Advertisement

ಎಡಪಂಥೀಯ ವಿಚಾರಧಾರೆ ಬಗ್ಗೆ…

06:03 PM Apr 13, 2020 | Karthik A |

ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಗಳಲ್ಲಿ ಉಭಯ ಕಮ್ಯುನಿಸ್ಟ್‌ ಪಕ್ಷಗಳು (ಸಿಪಿಐ-ಕಮ್ಯುನಿಸ್ಟ್‌; ಸಿಪಿಐಎಂ- ಮಾರ್ಕ್ಸಿಸ್ಟ್‌) ತಮ್ಮದೇ ಆದ ಪ್ರಭಾವವನ್ನು ಹೊಂದಿವೆ. ಕಮ್ಯುನಿಸ್ಟ್‌ ಪಕ್ಷವು 1964ರಲ್ಲಿ ವಿಭಜನೆಯಾದ ಬಳಿಕ ಕೂಡ ಈ ಎರಡು ಎಡಪಕ್ಷಗಳು ಚುನಾವಣಾ ರಂಗದಲ್ಲಿ ಸಕ್ರಿಯವಾಗಿವೆ. ಏಕೀಕರಣ ಪೂರ್ವದ ಕಾಸರಗೋಡು ಜಿಲ್ಲೆ ಕೂಡ ಈ ಚಟುವಟಿಕೆಗಳಲ್ಲಿ ಸಕ್ರಿಯವಾಗಿತ್ತು.

Advertisement

ಇಲ್ಲಿ ಕಮ್ಯುನಿಸ್ಟ್‌ ಪಕ್ಷ ಬೆಳೆಯುವಲ್ಲಿ ಎ. ಕೃಷ್ಣ ಶೆಟ್ಟಿ ಅವರ ಕೊಡುಗೆ ಅಪಾರ. 1962ರಲ್ಲಿ ಆಗಿನ ಮೈಸೂರು ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಉಳ್ಳಾಲ ಕ್ಷೇತ್ರದಿಂದ ಕಮ್ಯುನಿಸ್ಟ್‌ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎ. ಕೃಷ್ಣ ಶೆಟ್ಟಿ ಅವರು ಜಯಿಸಿದ್ದರು. ಪಕ್ಷಕ್ಕೆ ಜಿಲ್ಲೆಯ ಚರಿತ್ರೆಯಲ್ಲಿ ಇದು ವಿಶಿಷ್ಟ ಸಾಧನೆ. ಮುಂದೆ, 1983ರಲ್ಲಿ ನಡೆದ ಚುನಾವಣೆಯಲ್ಲಿ ಸಿಪಿಐಎಂನ ಪಿ. ರಾಮಚಂದ್ರ ರಾವ್‌ ಅವರು ಜಯಿಸಿದರು. ಕ್ರಾಂತಿರಂಗದ ಬೆಂಬಲ ಅವರಿಗಿತ್ತು. ಇತರ ಸ್ಥಳೀಯಾಡಳಿತ ಚುನಾವಣೆಗಳಲ್ಲಿ ಕೆಲವು ಸ್ಥಾನಗಳನ್ನು ಎಡಪಕ್ಷಗಳು ಜಯಿಸುತ್ತಲೇ ಬಂದಿವೆ. ಕುಂದಾಪುರ, ಬಂಟ್ವಾಳ, ಉಳ್ಳಾಲ ಮುಂತಾದ ಪ್ರದೇಶಗಳಲ್ಲಿ ಪ್ರಾಬಲ್ಯ ತೋರಿಸಿವೆ.

ಬಿ.ವಿ. ಕಕ್ಕಿಲ್ಲಾಯ
ಕಮ್ಯುನಿಸ್ಟ್‌ ತತ್ವ ಸಿದ್ಧಾಂತಗಳಿಗೆ ತಮ್ಮ ಬದುಕನ್ನೇ ಅರ್ಪಿಸಿಕೊಂಡವರು ಬಿ. ವಿ. ಕಕ್ಕಿಲ್ಲಾಯ ಅವರು. ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದ ಅವರು 1952ರಲ್ಲಿ ಆಗಿನ ಮದ್ರಾಸ್‌ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. 1972ರಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಿಂದ ಕಮ್ಯುನಿಸ್ಟ್‌ ಪಕ್ಷದಿಂದ ಗೆದ್ದರು. 1978ರಲ್ಲಿ ವಿಟ್ಲ ವಿಧಾನಸಭಾ ಕ್ಷೇತ್ರದಿಂದ ಜಯಿಸಿದರು. ಶಾಸಕರಾಗಿ ಅವರು ಸಲ್ಲಿಸಿದ ಸೇವೆ, ವಿಶೇಷವಾಗಿ ಕಾರ್ಮಿಕರು- ಕೃಷಿಕರ ಶ್ರೇಯೋಭಿವೃದ್ಧಿಗೆ ಅವರ ಯಶಸ್ವೀ ಹೋರಾಟ ಇಂದಿಗೂ ಸ್ಮರಣೀಯವಾಗಿದೆ. ಅನೇಕ ಕೃತಿಗಳನ್ನು ಅವರು ರಚಿಸಿದರು (1919-2012).

