳಿಂದ ಯಕ್ಷಗಾನ ಮೇಳ ನಡೆಸುತ್ತಿರುವುದು ಅಪರೂಪದ ಸಂಗತಿ. ಸುಸಜ್ಜಿತ ರಂಗಸ್ಥಳ, ಆಕರ್ಷಕ ವೇಷ ಭೂಷಣಗಳು, ಉತ್ತಮ ಕಲಾವಿದರಿಂದ ಯಕ್ಷಗಾನ ಪ್ರದರ್ಶನಗಳು ನಡೆಯುತ್ತಿವೆ. ಘಟ್ಟದ ಮೇಲೆ ಹಾಗೂ ಘಟ್ಟದ ಕೆಳಗೆ ಮೇಳ ಪ್ರಸಿದ್ಧಿ ಹೊಂದಿದೆ.

ಸಿಗಂದೂರು ಶ್ರೀ ಚೌಡಮ್ಮ ದೇವಿಗೆ ಕೂಡ ಯಕ್ಷಗಾನ ಅತ್ಯಂತ ಪ್ರಿಯ ಎಂಬುದು ಹಲವು ಸಂದರ್ಭಗಳಲ್ಲಿ ರುಜುವಾತಾಗಿದೆ. “ಅನ್ಯಥಾ ಶರಣಂ ನಾಸ್ತಿ’ ಎಂದು ನಂಬಿ ಯಕ್ಷಗಾನ ಸೇವೆಯ ಹರಕೆ ಹೊರುವ ಭಕ್ತರಿಗೆ ಕಂಕಣ ಭಾಗ್ಯ, ಸಂತಾನ ಭಾಗ್ಯ, ಉದ್ಯೋಗ ವ್ಯವಹಾರದಲ್ಲಿ ಯಶಸ್ಸು ಒದಗಿಸಿದ ನೂರಾರು ಉದಾಹರಣೆಗಳಿವೆ. ದಾಂಪತ್ಯದಲ್ಲಿ ವಿರಸ, ಮಾಟ ಮಂತ್ರಾದಿಗಳು, ಜಮೀನು-ಮನೆ ಸಮಸ್ಯೆಗಳು, ಅನಾರೋಗ್ಯ, ಮಾನಸಿಕ ಅಶಾಂತಿ ಹೋಗಲಾಡಿಸಿ ಬದುಕಿನ ಸರ್ವ ಕಷ್ಟಗಳನ್ನು ನಿವಾರಿಸಿ ಸುಖ-ಶಾಂತಿ ನೆಮ್ಮದಿ ಕರುಣಿಸುವ ತಾಯಿಗೆ ಬದುಕಿಗೆ ಬೆಳಕಾಗಿ ಬರುವ ಬೆಳಕಿನ ಸೇವೆಯಾದ ಯಕ್ಷಗಾನ ಅತಿ ಪ್ರಿಯಕರವಾಗಿರುವುದಾಗಿದೆ.

Advertisement

ನಾಡಿನ ಶಕ್ತಿ ದೇವತೆಗಳಿಗೂ ಯಕ್ಷಗಾನಕ್ಕೂ ಅವಿನಾಭಾವ ಸಂಬಂಧ ಇದೆ. “ಕಲೌ ದುರ್ಗಾ ವಿನಾಯಕೌ’ ಕಲಿಯುಗದಲ್ಲಿ ಶೀಘ್ರವಾಗಿ ಒಲಿಯುವ ದೇವತೆಗಳೆಂದರೆ ದುರ್ಗಾ ಮತ್ತು ವಿನಾಯಕರು ಎಂಬ ಮಾತು ವಾಡಿಕೆಯಲ್ಲಿದೆ. ಕಲೆ, ಸಾಹಿತ್ಯ, ಸಂಸ್ಕೃತಿಯ ಹಿನ್ನೆಲೆಯಲ್ಲಿ ಇದು ವಾಸ್ತವವೇ ಆಗಿದ್ದು, ನವರಾತ್ರಿ, ಗಣೇಶನ ಹಬ್ಬಗಳು ವಿಶೇಷವಾಗಿರುವುದು ಮತ್ತು ಈ ಹಬ್ಬದಲ್ಲೇ ಯಕ್ಷಗಾನ ಪ್ರದರ್ಶನಗಳೂ ನಡೆಯುವುದು ಇದಕ್ಕೆ ಸಾಕ್ಷಿ.

