ವಿಧಾನಸಭೆ: ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಮಾತನಾಡಲು ಆಡಳಿತ ಪಕ್ಷ ತನ್ನ ಸದಸ್ಯರ ಪಟ್ಟಿ ಒದಗಿಸದ ಕಾರಣ ಸ್ಪೀಕರ್ ರಮೇಶ್ ಕುಮಾರ್ ಸಂಜೆ 3.50ಕ್ಕೆ ಮಂಗಳವಾರದ ಕಲಾಪವನ್ನು ಮುಕ್ತಾಯಗೊಳಿಸಲು ಮುಂದಾದ ಪ್ರಸಂಗ ನಡೆಯಿತು. ನಿಯಮದಂತೆ ಜಂಟಿ ಅಧಿವೇಶನದಲ್ಲಿ ಮಾಡಿದ ಭಾಷಣಕ್ಕಾಗಿ ರಾಜ್ಯಪಾಲರಿಗೆ ವಂದನೆ ಸಲ್ಲಿಸುವ ನಿರ್ಣಯ ಮಂಡಿಸಲು ಆಡಳಿತ ಪಕ್ಷದ ಸದಸ್ಯರು ಸೂಚಿಸಿ ಅನುಮೋದಿಸಿದ ಬಳಿಕ ಪ್ರತಿಪಕ್ಷ ನಾಯಕರು ವಂದನಾ ನಿರ್ಣಯದ ಮೇಲೆ ಮಾತನಾಡುತ್ತಾರೆ. ಬಳಿಕ ಆಡಳಿತ ಪಕ್ಷದ ಕಡೆಯಿಂದ ಒಬ್ಬರು, ಪ್ರತಿಪಕ್ಷ ಕಡೆಯಿಂದ ಒಬ್ಬರು ಹೀಗೆ ಸರತಿಯಲ್ಲಿ ಸದಸ್ಯರು ಮಾತನಾಡಬೇಕು. ಆದರೆ, ಆಡಳಿತ ಪಕ್ಷದ ಕಡೆಯಿಂದ ನಿರ್ಣಯದ ಮೇಲೆ ಯಾರೆಲ್ಲ ಮಾತನಾಡುತ್ತಾರೆಂಬ ಬಗ್ಗೆ ಸರ್ಕಾರದ ಕಡೆಯಿಂದ ಸದಸ್ಯರ ಪಟ್ಟಿಯನ್ನು ಸ್ಪೀಕರ್ಗೆ ನೀಡಿರಲಿಲ್ಲ. ಹೀಗಾಗಿ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ತಮ್ಮ ಮಾತು ಮುಗಿಸುತ್ತಿದ್ದಂತೆ ಸ್ಪೀಕರ್ ಅವರು ಆಡಳಿತ ಪಕ್ಷದ ಕಡೆಯಿಂದ ಹೆಸರು ಬಂದಿಲ್ಲ. ಹೀಗಾಗಿ ಕಲಾಪವನ್ನು ನಾಳೆ ಮುಂದುವರಿಸೋಣ ಎಂದು ಹೇಳಿದರು. ಬಿಜೆಪಿ ಸದಸ್ಯರ ಪಟ್ಟಿ ಕೊಟ್ಟಿರುವುದರಿಂದ ನಮಗೆ ಮಾತನಾಡಲು ಅವಕಾಶ ಕೊಡಿ ಎಂದು ಶೆಟ್ಟರ್
ಕೋರಿದರು. ಅಷ್ಟರಲ್ಲಿ ಎದ್ದುನಿಂತ ಡಾ.ಜಿ.ಪರಮೇಶ್ವರ್, ಪ್ರತಿಪಕ್ಷದವರಿಗೆ ಮಾತನಾಡಲು ಅವಕಾಶ ನೀಡಿ ಎಂದು ಸ್ಪೀಕರ್ ಅವರನ್ನು ಕೋರಿದಾಗ ಮಾತನಾಡಲು ಅವಕಾಶ ಮಾಡಿಕೊಟ್ಟರು.