Advertisement

ಮಾರುಕಟ್ಟೆಗೆ ಲಗ್ಗೆಯಿಟ್ಟ ಮಳೆಗಾಲದ ವಿಶೇಷ ಹೊಳೆ ಮೀನುಗಳು ! 

06:15 AM Jun 04, 2018 | |

ಕಾಪು: ಮುಂಗಾರು ಮಳೆಯ ಅಬ್ಬರಕ್ಕೆ ಮೊದಲೇ ಸಮುದ್ರ ಮೀನುಗಾರಿಕೆಗೆ ವಿಶ್ರಾಂತಿ ದೊರಕಿದೆ. ಸಮುದ್ರ ಮೀನುಗಾರಿಕೆಗೆ ವಿಶ್ರಾಂತಿ ಸಿಕ್ಕಿದ ಒಂದೆರಡು ದಿನಗಳಲ್ಲೇ ಕರಾವಳಿಗರು ಸಿಹಿ ನೀರಿನ ಮೀನುಗಾರಿಕೆಯತ್ತ ದೃಷ್ಟಿ ಹರಿಸಿದ್ದು ಮಾರುಕಟ್ಟೆಗೆ ಸಿಹಿ ನೀರಿನ ಮೀನುಗಳು ಲಗ್ಗೆಯಿಟ್ಟಿವೆ. ಕರಾವಳಿಯ ಮಾರುಕಟ್ಟೆಗಳಲ್ಲಿ ಕಾಣಸಿಗುತ್ತಿರುವ ಇಪೆì, ಏರಿ, ಕಿಜನ್‌, ಕಾಣೆ, ಮೊಡೆಂಜಿ, ಮುಗುಡು ಸಹಿತ ವಿವಿಧ ಜಾತಿಗಳ ಹೊಳೆ ಮೀನಿಗೆ ಭಾರೀ ಬೇಡಿಕೆ ವ್ಯಕ್ತವಾಗಿದ್ದು ಮೀನು ಚಪಲಿಗರ ಬಾಯಲ್ಲಿ ನೀರೂರುವಂತೆ ಮಾಡಿವೆ.

Advertisement

ಎಲ್ಲೆಲ್ಲಿ ತುದೆ ಮೀನುಗಾರಿಕೆಗೆ ಅವಕಾಶವಿದೆ ?
ಕಾಪು ಪರಿಸರದ ಕಟಪಾಡಿ – ಮಟ್ಟು ಹೊಳೆ, ಪಾಂಗಾಳದ ಪಿನಾಕಿನಿ ಹೊಳೆ, ಉದ್ಯಾವರ ಪಾಪನಾಶಿನಿ ಹೊಳೆ, ಮಣಿಪುರ ಹೊಳೆ, ಇನ್ನಂಜೆಯ ಮರ್ಕೋಡಿ ಹೊಳೆ ಸಹಿತ ತೀರ ಪ್ರದೇಶ ಮತ್ತು ಸೇತುವೆಗಳ ಪಕ್ಕದಲ್ಲಿ ಮೀನುಗಾರರು ಬಲೆ ಬೀಸಿ ಹೊಳೆ ಮೀನು ಹಿಡಿಯುವ ಪ್ರಯತ್ನ ಮಾಡುತ್ತಾರೆ. ಇನ್ನು ಮಲ್ಲಾರು, ಮೂಳೂರು, ಬೆಳಪು, ಕೊಪ್ಪಲಂಗಡಿ, ಕುಂಜೂರು, ಎರ್ಮಾಳು ಸಹಿತ ಹಲವೆಡೆಗಳಲ್ಲಿ ಸೇತುವೆ ಪ್ರದೇಶಗಳಲ್ಲಿ ಗಾಳ ಹಾಕಿ ಸಿಹಿ ನೀರಿನ ಮೀನು ಹಿಡಿಯುವ ಕಾಯಕ ಪ್ರಾರಂಭವಾಗಿದೆ.


ವಿಶೇಷತೆ ಪಡೆದ ಉಬ್ಟಾರ್‌ ಮೀನುಗಾರಿಕೆ
ಮಳೆಗಾಲ ಪ್ರಾರಂಭವಾದ ವಾರದೊಳಗೆ ಕರಾವಳಿಯಲ್ಲಿ ಸಾಂಪ್ರಧಾಯಿಕ ಶೈಲಿಯಲ್ಲಿ ಉಬ್ಟಾರ್‌ ಮೀನುಗಾರಿಕೆ ನಡೆಯುತ್ತದೆ. ಮಳೆಗಾಲದ ಪ್ರಾರಂಭವಾದ ಬಳಿಕ ಪ್ರತೀ ಊರಿನ ಹೊಳೆ ತೀರದ ಗದ್ದೆಗಳಲ್ಲಿ, ತೋಡುಗಳಲ್ಲಿ ಉಬ್ಟಾರ್‌ ಮೀನುಗಾರಿಕೆಯದ್ದೇ ಸುದ್ದಿಯಿದ್ದು, ಅದಕ್ಕೆ ಅಷ್ಟೇ ವಿಶೇಷವಾದ ಮಹತ್ವವೂ ಇದೆ.