ನೆನಪಿನಂಗಳದಿಂದ


ಮಾರ್ಕ್ಸಿಸ್ಟ್‌ ತತ್ರ್ಯ ಸಿದ್ಧಾಂತಗಳಿಗೆ ಸಂಪೂರ್ಣ ಬದ್ಧರಾಗಿ, ಇಂದಿಗೂ ಈ ಪಥದಲ್ಲಿ ಸಾಗುತ್ತಿರುವವರು ಮಂಗಳೂರಿನ ಕೆ.ಆರ್‌. ಶ್ರೀಯಾನ್‌ ಅವರು. ಮಾರ್ಕ್ಸಿಸ್ಟ್‌ ಪಕ್ಷದ ಪರವಾಗಿ ವಿಧಾನಸಭೆ – ಲೋಕಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ. ಪಕ್ಷದ ವಿವಿಧ ಸಂಘಟನಾ ಹೊಣೆಗಳನ್ನು ನಿರ್ವಹಿಸುತ್ತಾ ಬಂದಿದ್ದಾರೆ. ಶ್ರೀಯಾನ್‌ ಅವರ ‘ನನ್ನ ಜೀವನದ ಕಥನದ ನೆನಪಿನಂಗಳದಿಂದ’ ಎಂಬ ಆತ್ಮಕಥನ ಕೃತಿ ಕಳೆದ ವರ್ಷ ಬಿಡುಗಡೆಯಾಯಿತು. ಕರ್ನಾಟಕದಲ್ಲಿ; ಕರಾವಳಿ ಜಿಲ್ಲೆಗಳಲ್ಲಿ ಎಡಪಂಥೀಯ ವಿಚಾರಧಾರೆ ವಿಶೇಷವಾಗಿ ಮಾರ್ಕ್ಸಿಸ್ಟ್‌ ಸಿದ್ಧಾಂತಗಳ ಮೂಲ ಸಂಘಟನೆಯ ಸಮಗ್ರ ವಿವರಗಳು ಈ ಕೃತಿಯಲ್ಲಿವೆ. ಅವರಿಗೆ ಈಗ 83ರ ಹರೆಯ. ಸುಮಾರು ಆರೂವರೆ ದಶಕಗಳ ಘಟನೆಗಳನ್ನು ಅವರು ದಾಖಲಿಸಿದ್ದಾರೆ.

ಅಂದ ಹಾಗೆ…
ಶ್ರೀಯಾನ್‌ ಅವರ ನೆನಪಿನಂಗಳದಿಂದ:
1975ರಲ್ಲಿ ಇಂದಿರಾ ಗಾಂಧಿ ಅವರ ಕೇಂದ್ರ ಸರಕಾರವು ಜನಪರ ಹೋರಾಟವನ್ನು ಹತ್ತಿಕ್ಕಲು ತುರ್ತು ಪರಿಸ್ಥಿತಿಯನ್ನು ಹೇರಿತು. ಸರ್ವಾಧಿಕಾರಿ ಧೋರಣೆ ಅನುಸರಿಸಿತು. ಪತ್ರಿಕೆಗಳ ಬಾಯಿ ಮುಚ್ಚಿಸಲು ಸೆನ್ಸಾರ್‌ ಶಿಪ್‌ ಜಾರಿಗೊಳಿಸಿತು. ನಾನಾಗ ಪಕ್ಷದ ಐಕ್ಯರಂಗ – ವಾರ ಪತ್ರಿಕೆಯ ಹೊಣೆ ಹೊಂದಿದ್ದೆ. ಪತ್ರಿಕೆಗಳು ಪ್ರಿಂಟ್‌ ಆಗುವ ಮೊದಲು ವರದಿ- ಲೇಖನಗಳನ್ನು ಜಿಲ್ಲಾ ಮ್ಯಾಜಿಸ್ಟ್ರೇಟರಿಗೆ ತೋರಿಸಿ; ಅವರ ತಿದ್ದುಪಡಿಯಂತೆ ಪ್ರಕಟಿಸಬೇಕಾಗಿತ್ತು: ಅದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆಸಿದ ದೊಡ್ಡ ದಾಳಿಯಾಗಿತ್ತು.

Advertisement

— ಮನೋಹರ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next