Advertisement

ತಾಳಮದ್ದಳೆ ಸ್ಪರ್ಧೆಯಲ್ಲಿ ಮಿಂಚಿದ ಹಿರಿ-ಕಿರಿ ತಂಡಗಳು

12:45 AM Dec 27, 2019 | mahesh |

ರಾಜ್ಯ ಮಟ್ಟದ ತೆಂಕು-ಬಡಗು ಹವ್ಯಾಸಿ ಕಲಾವಿದರ ತಾಳಮದ್ದಳೆ ಸ್ಪರ್ಧೆಯು ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆಯಲ್ಲಿ ಇತ್ತೀಚೆಗೆ ಜರುಗಿತು. ಇದರಲ್ಲಿ ಹಿರಿಯರ ವಿಭಾಗದಲ್ಲಿ ಸರಯೂ ಯಕ್ಷ ಬಳಗ ಕೋಡಿಕಲ… ಪ್ರಥಮ ತಂಡ ಪ್ರಶಸ್ತಿ, ಮಕ್ಕಳ ಮೇಳವು ತೃತೀಯ ಪ್ರಶಸ್ತಿಯನ್ನು ಗಳಿಸಿವೆ.

Advertisement

ತೆಂಕು-ಬಡಗು ತಿಟ್ಟುಗಳ ತಂಡಗಳು ಹಿರಿ-ಕಿರಿ ವಿಭಾಗದಲ್ಲಿ ಭಾಗವಹಿಸಿ ಸ್ಪರ್ಧೆಯನ್ನು ತುರಿಯಾವಸ್ಥೆಗೆ ತಂದು ನಿಲ್ಲಿಸಿದವು. ತೀವ್ರ ಪೈಪೋಟಿಯನ್ನು ನೀಡಿದ ತಂಡಗಳು ಪ್ರಶಸ್ತಿಗೆ ಭಾಜನವಾದುವು. ಕೊನೆಗೂ ಪ್ರಶಸ್ತಿಗಳು ಉಭಯ ಪ್ರಾಕಾರಗಳಿಗೂ ಸಮಾನವಾಗಿ ಹಂಚಿಹೋದುವು. ಸ್ಪರ್ಧಾ ವಿಜೇತರನ್ನು ಪ್ರಮಾಣಪತ್ರ, ಸ್ಮರಣಿಕೆ ಹಾಗೂ ಪ್ರಶಸ್ತಿ ನಿಧಿಯೊಂದಿಗೆ ಸನ್ಮಾನಿಸಲಾಯಿತು.

ಸರಯೂ ಬಳಗ ಆಯ್ದು ಕೊಂಡದ್ದು “ಶ್ರೀ ದೇವಿ ಕದಂಬ ಕೌಶಿಕೆ’ಯ ಭಾಗವನ್ನು.ಶ್ರೀದೇವಿ ಕದಂಬ ವನವಾಸಿನಿಯಾಗಿ ನೆಲೆಯಾಗುವಲ್ಲಿಂದ ಕಥೆ ಆರಂಭಗೊಂಡಿತು. ವರ್ಕಾಡಿ ರವಿ ಅಲೆವೂರಾಯರು ಮಹಾಮಾಯೆಯಾಗಿ ಶ್ರೀ ದೇವಿಯ ಪಾತ್ರವನ್ನು ಔನ್ನತ್ಯಕೊಯ್ದರು. ರಕ್ತಬೀಜನಾಗಿ ಪಾತ್ರ ನಿರ್ವಹಣೆ ಮಾಡಿದವರು ವಿಜಯಲಕ್ಷ್ಮೀ ಎಲ…. ನಿಡ್ವಣ್ಣಾಯರು. ರಕ್ತಬೀಜನಿಗಿರುವ ಶ್ರೀದೇವಿಯ ಮೇಲಿನ ಭಕ್ತಿ, ಅದರಿಂದ ತನ್ನೊಡೆಯ ನಿರ್ನಾಮವಾಗುತ್ತಾನೆಂದು ಬುದ್ಧಿ ಹೇಳಿ ತಿದ್ದಲಾಗದೆ, ಕದಂಬಾ ವನದಲ್ಲಿ ಶಿವೆಯನ್ನು ಕಂಡು ಭಾವಪರವಶನಾಗಿ ವರ್ಣಿಸುತ್ತಾ ದೇವಿಯನ್ನು ತನ್ನರಸನಿಗಾಗಿ ಒಯ್ಯಲು ಪ್ರಯತ್ನಿಸುತ್ತಾನೆ. ಆದರೆ ಆ ಪ್ರಯತ್ನದಲ್ಲಿ ವಿಫ‌ಲನಾಗಿ ವೀರಮರಣವನ್ನಪ್ಪುತ್ತಾನೆ. ಈ ಪಾತ್ರ ಚಿತ್ರಣ, ಸ್ವರಭಾರ, ಸ್ಪಷ್ಟ ಉಚ್ಚಾರಗಳಿಂದ ಪರಿಣಾಮವನ್ನು ಬೀರಿ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಕೊನೆಯಲ್ಲಿ ಶುಂಭನಾಗಿ ಅಬ್ಬರದಿಂದ ಪ್ರವೇಶಿಸಿದವರು ಅಕ್ಷಯ್‌ ಸುವರ್ಣರವರು. ಮದುವೆಗಾಗಿ ಕೊನೆಯ ಕಾಲಕ್ಕೂ ಸಿದ್ಧನಾಗಿ ಬಂದು, ಶ್ರೀದೇವಿಗೆ ತನ್ನನ್ನೇ ತಾನು ಅರ್ಪಿಸಿಕೊಳ್ಳುತ್ತಾನೆ. ಶುಂಭ ವಧೆಯ ನಂತರ ಸುರರಿಗೆ ಅಭಯವಿತ್ತು ತಾಯಿ ಮಾಯೆಯಲ್ಲಿ ಲೀನಳಾಗುತ್ತಾಳೆ. ಭಾಗವತರಾಗಿ ಸಂಜೀವ ಕಜೆಪದವು, ಹಿಮ್ಮೇಳದಲ್ಲಿ ವರ್ಕಾಡಿ ಮಾಧವ ನಾವಡರು ಸಹಕರಿಸಿದ್ದರು. ಪ್ರಥಮ ಪ್ರಶಸ್ತಿಗೆ ಈ ತಂಡ ಭಾಜನವಾಯಿತು.