ಬೇಸಗೆಯಲ್ಲಿ ಬತ್ತಿ ಹೋಗುವ ಕೆರೆ – ತೊರೆಗಳಲ್ಲಿರುವ ಮೀನುಗಳು ಮಳೆಯ ನಿರೀಕ್ಷೆಯೊಂದಿಗೆ ಆಹಾರವಿಲ್ಲದೆ ಕೆಸರಿನ ಅಡಿಯಲ್ಲಿ ಕುಳಿತಿರುತ್ತವೆ. ಹೀಗೆ ಮಣ್ಣಿನೊಳಗೆ, ಕೆಸರಿನೊಳಗೆ ಅವಿತುಕೊಳ್ಳುವ ಮೀನುಗಳು ಒಂದೆರಡು ಮಳೆಗೆ ಗದ್ದೆಗೆ ಬಂದು ಬಳಿಕ ಉಬ್ಟಾರ್‌ ಪ್ರಿಯರ ಪಾಲಾಗುತ್ತವೆ. ಆದರೆ ಈ ಬಾರಿ ಕುಂಭದ್ರೋಣ ಮಳೆಯ ರಾದ್ಧಾಂತದಿಂದಾಗಿ ಉಬ್ಟಾರ್‌ ಮೀನುಗಾರಿಕೆಗೂ ತೊಂದರೆಯುಂಟಾಗಿದ್ದು, ಉಬ್ಟಾರ್‌ ಪ್ರಿಯರಲ್ಲಿ ನಿರಾಸೆ ಮೂಡಿಸಿದೆ.

ತುದೆ ಮೀನಿಗೆ ಹೆಚ್ಚಿದ ಬೇಡಿಕೆ
ಕರಾವಳಿಯ ಯಾವ ಮೀನು ಮಾರುಕಟ್ಟೆಗೆ ತೆರಳಿದರೂ ಈಗ ಸಿಹಿ (ತುದೆ) ನೀರಿನ ಮೀನುಗಳೇ ಹೆಚ್ಚಾಗಿ ಕಾಣ ಸಿಗುತ್ತಿವೆ. ಇಪೆì, ಕಾಣೆ, ಪಯ್ಯ, ಬಲ್ಚಟ್‌, ತೇಡೆ, ಏರಿ, ಕಿಜನ್‌, ಮೊಡೆಂಜಿ, ಮುಗುಡು ಸಹಿತ ವಿವಿಧ ಜಾತಿಯ ಮೀನುಗಳು ಬಹಳಷ್ಟು ಬೇಡಿಕೆಯ ಬೆಲೆಯೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಹೊಟೇಲ್‌ಗ‌ಳಲ್ಲಿ ಕೂಡಾ ತುದೆ ಮೀನುಗಳ ಖಾದ್ಯಗಳಿಗೆ ಕಡಲ ಮೀನುಗಳಿಂಗಿಂತಲೂ ಹೆಚ್ಚಿನ ಬೇಡಿಕೆಯಿದ್ದು ಬೆಲೆಯೂ ಹೆಚ್ಚಾಗಿದೆ.


ಹಿಂದೆಲ್ಲಾ ಗ್ರಾಮೀಣ ಪ್ರದೇಶಗಳ ಗದ್ದೆ, ತೊರೆ, ಹಳ್ಳಗಳಲ್ಲಿ ಸಿಗುತ್ತಿದ್ದ ಹೊಳೆಮೀನು ಈಗ ಪೇಟೆಯಲ್ಲೇ ಹೆಚ್ಚಾಗಿ ಕಾಣಸಿಗುತ್ತದೆ. ಹೊಳೆಯಲ್ಲಿ ಹಿಡಿದ ಮೀನುಗಳನ್ನು ಮೀನು ಮಾರಾಟ ಮಹಿಳೆಯರು ಮನೆ ಮನೆಗೆ ತಂದು ಮಾರಾಟ ಮಾಡುವ ವ್ಯವಸ್ಥೆಯೂ ಜಾರಿಯಲ್ಲಿದ್ದು, ಗ್ರಾಮೀಣ ಭಾಗದ ಹಿರಿ ತಲೆಮಾರಿನ ಜನರು ಇದೆಂತಹಾ ಕಾಲ ಬಂತಪ್ಪಾ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಾಗಿದೆ.

