Advertisement

Relationship: ರೀ… ನನ್ನನ್ನು ಕ್ಷಮಿಸಿ…:

12:18 PM Sep 24, 2023 | Team Udayavani |

ಮೊಬೈಲ್‌ ರಿಂಗಾಗುತ್ತಿದ್ದಂತೆ ದೀಪಕ್‌ಗೆ ಬೆಳಿಗ್ಗೆ ಹೊರಡುವಾಗ ದೀಪಾ ಹೇಳಿದ್ದು ನೆನಪಾಯ್ತು. “ರೀ… ಯಾಕೋ ವಿಪರೀತ ಸುಸ್ತು. ಕೆಲಸ ಮಾಡೋಕೆ ಆಗ್ತಾ ಇಲ್ಲ, ಡಾಕ್ಟರ್‌ ಹತ್ತಿರ ಹೋಗಿಬರೋಣ ರೀ’ ಅಂದಿದ್ಲು. ಆಗ “ಆಫೀಸ್‌ ಕೆಲಸದಲ್ಲಿ ಮರೆತರೆ ಒಂದು ಕಾಲ್‌ ಮಾಡು, ತಕ್ಷಣ ಬರುತ್ತೇನೆ’ ಅಂದಿದ್ದ. ಅವಳದ್ದೇ ಕಾಲ…. ರಿಸೀವ್‌ ಮಾಡಿ- “ಬರ್ತಿದೀನಿ, ರೆಡಿಯಾಗಿರು…’ ಅಂದು ಹೊರಟ. ದಾರಿಯಲ್ಲಿ ಅವಳದೇ ಯೋಚನೆ. ಮದುವೆಯಾಗಿ 15 ವರ್ಷ ಕಳೆದಿದ್ರೂ ಒಂದು ದಿನ ಜ್ವರ ಅಂತ ಮಲಗಿದವಳಲ್ಲ. ಆದ್ರೆ ಈಗ ಒಂದು ವಾರದಿಂದ ತೀರಾ ಬಳಲಿದವಳಂತೆ ಕಾಣ್ತಾ ಇದ್ವು. ಅವನಿಗಂತೂ ಆಫೀಸ್‌ ಕೆಲಸದ ಒತ್ತಡದಲ್ಲಿ, ಮನೆ, ಹೆಂಡ್ತಿ ಅಂತ ಗಮನ ಕೊಡೋಕೆ ಆಗ್ತಿರಲಿಲ್ಲ. ಪಾಪ! ಒಂದು ದಿನವೂ ಆ ವಿಚಾರವಾಗಿ ಬೇಸರ ಪಟ್ಟುಕೊಂಡವಳಲ್ಲ. ಅವಳ ದೌರ್ಭಾಗ್ಯವೋ ಏನೋ, ದೇವರು ಅವಳ ಒಡಲಿಗೆ ಒಂದು ಕುಡಿಯನ್ನೂ ಹಾಕಿರಲಿಲ್ಲ. ಆದ್ರೂ ಬೇಸರಿಸದ ಅವಳು- “ರೀ.. ನೀವು ನನಗೆ ಮಗು, ನಾನು ನಿಮಗೆ ಮಗು’ ಅಂತ ನಗುತ್ತಾ ಸಮಾಧಾನ ಮಾಡಿದ್ದಳು.

Advertisement

ವಾರದ ನಂತರವೂ ದೀಪಾಳ ಆರೋಗ್ಯದಲ್ಲಿ ಸುಧಾರಣೆ ಕಾಣದಿದ್ದಾಗ, ಪರಿಚಯದ ಗೈನೋಕಾಲಜಿಸ್ಟ್‌ ಡಾ. ಸುಮತಿ ಹತ್ತಿರ ಹೋದರು. ರಾತ್ರಿ 8ರ ವೇಳೆಗೆ ಡಾಕ್ಟರ್‌ ಸಿಕ್ಕರು. ಇವರನ್ನು ಕಂಡದ್ದೇ- “ಅರೇ.. ದೀಪಾ, ದೀಪಕ್‌ ನೀವಿಲ್ಲಿ? ಒಂದು ಫೋನ್‌ ಮಾಡೋದಲ್ವಾ? ಎಷ್ಟೊತ್ತಿಗೆ ಬಂದ್ರಿ? ಅny ಟrಟಚಿlಛಿಞ?’ ಎಂದು ಕೇಳಿದಾಗ, “ಮೇಡಂ, ಮತ್ತೇನಿಲ್ಲ… ಈಗ ಸ್ವಲ್ಪ ದಿನಗಳಿಂದ

ವಿಪರೀತ ಸುಸ್ತು. ಯಾವುದರಲ್ಲೂ ಆಸಕ್ತಿ ಇಲ್ಲ. ನಿದ್ರೆನೂ ಸರಿಯಾಗಿ ಬರ್ತಾ ಇಲ್ಲ’ ಅಂದಳು ದೀಪಾ. “ನೋಡ್ತಿನಿ ಒಳಗೆ ಹೋಗಿ’ ಅಂದರು.