ಯಕ್ಷಗಾನ ನೆಲೆಯಾಗಿರುವ ಕರಾವಳಿಯ ದೇವಿ ಕ್ಷೇತ್ರಗಳಲ್ಲಿ ಬೆಳಕಿನ ಸೇವೆ ಅಂದರೆ ಬಯಲಾಟ ಆಡಿಸುವ ಹರಕೆ ಪದ್ಧತಿಯಿದ್ದು, ದೇವಿಯೇ ಆಟ ನೋಡುತ್ತಾಳೆ ಎಂಬ ನಂಬುಗೆ ಇದೆ. ಯಕ್ಷಗಾನದ ಬಹುತೇಕ ಕಥಾನಕಗಳು ಶಿವ, ವಿಷ್ಣು, ದೇವತೆಗಳ ಕಥೆಗಳೇ ಆದರೂ ಶಕ್ತಿ ಕ್ಷೇತ್ರಗಳು ಯಕ್ಷಗಾನದ ಆಶ್ರಯ ಸ್ಥಾನವಾದುದರಿಂದ ದೇವಿ ಮಹಾತೆ¾ ಮತ್ತು ಕ್ಷೇತ್ರಮಹಾತೆ¾ಗಳು ಪ್ರಸಿದ್ಧಿಗೆ ಬಂದಿವೆ.

ಸಿಗಂದೂರು ಕ್ಷೇತ್ರ ಮಹಾತ್ಮೆ, ದೇವಿ ಮಹಾತ್ಮೆ, ಚಾಮುಂಡೇಶ್ವರಿ ಮಹಿಮೆ, ಮೊದಲಾದ ಪೌರಾಣಿಕ ಪ್ರಸಂಗಗಳು ಸಿಗಂದೂರು ಚೌಡಮ್ಮ ದೇವಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೇಳದ ಯಶಸ್ವಿ ಕಲಾ ಪ್ರದರ್ಶನವಾಗಿದ್ದು. ಜನ ಮೆಚ್ಚುಗೆ ಗಳಿಸಿದೆ. ಕಲಾವಿದರು ಮತ್ತು ಸಿಬ್ಬಂದಿ ಸೇರಿದಂತೆ 40 ಕ್ಕೂ ಹೆಚ್ಚು ಜನರಿದ್ದಾರೆ. ಹರಕೆ ಆಟ ಆಡಿಸುವವರಿಗೆ ಮುಂಗಡವಾಗಿ ಕಾಯ್ದಿರಿಸುವ ವ್ಯವಸ್ಥೆ ಇದೆ. ಪ್ರತಿ ವರ್ಷ ಮಕರ ಸಂಕ್ರಮಣದ ಜಾತ್ರೆಯಲ್ಲಿ ದೇವಿಯ ಸಾನ್ನಿಧ್ಯದಲ್ಲಿ ಸೇವೆ ಆಟ ನಡೆಯುತ್ತದೆ. ಹಲವಾರು ಭಕ್ತರು ಸೇವೆ ಆಟ ಆಡಿಸುವ ಹರಕೆ ಹೊತ್ತವರಿದ್ದಾರೆ.

ಕೆಲವರು ಪ್ರತಿ ವರ್ಷವೂ ದೇವಿ ಮಹಾತ್ಮೆಯನ್ನೇ ಆಡಿಸುವವರೂ ಇದ್ದು ಇಂಥವರಿಗೆ ಪ್ರತಿ ವರ್ಷ ಆಟ ಸಿಗುವ ಅನುಕೂಲವೂ ಇದೆ. ಅದೊಂದೇ ಪ್ರಸಂಗ ಲಕ್ಷಕ್ಕೂ ಮೀರಿ ಪ್ರದರ್ಶನಗಳನ್ನು ಕಂಡಿದೆ. ಗಿನ್ನೆಸ್‌ ದಾಖಲೆಗೆ ಸೇರುವ ಅರ್ಹತೆ ಪಡೆದಿದೆ. ದೇವಿ ಕ್ಷೇತ್ರಗಳು ತುಂಬಾ ಪ್ರಸಿದ್ಧವಾಗಿರುವುದೂ ಯಕ್ಷಗಾನ ಹರಕೆ ನಡೆಯುವುದೂ ದೇವಿಯೊಂದಿಗೆ ಕಲೆ ಮೇಳೈಸುವಂತಾಗಿದೆ.