ಮಳೆಗಾಲ ಆರಂಭವಾಗಿ ಕೆರೆ, ತೊರೆ, ತೋಡುಗಳಲ್ಲಿ ನೀರು ಹ‌ರಿಯಲಾರಂಬಿಸಿದೆ ಎಂದು ಗೊತ್ತಾದ ಕೂಡಲೇ ಸಂಜೆ ಕತ್ತಲಾವರಿಸುವ ಹೊತ್ತಿನಲ್ಲಿ ಹಳ್ಳಿಯ ಕೆಲವು ಉತ್ಸಾಹಿ ಜನರು ಟಾರ್ಚ್‌ ಲೆ„ಟ್‌ (ಹಿಂದಿನ ಕಾಲದಲ್ಲಿ ಲಾಟೀನು, ದೊಂದಿ ಬೆಳಕು) ಹಿಡಿದುಕೊಂಡು ಕತ್ತಿಯೊಂದಿಗೆ ಹಾಜರಾಗಿ ಮೀನಿಗಾಗಿ ಬೇಟೆ ನಡೆಸುತ್ತಾರೆ. ಇದುವೇ ಕರಾವಳಿಯಲ್ಲಿ ಸಾಂಪ್ರಧಾಯಿಕವಾಗಿ ನಡೆಸಲಾಗುವ ಉಬ್ಬರ್‌ ಮೀನುಗಾರಿಕೆ.

Advertisement

ಏನಿದು ಉಬರ್‌ ಮೀನುಗಾರಿಕೆ
ಏಡಿಗಳು ಹತ್ತಾರು ಅಡಿಗಳಷ್ಟು ಬಿಲವನ್ನು ಕೊರೆದು ಅವುಗಳಲ್ಲಿ ಸುರಕ್ಷಿತವಾಗಿದ್ದರೆ, ಮೀನುಗಳು ಗಟ್ಟಿ ಕೆಸರಿನಲ್ಲಿ ಅವಿತು ಕುಳಿತಿರುತ್ತವೆ. ಮಳೆಗಾಲದ ಆರಂಭದ ಮೊದಲ ಮಳೆಗೆ ಮೈಕೊಡವಿಕೊಂಡು ಎಚ್ಚೆತ್ತುಕೊಳ್ಳುವ ಮೀನು ಏಡಿಗಳು ಹೊಸ ನೀರನ್ನು ಕಂಡ ಉತ್ಸಾಹದಲ್ಲಿ ಆಹಾರ ಮತ್ತು ಸಂತಾನಾಭಿವೃದ್ಧಿಗಾಗಿ ತಳದಿಂದ ಮೇಲೇರಿ ಹೊಸ ನೀರ ಹರಿವಿಗೆ ಮುಖವೊಡ್ಡಿ ಓಡೋಡಿ ಬರುತ್ತವೆ. ಮೊದಲ ಮಳೆಗೆ ಮೀನುಗಳು ಏರಿ ಬರುವುದೇ ಉಬರ್‌ ಅಂದರೆ ಉಕ್ಕೇರಿ ಬರುವುದು ಎಂದರ್ಥ.

ಉಬ್ಬರ್‌ ಮೀನುಗಾರಿಕೆಯ ಸಂದರ್ಭ ಮೀನು ಸಿಗುತ್ತದೋ, ಇಲ್ಲವೋ ಎನ್ನುವುದನ್ನು ಮೊದಲೇ ಹೇಳುವುದು ಅಸಾಧ್ಯ. ಆದರೆ ಇಳೆಯನ್ನು ತಂಪಾಗಿಸಿದ ಮೊದಲ ಮಳೆಗೆ ನೆನೆಯುತ್ತಾ ನೀರಿಗಿಳಿದು ಬೇಟೆಗೆ ತೊಡಗಿದರೆ ಭಾರೀ ಗಾತ್ರದ ಮೀನು ಏಡಿಗಳು ಸಿಗುವುದು ಖಚಿತ. ಜತೆಗೆ ಉಬರ್‌ ಮೀನಿಗಾಗಿ ಬಂದವರಿಗೆ ಮನರಂಜನೆ ದೊರಕುವುದೂ ಖಚಿತ.

ಉಬರ್‌ನಲ್ಲಿ  ಸಿಗಬಹುದಾದ ಮೀನುಗಳನ್ನು ಹುಡುಕುತ್ತಾ ಕೆಲವೊಮ್ಮೆ ಮೈಲು ದೂರ ನಡೆದು, ಮಳೆಯನ್ನೂ ಲೆಕ್ಕಿಸದೆ, ನೆರೆಯ ನೀರಿನಲ್ಲಿ ಸಾಗಿ ಬಂದಿರುವ ಗಾಜಿನ ಚೂರು ಮುಳ್ಳುಗಳಿಂದ ಚುಚ್ಚಿಸಿ ಕೊಂಡು ಜನ ತೆರಳುತ್ತಾರೆ. ತಮಗೆ ಸಿಗುವ ಮೀನನ್ನು ಮರುದಿನ ಮನೆಯವರೆಲ್ಲರೂ ಜೊತೆ ಸೇರಿ ಸವಿಯುವುದು ವಿಶಿಷ್ಠ  ರೀತಿಯ ಅನುಭವವೇ ಹೌದು.