ಕೂಲಂಕುಷವಾಗಿ ಪರೀಕ್ಷಿಸಿ ಹೊರಗಡೆಯಿಂದ ಯಾವುದೇ ಗಂಭೀರ ಸಮಸ್ಯೆ ಕಾಣಾ¤ ಇಲ್ಲ. ಯಾವುದಕ್ಕೂ ಒಂದ್ಸಲ ಬ್ಲಿಡ್‌ ಟೆಸ್ಟ್‌ ಮಾಡಿಸಿ. ರಿಪೋರ್ಟ್‌ ನೋಡಿ ಮೆಡಿಸಿನ್‌ ಬರೀತೀನಿ ಅಂತ ಹೇಳಿ ಕಳಿಸಿದರು. ಅವರಿಬ್ಬರೂ ಬ್ಲಿಡ್‌ ಟೆಸ್ಟ್‌ಗೆ ಕೊಟ್ಟು ಮನೆಗೆ ವಾಪಸಾದರು.

ಮಾರನೇ ದಿನ- “ದೀಪಾ, ಬರುವಾಗ ರಿಪೋರ್ಟ್‌ ತರ್ತೀನಿ’ ಅಂತ ದೀಪಕ್‌ ಹೇಳಿದಾಗ, “ಬೇಡ ರೀ… ಹೇಗೂ ಮಾರ್ಕೆಟ್‌ಗೆ ಹೋಗಬೇಕು. ನಾನೇ ಹೋಗಿ ತರ್ತಿನಿ’ ಅಂದಳು. ಸಂಜೆ ಆಫೀಸಿನಿಂದ ಬಂದವನು, ದೀಪಾಳಲ್ಲಿ ಲವಲವಿಕೆ ಇಲ್ಲದಿರುವುದನ್ನು ಗಮನಿಸಿ- “ಯಾಕೆ ಸಪ್ಪಗಿದಿಯಾ? ಬ್ಲಿಡ್‌ ರಿಪೋರ್ಟ್‌ ಬಂತಾ? ಡಾಕ್ಟರ್‌ ಏನಂದ್ರು?’ ಅಂತ ಕೇಳಿದ. “ಹೂಂ ಬಂದಿದೆ ರೀ… ಏನೂ ಪ್ರಾಬ್ಲಿಮ್‌ ಇಲ್ಲ. ಸ್ವಲ್ಪ ಬ್ಲಿಡ್‌ ಕಡಿಮೆ ಆಗಿದೆ. ಅದಕ್ಕೆ ಮಾತ್ರೆ ಕೊಟ್ಟಿದಾರೆ’ ಅಂದು ಕೆಲಸದಲ್ಲಿ ಮಗ್ನಳಾದಳು.

Advertisement

******** 

ದಿನದಿಂದ ದಿನಕ್ಕೆ ದೇಹದಲ್ಲಿ ಸೋಲ್ತಾ ಇದ್ದ ದೀಪಾಳನ್ನು ನೋಡಿ ದೀಪಕ್‌ಗೆ ತುಂಬಾ ಯೋಚನೆಯಾಗ್ತಿತ್ತು. ಕೇಳಿದ್ರೆ, “ನಗುನಗುತ್ತಾ ಏನ್ರೀ ಹೀಗಂತೀರಾ? ಸ್ವಲ್ಪ ಯೋಗ, ವ್ಯಾಯಾಮ ಎಲ್ಲಾ ಮಾಡ್ತಿದೀನಿ. ಆರೋಗ್ಯ ಚೆನ್ನಾಗಿ ಇಟ್ಕೋಬೇಕಲ್ವಾ’ ಅಂತ ಕಣ್ಣು ಮಿಟುಕಿಸಿ ಬಿಡ್ತಿದ್ದು. ಹೀಗಿದ್ದಾಗಲೇ ದೀಪಕ್‌ಗೆ ಆಫೀಸ್‌ ಟೂರ್‌ ಅಂತ 15 ದಿನ ಪೂನಾಕ್ಕೆ ಹೋಗುವ ಪ್ರಸಂಗ ಬಂತು. ಅವನು ಹೊರಡುವಾಗ ಏಕೋ ಅವಳ ಕಣ್ಣಲ್ಲಿ ನೀರು. ಅದನ್ನು ನೋಡಿ ದೀಪಕ್‌ಗೆ ಗಾಬರಿ ಆಯ್ತು. “ಯಾಕೆ ದೀಪಾ, ನನಗೆ ಹೋಗೋಕೆ ಮನಸ್ಸು ಬರ್ತಾ ಇಲ್ಲ. ನೀನು ಮೊದಲಿನಂತಿಲ್ಲ’ ಅಂದ. “ಅಯ್ಯೋ, ಏನೂ ಇಲ್ಲಾರಿ, ಆರಾಮಾಗಿ ಹೋಗಿಬನ್ನಿ. ಮೊದಲೆಲ್ಲ ನಾಲ್ಕು ದಿನದ ಮಟ್ಟಿಗೆ ಆಫೀಸ್‌ ಟೂರ್‌ ಹೋಗ್ತಿದ್ರಿ. ಈ ಸಲ 15 ದಿನ ಹೋಗ್ತಿದೀರಲ್ಲ. ಅದಕ್ಕೆ ಸ್ವಲ್ಪ ಬೇಸರ’ ಅಂದಾಗ “ಬೇಗ ಬರ್ತಿನಿ, ಹೆದರಬೇಡ’ ಅಂದು, ಹೂ ಮುತ್ತಿಟ್ಟು ಮನೆಯಿಂದ ಹೊರಟ.