ಸಿಗಂದೂರು ಚೌಡಮ್ಮ ದೇವಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಇನ್ನೆರಡೇ ವರ್ಷಗಳಲ್ಲಿ ಬೆಳ್ಳಿ ಹಬ್ಬವನ್ನು ಆಚರಿಸಲಿದೆ. ಈ ಸಂದರ್ಭವನ್ನು ಸ್ಮರಣೀಯವಾಗಿ ಆಚರಿಸಲು ಈಗಾಗಲೇ ಹಲವು ತಯಾರಿಗಳು ನಡೆದಿವೆ. ಯಕ್ಷಗಾನದ ಮೂಲಕ ಜನರ ಸಂಕಷ್ಟ, ಮನೋವೇದನೆಗಳನ್ನು ಬಗೆಹರಿಸುವ ಅವಕಾಶವನ್ನು ಸಿಗಂದೂರು ಧರ್ಮಕ್ಷೇತ್ರ ಅತ್ಯಂತ ಶಕ್ತಿಯುತವಾಗಿ ಬಳಸಿಕೊಳ್ಳುತ್ತಿದೆ, ಬಳಸಿಕೊಳ್ಳುತ್ತದೆ ಎಂದು ಗಟ್ಟಿ ಧ್ವನಿಯಲ್ಲಿ ಹೇಳಬಹುದು.

ಸಿಗಂದೂರು ಚೌಡಮ್ಮ ದೇವಿ ಕೃಪಾಪೋಷಿತ ಯಕ್ಷಗಾನ ಮಂಡಳಿ
ತಾಲೂಕಿನ ತುಮರಿಯ ಸಿಗಂದೂರು ಚೌಡಮ್ಮ ದೇವಿ ಟ್ರಸ್ಟ್‌ ವತಿಯಿಂದ ನಡೆಯುವ ಸಿಗಂದೂರು ಚೌಡಮ್ಮ ದೇವಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಕ್ಷೇತ್ರ ಸಂಚಾರ ಸಾಮಾನ್ಯವಾಗಿ ನವೆಂಬರ್‌ನಿಂದ ಆರಂಭವಾಗುತ್ತದೆ. ಮೊದಲ ದಿನ ಬೆಳಿಗ್ಗೆ ಗಣ ಹೋಮ, ಸಂಜೆ ದೇವಿಯ ಮುಂಭಾಗದಲ್ಲಿ “ಯಕ್ಷ ಜ್ಯೋತಿ’ ಬೆಳಗುವ ಮೂಲಕ ಧರ್ಮಾಧಿ ಕಾರಿಗಳ ನೇತೃತ್ವದಲ್ಲಿ ಚೌಕಿ ಪೂಜೆ ನಡೆಯಲಿದೆ. ಪ್ರತಿ ವರ್ಷ ಆಯ್ದ ಪೌರಾಣಿಕ, ಕಾಲ್ಪನಿಕ, ಪ್ರಸಂಗಗಳನ್ನು ಪ್ರದರ್ಶಿಸಲಾಗುತ್ತದೆ. ವಾಸ್ತವವಾಗಿ ಸಿಗಂದೂರು ದೇವಸ್ಥಾನದ ಆಡಳಿತ ಮಂಡಳಿಯಿಂದ ಹೊರಡುವ ಏಕ ಮಾತ್ರ ಮೇಳ ಇದಾಗಿದೆ.

41 ಕಲಾವಿದರೊಂದಿಗೆ ಆಕರ್ಷಕ ರಂಗಸ್ಥಳ ಹಾಗೂ ಚೌಕಿಮನೆ ಯನ್ನು ಹೊಂದಿದ್ದು, ವಿದ್ಯುತ್‌ ದೀಪಾಲಂಕೃತ ವಿಶೇಷ ಧ್ವನಿವರ್ಧಕ ವ್ಯವಸ್ಥೆಯನ್ನು ಹೊಂದಿದೆ. ಕಾರ್ಯದರ್ಶಿ ರವಿಕುಮಾರ್‌ ಎಚ್‌.ಆರ್‌. ಅವರ ಮಾರ್ಗದರ್ಶನ ಇರಲಿದೆ. ಚೌಡಮ್ಮ ದೇವಿಗೆ ಪ್ರಿಯವಾದ ಹರಕೆ ಬಯಲಾಟ, ಬೆಳಕಿನ ಸೇವೆ, ಯಕ್ಷಗಾನ ಪ್ರದರ್ಶನ ಮಾಡಲಿಚ್ಚಿಸುವ ಭಕ್ತರು ದೇವಸ್ಥಾನದ ಪ್ರಧಾನ ಕಚೇರಿಯನ್ನು 94489 54052 ಮೂಲಕ ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next