ನವದೆಹಲಿ/ಶ್ರೀನಗರ: ಪೊಲೀಸರ ಬಂಧುಗಳನ್ನು ಅಪಹರಿಸಿದ್ದಕ್ಕೆ ಪ್ರತಿಯಾಗಿ ಉಗ್ರರನ್ನು ಬಿಡುಗಡೆ ಮಾಡಿದ ವಿವಾದಕ್ಕೆ ಸಂಬಂಧಿಸಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ಎಸ್.ಪಿ.ವೇದ್ರನ್ನು ವರ್ಗಾಯಿಸಲಾಗಿದೆ. ಅವರ ಸ್ಥಾನಕ್ಕೆ ಬಂದೀಖಾನೆ ವಿಭಾಗದ ಡಿಜಿಪಿ ದಿಲ್ಬಾಗ್ ಸಿಂಗ್ರನ್ನು ಪ್ರಭಾರ ಡಿಜಿಪಿಯನ್ನಾಗಿ ನೇಮಿಸಲಾಗಿದೆ. ವೇದ್ ಅವರನ್ನು ಸಾರಿಗೆ ವಿಭಾಗದ ಆಯುಕ್ತರನ್ನಾಗಿ ನೇಮಿಸಲಾಗಿದೆ. ಯಾವುದೇ ರಾಜ್ಯದ ಪೊಲೀಸ್ ಮಹಾನಿರ್ದೇಶಕರ ಸ್ಥಾನಕ್ಕೆ ಯಾರನ್ನೂ ತಾತ್ಕಾಲಿಕವಾಗಿ ನೇಮಕ ಮಾಡಬಾರದು ಎಂದು ಸುಪ್ರೀಂಕೋರ್ಟ್ ಆದೇಶ ಹೊರಡಿಸಿದ್ದರೂ, ಜಮ್ಮು ಮತ್ತು ಕಾಶ್ಮೀರ ಸರ್ಕಾರ ಸದ್ಯಕ್ಕೆ ನಿಯಮದಿಂದ ವಿನಾಯಿತಿ ಕೋರಿದೆ. ಮುಂದಿನ ಸೋಮವಾರ ಈ ಸುಪ್ರೀಂಕೋರ್ಟ್ ಈ ಬಗ್ಗೆ ವಿಚಾರಣೆ ಕೈಗೆತ್ತಿಕೊಳ್ಳಲಿದೆ. ನೂತನ ಡಿಜಿಪಿ ನೇಮಕದ ಬಗೆಗಿನ ಶಿಫಾರಸುಗಳನ್ನು ರಾಜ್ಯ ಸರ್ಕಾರ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ)ಕ್ಕೆ ಕಳುಹಿಸಿದೆ. ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಏಕಾಏಕಿ ನಡೆದ ಕ್ರಮ ಟೀಕಿಸಿ, ಆತುರದ ಕ್ರಮವನ್ನು ಪ್ರಶ್ನಿಸಿದ್ದಾರೆ.