ಸರಯೂ ಮಕ್ಕಳ ಮೇಳ ಆಯ್ದ ಕಥಾ ಭಾಗ ನರಕಾಸುರ ಮೋಕ್ಷ. ಕೃಷ್ಣನಾಗಿ ಮಾ| ಚಿಂತನ್‌ ಆರ್‌.ಕೆ. ಸತ್ಯಭಾಮೆಯಾಗಿ ಕು| ಸಾಕ್ಷಾ ಆರ್‌. ಶೆಟ್ಟಿ, ಮುರಾಸುರನಾಗಿ ಕು| ಸಾನ್ವಿ ಜೆ. ಮತ್ತು ಮಾ|ಅದ್ವಿತ್‌ ಪಿ. ನರಕಾಸುರನಾಗಿ ಪಾತ್ರ ನಿರ್ವಹಿಸಿದರು. ದೇವರಾಜನಿಂದ ನರಕನ ಬಗ್ಗೆ ದೂರು ಸ್ವೀಕರಿಸಿ, ಅವನಿಗೆ ಅಭಯ ಕೊಟ್ಟು ಹೊರಟರೆ, ನರಕನನ್ನು ಕೊಲ್ಲಲು ಭಾಮೆಯೂ ಬೇಕು. ಹಾಗಾಗಿ ಅದ್ದೂರಿಯಿಂದ ಹೊರಡುತ್ತಾನೆ. ಆಗ ಅಲ್ಲಿಗೆ ಓಡಿಬಂದ ಸತ್ಯಭಾಮೆ ಕೃಷ್ಣನನ್ನು ಕಾಡಿಬೇಡಿ ಇಬ್ಬರೂ ಪ್ರಾಗೊjàತಿಷಕ್ಕೆ ಬರುತ್ತಾರೆ. ಮುರಾಸುರನ ಪಾಶಗಳನ್ನೂ, ಅವನನ್ನೂ ಸಂಹರಿಸಿಬಿಡುತ್ತಾರೆ. ನಂತರ ಕೃಷ್ಣ ಭಾಮೆಯರು ಸೇರಿಕೊಂಡು ನರಕಾಸುರನನ್ನು ವಧಿಸಿ, ನರಕ ಚತುರ್ದಶಿ-ದೀಪಾವಳಿಯ ಮಹತ್ವವನ್ನು ಸಾರುತ್ತಾರೆ. ಶ್ರೀ ಕೃಷ್ಣನ ಪಾತ್ರ ಚೆನ್ನಾಗಿ ಮೂಡಿಬಂದರೆ, ಸತ್ಯಭಾಮೆಯ ಪಾತ್ರ ಇನ್ನೂ ಮುಗ್ಧವಾಗಿತ್ತು. ನೆನಪಲ್ಲುಳಿಯುವಂತೆ ಮೂಡಿಬಂತು ಸತ್ಯಭಾಮೆಯ ಪಾತ್ರ. ಪುಟ್ಟ ಬಾಲಕಿ ಸಾನ್ವಿ ಮುರಾಸುರನಾಗಿ ಬದಲಾದಳು. ಬಾಲಕ ಅದ್ವಿತ್‌ ನರಕಾಸುರನಾಗಿ ಅಬ್ಬರಿಸಿ-ಬೊಬ್ಬಿರಿದ. ಅಂತೂ ಪುಟಾಣಿಗಳು “ನರಕಾಸುರ ಮೋಕ್ಷ’ವನ್ನು ಚೆನ್ನಾಗಿಯೇ ನಿರ್ವಹಿಸಿದರು. ಪ್ರಥಮ, ದ್ವಿತೀಯ ಪ್ರಶಸ್ತಿಗಳನ್ನು ಬಡಗಿನವರು ಪಡೆದರೆ, ತೆಂಕಿನ ಈ ತಂಡ ತೃತೀಯ ಪ್ರಶಸ್ತಿಯನ್ನು ಪಡೆಯಿತು.

ಪುರುಷೋತ್ತಮ

Advertisement
Advertisement

Udayavani is now on Telegram. Click here to join our channel and stay updated with the latest news.

Next