ಪೂನಾದಲ್ಲಿದ್ದಾಗ ಇದ್ದಕ್ಕಿದ್ದಂತೆ ಡಾ. ಸುಮತಿಯವರ ಫೋನ್‌. “ಸರ್‌, ಅರ್ಜಂಟಾಗಿ ವಾಪಸ್‌ ಬನ್ನಿ. ದೀಪಾಳ ಕಂಡಿಷನ್‌ ಸೀರಿಯಸ್‌ ಆಗಿದೆ. ಬಂದ ಮೇಲೆ ವಿವರವಾಗಿ ಹೇಳ್ತೀನಿ’ ಅಂತ ಫೋನ್‌ ಕಟ್‌ ಮಾಡಿದಾಗ, ಆಫೀಸ್‌ ಕೆಲಸ ಹಾಗೇ ಬಿಟ್ಟು ಅದು ಹೇಗೆ ಬಂದು ಊರಿಗೆ ತಲುಪಿದನೋ ಗೊತ್ತಿಲ್ಲ. ಸೀದಾ ಡಾ. ಸುಮತಿ ನರ್ಸಿಂಗ್‌ ಹೋಮ್‌ಗೆ ಹೋಗಿ,  “ಮೇಡಮ್‌ ಏನಾಯ್ತು? ನನ್ನ ದೀಪಾ ಎಲ್ಲಿ? ಎಂದು ಒಂದೇ ಉಸುರಿನಲ್ಲಿ ಕೇಳಿದಾಗ, ಕುಳಿತುಕೊಳ್ಳಿ. ನೀವು ಸ್ವಲ್ಪ ಸಮಾಧಾನ ತಂದ್ಕೋಬೇಕು. ಅವಳು ಐಸಿಯುನಲ್ಲಿದ್ದಾಳೆ. ಅವಳು ನಿಮಗೆ ಬರೆದ ಲೆಟರ್‌ ಓದಿ, ಆಮೇಲೆ ಅವಳನ್ನು ನೋಡಿ’ ಅಂತ ಒಂದು ಲೆಟರ್‌ ಕೊಟ್ಟರು.