ಎಗ್ಗಿಲ್ಲದೇ ನಡೆಯುತ್ತಿದೆ ಉಬರ್‌
ಉಬರ್‌ ಮೀನುಗಾರಿಕೆ ಉತ್ಸಾಹಿಗಳಿಗೆ ಆಹಾರದ ಜೊತೆಗೆ ಮನರಂಜನೆಯನ್ನು ನೀಡಿದರೆ ಕೆಲವೊಮ್ಮ ಸಿಹಿ ನೀರಿನಲ್ಲಿ ಮಾತ್ರ ಕಾಣ ಸಿಗುವ ಅಪರೂಪದ ಜಾತಿ ಮೀನುಗಳ ವಂಶವೇ ಅಳಿದು ಹೋಗುವ ಭೀತಿಯೂ ಇರುತ್ತದೆ. ಬೇಸಗೆಯ ಬಿಸಿಗೆ ತಳಸೇರುವ ಕೆರೆ ತೊರೆಗಳಲ್ಲಿ ಉಸಿರನ್ನು ಬಿಗಿ ಹಿಡಿದು ಬದುಕುವ ಮೀನುಗಳು ಮತ್ತೆ ಮೊಟ್ಟೆ ಇಟ್ಟು ತಮ್ಮ ಸಂತಾನವನ್ನು ಬೆಳೆಸಿಕೊಳ್ಳುವ ಮೊದಲೇ ಉಬರ್‌ಗೆ ಬಲಿಯಾಗುವುದರಿಂದ ಮುಂದೊಂದು ದಿನ ಮೀನುಗಳ ಸಂತಾನ ಅಳಿದು ಹೊಗುವುದಂತೂ ನಿಶ್ಚಿತ ಎಂಬಂತಿದೆ. ಹೊಲ – ಗದ್ದೆಗಳಲ್ಲಿ ಬೆಳೆಗಳಿಗೆ ಸಿಂಪಡಿಸಲಾಗುವ ವಿಷಕಾರಿ ಕೀಟನಾಶಕಗಳ ಪರಿಣಾಮದಿಂದಲೂ ವಿನಾಶದಂಚಿಗೆ ಸರಿಯುತ್ತಿರುವ ಬಹಳಷ್ಟು ಅಪರೂಪದ ಮತ್ಸ ಸಂಕುಲವನ್ನು ಉಬರ್‌ ಮೂಲಕವೂ ಮಾರಣಹೋಮ ಮಾಡಿ ವಿನಾಶದಂಚಿಗೆ ನೂಕುವ ಈ ಮನರಂಜನೆ ನಮಗೆ ಬೇಕೇ ಎನ್ನುವುದರ ಬಗ್ಗೆಯೂ ನಾವು ಸ್ವಲ್ಪ ಯೋಚಿಸಬೇಕಿದೆ.

ಯಾವೆಲ್ಲಾ ಮೀನು ಲಭ್ಯ
ಹೊಳೆ ಮೀನುಗಾರಿಕೆಯ ಸಂದರ್ಭ ಸಿಹಿ ನೀರಿನಲ್ಲಿ ಸಿಗುವ ಇಪೆì, ಕಾನೆ, ಪಯ್ಯ, ಅಬ್ರೋಣಿ, ಚೆನ್ನಡ್ಕ, ಕಿಜನ್‌, ಮಾಲಾಯಿ, ಮುಗುಡು, ಬಾಲೆ ಮೀನ್‌, ವಾಂಟೆ ತರು, ಕೀಂಬತ್ತೆ, ಮೊರಂಟೆ, ಕೊಡ್ಯಂತರು, ಮೊಡೆಂಜಿ, ತೀಕೊಡೆ, ಎರಿ, ಮರಿ ಮುಗುಡು, ಎಟ್ಟಿ, ದೆಂಜಿ, ಪುರಿಯೊಲ್‌ ಸೇರಿದಂತೆ ವಿವಿಧ ಜಾತಿಯ ಮೀನುಗಳು ಸಿ ಹೇರಳವಾಗಿ ದೊರಕುತ್ತಿವೆ.

– ರಾಕೇಶ್‌ ಕುಂಜೂರು

Advertisement

Udayavani is now on Telegram. Click here to join our channel and stay updated with the latest news.

Next