Advertisement

ವೈಕುಂಠ ಏಕಾದಶಿ ವಿಶೇಷ : ನಟ ಜಗ್ಗೇಶ್ ಗೆ ತಿಮ್ಮಪ್ಪನ ದರ್ಶನ ಮಾಡಿಸಿದ ರಾಯರು!

10:08 AM Jan 07, 2020 | Hari Prasad |

ಬೆಂಗಳೂರು: ಇಂದು ವೈಕುಂಠ ಏಕಾದಶಿ. ಹಿಂದೂ ಆಸ್ತಿಕರ ನಂಬಿಕೆಯ ಪ್ರಕಾರ ಇಂದು ಸ್ವರ್ಗದ ಬಾಗಿಲು ತೆರೆಯುವ ದಿನ. ಶ್ರೀನಿವಾಸನ ದರ್ಶನ ಇಂದು ಪುಣ್ಯಪ್ರದವೆಂಬ ನಂಬಿಕೆಯೂ ಇದೆ. ಇದಕ್ಕೆ ಪೂರಕವಾಗಿರುವ ಘಟನೆಯೊಂದು ಕನ್ನಡದ ಖ್ಯಾತ ನಟ ಜಗ್ಗೇಶ್ ಅವರ ಅನುಭವಕ್ಕೆ ಇಂದು ಬಂದಿದ್ದು, ತಮಗಾದ ಅನುಭವವನ್ನು ಜಗ್ಗೇಶ್ ಅವರು ತಮ್ಮ ಫೇಸ್ಬುಕ್ ಹಾಗೂ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Advertisement

ಜಗ್ಗೇಶ್ ಅವರ ಸಹೋದರ ನಟ ಕೋಮಲ್ ಅವರು ಕರೆಮಾಡಿ ವೈಕುಂಠ ಏಕಾದಶಿ ಪ್ರಯುಕ್ತ ತಿರುಪತಿಗೆ ಹೋಗಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಆದರೆ ಈ ಪುಣ್ಯದಿನದಂದು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಲಕ್ಷೋಪಲಕ್ಷ ಭಕ್ತರು ಆಗಮಿಸುವುದರಿಂದ ಕೊನೇ ಕ್ಷಣದಲ್ಲಿ ನಮಗೆ ಹೋಗಲು ಸಾಧ್ಯವೇ ಎಂದು ಪ್ರಶ್ನಿಸಿ ಫೋನ್ ಇಟ್ಟರಂತೆ ಜಗ್ಗೇಶ್.

ಬಳಿಕ ಅಲ್ಲೇ ಇದ್ದ ತಮ್ಮ ಆರಾಧ್ಯ ದೈವ ರಾಘವೇಂದ್ರ ಸ್ವಾಮಿಗಳ ಚಿತ್ರವನ್ನು ನೋಡಿ, ‘ತಿಮ್ಮಪ್ಪನ ದರ್ಶನದ ಅವಕಾಶವನ್ನು ಕೊಡಿಸಿ ರಾಯರೇ..’ ಎಂದು ಮನಸ್ಸಿನಲ್ಲೇ ಪ್ರಾರ್ಥಿಸಿದ್ದಾರೆ. ಇದಾಗಿ ಸ್ವಲ್ಪ ಹೊತ್ತಿನ ಬಳಿಕ ತಿರುಪತಿ ಮಂಡಳಿಯ ಸದಸ್ಯ ಅನಂತು ಅವರು ಜಗ್ಗೇಶ್ ಅವರಿಗೆ ಕರೆಮಾಡಿ ‘ವೈಕುಂಠ ಏಕಾದಶಿಯ ವಿಶೇಷ ದರ್ಶನದ ಎರಡು ಟಿಕೆಟ್ ಇದೆ..’ ಎಂದು ಹೇಳಿದ್ದಾರೆ!

ಆ ಕ್ಷಣದಲ್ಲಿ ಜಗ್ಗೇಶ್ ಅವರಿಗೆ ಗುರು ರಾಯರ ಅನುಗ್ರಹದ ದರ್ಶನವಾಗಿ ಭಕ್ತಿಭಾವದಿಂದ ಕಣ್ಣೀರು ಹರಿಯುತ್ತದೆ. ತಕ್ಷಣವೇ ತಮ್ಮನನ್ನು ಕೂಡಿಕೊಂಡು ತಿರುಪತಿಗೆ ಹೋಗಿ ಅಲ್ಲಿ ತಿಮ್ಮಪ್ಪನ ದರ್ಶನವನ್ನು ಪಡೆದುಕೊಂಡು ವೈಕುಂಠದ ಬಾಗಿಲನ್ನು ಸುತ್ತಿ ಧನ್ಯತಾ ಭಾವದಿಂದ ವಾಪಾಸಾಗಿದ್ದೇವೆ ಎಂದು ಜಗ್ಗೇಶ್ ಅವರು ಬರೆದುಕೊಂಡಿದ್ದಾರೆ.

Advertisement

‘ನಂಬಿ ಕೆಟ್ಟವರಿಲ್ಲವೋ ನಮ್ಮ ರಾಯರ..
ಅರ್ಪಣಾಭಾವದಿಂದ ರಾಯರ ನಂಬಿದರೆ ನಮ್ಮ ಬೆನ್ನ
ಹಿಂದೆ ನಮ್ಮ ಕಾಯುವ ಸಿಪಾಯಿಯಂತೆ ನಿಲ್ಲುವರು!
ರಾಯರ ಕೃಪಾದೃಷ್ಟಿಗಿಂತ ಬೇರೆ ಐಶ್ವರ್ಯ ಬೇಕೆ ಈ ಜಗದೊಳು ನನಗೆ!
ಇಂಥಾ ಮಹಾಮಹಿಮ ರಾಯರ ಸ್ಮರಿಣೆಗೆ ಪ್ರೇರಣೆಮಾಡಿ ಬೆಳಸಿದ ಅಮ್ಮನಿಗೆ ಶರಣು ಶರಣಾರ್ಥಿ…
ನಲ್ಮೆಯ ಬಂಧುಗಳಿಗೆ ವೈಕುಂಠ ಏಕಾದಶಿ ಶುಭಕಾಮನೆಗಳು..ಶುಭಮಸ್ತು…
ಶುಭಸಂಜೆ ….’
ಎಂದು ಧನ್ಯತಾಭಾವದಿಂದ ಬರೆದುಕೊಂಡಿದ್ದಾರೆ ನವರಸನಾಯಕ ಜಗ್ಗೇಶ್ ಅವರು.

Advertisement

Udayavani is now on Telegram. Click here to join our channel and stay updated with the latest news.

Next