ನಡುಗುವ ಕೈಗಳಿಂದ ಲೆಟರ್‌ ಬಿಡಿಸಿ ಓದತೊಡಗಿದ ದೀಪಕ್‌. “ನನ್ನ ಪ್ರೀತಿಯ ದೀಪಕ್‌. ನನ್ನನ್ನು ಕ್ಷಮಿಸಿ. ನಾನು ಬೇಕಂತಲೇ ನಿಮಗೆ ಬ್ಲಿಡ್‌ ರಿಪೋರ್ಟ್‌ ತೋರಿಸಿರಲಿಲ್ಲ. ಮೆಸೇಜ್‌ ಕೂಡಾ ನನ್ನ ಮೊಬೈಲಿಗೆ ಬರೋ ಹಾಗೆ ಕೊಟ್ಟಿದ್ದೆ. ನನ್ನ ಬ್ಲಿಡ್‌ ಸ್ಯಾಂಪಲ್‌ನಲ್ಲಿ ಏನೋ ಡೌಟ್‌ ಇದೆ ಅಂತ ಹೆಚ್ಚಿನ ಪರೀಕ್ಷೆಗೆ ಮುಂಬೈಗೆ ಕಳಿಸಿದ್ದರು. ಅಲ್ಲಿನ ರಿಪೋರ್ಟ್‌ ಪ್ರಕಾರ ನನಗೆ ಬ್ಲಿಡ್‌ ಕ್ಯಾನ್ಸರ್‌ ಕೊನೆಯ ಹಂತ ತಲುಪಿತ್ತು. ಅಕಸ್ಮಾತ್‌ ನಿಮಗೆ ಗೊತ್ತಾಗಿದ್ದರೆ, ನನಗೆ ಟ್ರೀಟ್‌ಮೆಂಟ್‌ ಕೊಡಿಸಲು ನೀರಿನಂತೆ ದುಡ್ಡು ಖರ್ಚು ಮಾಡ್ತಿದ್ರಿ. ಆಫೀಸ್‌ ಟೆನ್ಷನ್‌ ಜೊತೆಗೆ ನನ್ನದೂ ಚಿಂತೆ, ನೋವು ನಿಮ್ಮನ್ನು ಕಾಡುತ್ತಿತ್ತು. ಆದ್ರೆ  ನಾನು ಬದುಕುವ ಸಾಧ್ಯತೆ ಇರಲಿಲ್ಲ. ಬದುಕಿರುವಷ್ಟೂ ದಿನವೂ ನಿಮ್ಮೊಂದಿಗೆ ಇರೋಣ ಅಂತ, ಈ ವಿಷಯ ಹೇಳದೇ ಮುಚ್ಚಿಟ್ಟೆ. ನೋವು ಕಡಿಮೆಯಾಗಲು ಆಗಾಗ ಇಂಜೆಕ್ಷನ್‌ ತಗೊಂಡು ಬರ್ತಿದ್ದೆ. ಡಾಕ್ಟರ್‌ ಬಳಿಯೂ ಬೇಡಿಕೊಂಡಿದ್ದೆ, ಈ ವಿಚಾರ ನಿಮ್ಮ ಬಳಿ ಹೇಳಬೇಡಿ ಅಂತ. ಸಾವಂತೂ ಖಚಿತವಾಗಿತ್ತು. ಹೇಳಿದ್ರೆ ಹಾಸ್ಪಿಟಲ್‌ನಲ್ಲಿ ಗ್ಲೂಕೋಸ್‌, ಬ್ಲಿಡ್‌ ಬಾಟಲ್ ಪೈಪ್‌ಗ್ಳಿಂದ ಅಲಂಕರಿಸಿ ಇಡ್ತಿದ್ರು. ಮೈತುಂಬಾ ಚುಚ್ಚಿಡ್ತಾ ಇದ್ರು. ಈಗ ಖುಷಿಯಿಂದ ಹೋಗ್ತಾ ಇದೀನ್ರಿ. ಒಂದೇ ಒಂದು ನೋವಂದ್ರೆ, ನಿಮ್ಮನ್ನು ಒಬ್ಬಂಟಿಯಾಗಿ ಬಿಟ್ಟು ಹೋಗ್ತಾ ಇದೀನಿ ಅನ್ನೋದು. ಮುಂದಿನ ಜನ್ಮ ಅಂತಿದ್ರೆ ಮತ್ತೆ ನಿಮ್ಮವಳಾಗ್ತಿನಿ..ನಿಮ್ಮ…. ಪ್ರೀತಿಯ…..ದೀಪಾ..’ ‌

ಸೀದಾ ಐಸಿಯು ಒಳಗೆ ಓಡಿದ ದೀಪಕ್‌ಗೆ ಮೈಯೆಲ್ಲಾ ಒದ್ದೆಯಾಗಿತ್ತು. ಆಕ್ಸಿಜನ್‌ ಅಳವಡಿಸಿ ಇಟ್ಟಿದ್ದ ದೀಪಾಳ ಉಸಿರು ಕ್ಷಣಕ್ಷಣಕ್ಕೂ ಕ್ಷೀಣವಾಗ್ತಾ ಇತ್ತು. ಅವಳ ಸ್ಥಿತಿ ನೋಡಿ ದೀಪಕ್‌ ಜೋರಾಗಿ ಕಿರುಚಿಬಿಟ್ಟ. ಒಮ್ಮೆ ದೊಡ್ಡದಾಗಿ ಕಣ್ಣು ತೆರೆದ ದೀಪಾ “ರೀ…’ ಅಂದಿದ್ಧಷ್ಟೇ.. ಪ್ರಾಣಪಕ್ಷಿ ಹಾರಿಹೋಯ್ತು. ಅವಳ ಕಾಲಬುಡದಲ್ಲಿ ಕುಸಿದು ಕುಳಿತ ದೀಪಕ್‌ನನ್ನು ಡಾ. ಸುಮತಿ ಹೋಗಿ ಎಬ್ಬಿಸಿದಾಗ ಅವನ ದೇಹ ವಾಲಿ ಕೆಳಗೆ ಬಿತ್ತು.

-ಶುಭಾ ನಾಗರಾಜ್‌

Advertisement

Udayavani is now on Telegram. Click here to join our channel and stay updated with the latest news.

Next